ಅಪ್ಪ “ಅಶೋಕ ಬಸ್ತಿ ಅಣ್ಣಾವ್ರ ತದ್ರೂಪ”, ಮಗ “ರಾಘವೇಂದ್ರ ಬಸ್ತಿ ಪುನೀತ್ ತದ್ರೂಪ”!
ಹಾವೇರಿ:ವರನಟ ಡಾ.ರಾಜಕುಮಾರ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ! ತಮ್ಮ ಮನೋಜ್ಞ ಅಭಿನಯದ ಮೂಲಕ, ಹಾಡುಗಾರಿಕೆಯ ಮೂಲಕ ೫ ದಶಕಗಳವರೆಗೆ ಚಿತ್ರ ಪ್ರೇಮಿಗಳನ್ನು ರಂಜಿಸಿ, ನಗಿಸಿ, ಅಳಿಸಿ, ಚಿಂತನೆಗೆ ಹಚ್ಚಿ ಕಣ್ಮರೆಯಾಗಿರುವ ಕನ್ನಡಿಗರ ಕಣ್ಮಣಿ ಅಣ್ಣಾವ್ರ ತದ್ರೋಪವಾಗಿರುವ “ನಮ್ಮೂರ ರಾಜಕುಮಾರ” ಎನ್ನುವ ಖ್ಯಾತಿಯ ಅಶೋಕ ಬಸ್ತಿ ಅಣ್ಣಾವ್ರ ತದ್ರೂಪವಾಗಿ ಅಣ್ಣಾವ್ರ ಅಭಿನಯವನ್ನು ಅನುಕರಿಸಿ ಕನ್ನಡಿಗರನ್ನು ರಂಜಿಸುತ್ತಾ ಬಂದಿದ್ದಾರೆ.
ಅಶೋಕ ಬಸ್ತಿ ಅವರ ಕೀರ್ತಿ ದೇಶ-ವಿದೇಶಗಳಲ್ಲಿಯು ಹಬ್ಬಿ ಅಲ್ಲಿಯ ಕನ್ನಡಿಗರು ಅಭಿಮಾನದಿಂದ ಇವರನ್ನು ಅಲ್ಲಿಗೆ ಕರಿಸಿಕೊಂಡು ಇವರ ಕಾರ್ಯಕ್ರಮಗಳನ್ನು ವೀಕ್ಷಿಸಿ ಆನಂದಪಟ್ಟಿದ್ದಾರೆ. ಒಂದು ಕಡೆಗೆ “ಅಪ್ಪ ಅಶೋಕ ಬಸ್ತಿ ಅಣ್ಣಾವ್ರ ತದ್ರೂಪವಾಗಿ ಅನುಕರಣೆಯ ಮೂಲಕ ಅಭಿನಯಿಸಿ ಹೆಸರಾಗಿದ್ದರೇ ಇದೀಗ ಅವರ ಮಗ ರಾಘವೇಂದ್ರ ಬಸ್ತಿ ದಿ. ಪುನೀತ್ ರಾಜ್ಕುಮಾರ್ ಅವರ ಅಭಿನಯವನ್ನು ಅನುಕರಿಸುತ್ತಾ ಅವರ ತದ್ರೂಪವಾಗಿ ಕಾಣಿಸಿಕೊಳ್ಳುವ ಮೂಲಕ ಪುನಿತ್ರಾಜಕುಮಾರ ಅವರ ನೆನಪನ್ನು ಮರುಕಳಿಸುವಂತೆ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಕನ್ನಡದಲ್ಲಿ ಗತಿಸಿ ಹೋದ ನಟರ ಪೈಕಿ ಅಭಿಮಾನಿಗಳೆ ನಮ್ಮಮನೆ ದೇವ್ರು ಎನ್ನುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿರುವ ಪುನೀತ್ ರಾಜ್ ಕುಮಾರ್, ಅಭಿಮಾನಿಗಳ ಪ್ರೀತಿಯ ಅಪ್ಪು “ನಮ್ಮೂರ ರಾಜಕುಮಾರ” ಎನ್ನುವ ಖ್ಯಾತಿಯ ಅಶೋಕ ಬಸ್ತಿ ಅವರ ಪುತ್ರ “ರಾಘವೇಂದ್ರ” ಈಗ ರಿಯಾಲಿಟಿ ಶೋ ಮೂಲಕ ಅಭಿಮಾನಿಗಳನ್ನು ತಂಜಿಸಿದ್ದಾರೆ. ಟಿವಿ ಪರದೆಯಲ್ಲಿ ಈಗ ಬಿತ್ತರವಾಗುತ್ತಿರುವ “ರಾಘವೇಂದ್ರ” ಅಪ್ಪು ಅನುಕರಣೆ ಮಾಡಿರುವ ಪ್ರೋಮೋ ನೋಡಿಯೇ ಅಪ್ಪ ಅಭಿಮಾನಿಗಳು ಕಣ್ಣಿರಿಟ್ಟಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮತ್ತು ಮಹಾನಟಿ ಸಂಗಮದಲ್ಲಿ ಈ ಬಾರಿ ಪುನೀತ್ ರಾಜ್ ಕುಮಾರ್ ಅವರ ಪಾತ್ರವನ್ನು ಕರೆತರಲಾಗಿದೆ. ಸ್ಕಿಟ್ ಒಂದರಲ್ಲಿ ಟೈಮ್ ಮಿಷನ್ ಹಿಂದೆ ಮಾಡಿ ಸ್ಪರ್ಧಿ ಪುನೀತ್ರಾಜ್ ಕುಮಾರ್ ಅವರನ್ನು ಕರೆತರುವಂತೆ ಸನ್ನಿವೇಶವೊಂದನ್ನು ಸೃಷ್ಟಿಸಲಾಗಿದೆ.
ಈ ವೇಳೆ ಥೇಟ್ ಪುನೀತ್ ಪಾತ್ರಧಾರಿ ವೇದಿಕೆ ಎಂಟ್ರಿ ಕೊಡುತ್ತಾರೆ. ಥೇಟ್ ಪುನೀತ್ ಅವರಂತೆ ಹಾವಭಾವ, ಫೇಸ್ ಕಟ್, ಧ್ವನಿ ಮಾಡಿಕೊಂಡು ವೇದಿಕೆಗೆ ಬಂದಾಗ ಸೆಟ್ ನಲ್ಲಿದ್ದವರೆಲ್ಲರೂ ಕಣ್ಣೀರಾಗುತ್ತಾರೆ. ಆಂಕರ್ ಅನುಶ್ರೀಯಂತೂ ಕಣ್ಣೀರು ಹಾಕುತ್ತಲೇ ಇಡೀ ಶೋ ವೀಕ್ಷಿಸಿದ್ದಾರೆ.ಇನ್ನು, ಪುನೀತ್ ರನ್ನೇ ಹೋಲುವ ವ್ಯಕ್ತಿಯ ಪ್ರೋಮೋವನ್ನು ವಾಹಿನಿ ಪ್ರಸಾರ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರೂ ಭಾವುಕರಾಗಿದ್ದಾರೆ. ನಿಜವಾಗಿಯೂ ಈ ರೀತಿ ನಡೆದು ಒಮ್ಮೆ ಪುನೀತ್ ನಮ್ಮ ಎದುರು ಬಂದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಆಸೆಪಟ್ಟಿದ್ದಾರೆ.”ರಾಘವೇಂದ್ರ ಬಸ್ತಿ” ಪುನೀತ್ ರಂತೇ ನೃತ್ಯ ಮಾಡಿ ರಂಜಿಸಿದ್ದಾರೆ. ಇವರ ತಂದೆ ಹಾವೇರಿಯ ಅಶೋಕ ಬಸ್ತಿ ಅಣ್ಣಾವ್ರನ್ನು ಅನುಕರಣೆ ಮಾಡುವ ಮೂಲಕ ಚಿತ್ರ ಪ್ರೇಮಿಗಳನ್ನು ರಂಜಿಸುತ್ತಿದ್ದಾರೆ. ಇವರ ಮಗ ರಾಘವೇಂದ್ರ ಪುನೀತ್ ರಾಜ್ ಕುಮಾರ್ ಅವರನ್ನು ಅನುಕರಣೆಮಾಡುವ ಮೂಲಕ ಡಾ.ರಾಜ ಪುತ್ರ ಕರ್ನಾಟಕ ರತ್ನ ಪುನಿತ್ಅವರನ್ನು ಅನುಕರೆಣೆಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.