
ದಾನಿಗಳು ಮುಂದೆ ಬಂದರೆ ಹಾವಿವಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಅಧ್ಯಯನ ಪೀಠ; ಡಾ.ಸುರೇಶ ಜಂಗಮಶೆಟ್ಟಿ
ಹಾವೇರಿ: ಸ್ವಾತಂತ್ರ್ಯ ಹೋರಾಟಗಾರರ ಕುರಿತ ಅಧ್ಯಯನ ಪೀಠ ಆರಂಭಿಸಲು ಅವಕಾಶವಿದ್ದು, ಆಸಕ್ತ ದಾನಿಗಳು ನಮ್ಮನ್ನು ಸಂಪರ್ಕಿಸಬಹುದು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಹೇಳಿದರು. ಭಾನುವಾರ ನಗರದ ಶ್ರೀ ಗಂಗಾಧರ ನಂದಿ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲೂಕು ಘಟಕ ಮತ್ತು ಅರಳಿಕಟ್ಟಿ ಪ್ರಕಾಶನ ಆಶ್ರಯದಲ್ಲಿ ಜರುಗಿದ ಸ್ವಾತಂತ್ರ್ಯ ಹೋರಾಟಗಾರ ಗುರುಶಾಂತಪ್ಪ ಜಾಬಿನ್ ಅವರ ಜನ್ಮಶತಮಾನೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾರ್ಶನಿಕರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದವರ ಕುರಿತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಆರಂಭಿಸಲು ಅವಕಾಶವಿದೆ. ಮೂಲಸೌಕರ್ಯಗಳು, ಸಿಬ್ಬಂದಿ ವೇತನ ಸೇರಿದಂತೆ ಇನ್ನಿತರ ಖರ್ಚುಗಳಿಗೆ ಸರ್ಕಾರದ ಅನುದಾನ ಬಳಸಬಹುದು. ಜೊತೆಗೆ ದಾನಿಗಳು ಆರ್ಥಿಕವಾಗಿ ಸಹಕಾರ ನೀಡಿದರೆ ಅಧ್ಯಯನ ಪೀಠವನ್ನು ತುರ್ತಾಗಿ ಶುರು ಮಾಡಲು ಅವಕಾಶವಿದೆ. ಇಂಥ ಸಂದರ್ಭದಲ್ಲಿ ನಡೆ ನುಡಿಗಳಿಂದ ಸರಳ ಬದುಕು ಸವೆಸಿದ ಗುರುಶಾಂತಪ್ಪ ಜಾಬಿನ್ ವ್ಯಕ್ತಿತ್ವ ಅನುಕರಣೀಯ ಎಂದರು.
ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಬಳಿಕವೂ ಸಾರ್ವಜನಿಕ ಜೀವನದಲ್ಲಿ ಕಾಯಕ ನಿಷ್ಠೆಯಿಂದ ಬದುಕಿದ ಗುರುಶಾಂತಪ್ಪ ಜಾಬಿನ್ ಅವರ ಆದರ್ಶಗಳು ಇಂದಿಗೂ ಮಾದರಿ. ಅವರ ಜನ್ಮಶತಮಾನೋತ್ಸವ ಆಚರಣೆ ಅಭಿನಂದನೀಯ. ಹಿರಿಯರ ನಡೆ ನುಡಿಗಳನ್ನು ಪಾಲಿಸುತ್ತ ಬಂದಿರುವ ಅವರ ಕುಟುಂಬದ ಸರ್ವರೂ ಅಭಿನಂದನಾರ್ಹರು ಎಂದರು.
ಸಾನಿಧ್ಯ ವಹಿಸಿದ್ದ ಹೊಸಮಠದ ಬಸವ ಶಾಂತಲಿಂಗ ಮಹಾಸ್ವಾಮೀಜಿ ಮಾತನಾಡಿ ನಿಷ್ಕಳಂಕ ವ್ಯಕ್ತಿತ್ವದ ಮೂಲಕ ಜ ಮಾನಸದಲ್ಲಿರುವ ಗುರುಶಾಂತಪ್ಪ ಜಾಬಿನ್ ಪುರಸಭೆ ಅಧ್ಯಕ್ಷರಿದ್ದಾಗ ನಮ್ಮ ಶ್ರೀ ಮಠದ ಆಸ್ತಿಯನ್ನು ಉಳಿಸಿಕೊಟ್ಟ ಹೆಗ್ಗಳಿಕೆ ಪಡೆದವರು. ಒಬ್ಬ ವ್ಯಕ್ತಿಯ ಸಾವಿನ ನಂತರವೂ ಉಳಿಯುವುದು ಸತ್ಕಾರ್ಯಗಳು ಮಾತ್ರ ಎಂಬುದಕ್ಕೆ ಅವರೇ ಸಾಕ್ಷಿ ಎಂದರು.
ದತ್ತಿ ಉಪನ್ಯಾಸ ನೀಡಿದ ಪ್ರೊ.ಪಿ.ಸಿ. ಹಿರೇಮಠ ಮಾತನಾಡಿ, ಸ್ಥಳೀಯ ನಾಯಕರ ಬಗ್ಗೆ ಚರಿತ್ರೆಯನ್ನು ಕಟ್ಟಿಕೊಡುವುದು ಸವಾಲಿನ ಕೆಲಸ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಮಾಜವನ್ನು ಕಟ್ಟುವ ಜೊತೆಗೆ ಬ್ರಿಟಿಷರ ನಿದ್ರೆಗೆಡಿಸುವ ಕಾರ್ಯ ಮಾಡಿದ ಗುರುಶಾಂತಪ್ಪ ಜಾಬಿನ್ ತಾವೇ ಕಲಿತ ಶಾಲೆಗೆ ಬೆಂಕಿ ಇಟ್ಟು ದಾಸ್ಯವನ್ನು ಧಿಕ್ಕರಿಸಿದವರು. ಅಂಥ ಹೋರಾಟಗಾರರ ಜನ್ಮಶತಮಾನೋತ್ಸವ ಆಚರಣೆ ನಿಜಕ್ಕೂ ಮೆಚ್ಚುವಂಥದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪುಸ್ತಕ ಪ್ರಕಟಿಸಿರುವ ಅರಳಿಕಟ್ಟಿ ಪ್ರಕಾಶನ ನಮ್ಮ ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡುತ್ತಿದೆ ಎಂದರು.
ನಿವೃತ್ತ ಶಿಕ್ಷಕ ಕೆ.ಬಿ.ಬಿಕ್ಷಾವರ್ತಿಮಠ ದತ್ತಿ ದಾನಿಗಳ ಪರಿಚಯ ಮಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಎನ್. ದೊಡ್ಡಗೌಡ್ರ, ಮಲ್ಲಿಕಾರ್ಜುನ ಸಾತೇನಹಳ್ಳಿ, ಶಿವಬಸಪ್ಪ ಜಾಬಿನ್, ಜಗದೀಶ ಮಹಾರಾಜಪೇಟ್, ವಿವೇಕಾನಂದ ಅಂಗಡಿ, ರುದ್ರಮುನಿ ಹುಲ್ಮನಿ, ಪರಮೇಶಪ್ಪ ಮೈಲಾರ, ಅನಸೂಯಾ ಮೆಳ್ಳಳ್ಳಿ, ಈರಣ್ಣ ಬೆಳವಡಿ, ಎಸ್.ಎಂ.ಬಡಿಗೇರ, ಎಸ್.ಆರ್.ಹಿರೇಮಠ ಉಪಸ್ಥಿತರಿದ್ದರು.
ಪೃಥ್ವಿರಾಜ್ ಬೆಟಗೇರಿ ನಿರೂಪಿಸಿದರು. ಗೂಳಪ್ಪ ಅರಳಿಕಟ್ಟಿ ಸ್ವಾಗತಿಸಿದರು. ಸಿದ್ದೇಶ್ವರ ಹುಣಸಿಕಟ್ಟಿಮಠ ವಂದಿಸಿದರು.

