ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಹಾವೇರಿಜಿಲ್ಲೆಯ ಇಬ್ಬರು ಸಾಧಕರಿಗೆ ಸನ್ಮಾನ
ಹಾವೇರಿ: ದಲಿತ ಸಾಹಿತ್ಯ ಪರಿಷತ್ತಿಗೆ ಈಗ ರಜತ ಮಹೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಜು.೨೮ ಮತ್ತು ೨೯ರಂದು ಗೊಮ್ಮಟನಗರ ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗ ಮಂದಿರದಲ್ಲಿ ೧೦ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ರಾಜ್ಯ ಮಟ್ಟದ ನಾನಾ ಕ್ಷೇತ್ರಗಳಲ್ಲಿನ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದ್ದು, ಹಾವೇರಿಜಿಲ್ಲೆಯಿಂದ ಸಾಹಿತಿ ಬಿ.ಶ್ರೀನಿವಾಸ ಅವರ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಹಾಗೂ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಸಂಜಯಗಾಂಧಿ ಸಂಜೀವಣ್ಣನವರ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ದಸಾಪ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿ ಗೌರವ ಪುರಸ್ಕಾರಕ್ಕೆ ನೀಡಲಾಗುತ್ತದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಗೊಳಸಂಗಿ, ಹಾವೇರಿಜಿಲ್ಲಾ ದಸಾಪ ಘಟಕದ ಅಧ್ಯಕ್ಷ ಮಾಲತೇಶ ಅಂಗೂರ ಪಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಶ್ರೀನಿವಾಸರ ಪರಿಚಯ : ಕಡುಬಡತನದ ವ್ಯವಸಾಯ ಕುಟುಂಬದಲ್ಲಿ ೦೧-೦೬-೧೯೭೦ ರಲ್ಲಿ ಜನನ, ಇವರ ಹುಟ್ಟೂರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ನ್ಯೂಕ್ಲಿಯರ್ ಫಿಜಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಹಂಪಿ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ.
ಸಿರುಗುಪ್ಪ, ಸಂಡೂರಿನ ಕಾಲೇಜುಗಳಲ್ಲಿ ಕೆಲಕಾಲ ಉಪನ್ಯಾಸಕರಾಗಿ ಕಾರ್ಯನಿರ್ವಹಣೆ, ಆನಂತರ ನ್ಯಾಯಾಂಗ ಇಲಾಖೆಗೆ ಸೇರಿ, ಹಾನಗಲ್, ಹಾವೇರಿ ಮತ್ತು ರಾಣೆಬೆನ್ನೂರು ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ದಾವಣಗೆರೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಸಾಹಿತ್ಯ ಕೃಷಿ: ಕಾಣದಾಯಿತ ಊರು ಕೇರಿ (ಕಥಾ ಸಂಕಲನ) ಉರಿವ ಒಲೆಯ ಮುಂದೆ (ಕವನ ಸಂಕಲನ) (ಅನುವಾದ) ಪುರೋಹಿತಶಾಹಿ ಮತ್ತು ಗುಲಾಮಗಿರಿ, ಬೈಲಾಂಜಿ (ಅನುವಾದದ ಸಹಭಾಗಿ) ಹಾವೇರಿ ನ್ಯಾಯ,ಸಂಚಲನ (ಸಂಪಾದಿತ ಕೃತಿಗಳು)
ಸಂದ ಗೌರವ: ಪ್ರಜಾವಾಣಿಯ ಕಥಾ ಸ್ಪರ್ಧೆಯ ಬಹುಮಾನ ಬಹುಮಾನ (೨೦೦೮), ಜಿ.ಎಚ್. ನಾಯಕರ ತಿಂಗಳ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಪ್ರಶಸ್ತಿ, ಸದಾಶಿವ ಕೋರಿ ದತ್ತಿ ಕಥಾ ಪ್ರಶಸ್ತಿ, “ದಿ ಕಲರ್ ಶರ್ಟ್’ ಬಣ್ಣದ ಅಂಗಿ ಕಿರುಚಿತ್ರದ ನಿರ್ಮಾಣ, ಕಥೆ ಮತ್ತು ಚಿತ್ರಕಥೆಗೆ ಜನ ಅವಾರ್ಡ್ ಮತ್ತು ಸಿಂಚನ ಕಾವ್ಯ ಪ್ರಶಸ್ತಿ,೨೦೧೯ನೇ ಸಾಲಿನ ಕನಕ-ಶರೀಫ ಕಾವ್ಯ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.ನ್ಯಾಯಾಂಗ ಸೇವೆಯಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಇ.ಎಸ್. ವೆಂಕಟಾಚಲಯ್ಯರಿಂದ ಗೌರವ ಸ್ವೀಕಾರ. ಮೂರು ವರುಷಗಳಿಗೂ ಹೆಚ್ಚುಕಾಲ ’ಕೌರವ’ ದಿನಪತ್ರಿಕೆಯಲ್ಲಿ ಅಂಕಣ ಬರೆದಿದ್ದಾರೆ.ಜನಪರ, ಜೀವಪರ ಗೆಳೆಯರ ಹೋರಾಟಗಳಲ್ಲಿ ಸದಾ ಸಹಭಾಗಿಯಾಗುವ ತುಡಿತದ ಲೇಖಕರು ಉತ್ತಮ ಸಾಹಿತ್ಯಕ, ವೈಚಾರಿಕ ಸಮ್ಮೇಳನಗಳ ಸಂಘಟಕರೂ ಆಗಿದ್ದಾರೆ.
ಸಂಜಯಗಾಂಧಿ ಪರಿಚಯ: ೦೫-೦೨-೧೯೮೨ ಹಾವೇರಿ ತಾಲೂಕಿನ ನೆಗಳೂರುಗ್ರಾಮದಲ್ಲಿ ಬಡ ದಲಿತ ಕುಟುಂಬದಲ್ಲಿ ಜನಿಸಿದ ಸಂಜಯಗಾಂಧಿ ಸಂಜೀವಣ್ಣನವರ ಎಂಎ ಪದವಿಧರರಾಗಿದ್ದಾರೆ. ಎಲ್ಎಲ್ಬಿ ಅಧ್ಯಯನಮಾಡುತ್ತಿದ್ದಾರೆ. ಕಿತ್ತು ತಿನ್ನುವ ಬಡತನದಲ್ಲಿ ಬೆಳೆದ ಸಂಜಯಗಾಂದಿ, “ತಮ್ಮ ತಂದೆ ಪುಟ್ಟಪ್ಪ ಸಂಜೀವಣ್ಣನವರ, ತಾಯಿ ಭರಮವ್ವ ಅವರು ಬೆರೆಯವರ ಹೊಲಗಳಲ್ಲಿ ಕಳೆ ಕೆತ್ತಿ ನಮ್ಮನ್ನು ಓದಿಸಿದ್ದಾರೆ. ಹೆತ್ತವರ ಋಣವನ್ನು ಈ ಜನ್ಮದಲ್ಲಿ ತೀರಿಸಲಸಾಧ್ಯ. ಇಂದು ನಾನೇದಾದರೂ ಆಗಿದ್ದರೆ ಅದಕ್ಕೆ ನಮ್ಮ ಅಪ್ಪ-ಅವ್ವ ಕಾರಣ. ಹೆತ್ತವರ ಪ್ರೀತಿ ವರ್ಣಿಸಸಾಧ್ಯ” ಎನ್ನುವ ಸಂಜಯಗಾಂಧಿ ತಂದೆ-ತಾಯಿನ್ನು ಹೃದಯದಲ್ಲಿಟ್ಟುಕೊಂಡು ನಿತ್ಯ ಪೂಜಿಸುತ್ತಾರೆ. ಬೇರೆಯವರಿಗೆ ಆದರ್ಶವಾಗಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ನೆಗಳೂರಲ್ಲಿ ಪೂರೈಸಿದ ಇವರು ಮುಂದೆ ಡಿಗ್ರಿಯನ್ನು ರಾಣೇನ್ನೂರಲ್ಲಿ ಪೂರೈಸಿ, ಹಂಪಿವಿವಿಯಲ್ಲಿ ಎಂಎ ಪದವಿಪಡೆದರು. ವಿದ್ಯಾರ್ಥಿ ದೆಸೆಯಲ್ಲಿಯೇ ಹೋರಾಟದಲ್ಲಿ ಭಾಗವಹಿಸುವು ಮೂಲಕ ಸಾಮಾಜಿಕ ಅಸಮಾನತೆಯ ವಿರುದ್ಧ ತೊಡೆತಟ್ಟಿದರು. ಕನ್ನಡಪರ ಹೋರಾಟ, ರೈತರ ಚಳುವಳಿಗಳಲ್ಲಿ ಭಾಗವಹಿಸಿದ್ದಾರೆ. ದಲಿತ ಚಳುವಳಿಯಲ್ಲಿ ಮುಂಚೂಣಿಯನಾಯಕನಾಗಿ ಬೆಳೆದ ಸಂಜಯಗಾಂಧಿ ಸಂಜೀವಣ್ಣನವರ ತಮ್ಮ “ಗಾಂಧಿ” ಎನ್ನುವ ನಾಮದೇಯದಿಂದಲೇ ಗಮನ ಸೆಳೆಯುತ್ತಾರೆ.
ನ್ಯಾ.ಸದಾಶಿವ ಆಯೋಗದ ವರದಿಜಾರಿಗಾಗಿ ನಡೆದ ಹೋರಾಟದಲ್ಲಿ ಜಿಲ್ಲೆಯ ನಾಯಕತ್ವ ವಹಿಸಿ ರಾಜ್ಯದ ಗಮನ ಸೆಳೆದರು. ಸದಾ ಕ್ರಿಯಾಶೀಲರಾಗಿರುವ ಸಂಜಯಗಾಂಧಿ ಲೇಖಕರು ಕೂಡಾ ಆಗಿದ್ದಾರೆ. ಸಾಮಾಜಿಕ ಚಳುವಳಿಯ ಬಗ್ಗೆ, ದಲಿತರ ಶೋಷಣೆ, ಮೂಢನಂಭಿಕೆ, ಅಂಧಶೃದ್ಧೆಗಳ ಬಗ್ಗೆ ತಮ್ಮ ಇತಿಮೀತಿಯಲ್ಲಿ ಜಾಗ್ರತಿ ಮೂಡಿಸಲು ಲೇಖನಗಳನ್ನು ಬರೆದಿದ್ದಾರೆ. ನೆಗಳೂರಿನ ಅಪ್ಪಟಗ್ರಾಮೀಣ ಸೊಗಡನ್ನು, ಭಾಷೆಯನ್ನು ಮೈಗೂಡಿಸಿಕೊಂಡಿರುವ ಇವರು ದಲಿತ ಚಳುವಳಿಗಳಲ್ಲಿ ಭಾಗವಹಿಸುತ್ತಾ ಸಮ ಸಮಾಜದ ನಿರ್ಮಾಣದ ಹೋರಾಟದ ಜೊತೆಗೆ ನಾಡು-ನುಡಿಗೆ ಧಕ್ಕೆ ಬಂದ ಸಂದರ್ಭದಲ್ಲಿ ಕನ್ನಡಭಾವುಟ ಹಿಡಿದ ಬೀದಿಗಿಳಿಯುವ ಸಂಜಯಗಾಂಧಿ ಸಂಜೀವಣ್ಣನವರ ಉತ್ತಮ ಸಂಘಟಕರು ಆಗಿದ್ದಾರೆ.