
ಆನಂದವನದಲ್ಲಿ ಶ್ರೀ ಶೇಷಾಚಲ ಸದ್ಗುರುಗಳ ರಥೋತ್ಸವ
ಹಾವೇರಿ: ತಾಲೂಕಿನ ಅಗಡಿ ಗ್ರಾಮದ ಆನಂದವನದಲ್ಲಿ ಶ್ರೀ ಶೇಷಾಚಲ ಸದ್ಗುರುಗಳ ಜಯಂತ್ಯುತ್ಸವ ನಿಮಿತ್ತ ಮಂಗಳವಾರ ಶ್ರೀ ಶೇಷಾಚಲ ಸದ್ಗುರುಗಳ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತೀ ವಿಜೃಂಭಣೆಯಿಂದ ನಡೆಯಿತು.
ಶ್ರೀ ಶೇಷಾಚಲ ಸದ್ಗುರುಗಳ ಜಯಂತಿ ಅಂಗವಾಗಿ ಆನಂದವನದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿದವು. ಮಂಗಳವಾರ ಬೆಳಗ್ಗೆ ಸದ್ಗುರುಗಳ ಜನನೋತ್ಸವ ಪ್ರಯುಕ್ತ ಹರಿ ಕೀರ್ತನೆ, ನಂತರ ತೊಟ್ಟಿಲೋತ್ಸವ ನಡೆಯಿತು. ಮಧ್ಯಾಹ್ನದ ವೇಳೆ ಆನಂದವನದ ಆವರಣದಲ್ಲಿ ಸದ್ಗುರು ಶ್ರೀ ಶೇಷಾಚಲ ಸದ್ಗುರುಗಳ ಪಲ್ಲಕ್ಕಿ ಮೆರವಣಿಗೆ ನಡೆದು, ನಂತರ ವಿವಿಧ ಹೂಗಳಿಂದ ಸಿಂಗಾರಗೊಂಡಿದ್ದ ರಥೋತ್ಸವವದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಶ್ರೀಮಠದಿಂದ ಆರಂಭವಾದ ರಥೋತ್ಸವದಲ್ಲಿ ಭಜನೆ, ಕೀರ್ತನೆಗಳನ್ನು ಪ್ರಸ್ತುತಪಡಿಸಲಾಯಿತು. ನಂತರ ಸ್ವಲ್ಪ ದೂರದಲ್ಲಿರುವ ಅರಳಿ ಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ, ಮೂಲ ಸ್ಥಳಕ್ಕೆ ಆಗಮಿಸಿ ವಿರಾಜಮಾನಗೊಂಡಿತು. ಈ ವೇಳೆ ಭಕ್ತರು ಸದ್ಗುರು ಶ್ರೀ ಶೇಷಾಚಲ ಮಹಾರಾಜ್ ಕೀ ಜೈ ಎನ್ನುವ ಘೊಷಣೆಗಳನ್ನು ಮೊಳಗಿಸಿದರು. ಭಕ್ತರು ರಥೋತ್ಸವದ ಕಳಶಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆಯುವುದರ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ನಂತರ ಶ್ರೀ ಮಠಕ್ಕೆ ಆಗಮಿಸಿ ಮಹಾಮಂಗಲೋತ್ಸವವನ್ನು ನಡೆಸಲಾಯಿತು. ಬಳಿಕ ಶ್ರೀ ಮಠಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ಶ್ರೀಮಠದ ಪೂಜ್ಯರು ಹಾಗೂ ಗುರುಭಕ್ತರು ಉಪಸ್ಥಿತರಿದ್ದರು.

