“ಕ್ರಾಂತಿ ಕೆಂಡದಾ ಕುಂಡಹೊತ್ತು ನಾವು ಮುಳ್ಳ ತುಳಿಯತೇವ…ರಕ್ತಗಾಲಿನ ನಮ್ಮ ಪಾಲಿನ ಹಾಡ ಬರೆಯತೇವ”
ಕವಿಯ ನೆಲೆದಲ್ಲಿ ೧೮ನೇ ಶರಣ ತತ್ವ ಕಮ್ಮಟದ ಶಿಬಿರಾರ್ಥಿಗಳು ಮೊಳಗಿಸಿದ ಕ್ರಾಂತಿ ಗೀತೆ
ಹಾವೇರಿ: ಇಲ್ಲಿನ ಹುಕ್ಕೇರಿ ಮಠದ ಶಿವಬಸವ ಕಲ್ಯಾಣ ಮಂಟಪದಲ್ಲಿ ದಾವಣಗೆರೆಯ ಲಿಂ. ಶರಣೆ ಪುಟ್ಟಮ್ಮ ಮತ್ತು ಶರಣ ಬಸವರಾಜಪ್ಪ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಹಾಗೂ ದಾವಣಗೆರೆಯ ಬಸವಬಳಗ ಜೂ.೬ರಿಂದ ೧೦ ರವರೆಗೆ ವರೆಗೆ ಹಮ್ಮಿಕೊಂಡಿರುವ ೧೮ನೇ ಶರಣ ತತ್ವ ಕಮ್ಮಟಕ್ಕೆ ರಾಜ್ಯದ ಹಾಗೂ ಹೊರರಾಜ್ಯಗಳಿಂದ ಜನರು ಹರಿದು ಬಂದಿದ್ದಾರೆ. ಶಿಬಿರದ ಪಥ ಸಂಚಲಕ್ಕೆ ಹಾವೇರಿನಗರದಲ್ಲಿ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಯಿತು.
ಮೂರುದಿನ ನಡೆದ ಪಥ ಸಂಚಲನದಲ್ಲಿ ಶಿಬಿರಾರ್ಥಿಗಳೊಂದಿಗೆ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಜಿ ನಗರದಲ್ಲಿ ಪಾದಯಾತ್ರೆ ನಡೆಸಿ ೧೮ನೇ ಶರಣ ತತ್ವ ಕಮ್ಮಟದ ಆಶಯಗಳನ್ನು ಜನರಲ್ಲಿ ಬಿತ್ತುವ ಕಾರ್ಯ ಮಾಡಿದರು. ಪಥ ಸಂಚಲನದಲ್ಲಿ ಬಸಾಪುರ-ದಾವಣಗೆರೆಯ ಬಸವ ಕಲಾಲೋಕದ ಕಲಾವಿದರು ಬಸವಾದಿ ಶರಣರ ವಚನಗಳನ್ನು ಹಾಡುವ ಮೂಲಕ ಶರಣರ ವಚನಗಳ ಚಿಂತನೆ ಗೈದರು. ಕಲಾವಿದರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಪಥ ಸಂಚಲನದಲ್ಲಿ ಹಾವೇರಿಯ ನೆಲದ ಕವಿ ಸತೀಶ ಕುಲಕರ್ಣಿ ಅವರ ಕ್ರಾಂತಿ ಗೀತೆ “ಕಟ್ಟತೇವ ನಾವು ಕಟ್ಟತೇವ ಕಟ್ಟೇಕಟ್ಟ ತೇವ ಗೋಳಿಲ್ಲದಾ ಗುಂಡಿಲ್ಲದಾ ನಾಡ ಕಟ್ಟತೇವ, ಕೋಟಿ ಕನಸಿನ ನೂರು ಮನಸಿನ ಹಾಡ ಬರೆಯತೇವ, ಕ್ರಾಂತಿ ಕೆಂಡದಾ ಕುಂಡಹೊತ್ತು ನಾವು ಮುಳ್ಳ ತುಳಿಯತೇವ…ರಕ್ತಗಾಲಿನ ನಮ್ಮ ಪಾಲಿನ ಹಾಡ ಬರೆಯತೇವ ಈ ನೆಲದ ಹಾಡ ಬರಿಯತೇವ” ಎನ್ನುವ ಸಾಲುಗಳು ಹಾದಿಯುದ್ದಕ್ಕೂ ಮೊಳಗಿದವು. ಈ ಹಾಡನ್ನು ಭಾವತುಂಬಿ ಕಲಾವಿದರು, ಶಿಬಿರಾರ್ಥಿಗಳು ಹಾಡುತ್ತಿದ್ದರೆ, ನೆರೆದ ಜನತೆಯ ಮೂಕ ವಿಸ್ಮಿತರಾದರು, ಕೆಲವರ ಕಣ್ಣುಗಳು ತೇವವಾದವು.
ಸಮ ಸಮಾಜದ ನಾಡು ಕಟ್ಟವು ಬಸವಾದಿ ಶರಣರ ಆಶಯ, ಕವಿ ಸತೀಶ ಕುಲಕರ್ಣಿಯವರು ಕವಿತೆಯ ಆಶಯ, ನೂರಾರು ಶಿಬಿರಾರ್ಥಿಗಳ ಹಾಗೂ ಪ್ರಮುಖವಾಗಿ ಬಸವಾದಿ ಶರಣರ ಆಶಯಗಳನ್ನು ಜನ ಮಾನಸಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಕಳೆದ ೯ ವರ್ಷಗಳಿಂದ ಶರಣ ತತ್ವ ಕಮ್ಮಟಗಳನ್ನು ಆಯೋಜಿಸುತ್ತಾ ಬಂದಿರುವ ದಾವಣಗೆರೆಯ ಲಿಂ. ಶರಣೆ ಪುಟ್ಟಮ್ಮ ಮತ್ತು ಶರಣ ಬಸವಾಜಪ್ಪ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ನ ಆಶಯ ನಿಜಕ್ಕೂ ಶ್ಲಾಘನಿಯವಾಗಿದೆ.
೧೮ನೇ ಶರಣ ತತ್ವ ಕಮ್ಮಟಕ್ಕೆ ನೂರಾರು ಶರಣ-ಶರಣೆಯರು ರಾಜ್ಯ ಹಾಗೂ ಹೊರರಾಜ್ಯಗಳಿಂದ ಮರಿ ಕಲ್ಯಾಣ ಎನ್ನುವ ಖ್ಯಾತಿಯ ಹಾವೇರಿಗೆ ಆಗಮಿಸಿದ್ದು, ಇವರುಗಳಿಗೆ ಶರಣರ ಜ್ಞಾನ ದಸೋಹದ ಜೊತೆಗೆ ಊಟ-ಉಪಹಾರ, ವಸತಿ, ವೈದ್ಯಕೀಯ ಸೇವೆ ಹೀಗೆ ಯಾವುದೇ ತೊಂದರೆ ಯಾಗದ ರೀತಿಯಲ್ಲಿ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಹಾಗೂ ದಾವಣಗೆರೆಯ ಬಸವಬಳಗ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು, ಇವರಿಗೆ ಸ್ಥಳೀಯವಾಗಿ ಶ್ರೀಹುಕ್ಕೇರಿಮಠ, ಶ್ರೀಸಿಂದಗಿಮಠ, ಶ್ರೀಹೊಸಮಠ,ಶ್ರೀವೀರಭದ್ರೇಶ್ವರ ಟ್ರಸ್ಟ್ ಕಮಿಟಿ, ಜಾಗತಿಕ ಲಿಂಗಾಯತ ಮಹಾಸಭಾ, ಬಸವಬಳಗ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಅಕ್ಕನ ಬಳಗ ಕೈಜೋಡಿಸಿವೆ.
ಮೇಲಾಗಿ ಶರಣರಾದ ಚನ್ನಬಸಪ್ಪ ರೊಡ್ಡನವರ, ಶಿವಯೋಗಿ ಬೆನ್ನೂರ, ಶಿವಬಸಪ್ಪ ಮುದ್ದಿ, ಮಲ್ಲಿಕಾರ್ಜುನ ಹಿಂಚಿಗೇರಿ, ಪಂಪಣ್ಣನವರ ,ಶಿವಯೋಗಿ ಮಾಮ್ಲೇಪಟ್ಟಣಶೆಟ್ಟರ, ಮಂಡಕ್ಕಿ, ಹೊಸಮನಿ, ಗಂಗಣ್ಣ ಮಾಸೂರು, ಜಯಶ್ರೀ ಶಿವಪುರ, ಮಾಹಾಂತೇಶ ಸೇರಿದಂತೆ ಹಲವಾರು ಬಸವ ಭಕ್ತರು ೧೮ನೇ ಶರಣ ತತ್ವ ಕಮ್ಮಟದ ಯಶಸ್ವಿಯಲ್ಲಿ ಭಾಗಿಯಾಗಿದ್ದರು.