ಹಾವೇರಿ: ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಗ್ರಾ.ಪಂ.ಗೆ ಆಯ್ಕೆಯಾಗಿದ್ದ ಮಹಿಳೆಗೆ ಏಳು ವರ್ಷ ಜೈಲು ಶಿಕ್ಷೆ
ಹಾವೇರಿ: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿದ್ದ ಗುತ್ತಲ ಗ್ರಾಮದ ಆರೋಪಿ ಶ್ರೀಮತಿ ಮುಕ್ತಾಬಾಯಿ ಕೋಂ.ರಂಗಪ್ಪ ಬೀಸೆ ಎಂಬ ಮಹಿಳೆ ಹಾಗೂ ಸಹಾಯ ಮಾಡಿದ ಭರಡಿ ಗ್ರಾಮದ ಮಾರುತಿ ಹನುಮಂತಪ್ಪ ಕಿಳ್ಳಿಕ್ಯಾತರ ಇಬ್ಬರಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ರೂ.೩೭ ಸಾವಿರ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಬುಧವಾರ ತೀರ್ಪು ನೀಡಿದ್ದಾರೆ.
ಗುತ್ತಲ ಗ್ರಾಮದ ಆರೋಪಿ ಶ್ರೀಮತಿ ಮುಕ್ತಾಬಾಯಿ ಕೋಂ.ರಂಗಪ್ಪ ಬೀಸೆ ಇವಳು ಹಿಂದೂ ಗೊಂದಳಿ(ಪ್ರ ವರ್ಗ-೦೧)ಕ್ಕೆ ಸೇರಿದ್ದರೂ ಸಹ, ಕಳ್ಳಪ್ಪ ದೊಡ್ಡರಾಮಪ್ಪ ತಳವಾರ ಹಾಗೂ ಮಾರುತಿ ಹನುಮಂತಪ್ಪ ಕಿಳ್ಳಿಕ್ಯಾತರ ಅವರ ಸಹಕಾರ ಪಡೆದು, ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸೃಷ್ಟಿಸಿ ಹಾವೇರಿ ತಹಶೀಲ್ದಾರ ಕಚೇರಿ ಸಲ್ಲಿಸಿ, ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದು ೨೦೧೦ರಲ್ಲಿ ಗುತ್ತಲ ಪಂಚಾಯತಿ ವಾರ್ಡ್ ನಂ.೧೦ರ ಪರಿಶಿಷ್ಟ ಜಾತಿಗೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದಳು. ಈ ಕುರಿತಂತೆ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖಾಧಿಕಾರಿ ಬೆಳಗಾವಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪಿ.ಐ. ಎ.ಬಿ.ಹಪ್ಪಳಿ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿ ಮೇಲೆ ಕಲಂ:೧೯೬, ೧೯೭, ೧೯೮, ೪೨೦, ೪೬೫, ೪೬೮, ೪೭೧, ೪೭೭(ಎ) ರೆವಿ ೩೪ ಭಾ.ದಂ.ಸಂ. ಮತ್ತು ೩(೧)(೯) ಎಸ್ಸಿ/ಎಸ್ಟಿ (ಪಿಎ) ಕಾಯ್ದೆ ೧೯೮೯ ಅಡಿಯಲ್ಲಿ ಆಪಾದನೆಗಳು ರುಜುವಾತದ ಹಿನ್ನಲೆಯಲ್ಲಿ ಆರೋಪಿತರಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸರೋಜಾ ಜಿ.ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.