
ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯಲ್ಲಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ :ರುದ್ರಪ್ಪ ಲಮಾಣಿ
ಹಾವೇರಿ: “ಹಾವೇರಿ ತಾಲ್ಲೂಕು ಕೃಷಿ ಪ್ರಧಾನವಾಗಿದ್ದು, ರೈತರಿಗೆ ಗುಣಮಟ್ಟದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ನಿಗದಿತ ದರದಲ್ಲಿ ಪೂರೈಸುವುದು ಪ್ರತಿಯೊಬ್ಬ ಮಾರಾಟಗಾರರ ಮತ್ತು ತಾಲ್ಲೂಕು ಆಡಳಿತದ ಆದ್ಯ ಕರ್ತವ್ಯವಾಗಿದೆ,” ಎಂದು ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರು ಹಾಗೂ ಹಾವೇರಿ ಶಾಸಕರಾದ ರುದ್ರಪ್ಪ ಲಮಾಣಿ ಹೇಳಿದರು.
ಬುಧವಾರ ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಪ್ರಸ್ತುತ ರಸಗೊಬ್ಬರಗಳ ಯೂರಿಯಾ: 1594 ಟನ್, ಡಿ.ಎ.ಪಿ: 758 ಟನ್, ಪೊಟ್ಯಾಶ್: 167 ಟನ್, ಕಾಂಪ್ಲೆಕ್ಸ್ ರಸಗೊಬ್ಬರ: 2394 ಟನ್ ಹೀಗೆ ಒಟ್ಟು ತಾಲ್ಲೂಕಿನಲ್ಲಿ ಪ್ರಸ್ತುತ ಒಟ್ಟು 5079 ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಾರಾಟಗಾರರು ರೈತರ ಆಧಾರ್ ಸಂಖ್ಯೆ ಪಡೆದು ಕಡ್ಡಾಯವಾಗಿ POS (Point of Sale) ಯಂತ್ರದ ಮೂಲಕವೇ ರಸಗೊಬ್ಬರ ಮಾರಾಟ ಮಾಡಬೇಕು. ರಸಗೊಬ್ಬರಗಳನ್ನು ಕೇವಲ ಅಧಿಕೃತ ಸ್ಥಳಗಳಲ್ಲಿ ಮಾತ್ರ ದಾಸ್ತಾನು ಮಾಡಬೇಕು. ಅನಧಿಕೃತ ಜಾಗದಲ್ಲಿ ದಾಸ್ತಾನು ಪತ್ತೆಯಾದಲ್ಲಿ ತಕ್ಷಣವೇ ಜಪ್ತು ಮಾಡಲಾಗುವುದು. ಕಳಪೆ ಬೀಜ ಅಥವಾ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಜರುಗಿಸಲಿದ್ದಾರೆ.ಮಳಿಗೆಗಳಲ್ಲಿ ದಾಸ್ತಾನು ವಿವರ ಹಾಗೂ MRP (ಗರಿಷ್ಠ ಮಾರಾಟ ದರ) ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ರೈತರಿಗೆ ರಸಗೊಬ್ಬರ ನೀಡಿದ ನಂತರ ಕಡ್ಡಾಯವಾಗಿ ಅಧಿಕೃತ ರಶೀದಿ ನೀಡಬೇಕು ಎಂದು ಸೂಚಿಸಿದರು.
“ರಸಗೊಬ್ಬರ ಮತ್ತು ಬಿತ್ತನೆ ಬೀಜಗಳು ಅಗತ್ಯ ವಸ್ತುಗಳಾಗಿವೆ. ಇವುಗಳ ವಿತರಣೆಯಲ್ಲಿ ಯಾವುದೇ ಅಕ್ರಮ ಅಥವಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಎಚ್ಚರಿಸಿದರು.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಗೋವಿಂದ್ ನಾಯಕ್, ಸಹಾಯಕ ಕೃಷಿ ನಿರ್ದೇಶಕ ಶ್ರೀ ವೀರಭದ್ರಪ್ಪ, ಮುಖಂಡರಾದ ರುದ್ರಪ್ಪ ಹಾದಿಮನಿ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

