
ರೈತ ಮತ್ತು ದುಡಿಯುವ ವರ್ಗ ಆಧುನಿಕ ಯುಗದ ಕುಬೇರರು -ಸಂಸದ ಬಸವರಾಜ ಬೊಮ್ಮಾಯಿ
ಹಾವೇರಿ : ರೈತ ಮತ್ತು ದುಡಿಯುವ ವರ್ಗ ಆಧುನಿಕ ಯುಗದ ಕುಬೇರರು. ಅನುದಾನ ಮಂಜೂರು ಮಾಡುವುದರಿಂದ ದೇಶದ ಆರ್ಥಿಕತೆ ಹೆಚ್ಚಾಗುವುದಿಲ್ಲ, ದುಡಿಯುವ ವರ್ಗಮಾಡುವ ಕೆಲಸ ಹಾಗೂ ಉತ್ಪಾದನೆಯಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಅಗ್ರಣೀಯ ಬ್ಯಾಂಕ್ ಸಯೋಗದಲ್ಲಿ ಆಯೋಜಿಸಲಾದ ಫಲಾನುಭವಿಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೬೦ ಕೋಟಿ ಜನಧನ್ ಖಾತೆ: ದುಡಿಯುವ ವರ್ಗಕ್ಕೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಜನರ ಬಳಿ ಹಣ ಬರಬೇಕು ಎಂಬ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದಲ್ಲಿ ೬೦ ಕೋಟಿ ಜನಧನ್ ಖಾತೆಗಳಿದ್ದು, ಈ ಪೈಕಿ ಮಹಿಳೆಯರ ಖಾತೆಗಳು ಹೆಚ್ಚಾಗಿವೆ. ಜನಧನ ಖಾತೆಯಿಂದ ಮಹಿಳೆಯರು ಉಳಿತಾಯ ಮಾಡುತ್ತಿದ್ದಾರೆ. ಡಿಜಿಟಲ್ ಹಣಕಾಸು ವ್ಯವಹಾರದಿಂದ ಬೆಳೆವಿಮೆ, ಪಿಂಚಣಿ, ಬೆಳೆ ಪರಿಹಾರದ ಹಣ ನೇರವಾಗಿ ಫಲಾನುಭವಿ ಖಾತೆಗೆ ಜಮೆಯಾಗುತ್ತದೆ. ಇದರಿಂದ ದುಡಿಯುವ ವರ್ಗಕ್ಕೆ ಅನುಕೂಲವಾಗಿದೆ. ಇದನ್ನು ಜಾರಿಗೆ ತಂದವರು ಮೋದಿಜಿ ಅವರು ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರö್ಯ ದೊರೆತ ಸಮಯದಲ್ಲಿ ದೇಶದ ಜನಸಂಖ್ಯೆ ೩೩ ಕೋಟಿ ಇತ್ತು, ಆದರೂ ಆಹಾರದ ಕೊರತೆ ಇದ್ದು, ಅಮೇರಿಕಾ ಸೇರಿದಂತೆ ವಿವಿಧ ದೇಶಗಳಿಂದ ಆಹಾರ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇಂದು ದೇಶದ ಜನಸಂಖ್ಯೆ ೧೩೩ ಕೋಟಿಗೂ ಅಧಿಕ ಇದ್ದರೂ ಸಹ ಆಹಾರದ ಕೊರತೆ ಇಲ್ಲ. ಇದಕ್ಕೆ ಕಾರಣ ರೈತರು ಹಾಗೂ ದುಡಿಯುವ ವರ್ಗವಾಗಿದೆ ಎಂದು ಹೇಳಿದರು.
ರೂ.೧.೫೦ ಲಕ್ಷ ಕೋಟಿ ತೆರಿಗೆ ವಿನಾಯಿತಿ: ಕೇಂದ್ರ ಸರ್ಕಾರ ರೂ.೧.೫೦ ಲಕ್ಷ ಕೋಟಿ ಮೊತ್ತದ ತೆರಿಗೆ ವಿನಾಯಿತಿ ನೀಡಿದೆ. ಇದರಿಂದ ಜನರ ಆರ್ಥಿಕ ವ್ಯವಸ್ಥೆ ಸುಧಾರಿಸಿದೆ ಹಾಗೂ ದುಡಿಯುವ ವರ್ಗಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.
ಜಿಲ್ಲೆಗೆ ಡಿಸಿಸಿ ಬ್ಯಾಂಕ್: ನಬಾರ್ಡ್ ಯೋಜನೆ ಮೊತ್ತ ಡಿಸಿಸಿ ಬ್ಯಾಂಕ್ಗೆ ಬರುತ್ತಿದ್ದು, ಧಾರವಾಡ ಡಿಸಿಸಿ ಬ್ಯಾಂಕ್ನಿAದ ಜಿಲ್ಲೆಗೆ ಮೊತ್ತ ನೀಡಲಾಗುತ್ತಿತ್ತು. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಕನಸು ಈಗ ನನಸಾಗಿದೆ. ಕೇಂದ್ರ ಸಚಿವ ಅಮಿತಶಾ ಅವರ ದೂರದೃಷ್ಟಿಕೋನದಿಂದ ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್ ಘೋಷಣೆ ಮಾಡಿದ್ದಾರೆ. ಈಗಾಗಲೇ ಆರ್.ಬಿ.ಐ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ದುಡಿಯುವ ವರ್ಗದ ಆರ್ಥಿಕ ಸ್ಥಿತಿ ಸುಧಾರಿಸಿದರೆ ನಾಡಿನ ಹಾಗೂ ದೇಶದ ಆರ್ಥಿಕತೆ ಸುಧಾರಿಸುತ್ತದೆ. ಹಾಗಾಗಿ ಪಿ.ಎಂ.ಸ್ವನಿಧಿ, ವಿಸ್ವಕರ್ಮ ಸೇರಿದಂತೆ ವಿವಿಧ ಯೋಜನೆಗಳಡಿ ಸಾಲ ಪಡೆದ ಫಲಾನುಭವಿಗಳು ಇದರ ಸದುಪಯೋಗ ಪಡೆಸಿಕೊಳ್ಳಬೇಕು. ಸ್ವಾಭಿಮಾನದ ಬದುಕು ನಡೆಸಬೇಕು ಹಾಗೂ ಆರ್ಥಿಕವಾಗಿ ಸದೃಢರಾಗಬೇಕು, ಜೊತೆಗೆ ತಮ್ಮ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕು ಎಂದರು.
ಕೇAದ್ರ ಸರ್ಕಾರದ ಯೋಜನೆಗಳು ಎಲ್ಲರಿಗೂ ತಲುಪಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ತಾಲೂಕುಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗುವುದು. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಸಾಲ ತೆಗೆದುಕೊಳ್ಳುವುದು ಹಾಗೂ ಕೊಡುವುದು ಬಹಳ ಹಳೆಯ ಪದ್ಧತಿಯಾಗಿದೆ. ಪೌರಾಣಿಕವಾಗಿ ನೋಡುವುದಾದರೆ ತಿರುಪತಿ ತಿಮ್ಮಪ್ಪನಿಗೆ ಕುಬೇರ ಸಾಲ ನೀಡಿದ್ದಾಗಿ ಪ್ರತಿತಿ ಇದೆ. ದೇಶದ ಆರ್ಥಿಕ ಸದೃಢತೆಗೆ ಬ್ಯಾಂಕ್ಗಳ ಪಾತ್ರ ಪ್ರಮುಖವಾಗಿದೆ. ಜನರಿಗೆ ಸಾಲ ಸಿಕ್ಕರೆ ಅವರ ಆರ್ಥಿಕ ಚಟುವಟಿಕೆ ಸುಧಾರಣೆಗೆ ಸಹಾಯವಾಗುತ್ತದೆ. ಹಾಗಾಗಿ ಗ್ರಾಹಕರು ಬ್ಯಾಂಕಿಗೆ ಸಾಲ ಕೇಳಲು ಬಂದಾಗ ಅವರ ಸಮಸ್ಯೆ ಆಲಿಸಬೇಕು, ಹೆಚ್ಚಿನ ಕಾರ್ಯಕ್ಷಮತೆ ತೋರಿಸಬೇಕು ಹಾಗೂ ಧನಾತ್ಮಕವಾಗಿ ಆಲೋಚನೆ ಮಾಡಬೇಕು. ಕೈಗಾರಿಕೆಗೆ ಸಾಲ ನೀಡುವ ಪ್ರಮಾಣ ದ್ವಿಗುಣವಾಗಿದೆ, ಆದರೆ ಕೃಷಿ ಕ್ಷೇತ್ರಕ್ಕೆ ಕಡಿಮೆ ಪ್ರಮಾಣದಲ್ಲಿದೆ. ಕೃಷಿ ಸೇರಿದಂತೆ ಆದ್ಯತಾ ವಲಯಕ್ಕೆ ಸಾಲ ನೀಡುವ ಪ್ರಮಾಣ ಹೆಚ್ಚಾಗಬೇಕು ಎಂದು ಹೇಳಿದರು.
ಪ್ರಧಾನಮಂತ್ರಿ ಮೋದಿಜಿ ಅವರು ೨೦೧೪ರಲ್ಲಿ ಜನಧನ್ ಯೋಜನೆ ಜಾರಿಗೆ ತರುವ ಮೂಲಕ ಬ್ಯಾಂಕ್ನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋದರು. ಒಂದೇ ವಾರದಲ್ಲಿ ಎರಡು ಕೋಟಿ ಜನಧನ್ ಖಾತೆ ಮಾಡುವ ಮೂಲಕ ಗಿನ್ನಸ್ ದಾಖಲೆ ಮಾಡಲಾಯಿತು. ಕೋವಿಡ್ ಸಮಯದಲ್ಲಿ ೮೦ ಕೋಟಿ ಜನರಿಗೆ ಡಿಜಿಟಲ್ ಹಣ ವರ್ಗಾವಣೆಗೆ ಅನುಕೂಲವಾಯಿತು. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದೆ. ಯಾವ ಉದ್ದೇಶಕ್ಕೆ ಸಾಲ ಪಡೆಯಲಾಗುತ್ತದೆ ಅದಕ್ಕೆ ಉಪಯೋಗಿಸಿಕೊಂಡು ಸಾಲದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಫಲಾನುಭವಿಗಳಿಗೆ ಸಲಹೆ ನೀಡಿದರು.
ರೂ.೮೧೯.೭೪ ಕೋಟಿ : ಪಿಎಂ.ವಿಶ್ವಕರ್ಮ ಯೋಜನೆಯಡಿ ೧೨ ಫಲಾನುಭವಿಗಳಿಗೆ ರೂ.೧೧.೫೦ ಲಕ್ಷ, ಪಿಎಂಇಜಿಪಿ ಯೋಜನೆಯಡಿ ೧೨ ಫಲಾನುಭವಿಗಳಿಗೆ ರೂ.೮೩.೪೫ ಲಕ್ಷ, ಮುದ್ರಾ ಯೋಜನೆಯಡಿ ೪೪ ಫಲಾನುಭವಿಗಳಿಗೆ ರೂ.೨೫೧.೭೭ ಲಕ್ಷ, ಪಿಎಂ ಸ್ವನಿಧಿ ಯೋಜನೆಯಡಿ ೧೧೦ ಫಲಾನುಭವಿಗಳಿಗೆ ರೂ.೧೯.೭೪ ಲಕ್ಷ, ಪಿಎಂಎಫ್ಎAಇ- ೨೬ ಫಲಾನುಭವಿಗಳಿಗೆ ರೂ.೨೪೦.೩೩ ಲಕ್ಷ, ಎನ್.ಆರ್.ಎಲ್.ಎಂ-ಎಸ್ಎಚ್ಜಿ ಯೋಜನೆಯಡಿ ೨೦ ಫಲಾನುಭವಿಗಳಿಗೆ ರೂ.೧೧೨ ಲಕ್ಷ ಹಾಗೂ ಎನ್ಯುಎಲ್ಎಂ ಯೋಜನೆಯಡಿ ೦೫ ಫಲಾನುಭವಿಗಳಿಗೆ ರೂ.೪೪ ಲಕ್ಷ ಸೇರಿದಂತೆ ೩೦೧ ಫಲಾನುಭವಿಗಳಿಗೆ ರೂ.೮೧೯.೭೪ ಕೋಟಿ ಮೊತ್ತದ ಸಾಲದ ಚೆಕ್ ಹಾಗೂ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು. ಪಿಎಂಜೆಜೆಬಿಯ ಮತ್ತು ಪಿಎಂಎಸ್ಬಿವೈ ಯೋಜನೆ ಮೃತರ ಕುಟುಂಬ ಸದಸ್ಯರಿಗೆ ಮರಣ ಪರಿಹಾರ ಚೆಕ್ ವಿತರಣೆ ಮಾಡಲಾಯಿತು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ರುಚಿ ಬಿಂದಲ್, ಬ್ಯಾಂಕ್ ಆಫ್ ಬರೋಡಾ ಶಿವಮೊಗ್ಗ ವಲಯದ ಪ್ರಾದೇಶಿಕ ಉಪ ವ್ಯವಸ್ಥಾಪಕ ದೀಪಕ ಶಹಕರ, ಮಂಗಳೂರು ವಲಯದ ಉಪ ವ್ಯವಸ್ಥಾಪಕ ರಾಜೇಶ ಶರ್ಮಾ, ಶಿವಮೊಗ್ಗ ವಲಯದ ಪ್ರಾದೇಶಿಕ ವ್ಯವಸ್ಥಾಪಕ ಪಂಕಜಕುಮಾರ ಸಮನ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾವೇರಿಯ ಪ್ರಾದೇಶಿಕ ವ್ಯವಸ್ಥಾಪಕ ನವೀನ ಬಿ, ನಬಾರ್ಡನ ಡಿ.ಡಿ.ಎಂ ರಂಗನಾಥ ಎಸ್ ಇತರರು ಉಪಸ್ಥಿತರಿದ್ದರು. ಲೀಡ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಪ್ರಭುದೇವ ಸ್ವಾಗತಿಸಿದರು.

