
ಇಂದಿನಿಂದಲೇ ಕೆರೆ ತುಂಬಿಸಲು ಆರಂಭಿಸಿ-ಮಳೆ ಅಭಾವ ಎದುರಿಸಲು ಮುಂಜಾಗ್ರತಾ ಕ್ರಮಕೈಗೊಳ್ಳಿ: ಸಚಿವ ಸತೀಶ ಜಾರಕಿಹೊಳಿ
ಹಾವೇರಿ: ಪ್ರಸ್ತುತ ರಾಜ್ಯದಲ್ಲೇ ಹಾವೇರಿ ಜಿಲ್ಲೆಯಲ್ಲಿ ಮಳೆ ಚನ್ನಾಗಿ ಆಗಿದೆ ಹಾಗೂ ಬೆಳೆ ಸಹ ಉತ್ತಮವಾಗಿದೆ. ಬರುವ ಎರಡು ತಿಂಗಳ ನಂತರ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಲೋಕೋಪಯೋಗಿ ಹಾಗೂ ಹಾವೇರಿ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಮೇಲುಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಾವೇರಿ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನೂರು ವರ್ಷಗಳ ನಂತರ ಇಂತಹ ಬರಗಾಲ ಬಂದಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಇದನ್ನು ಸನ್ನದ್ಧವಾಗಿ ಎದುರಿಸಲು, ಪರಿಸ್ಥಿತಿ ತಿಳಿದುಕೊಳ್ಳಲು ಮುಖ್ಯಮಂತ್ರಿಗಳು ನನ್ನನ್ನು ಜಿಲ್ಲೆಗೆ ಕಳುಹಿಸಿದ್ದಾರೆ. ಇಲ್ಲಿನ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.
ಕೆರೆ ತುಂಬಿಸಿ: ನೀರಿನ ಸಮಸ್ಯೆ ಪರಿಹಾರಕ್ಕೆ ಕೆರೆ ತುಂಬಿಸುವುದು ಬಹಳ ಸೂಕ್ತವಾಗಿದ್ದು, ಈಗ ವರದಾ ನದಿಯಲ್ಲಿ ನೀರು ಬರುತ್ತಿದೆ, ಇಂದಿನಿಂದಲೇ ಕೆರೆ ತುಂಬಿಸುವ ಕಾರ್ಯ ಆರಂಭಿಸಬೇಕು. ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಣ್ಣ ನೀರಾವರಿ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾ.ಪಂ.ಗಳಿಗೆ ಟ್ಯಾಂಕರ್ ಖರೀದಿಸಿ: ಪ್ರತಿ ಗ್ರಾಮ ಪಂಚಾಯತಿಯಿಂದ ಹಂತ ಹಂತವಾಗಿ ಒಂದು ಟ್ಯಾಂಕರ್ ಖರೀದಿಸಿ, ಇದರಿಂದ ತುಂಬಾ ಅನುಕೂಲವಾಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ ೧೫ನೇ ಹಣಕಾಸು ಯೋಜನೆಯಲ್ಲಿ ಪ್ರತಿ ಗ್ರಾ.ಪಂ.ನಲ್ಲಿ ಟ್ಯಾಂಕರ್ ಖರೀದಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಹೊಸ ಬ್ಯಾರೇಜ್ಗೆ ಜಾಗ ಗುರುತಿಸಿ: ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯಲ್ಲಿ ಹೊಸ ಬ್ಯಾರೇಜ್ ನಿರ್ಮಾಣ ಮಾಡಲು ಎಲ್ಲೆಲ್ಲಿ ಅವಕಾಶವಿದೆ ಎಂದು ಪಟ್ಟಿಮಾಡಿ ಜಿಲ್ಲಾಧಿಕಾರಿಗಳಿಗೆ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾಗೃತಿ ಮೂಡಿಸಿ: ಜಿಲ್ಲೆಯ ರೈತರಿಗೆ ಸಮಗ್ರ ಬೇಸಾಯ ಪದ್ಧತಿ ಕುರಿತು, ಯೂರಿಯಾ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗುವ ಕುರಿತು ಜಾಗೃತಿ ಮೂಡಿ. ಜಿಲ್ಲೆಯ ಪ್ರಗತಿಪರ ರೈತರ ಕುರಿತು ವ್ಯಾಪಕ ಪ್ರಚಾರಕೈಗೊಳ್ಳಿ, ಪ್ರಗತಿಪರ ರೈತರನ್ನು ಸನ್ಮಾನಿಸಿ, ಕೃಷಿ ಮೇಳಗಳಿಗೆ ರೈತರನ್ನು ಕರೆದುಕೊಂಡು ಹೋಗಿ. ಕೃಷಿ ಹಾಗೂ ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಅರಿವು ಮೂಡಿಸಿ ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಿಸ್ ಮ್ಯಾಚ್ ಆಗದಂತೆ ನೋಡಿಕೊಳ್ಳಿ: ಬೆಳೆವಿಮೆ ಪರಿಹಾರ ಪ್ರಕರಣಗಳಲ್ಲಿ ಬೆಳೆ ಮಿಸ್ ಮ್ಯಾಚ್ನಿಂದ ರೈತರಿಗೆ ಪರಿಹಾರ ವಿಳಂಬವಾಗುತ್ತಿದೆ. ಅದೇ ರೀತಿ ರೈತರು ಬೆಳೆವಿಮೆ ನೋಂದಣಿಗೆ ಪರಿಹಾರ ಕಡಿಮೆ, ಏಜೆಂಟರು ಬೆಳೆವಿಮೆ ನೋಂದಣಿಗೆ ಹೆಚ್ಚಿನ ಪರಿಹಾರ ಕುರಿತು ಎಲ್ಲಕಡೆ ದೂರುಗಳಿವೆ. ಇನ್ನು ಮುಂದೆ ಇಂತಹ ಪ್ರಕರಣಗಳು ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಖಡಕ್ ಸೂಚನೆ ನೀಡಿದರು.
ರಸಗೊಬ್ಬರ ಕೊರೆತಯಾಗದಂತೆ ಎಚ್ಚರಿಕೆ ವಹಿಸಿ: ಪ್ರಸ್ತುತ ಮಳೆ ಕೊರತೆ ಇರುವುದರಿಂದ ಗೊಬ್ಬರ ಬೇಡಿಕೆ ಕಡಿಮೆಯಾಗಿದೆ. ಬರುವ ದಿನಗಳಲ್ಲಿ ಮಳೆಯಾದರೆ ಗೊಬ್ಬರ ಬೇಡಿಕೆ ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ರಸಗೊಬ್ಬರ ಕೊರತೆಯಾಗದಂತೆ ಅಗತ್ಯ ದಾಸ್ತಾನು ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ವಿಬಿ- ಜಿ ರಾಮಜಿ ಜಾಗೃತಿ ಮೂಡಿಸಿ: ವಿಕಸಿತ್ ಭಾರತ್-ಗ್ಯಾರಂಟಿ ಫಾಸ್ ರೋಜ್ಗಾರ್ ಮತ್ತು ಅಜಿವಿಕ ಮಿಷನ್-ಭಾರತ( ವಿಬಿ- ಜಿ ರಾಮಜಿ) ಜಾಗೃತಿ ಮೂಡಿಸಿ, ಈ ಯೋಜನೆಯ ಉದ್ದೇಶ ಕುರಿತು ಗ್ರಾಮಸ್ಥರಿಗೆ ತಿಳುವಳಿಕೆ ನೀಡುವ ಕೆಲಸವಾಗಬೇಕು. ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳು ಸಭೆ ನಡೆಸಿ ಎಂದು ಸೂಚಿಸಿದರು.
ನದಿ ಜೋಡಣೆ: ಬೆಡ್ತಿ-ವರದಾ ನದಿ ಜೋಡಣೆ ಯೋಜನೆ ಯಾವ ಹಂತದಲ್ಲಿದೆ, ಇದರ ಡಿಪಿಆರ್ ಮಾಹಿತಿ ಕೊಡಿ, ನಾನು ಇದರ ಬಗ್ಗೆ ವಿಚಾರಣೆ ಮಾಡುತ್ತೇನೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕರು ಹಾಗೂ ವಿಧಾನಸಭೆ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಬ್ಯಾಡಗಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ಶಾಸಕರಾದ ಶ್ರೀನಿವಾಸ ಮಾನೆ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಯಾಸೀರ್ ಅಹ್ಮದಖಾನ್ ಪಠಾಣ ಅವರು ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವಿಳಂಬ, ಬರುವ ದಿನಗಳಲ್ಲಿ ರೈತರಿಗೆ ಗೊಬ್ಬರದ ಸಮಸ್ಯೆ ಉಂಟಾಗಬಹುದು, ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, ಬರುವ ದಿನಗಳಲ್ಲಿ ಅಂತರ್ಜಲಮಟ್ಟ ಕಡಿಮೆಯಾದಾಗ ಪರ್ಯಾಯಕ್ರಮ, ಬೆಳಹಾನಿ, ಬೆಳೆಪರಿಹಾರ ವಿಳಂಬ, ಬೆಳೆ ಮಿಸ್ಮ್ಯಾಚ್ ಪ್ರಕರಣ ಪರಿಹಾರ ವಿಳಂಬದ ಕುರಿತು ಸಚಿವರ ಬಗ್ಗೆ ತಂದರು ಹಾಗೂ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಾರ್ಚ್ ೧ ರಿಂದ ಮೇ ೩೧ರವರೆಗೆ ವಾಡಿಕೆ ಮಳೆ೧೧೯.೯೦ ಮಿ.ಮಿ.ಗೆ ೧೫೦.೫೦ ಮಿಮಿ ಮಳೆಯಾಗಿದ್ದು, ೨೫.೫೨ ಮಿ.ಮೀ. ಕಡಿಮೆ ಮಳೆಯಾಗಿದೆ. ಜೂ.೧ ರಿಂದ ಜುಲೈ ೧ರವರೆಗೆ ೧೨೫.೨೦ ವಾಡಿಕೆ ಮಳೆಗೆ ೫೫.೫೦ ಮೀ ಮೀ ಮಳೆಯಾಗಿದ್ದು, ೫೫.೬೭ ಮಿ.ಮೀ. ಕಡಿಮೆ ಮಳೆಯಾಗಿದೆ. ಜಿಲ್ಲೆಯ ೨,೧೮೨ ಕೆರೆಗಳ ಪೈಕಿ ೧೪೦ ಕೆರೆಗಳು ಖಾಲಿ ಇದ್ದು, ೧,೨೩೫ ಕೆರೆಗಳು ಶೇ. ೧ ರಿಂದ ೩೦, ೩೯೦ ಕೆರೆಗಳು ಶೇ ೩೧ ರಿಂದ ೫೦, ೪೧೪ ಕೆರೆಗಳು ೫೧ ರಿಂದ ೯೯ ಕೆರೆಗಳು ಭರ್ತಿಯಾಗಿದ್ದು, ಎರಡು ಕೆರೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ತುರ್ತು ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೊಳ್ಳಲು ಪ್ರಸಕ್ತ ೨೦೨೬-೨೭ನೇ ಸಾಲಿನಲ್ಲಿ ಸರ್ಕಾರದಿಂದ ರೂ.ನಾಲ್ಕು ಕೋಟಿ ಅನುಮೋದನೆಯಾಗಿದೆ. ಒಂದನೇ ಹಂತದಲ್ಲಿ ೧.೫೦ ಕೋಟಿ ಮಂಜೂರಾಗಿ, ೧೬೧ ಕಾಮಗಾರಿಗಳು ಮುಕ್ತಾಯಗೊಂಡಿವೆ. ದ್ವಿತೀಯ ಹಂತದಲ್ಲಿ ರೂ.೨.೫೦ ಕೋಟಿಯಲ್ಲಿ ೧೨೮ ಕಾಮಗಾರಿಗಳು ಮಂಜೂರಾಗಿದ್ದು, ೯೯ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ೨೯ ಕಾಮಗಾರಿಗಳು ಬಾಕಿ ಇವೆ ಎಂದರು ಹಾಗೂ ಪೂರ್ವ ಮುಂಗಾರು ಹಂಗಾಮಿನಲ್ಲಿ ಮಾನವ ಜೀವಹಾನಿ, ಜಾನುವಾರು ಜೀವಹಾನಿ, ಬೆಳೆಹಾನಿ, ಮನೆಹಾನಿ ಹಾಗೂ ಪರಿಹಾರ ವಿತರಣೆ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜಿತ್ ಕುಮಾರ ಮಾತನಾಡಿ, ಜಿಲ್ಲೆಯ ೨೨೩ ಗ್ರಾಮ ಪಂಚಾಯತಿ ವ್ಯಾಪ್ತಿಯ ೭೨೬ ಗ್ರಾಮಗಳ ಪೈಕಿ ೩,೫೯೧ ಸಾರ್ವಜನಿಕ ಕೊಳವೆಬಾವಿ ಹಾಗೂ ೫೭೬ ಖಾಸಗಿ ಕೊಳವೆಬಾವಿ ಗುರುತಿಸಲಾಗಿದೆ. ಜಿಲ್ಲೆಯ ಎಂಟು ತಾಲೂಕುಗಳ ೬೪ ಗ್ರಾಮಗಳಿಗೆ ೮೦ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲಾಗಿದೆ. ೬೨ ಗ್ರಾಮಗಳಲ್ಲಿ ೬೬ ಕೊಳವೆಬಾವಿಗಳನ್ನು ಹೊಸದಾಗಿ ಕೊರೆಯಸಲಾಗಿದೆ. ೧೨ ಗ್ರಾಮಗಳ ೧೫ ಹಳೆಯ ಕೊಳವೆಬಾವಿಗಳನ್ನು ಫ್ಲಶಿಂಗ್ ಮಾಡಲಾಗಿದೆ. ಟಾಸ್ಕ್ ಪೋರ್ಸ್ ಅನುದಾನದಲ್ಲಿ ರೂ.೫೬ ಲಕ್ಷ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ೩,೨೮,೯೫೬ ಹೆ.ಪ್ರ.ಬಿತ್ತನೆ ಗುರಿ ಎದುರು ಈವರೆಗೆ ೨,೯೯,೯೧೭ ಹೆ.ಪ್ರ.ದಲ್ಲಿ ಬಿತ್ತೆನೆಯಾಗಿದ್ದು, ಶೇ.೯೧.೨ ರಷ್ಟು ಗುರಿ ಸಾಧನೆಯಾಗಿದೆ. ಪ್ರಮುಖವಾಗಿ ಗೋವಿನಜೋಳ, ಭತ್ತ, ಶೇಂಗಾ,ಸೋಯಾಬಿನ್ ಹಾಗೂ ಹತ್ತಿ ಬೆಳೆಯಲಾಗಿದೆ. ತೇವಾಂಶ ಖಚಿತಪಡಿಸಿಕೊಂಡು ಬಿತ್ತೆನೆಮಾಡಲು, ಬರ ಪರಿಸ್ಥಿತಿ ಎದುರಿಸಲು ಪರ್ಯಾಯ ಬೆಳೆ ಯೋಜನೆ, ಹೆಚ್ಚಿನ ರಸಗೊಬ್ಬರ ಬಳಸದಂತೆ ಹಾಗೂ ಅವಶ್ಯವಿದ್ದಲ್ಲಿ ನ್ಯಾನೋ ಯೂರಿಯಾ ಹಾಗೂ ಡಿಎಪಿಗಳ ಬಳಕೆ ಕುರಿತು ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಡಾ.ಪುನಿತ್, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ ಸೈಯದ್ ಅಜೀಮ್ಪೀರ್ ಖಾದ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ.ನಗಾರಾಜ ಎಲ್ ಉಪಸ್ಥಿತರಿದ್ದರು.

