“ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ, ಮಹಿಳಾ ಸಾಹಿತಿಗಳ ಕಡೆಗಣನೆ ಆರೋಪ”
ಪರ್ಯಾಯ ಸಮ್ಮೇಳನಕ್ಕೆ ಕೆಲ ಸಾಹಿತಿಗಳ ಚಿಂತನೆ!
ಮಾಲತೇಶ ಅಂಗೂರ
ಹಾವೇರಿ ಬೆಂಗಳೂರು: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನ್ನುವ ಖ್ಯಾತಿ ಹೊಂದಿರುವ ಹಾವೇರಿಯಲ್ಲಿ ಬರುವ ಜನವರಿ ೬ ರಿಂದ ೮ ರವರೆಗೆ ನಡೆಯಲಿರುವ ೮೬ ನೇ ಅಖಿಲ ಭಾರತಯ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕಗಳನ್ನು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಶಜ ಬೊಮ್ಮಾಯಿ ಅವರು ಬಿಡುಗಡೆಮಾಡಿದ್ದಾರೆ. ಆಮಂತ್ರಣಪತ್ರಿಕೆಗಳಲ್ಲಿ ಸಂಶೋಧನಾ ಸಾಹಿತ್ಯ ಹಾಗೂ ಸಂಶೋಧಕ ಸಾಹಿತಿಗಳನ್ನು ಕಡೆಗಣಿಸಲಾಗಿದೆ ಎನ್ನುವ ಅಪಸ್ವರ ಎದ್ದಿದ್ದು, ಈಬಗ್ಗೆ ಜಿಲ್ಲೆಯ ೨೫ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿನ ಸಂಶೋಧಕ ಸಾಹಿತಿಗಳು ಕಟ್ಟಪಟ್ಟಿ ಧರಿಸಿ ಪ್ರತಿರೋಧದ ಎಚ್ಚರಿಕೆ ನೀಡಿದ್ದಾರೆ. ಈಮಧ್ಯೆ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳು ಮತ್ತು ಪ್ರಮುಖ ಗೋಷ್ಠಿಗಳಲ್ಲಿ ಮುಸ್ಲಿಂ ಲೇಖಕರು ಮತ್ತು ಮಹಿಳಾ ಲೇಖಕರನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಪ್ರತಿಭಟನೆಯ ಸಂಕೇತವಾಗಿ ಜನವರಿ ೮ ರಂದು ಬೆಂಗಳೂರಿನಲ್ಲಿ ಪರ್ಯಾಯ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಪ್ರಗತಿಪರ ಸಾಹಿತಿಗಳು ನಿರ್ಧರಿಸಿದ್ದಾರೆ.
ಹಿರಿಯ ವಿದ್ವಾಂಸರಾದ ಪ್ರೊ.ಪುರುಷೋತ್ತಮ ಬಿಳಿಮಲೆ, “ಮುಸ್ಲಿಂ ಲೇಖಕರನ್ನು ಹೊರಗಿಡುವುದು ಮತ್ತು ಲಿಂಗ ತಾರತಮ್ಯ ಮಾಡುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಆದ್ದರಿಂದ ಜನವರಿ ೮ ರಂದು ಬೆಂಗಳೂರಿನಲ್ಲಿ ಪರ್ಯಾಯ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಪ್ರಗತಿಪರ ಸಾಹಿತಿಗಳು ನಿರ್ಧರಿಸಿದ್ದಾರೆ. ನಾವು ಇದನ್ನು ಕ್ರೌಡ್ ಫಂಡಿಂಗ್ ಮೂಲಕ ಆಯೋಜಿಸುತ್ತೇವೆ” ಎಂದು ಮಾಹಿತಿ ನೀಡಿದ್ದಾರೆ.
ಈ ಬಾರಿ ಹಾವೇರಿಯಲ್ಲಿ ೮೬ನೇ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ನಡೆಯಲಿದೆ. ಈಗಾಗಲೇ ಸಮ್ಮೇಳನಕ್ಕೆ ಸಂಪೂರ್ಣ ಚಾಲನೆ ದೊರೆತಿದ್ದು, ಸಿದ್ಧತೆಗಳು ಆರಂಭವಾಗಿವೆ. ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸಲಿದ್ದು, ಹಲವು ಚುನಾಯಿತ ಪ್ರತಿನಿಧಿಗಳು ಹಾಗೂ ಸಾವಿರಾರು ಸಾಹಿತಿಗಳು ಭಾಗವಹಿಸಲಿದ್ದಾರೆ.
ಆದರೆ, ವಿವಿಧ ಅಧಿವೇಶನಗಳಲ್ಲಿ ೪೦ ಭಾಷಣಕಾರರ ಪೈಕಿ ಮುಖ್ಯ ವೇದಿಕೆಗಳಲ್ಲಿನ ಪ್ರಧಾನ ಅಧಿವೇಶನಗಳಲ್ಲಿ ಅಲ್ಪಸಂಖ್ಯಾತ ಲೇಖಕರು ಅಥವಾ ವಿಷಯ ತಜ್ಞರಿಗೆ ಯಾವುದೇ ಪ್ರಾತಿನಿಧ್ಯವಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೮೩ ಸಾಧಕರನ್ನು ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನಿಸುತ್ತಿದೆ. ಅವರಲ್ಲಿ ಒಬ್ಬರೇ ಒಬ್ಬರು ಮುಸ್ಲಿಂ ಸಮುದಾಯದವರನ್ನು ಸನ್ಮಾನಿಸಲಾಗುತ್ತಿದೆ.
ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, ‘ಈ ವರ್ಷ ದಾದಾಪೀರ್ ಜೈಮಾನ್ ಅವರಂತಹ ಮುಸ್ಲಿಂ ಲೇಖಕರಿಗೆ ಕೇಂದ್ರ ಪ್ರಶಸ್ತಿಗಳು ಲಭಿಸಿವೆ. ಹಿರಿಯ ಸಾಹಿತಿಗಳಾದ ಬೊಳುವಾರು ಮುಹಮ್ಮದ್ ಕುಂಞಿ, ಸಾರಾ ಅಬೂಬಕರ್, ಹಸನ್ ನಯೀಮ್ ಸುರಕೋಡ, ರಹಮತ್ ತರೀಕರೆ ಮುಂತಾದವರನ್ನು ಕಡೆಗಣಿಸಲಾಗಿದೆ’ ಎಂದಿದ್ದಾರೆ.
ಕೊರೋನಾ ಆಗಮನಕ್ಕಿಂತ ಮೊದಲು ನಡೆದ ಹಿಂದಿನ ಸಮ್ಮೇಳನಗಳಿಗೆ ಹೋಲಿಸಿದರೆ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಮಹಿಳಾ ಲೇಖಕಿಯರನ್ನು ಕಡೆಗಣಿಸಲಾಗಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಫೇಸ್ಬುಕ್ ಪೋಸ್ಟ್ನಲ್ಲಿ, “ಪರ್ಯಾಯ ಸಮ್ಮೇಳನ ಇವತ್ತಿನ ತುರ್ತು ಅಗತ್ಯ. ದಾವಣಗೆರೆ ಅಥವಾ ಬೆಂಗಳೂರು ಅನುಕೂಲ. ಕೋಲಾರ, ಮೈಸೂರು, ಶಿವಮೊಗ್ಗವೂ ಆದೀತು. ದೇವನೂರು ಬರಬೇಕು. ಬರಗೂರು ಇರಬೇಕು. ರಾಜೇಂದ್ರ ಚೆನ್ನಿ, ಅರುಣ್ ಜೋಳದಕೂಡ್ಲಿಗಿ, ಬಿ ಎಂ ಹನೀಫ್ ಮೊದಲಾದವರು ಬರುತ್ತಾರೆ. ಅವರವರದೇ ಖರ್ಚು. ಸಭಾಂಗಣ, ಮಧ್ಯಾಹ್ಯ ಊಟ, ಧ್ವನಿವರ್ಧಕ, ಚಹಾ ಇತ್ಯಾದಿಗಳಿಗೆ ಕ್ರೌಡ್ ಫಂಡಿಂಗ್ ಮಾಡೋಣ. ನಾನು ನನ್ನ ಖರ್ಚಲ್ಲಿ ಬರುತ್ತೇನೆ. ಸತ್ಯನಾರಾಯಣ ಪೂಜೆಗೆ ಸುದ್ದಿ ಕೇಳಿಯೇ ಹೋಗಬೇಕಂತೆ. ಇದೂ ಹಾಗೆಯೇ ಆಗಲಿ. ಸಮ್ಮೇಳನದಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಯಾವುದೂ ಯ:ಕಶ್ಚಿತವೂ ಅಲ್ಲ. ಯಾರಾದರೂ ಸಮರ್ಥ ನಾಯಕತ್ವ ಕೊಡಿ!” ಎಂದಿದ್ದಾರೆ.
“ಪರ್ಯಾಯ ಸಮ್ಮೇಳನ ಇವತ್ತಿನ ತುರ್ತು ಅಗತ್ಯ
ಹಿರಿಯ ಸಾಹಿತಿ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಫೇಸ್ಬುಕ್ ಪೋಸ್ಟ್ನಲ್ಲಿ, “ಪರ್ಯಾಯ ಸಮ್ಮೇಳನ ಇವತ್ತಿನ ತುರ್ತು ಅಗತ್ಯ. ದಾವಣಗೆರೆ ಅಥವಾ ಬೆಂಗಳೂರು ಅನುಕೂಲ. ಕೋಲಾರ, ಮೈಸೂರು, ಶಿವಮೊಗ್ಗವೂ ಆದೀತು. ದೇವನೂರು ಬರಬೇಕು. ಬರಗೂರು ಇರಬೇಕು. ರಾಜೇಂದ್ರ ಚೆನ್ನಿ, ಅರುಣ್ ಜೋಳದಕೂಡ್ಲಿಗಿ, ಬಿ ಎಂ ಹನೀಫ್ ಮೊದಲಾದವರು ಬರುತ್ತಾರೆ. ಅವರವರದೇ ಖರ್ಚು. ಸಭಾಂಗಣ, ಮಧ್ಯಾಹ್ಯ ಊಟ, ಧ್ವನಿವರ್ಧಕ, ಚಹಾ ಇತ್ಯಾದಿಗಳಿಗೆ ಕ್ರೌಡ್ ಫಂಡಿಂಗ್ ಮಾಡೋಣ. ನಾನು ನನ್ನ ಖರ್ಚಲ್ಲಿ ಬರುತ್ತೇನೆ. ಸತ್ಯನಾರಾಯಣ ಪೂಜೆಗೆ ಸುದ್ದಿ ಕೇಳಿಯೇ ಹೋಗಬೇಕಂತೆ. ಇದೂ ಹಾಗೆಯೇ ಆಗಲಿ. ಸಮ್ಮೇಳನದಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಯಾವುದೂ ಯ:ಕಶ್ಚಿತವೂ ಅಲ್ಲ. ಯಾರಾದರೂ ಸಮರ್ಥ ನಾಯಕತ್ವ ಕೊಡಿ!” ಎಂದಿದ್ದಾರೆ.ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಮುಸ್ಲಿಂ ಲೇಖಕರನ್ನು ಹೊರಗಿಟ್ಟಿರುವುದು ಆಕಸ್ಮಿಕ ಏನೂ ಅಲ್ಲ. ನೆಹರೂ ಅಂಥ ಲೇಖಕರನ್ನೇ ಹೊರಗಿಟ್ಟವರಿವರು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತನ್ನ ನಿಲುವನ್ನು ನೇರವಾಗಿಯೇ ಪ್ರಕಟಿಸಬೇಕು ( ಕೆಲವರನ್ನು ಕರೆದಿದ್ದು ಅವರು ಬರುವುದಿಲ್ಲ ಎಂದೂ ಹೇಳಿರಬಹುದು!)
ಈ ಸಂದರ್ಭದಲ್ಲಿ ನಾವು ಕೆಲವು ಮುಸ್ಲಿಂ ಲೇಖಕರ ಹೆಸರನ್ನಾದರೂ ನೆನಪು ಮಾಡಿಕೊಳ್ಳೋಣ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಶಿಶುನಾಳ ಷರೀಫರೇ ನಮಗೆ ಸಿಗುವ ಮೊದಲ ಮಹತ್ವದ ಕವಿ. ಆನಂತರ ಕೆ ಎಸ್ ನಿಸಾರ್ ಅಹಮದ್ , ಬೊಳುವಾರು ಮಹಮ್ಮದ್ ಕುಞಿ, ಸಾರಾ ಅಬೂಬಕರ್ , ಹಸನ್ ನಯೀಂ ಸುರಕೋಡ, ರಹಮತ್ ತರೀಕರೆ ಮೊದಲಾದವರು ಕನ್ನಡದ ಸುಪ್ರಸಿದ್ಧ ಲೇಖಕರು. ಬೊಳುವಾರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕಿತ್ತು. ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಬರಬೇಕು. ದಾದಾಪೀರ್ ಜೈನ್ ಅವರಿಗೆ ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಸಬೀಹಾ ಭೂಮಿ ಗೌಡರು ಲೇಖಕಿಯಾಗಿ ಪ್ರಸಿದ್ಧರು.
ಒಂದಾದರೂ ಪುಸ್ತಕ ಪ್ರಕಟಿಸಿದ ಮುಸ್ಲಿಂ ಲೇಖಕರು ಬಹಳ ಜನ ಇದ್ದಾರೆ. ಬಹುಶ: ಮುಂದಿನ ೧೦ ವರ್ಷದಲ್ಲಿ ಕನ್ನಡದ ಲೇಖಕರೆಂದರೆ ಮುಸ್ಲಿಮರೇ ಆಗಿರುತ್ತಾರೆ. ಅವರಲ್ಲಿ ನನಗೆ ಕೂಡಲೇ ನೆನಪಿಗೆ ಬರುವವರೆಂದರೆ, ಆರಿಫ್ ರಾಜಾ, ಎ ಕೆ ಕುಕ್ಕಿಲ, ಬಿ ಎಂ ಬಷೀರ್, ಇಸ್ಮಾಯಿಲ್ , ಮಹಮ್ಮದ್ ಕುಳಾಯಿ , ಗಂಗಾವತಿ ಸಲೀಮಾ, ಅಬ್ಬುಸ್ಸಲಾಮ್ ಪುತ್ತಿಗೆ , ಇಬ್ರಾಹಿಂ ಸಯೀದ್ ಸಾಬ್, ಸಲಾಂ ಸಮ್ಮಿ , ಬಾನು ಮುಷ್ತಾಕ್ , ಫಾತಿಮಾ ರಲಿಯಾ, ಕೆ ಷರೀಫಾ , ಡಿ ಬಿ ರಜಿಯಾ , ಜಹಾನ್ ಆರಾ , ಎ ಎಸ್ ಮಕಾನದಾರ , ಬಿ ಪೀರ್ ಭಾಷಾ, ಅಜಮೀರ ನಂದಾಪುರ, ದಸ್ತಗೀರ್ ದಿನ್ನಿ , ಇಮಾಮ್ ಹಡಗಲಿ, ಮುಸ್ತಾಫಾ, ಡಾ. ಮಕ್ತೂಂಬಿ ಮುಲ್ಲಾ, ಶಿ ಜು ಪಾಶಾ, ಮೆಹಬೂಬ್ಬಿ ಶೇಖ್ , ಸಿರಾಜ್ ಬಿಸರಳ್ಳಿ , ನಜ್ಮಾ ನಜೀರ್ ಚಿಕ್ಕನೇರಳೆ, ಮುನವ್ವರ್ ಜೋಗಿಬೆಟ್ಟು, ಬಿ ಎಂ ಹನೀಫ್, ಮೆಹಬೂಬಭಾಷಾ ಮಕಾನದಾರ , ಬಾಬು ಮನಸೇ, ಹಕೀಂ ಪದಡ್ಕ, ಹಸನ್ಮುಖಿ ಬಡಗನ್ನೂರು, ಆಸೀಫಾ, ನೂರಜಾನ್, ಸಕೀನಾ ಬೇಗಂ, ಸುನೈಫ್ ವಿಟ್ಲ, ಇಮಾಮ್ ಹಡಗಲಿ, ಅಮೀರಸಾಬ ವಂಟಿ, ಉಮರ್ ದೇವರಮನಿ, ಅಮೀನ್ ಅತ್ತಾರ್, ಸಯ್ಯದ್ ಸಿಕಂದರ್ ಮೀರ್ ಅಲಿ, ಚಾಂದ್ ಕವಿಚಂದ್ರ, ಕಾ ಹು ಚಾನಪಾಶಾ, ಸೈಫ್ ಜಾನ್ಸೆ, ರಾಜೇಸಾಬ ಬಾಗವಾನ್, ಶರೀಫ್ ಹಸಮಕಲ್, ಆಶಿಖ್ ಮುಲ್ಕಿ , ಇಮಾಮ್ ಗೋಡೆಕಾರ , ಸಿಹಾನಾ ಎಂ ಬಿ ಮೊದಲಾದವರು.
( ಈ ಪಟ್ಟಿ ಸಮಗ್ರ ಅಲ್ಲ ಅಂತ ನನಗೆ ತಿಳಿದಿದೆ, ನಿಮಗೆ ತಿಳಿದಿರುವ ಬೇರೆ ಹೆಸರುಗಳು ದಯವಿಟ್ಟು ಸೇರಿಸಿ). ಹಿಂದೊಮ್ಮೆ ಪರ್ಯಾಯ ಸಮ್ಮೇಳನ ನಡೆಸಿದ್ದೆವು. ನಾವೆಲ್ಲ ಮನಸು ಮಾಡಿದರೆ ಅದನ್ನು ಸುರು ಮಾಡುವುದು ಕಷ್ಟ ಅಲ್ಲ. (ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ಗೋಡೆಬರಹದಿಂದ)
ಸ್ಥಳೀಯ ಪತ್ರಿಕೆಗಳ ಕಡೆಗಣನೆ!
ಸ್ಥಳೀಯ ಪತ್ರಿಕೆಗಳ ಕಡೆಗಣನೆ ಹಾವೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಬಗ್ಗೆ ನಿರೀಕ್ಷೆಗಳು ಅಪಾರವಾಗಿವೆ. ಆದರೆ ಅಖಿಲ ಭಾರತ ಮಟ್ಟದ ಸಮ್ಮೇಳನ ನಡೆಯುವಾಗ ಸಣ್ಣ-ಪುಟ್ಟ ತಪ್ಪುಗಳು ಜರುಗುವುದು ಸಹಜ. ಆದರೆ ಸ್ಥಳೀಯವಾಗಿ ಹಲವಾರು ದಶಕಗಳಿಂದ ನಾಡು-ನುಡಿಗಾಗಿ, ಸ್ಥಳೀಯವಾಗಿ ಸಾಹಿತ್ಯಿಕ ವಾತಾವರಣ ನಿರ್ಮಾಣ ಮಾಡುವಲ್ಲಿ, ಸ್ಥಳೀಯ ಸಾಹಿತಿಗಳ ಹಾಗೂ ದೊಡ್ಡ ದೊಡ್ಡ ಸಾಹಿತಿಗಳ ಸಾಹಿತ್ಯ ಪ್ರಕಟಿಸುವುದರ ಜೊತೆ ಸಾಹಿತ್ಯ ಕೃಷಿಕೆ ಬಹುದೊಡ್ಡ ಮಹತ್ವದ ಕೊಡುಗೆ ನೀಡಿವೆ. ಆ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. ಹಾವೇರಿಯ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಪತ್ರಿಕೆಗಳ ಸಂಪಾದಕರನ್ನುನ ಕಡೆಗಣಿಸಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಹಾವೇರಿಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರದಿಂದ ಪ್ರಕಟವಾಗುವ ಮೂಡಣ, ಕೌರವ, ರಾಣೇಬೆನ್ನೂರಿನಿಂದ ಕಳೆದ ೬ದಶಕಕಗಳಿಂದ ಪ್ರಕಟವಾಗುತ್ತಿರುವ ಶಿಡ್ಲು ದಿನಪತ್ರಿಕೆ, ಪಾಂಡವದಿನಪತ್ರಿಕೆಗಳ ಸಂಪಾಕರನ್ನು ಕಡೆಗಣಿಸಲಾಗಿದೆ. ಈಬಗ್ಗೆ ಶಿಡ್ಲು ಪತ್ರಿಕೆಯ ಸಂಪಾದಕ ಶಿವಯೋಗಿ ಮಹಾನುಭಾವಿಮಠವರು ಪ್ರತಿಕ್ರಿಯೆ ನೀಡಿದ್ದು, ರಾಣೇಬೆನ್ನೂರಿನಿಂದ ಪ್ರಕಟವಾಗುವ ಶಿಡ್ಲು ದಿನಪತ್ರಿಕೆಗೆ ಕಳೆದ ಆರು ದಶಕಗಳ ಇತಿಹಾಸವಿದೆ. ಸ್ಥಳೀಯವಾಗಿ ಸಾಹಿತ್ಯದ ಕಾರ್ಯಕ್ರಮಳ ಚಟುವಟಿಗಳನ್ನು ಪ್ರಕಟಿಸುವ ಮೂಲಕ ಸಾಹಿತಿಗಳ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ಕತೆ, ಕವನ, ಚುಟುಕು, ಪುಸ್ತಕ ವಿಮರ್ಶೆ, ಪುಸ್ತಕ ಪರಿಚಯ ಹೀಗೆ ವಿವಿಧ ಪ್ರಕಾರಗಳ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಸಾಹಿತ್ಯಿಕ ಪರಿಚಾರಕರಾಗಿ ಎಲೆಮರೆಯ ಕಾಯಂತೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮನ್ನು ಸೌಜನ್ಯಕ್ಕೂ ಸಹ ಕಸಾಪದವರು ಪರಿಗಣಿಸಿಲ್ಲ. ಈಗಲೂ ಸಹ ಜಿಲ್ಲೆಯ ಸ್ಥಳೀಯ ಪತ್ರಿಕೆಗಳು ಹಾವೇರಿಯಲ್ಲಿ ನಡೆಯುವ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸುದ್ದಿಗಳನ್ನು ಮುಖಪುಟದ ಅಗ್ರ ಸುದ್ದಿಯನ್ನಾಗಿ ನಿತ್ಯ ಪ್ರಕಟಿಸುವ ಮೂಲಕ ತಾಯಿ ಭುವನೇಶ್ವರಿಯ ಸೇವೆ ಮಾಡುತ್ತಿದ್ದೇವೆ.
ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ ಅವರು ತಾವು ನಡೆಸುವ ಪತ್ರಿಕಾಗೋಷ್ಠಿಗಳಲ್ಲಿ ಮಾತಿಗೊಮ್ಮೆ ತಾವು ಮಾಧ್ಯಮದಿಂದ ಬಂದವಾನಾಗಿದ್ದೇನೆ ಎನ್ನುತ್ತಾರೆ. ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಗಮನಿಸಿದಾಗ ಡಾ.ಜೋಶಿ ಅವರು ಸ್ಥಳೀಯ ಪತ್ರಿಕೆಗಳನ್ನು ಕಡೆಗಣಿಸಿರುವುದು ಸ್ಪಷ್ಟವಾಗಿದೆ, ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಶಿವಯೋಗಿ ಮಹಾನುಬಾವಿಮಠ ಬೇಸರ ವ್ಯಕ್ತಪಡಿಸಿದರು.
೧೯೭೯ರಲ್ಲಿ ನಡೆದಿತ್ತು ಪರ್ಯಾಯ ಸಮ್ಮೇಳನ!
ಕನ್ನಡ ಸಾಹಿತ್ಯ ಪರಿಷತ್ತು ವ್ಯವಸ್ಥೆಗೊಳಿಸುವ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಒಂದಲ್ಲ ಒಂದು ವಿವಾದವೇಳುವುದು ಇತ್ತೀಚೆಗೆ ಸಹಜ ಕ್ರಿಯೆಯೆಂಬಂತಾಗಿದೆ. ಜನೆವರಿ ೬-೭ ಮತ್ತು ೮ರಂದು ಹಾವೇರಿಯಲ್ಲಿ ಆಯೋಜನೆ ಗೊಂಡಿರುವ ೮೬ನೇ ಸಾಹಿತ್ಯ ಸಮ್ಮೇಳನವು ವಿವಾದದಿಂದ ಮುಕ್ತವಾಗಿಲ್ಲ. ಈಸಮ್ಮೇಳನಕ್ಕೂ ಸಹ ಪರ್ಯಾಯ ಸಮ್ಮೇಳನದ ಧ್ವನಿ ಕೇಳಿಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿರುವುದೂ ಇದಕ್ಕೆ ಒಂದು ಕಾರಣ. ಸಾಮಾನ್ಯವಾಗಿ ಸರ್ಕಾರ ಮತ್ತು ಸರ್ಕಾರದ ಅಂಗಸಂಸ್ಥೆಗಳ ಬಗ್ಗೆ ವಿವಾದಗಳನ್ನುಂಟುಮಾಡುವ ಪ್ರವೃತ್ತಿ ಸಹಜ . ವಿಶೇಷವಾಗಿ ಪ್ರಶಸ್ತಿಗಳು ಮತ್ತು ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ಸಂದರ್ಭಗಳಲ್ಲಿ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯಗಳ ಪ್ರಶ್ನೆಯನ್ನು ಎತ್ತಲಾಗುತ್ತದೆ. ಕೆಲವೊಮ್ಮೆ ಈ ನ್ಯಾಯಗಳ ಬಗ್ಗೆ ಅಷ್ಟೇನೂ ಆದರವಿಲ್ಲದ ಗುಣಮಟ್ಟ-ಪ್ರತಿಭೆ ಮುಂತಾದ ಪ್ರಶ್ನೆಗಳನ್ನೂ ಕೇಳಲಾಗುತ್ತದೆ.
೧೯೭೯ರ ಮಾರ್ಚ್ ತಿಂಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನವು ವಿವಾದಕ್ಕೆ ಗುರಿಯಾಯಿತು. ಗೋಪಾಲ ಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದ ಮತ್ತು ಧರ್ಮಸ್ಥಳದಲ್ಲಿ ನಡೆದ ಈ ಸಮ್ಮೇಳನದ ದಿನಗಳಂದೇ ಬೆಂಗಳೂರಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಬೆಳೆಯುತ್ತ ಬಂದ ಎಡಪಂಥೀಯ, ಪ್ರಗತಿಪರ, ಪ್ರಜಾಸತ್ತಾತ್ಮಕ ನಿಲುವುಗಳಿಗೆ ಸಂಘಟನೆಯ ನೆಲೆ ಒದಗಿಸಲು ಧರ್ಮಸ್ಥಳದ ಸಮ್ಮೇಳನ ಒಂದು ಸನ್ನಿವೇಶವನ್ನು ಒದಗಿಸಿತು.
ಆ ವೇಳೆಗಾಗಲೇ ಅಡಿಗರು ರಾಜಕೀಯವಾಗಿ ಸಂಘ ಪರಿವಾರದವರಾಗಿದ್ದರು. ಹಂಪನಾ ಅವರು ಸಮ್ಮೇಳನವನ್ನು ಧರ್ಮಸ್ಥಳಕ್ಕೆ ಕೊಂಡೊಯ್ದಿದ್ದರು. ಈ ವೇಳೆಗೆ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ, ಸಮುದಾಯದಂತಹ ಆಂದೋಲನಾತ್ಮಕ ಸಂಘಟನೆಗಳು ಕ್ರಿಯಾಶೀಲವಾಗಿದ್ದವು. ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಆಂದೋಲನಕ್ಕೆ ಅವಕಾಶವಿತ್ತು. ಅದು ಅನಿವಾರ್ಯವೂ ಆಗಿತ್ತು. ಆ ವೇಳೆಗೆ ರಾಷ್ಟ್ರದಲ್ಲಿ ರಾಜಕೀಯವಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ದ್ರುವೀಕರಣ ಆರಂಭವಾಗಿತ್ತು.
ಸಾಹಿತ್ಯ ಕ್ಷೇತ್ರದಲ್ಲೂ ಇಂತಹ ಧ್ರುವೀಕರಣದ ಅಗತ್ಯವನ್ನು ಕರ್ನಾಟಕವು ಮೊದಲನೇ ಬಂಡಾಯ ಸಾಹಿತ್ಯ ಸಮ್ಮೇಳನದ ಮೂಲಕ ಕಂಡುಕೊಂಡಿತು. ಮಾರ್ಕ್ಸ್ವಾದ, ಗಾಂಧಿವಾದ, ಅಂಬೇಡ್ಕರ್ವಾದ, ಲೋಹಿಯಾ ವಾದ ಇವೇ ಮುಂತಾದ ತಾತ್ವಿಕ ನಂಬಿಕೆಯಿರುವವರು ಮತ್ತು ಒಟ್ಟಾರೆ ಪ್ರಗತಿಪರರು ಬಂಡಾಯ ಸಾಹಿತ್ಯ ಸಂಘಟನೆಯ ವಿಶಾಲ ತಳಹದಿಯ ಮೇಲೆ ಒಂದಾದರು. ಆರಂಭದ ಕೆಲ ವರ್ಷ ತಾತ್ವಿಕ ಗಟ್ಟಿತನವನ್ನು ಬೆಳೆಸಿಕೊಳ್ಳುವ ಕಾರ್ಯತಂತ್ರವಾಗಿ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ನಿರ್ಧರಿಸಲಾಯಿತು. ಕ್ರಿಯಾಶೀಲತೆಯ ಏರಿಳಿತಗಳಿದ್ದರೂ ಬಂಡಾಯ ಸಾಹಿತ್ಯ ಸಂಘಟನೆ ಈಗಲೂ ಇದೆ. ತನ್ನ ಮೊದಲನೇ ಸಮ್ಮೇಳನದ ಕರಪತ್ರದಲ್ಲೇ ಸ್ಪಷ್ಟಪಡಿಸಿದಂತೆ ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ವಿರುದ್ಧವಲ್ಲ ಸಾಂಸ್ಕೃತಿಕವಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಕ್ರೋಢೀಕರಿಸುವ ಚಳವಳಿ ಎನ್ನುತ್ತಾರೆ ಹಿರಿಯ ಬಂಡಾಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪನವರು.
ಜಾತಿ, ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ: ಡಾ. ಮಹೇಶ್ ಜೋಶಿ
ಹಾವೇರಿಯ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ, ಮಹಿಳಾ ಸಾಹಿತಿಗಳ ಕಡೆಗಣನೆಮಾಡಲಾಗಿದೆ ಎನ್ನುವ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ, “ಈ ಪರಿಷತ್ತು ಎಡ, ಬಲ ಅಥವಾ ಮಧ್ಯ ಎಂಬ ಯಾವುದೇ ಸಿದ್ಧಾಂತಕ್ಕೆ ಸೇರಿಲ್ಲ” . “ನಾವು ಯಾವುದೇ ಬರಹಗಾರರ ವಿರುದ್ಧ ಜಾತಿ, ಸಮುದಾಯ ಅಥವಾ ಧರ್ಮದ ಆಧಾರದ ಮೇಲೆ ಕಡೆಡಗಳಿಸಿಲ್ಲ. ಕನ್ನಡ ಭಾಷೆ ನಮ್ಮ ಜಾತಿ ಮತ್ತು ಧರ್ಮ. ೧೪ ಸದಸ್ಯರ ಆಯ್ಕೆ ಸಮಿತಿಯು ಈ ಎಲ್ಲಾ ಸೆಮಿನಾರ್ಗಳು, ಅತಿಥಿಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಿರ್ಧರಿಸಿದೆ. ಈ ವರ್ಷ, ನಾವು ಎಲ್ಲಾ ಸೆಮಿನಾರ್ಗಳು ಮತ್ತು ಕಾರ್ಯಕ್ರಮಗಳಲ್ಲಿ ಹೊಸ ಮುಖಗಳಿಗೆ ಪ್ರಾಮುಖ್ಯತೆ ನೀಡಿದ್ದೇವೆ. ನಾವು ಪ್ರಧಾನ ವೇದಿಕೆಯನ್ನು ಸಂತ ಕನಕದಾಸ-ಶಿಶುನಾಳ ಷರೀಫ-ಸರ್ವಜ್ಞರಿಗೆ ಅರ್ಪಿಸಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕನ್ನಡ ರಥವನ್ನು ರಾಜ್ಯದಾದ್ಯಂತ ಆರಂಭಿಸಿದ್ದೇವೆ. ಈ ರಥದ ಮುಖ್ಯ ವಾಸ್ತುಶೈಲಿ ಶಹಜಹಾನ್ ಮುದಕವಿ ಮತ್ತು ಇದರ ಮೇಲ್ವಿಚಾರಕರು ನಬಿ ಸಾಬ್ ಕುಷ್ಟಗಿ. ಹೀಗಾಗಿ ಜಾತಿ, ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ ಡಾ.ಮಹೇಶ ಜೋಶಿ.
ಕೃಪೆ ; ಒನ್ ಇಂಡಿಯಾ, ವಿವಿಧ ಮೂಲಗಳ ಆಧಾರ.