ಒಳಮೀಸಲಾತಿ ವಿರೋಧಿಸಿ ಆತ್ಮಹತ್ಯೆಗೆ ಯತ್ನಿಸಿದ ರಾಜ್ಯ ಬಂಜಾರ ಪೀಠದ ತಿಪ್ಪೇಶ್ವರ ಸ್ವಾಮಿಜಿ, ಅಪಾಯದಿಂದ ಪಾರು, ಶಿಗ್ಗಾವಿಯಲ್ಲಿ ಘಟನೆ
ಹಾವೇರಿ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳಮೀಸಲಾತಿ ವಿರೋಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರದಲ್ಲಿ ಮಂಗಳವಾರ ಬಂಜಾರ ಸಮುದಾಯದ ಪ್ರತಿಭಟನೆ ನಡೆಸಿದ ವೇಳೆ ಸ್ವಾಮೀಜಿಯೊಬ್ಬರು ಸುಮಾರು ೨೦ಅಡಿ ಎತ್ತದಿಂದ ಜೀಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಶಿಗ್ಗಾವಿಯಲ್ಲಿ ತಾಲೂಕಾ ಬಂಜಾರ ಸಮಾಜದವತಿಯಿಂದ ಕರೆ ನೀಡಲಾಗಿದ್ದ ಮೀಸಲಾತಿ ಹೋರಾಟದಲ್ಲಿ ಹಾನಗಲ್ಲ ತಾಲೂಕಿನ ಗುಂಡೂರು ಗ್ರಾಮದ ಬಂಜಾರ ಗುರು ಪೀಠದ ತಿಪ್ಪೇಶ್ವರ ಸ್ವಾಮಿಜಿ ಶ್ರೀಗಳು ಮೀಸಲಾತಿಯಿಂದ ನೊಂದು ಆತ್ಮಹತ್ಯೆಗೆ ಶರಣಾಗಲು ಮುಂದಾದ ಘಟನೆ ಪಟ್ಟಣದ ಆಡಳಿತ ಭವನದ ಅಂಬೇಡ್ಕರ್ ಮೂರ್ತಿ ಮುಂದೆ ಜರಗಿತು.
ಇತ್ತೀಚೆಗೆ ಬಿಜೆಪಿ ಸರ್ಕಾರ ನೀಡಿದ ಮೀಸಲಾತಿಯನ್ನು ವಿರೋಧಿಸಿ ಶಿಗ್ಗಾವಿ ಪಟ್ಟಣದಲ್ಲಿ ಬಂಜಾರ ಸಮಾಜದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆಡಳಿತ ಭವನದ ಎದುರಿಗಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮತ್ತು ಚೆನ್ನಮ್ಮ ವೃತ್ತದಲ್ಲಿರುವ ಚೆನ್ನಮ್ಮನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಆರಂಭಿಸುವ ಕಾರ್ಯಕ್ರಮ ನಿಗದಿಯಾಗಿತ್ತು.
ಅದರಂತೆ ಪಟ್ಟಣದ ಮಧ್ಯ ಭಾಗದಲ್ಲಿರುವ ನೂತನ ತಾಲೂಕಾ ಆಡಳಿತ ಭವನದ ಎದುರು ಬಂಜಾರ ಸಮುದಾಯದ ಮತ್ತು ಇತರ ಸಮುದಾಯಗಳ ಮುಖಂಡರೊಂದಿಗೆ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಆಗಮಿಸಿದ ಗುಂಡೂರು, ಹುಬ್ಬಳ್ಳಿಯ ಬಂಜಾರ ಗುರುಪೀಠದ ತಿಪ್ಪೇಶ್ವರ ಮಹಾಸ್ವಾಮಿಗಳು ಮಾಲಾರ್ಪಣೆ ಮಾಡಿ ನಂತರ ಪಕ್ಕದಲ್ಲಿಯ ಕಬ್ಬಿಣದ ಕಂಬಿಗೆ ತಮ್ಮ ಕೊರಳಿನಲ್ಲಿರುವ ಶಾಲಿನಿಂದ ನೇಣು ಬಿಗಿದುಕೊಂಡು ನಂತರ ಮೇಲಿನಿಂದ ಜಿಗಿದರು. ಶ್ರೀಗಳ ಈಕೃತ್ಯವನ್ನು ತಕ್ಷಣವೇ ಗಮನಿಸಿದ ಬಂಜಾರ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ತಕ್ಷಣ ಎಚ್ಚೆತ್ತು ಪೊಲೀಸ್ ಸಿಬ್ಬಂದಿಗಳು ರಕ್ಷಣೆಗೆ ದಾಸಿ ಸ್ವಾಮೀಜಿಯವರನ್ನ ರಕ್ಷಿಸಿ ಆಸ್ಪತ್ರೆಗೆ ರವಾನಿಸಿದರು.
ಈ ಸಂದರ್ಭದಲ್ಲಿ ಸರ್ದಾರ್ ಸೇವಾಲಾಲ್ ಮಹಾರಾಜರು, ಹರ್ಜಪ್ಪ ಲಮಾಣಿ, ಅಣ್ಣಪ್ಪ ಲಮಾಣಿ, ಸುದೀರ ಲಮಾಣಿ ಸೇರಿದಂತೆ ಬಂಜಾರ ಸಮುದಾಯದ ಮುಖಂಡರು ಇದ್ದರು.
ತಿಪ್ಪೇಶ್ವರಸ್ವಾಮಿಜಿಯವರನ್ನು ಶಿಗ್ಗಾವಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶ್ರೀಗಳನ್ನು ಶಿಗ್ಗಾವಿಯ ಸರಕಾರಿ ಆಸ್ಪತ್ರೆಯಲ್ಲಿನ ಐಸಿಯೋದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.