ಹಾವೇರಿಯ ವಿರುಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರಗೆ ರಾಜ್ಯೋತ್ಸವ ಪ್ರಶಸ್ತಿ
ಹಾವೇರಿ: ಇಲ್ಲಿನ ದ್ಯಾಮವ್ವದೇವಿಗುಡಿ ಓಣಿಯ ನಿವಾಸಿ ವಿರುಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಬುಧವಾರ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-೨೦೨೪ ಘೋಷಣೆಯಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಟ್ಟಿಯನ್ನು ಬಿಡುಗಡೆಮಾಡಲಾಗಿದ್ದು,ಸಂಕೀರ್ಣ ವಿಭಾಗದಲ್ಲಿ ವಿರುಪಾಕ್ಷಪ್ಪ ಹಾವನೂರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಮುದ್ರಣಯಂತ್ರ ನಡೆಸುವ ಮೂಲಕ ಜೀವನ ಕಟ್ಟಿಕೊಂಡಿರುವ ವಿರುಪಾಕ್ಷಪ್ಪ ಹಾವನೂರ ಹಾವನೂರು ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಸಾಹಿತ್ಯಿಕ ಪರಿಚಾರಕರಾಗಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯದಲ್ಲಿ ಇವರು ಹೆಸರು ಮಾಡಿದ್ದಾರೆ. ಕಾದಂಬರಿಗಳಿಗೆ ಪ್ರಶಸ್ತಿಯನ್ನು ರಾಜ್ಯ ಮಟ್ಟದಲ್ಲಿ ೧೯೯೬ರಿಂದ ನೀಡುತ್ತ ಬಂದಿರುವ ವಿರುಪಾಕ್ಷಪ್ಪ ಹಾವನೂರ ಹಾವನೂರು ಪ್ರತಿಷ್ಠಾನದ ಮೂಲಕ ಅನೇಕ ಸಾಹಿತ್ಯಕ ಚಟುಟಿಕೆಗಳನ್ನು ಮಾಡುವುದರ ಜೊತೆಗೆ ಪ್ರತಿ ವರ್ಷ ಪ್ರಕಟದಾಗುವ ಕಾದಂಬರಿಗಳನ್ನು ಆಹ್ವಾನಿಸಿ ಅವುಗಳಿಗೆ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ.
ವಿರುಪಾಕ್ಷಪ್ಪ ಹಾವನೂರರ ಮಹತ್ವದ ಸಾಧನೆಗಳು: ಹಾವನೂರು ಪ್ರತಿಷ್ಠನದ ಮೂಲಕ ನಿರಂತರವಾಗಿ ಸಾಹಿತ್ಯದ ಪರಿಚಾರ ಕ ಕಾರ್ಯವನ್ನು ನಿಭಾಯಿಸುತ್ತ ಬಂದಿದ್ದಾರೆ. ಕನ್ನಡ ನಾಡಿನ ಸಾರಸತ್ವ ಲೋಕಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ ನಾಡು ಬೆಳಗಿದ ಸಾಲು ದೀಪಗಳು ಎಂಬ ಸರಣಿಯಲ್ಲಿ ನಿರಂತರ ದೂರು ದಿನಗಳ ಕಾಲ ದಾರ್ಶನಿಕರಾದ ಕನಕದಾಸರು, ಶರೀಫ ಸಾಹೇಬರು, ಜನಕವಿ ಸರ್ವಜ್ಞ, ಕಾದಂಬರಿ ಪಿತಾಮಹ ಗಳಗನಾಥರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ.ಕೃ, ಸೋಕಾಕ, ಸು.ರಂ ಯಕ್ಕುಂಡಿ, ಆಧುನಿಕ ವಚನಕಾರ ಮಹದೇವ ಬಣಕಾರ, ನಾಡೋಜ ಪಾಟೀಲ ಪುಟ್ಟಪ್ಪ ಹಾಗೂ ಚಂದ್ರಶೇಖರ ಪಾಟೀಲರ ಕುರಿತು ವಿಚಾರ ಸಂಕಿರಣಗಳನ್ನು ಪ್ರತಿಷ್ಠಾನದ ಮೂಲಕ ಇವರು ಆಯೋಜಿಸಿದ್ದರು.
ಸದಭಿರುಚಿಯ ಸಾಹಿತ್ಯದ ಓದು, ಆಧುನಿಕ ಸಾಹಿತ್ಯದ ಪರಿಚಾರಕತ್ವವನ್ನು ಹಾವನೂರ ಪ್ರತಿಷ್ಠಾನ ಸದಾಕಾಲ ಮುಖಾಮುಖಿಯಾಗುತ್ತಲೇ ನಿರಂತರತೆಯನ್ನು ಕಾಪಾಡಿಕೊಂಡ ವೇದಿಕೆಯಾಗಿದೆ. ಹಿರಿಯರನ್ನು ಗೌರವಿಸುತ್ತಲೇ ಸಮಕಾಲೀನ ಕನ್ನಡ ಸಮಸ್ಯೆಗಳಿಗೆ ಸ್ಪಂದಿಸುತ್ತ ನಾಡುನುಡಿಯ ಸೇವೆಯನ್ನು ಮಾಡಿದೆ.
ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕ್ರಿಯಾ ಸಮಿತಿ ಸದಸ್ಯರಾಗಿ, ನಗರಸಭಾ ಸದಸ್ಯರಾಗಿ, ಹಾವೇರಿಯ ಸಿ.ಎಂ.ಸಿ. ಬ್ಯಾಂಕ್ ನಿರ್ದೇಶಕರಾಗಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮುಂತಾದ ಸಂಸ್ಥೆಗಳಲ್ಲಿ ಯಾವ ಫಲಾಪೇಕ್ಷೆ ಇಲ್ಲದೇ ಸೇವೆ ಸಲ್ಲಿಸಿದ್ದನ್ನು ಗುರುತಿಸಿ ಇವರಿಗೆ ರಾಜ್ಯೋತ್ಸವದಂತಹ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.
ನವೆಂಬರ್ ೧ರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ. ೬೯ ಸಾಧಕರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ
ಹಾವೇರಿ: ರಾಜ್ಯೋತ್ಸವ ಪ್ರಶಸ್ತಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ವಿರುಪಾಕ್ಷಪ್ಪ ಹಾವನೂರು ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಯಾವುದೇ ಫಲಾಪೇಕ್ಷೆಗಳಿಲ್ಲದೇ ನಿರಂತವಾಗಿ ಹಾವನೂರು ಪ್ರತಿಷ್ಠಾನದ ಮೂಲಕ ಸಾಹಿತ್ತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿರುವೆ. ಹಾವೇರಿಜನರ ಸಹಕಾರ, ಸಾಹಿತಿ-ಕಲಾವಿದರು ನನ್ನ ತಾಯಿ,ತಂದೆ, ಸಹೋದರ, ಪತ್ನಿ,ಮಕ್ಕಳು, ಬಂಧುಬಳಗದವರು ಬೆನ್ನೆಲುಬಾಗಿ ನಿಂತು ನನಗೆ ನೀಡಿದ ಪ್ರೋತ್ಸಾಹದಿಂದ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಸಾಧ್ಯವಾಗಿದೆ. ನಿಜಕ್ಕೂ ಅರ್ಹತೆಗೆ ಸಂದ ಗೌರವ ಇದಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ತುಂಬಾ ಸಂತೋಷ ತಂದಿದೆ ಎಂದು ವಿರುಪಾಕ್ಷಪ್ಪ ಹಾವನೂರು ಸಂತಸ ವ್ಯಕ್ತಪಡಿಸಿದ್ದಾರೆ.