
“ಕಾಂತಾರ: ಚಾಪ್ಟರ್೧” ವಿಮರ್ಶೆ:ಕೊಟ್ಟ ದುಡ್ಡಿಗೆ “ಕಾಂತಾರ ಚಾಪ್ಟರ್೧” ಮೋಸಮಾಡದು…..
ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಬಹು ನಿರೀಕ್ಷಿತ ‘ಕಾಂತಾರ ಚಾಪ್ಟರ್೧’ ಸಿನಿಮಾ ತೆರಗೆ ಅಪ್ಪಳಿಸಿದೆ. ‘ಕಾಂತಾರ: ಚಾಪ್ಟರ್ ೧’ ಕದಂಬರ ಕಾಲದಲ್ಲಿ ನಡೆಯುವ ಕಥೆ. ಕಾಡಿನಲ್ಲಿ ವಾಸ ಮಾಡುವ ಜನಾಂಗ ಒಂದುಕಡೆಯಾದರೆ, ಶ್ರೀಮಂತಿಕೆಯಿಂದ ಕಂಗೊಳಿಸುವ ರಾಜಾಡಳಿತ ಮತ್ತೊಂದು ಕಡೆ. ರಾಜನಿಗೆ ಕಾಡಿನ ಮೇಲೆ ಕಣ್ಣು, ಕಾಡಿನವರಿಗೆ ರಾಜ್ಯದ ಮೇಲೆ ಕಣ್ಣು. ಹೀಗೆ ಪರಸ್ಪರ ಆಸೆ ಹುಟ್ಟಿಕೊಳ್ಳಲು ಕಾರಣ ಏನು? ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ನುವುದನ್ನು ತೆರೆಯಮೇಲೆ ನೋಡಬೇಕು.
ರಿಷಬ್ ಶೆಟ್ಟಿ ಅವರು ಬೆರ್ಮೆ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಡು ಕಾಯುವ ಕಾಯಕ ಅವನದ್ದು. ಸಿನಿಮಾ ಉದ್ದಕ್ಕೂ ರಿಷಬ್ ಕಾಣಿಸಿಕೊಳ್ಳುತ್ತಾರೆ. ಚಿತ್ರಕ್ಕೆ ಅವರು ಹಾಕಿದ ಶ್ರಮ ಎದ್ದು ಕಾಣುತ್ತದೆ. ಹೊಡೆದಾಟದ ದೃಶ್ಯಗಳನ್ನು ಡ್ಯೂಪ್ ಇಲ್ಲದೆ ಮಾಡಿ ತೋರಿಸಿದ್ದಾರೆ. ‘ಕಾಂತಾರ’ ಚಿತ್ರದಲ್ಲಿ ದೈವದ ಪಾತ್ರ ಮಾಡುವಾಗ ಇರುವ ಎನರ್ಜಿಗಿಂತ ಹೆಚ್ಚಿನ ಎನರ್ಜಿಯನ್ನು ಅವರು ಇಲ್ಲಿ ಹಾಕಿದ್ದಾರೆ. ತೆರೆಮೇಲೆ ನೋಡುವಾಗ ನಿಜವಾಗಿಯೂ ರಿಷಬ್ ಶೆಟ್ಟಿ ಮೇಲೆ ದೈವ ಬಂದಿದೆಯೇ ಎಂದು ಪ್ರಶ್ನೆ ಮಾಡುವಂತೆ ನಟಿಸಿ ತೋರಿಸಿದ್ದಾರೆ. ಹಾವ ಭಾವಗಳನ್ನು ಎಲ್ಲಿಯೂ ಹೆಚ್ಚೂ ಇಲ್ಲದೆ, ಕಡಿಮೆಯೂ ಇಲ್ಲದೆ ಅಚ್ಚುಕಟ್ಟಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಜರ ಕಾಲದ ಉಡುಗೆಯು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಬುದ್ಧ ನಟನೆಯ ಮೂಲಕ ಅವರು ಇಷ್ಟ ಆಗುತ್ತಾರೆ. ಗುಲ್ಶನ್ ದೇವಯ್ಯ, ಜಯರಾಮ್, ಪ್ರಮೋದ್ ಶೆಟ್ಟಿ ಮೊದಲಾವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ನಗುವಿನ ಕಚಗುಳಿ ಇಡುವ ಪ್ರಯತ್ನ ಮಾಡಿದ್ದಾರೆ. ಅಗಲಿರುವ ರಾಕೇಶ್ ಪೂಜಾರಿ ಪಾತ್ರವೂ ಗಮನ ಸೆಳೆಯುತ್ತದೆ.
ಅದ್ಭುತ ಎನಿಸುವ ಓಪನಿಂಗ್ ದೃಶ್ಯದೊಂದಿಗೆ ಸಿನಿಮಾ ಆರಂಭ ಆಗುತ್ತದೆ. ನಂತರ ನಿಧಾನವಾಗಿ ಟೇಕ್ಆಫ್ ಆಗುತ್ತದೆ. ಇಂಟರವಲ್ ಬ್ಲಾಕ್ಗೂ ಮೊದಲು ಬರುವ ಫೈಟಿಂಗ್ ದೃಶ್ಯ ಕ್ಲೈಮ್ಯಾಕ್ಸ್ ರೀತಿಯ ಫೀಲ್ ಕೊಡುತ್ತದೆ. ರಿಷಬ್ ಕ್ಲೈಮ್ಯಾಕ್ಸ್ ಒಳ್ಳೆಯ ರೀತಿಯಲ್ಲೇ ಕಟ್ಟಿಕೊಟ್ಟಿದ್ದಾರೆ. ಥಿಯೇಟರ್ನಿಂದ ಹೊರ ಬರುವಾಗ ಒಳ್ಳೆಯ ಫೀಲ್ ಕೊಡುತ್ತದೆ. ಸಿನಿಮಾದಲ್ಲಿ ಅದ್ದೂರಿತನಕ್ಕೆ ಎಲ್ಲಿಯೂ ಕೊರತೆ ಆಗದಂತೆ ‘ಹೊಂಬಾಳೆ ಫಿಲ್ಮ್ಸ್’ ನೋಡಿಕೊಂಡಿದೆ. ರಿಷಬ್ ಅವರು ಸಿನಿಮಾನ ತಾಂತ್ರಿಕವಾಗಿ ಶ್ರೀಮಂತವಾಗಿರುವಂತೆ ನೋಡಿಕೊಂಡಿದ್ದಾರೆ.
ಸಿನಿಮಾದಲ್ಲಿ ಹೆಚ್ಚು ಇಷ್ಟ ಆಗೋದು ವಿಎಫ್ಎಕ್ಸ್. ಹುಲಿ, ಕಾಡು ಪಾಪಗಳು ನಿಜವಾದವೇನೋ ಎಂದನಿಸುವ ರೀತಿಯಲ್ಲಿ ವಿಎಫ್ಎಕ್ಸ್ ಮೂಡಿ ಬಂದಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ವಿ ಅಜನೀಶ್ ಮ್ಯೂಸಿಕ್ ಪೂರಕವಾಗಿದೆ.
‘ಕಾಂತಾರ: ಚಾಪ್ಟರ್ ೧’ ಚಿತ್ರದಲ್ಲಿ ಫೈಟ್ಗಳೇ ಹೆಚ್ಚು ಅಬ್ಬರಿಸಿದಂತೆ ಕಾಣಿಸುತ್ತದೆ. ಕಥೆಯನ್ನು ಮತ್ತಷ್ಟು ಬಿಗಿಯಾಗಿ ಹೆಣೆಯುವ ಅವಕಾಶ ರಿಷಬ್ಗೆ ಇತ್ತು. ಚಿತ್ರದಲ್ಲಿ ಬರುವ ಯುದ್ಧದ ದೃಶ್ಯ ರಾಜಮೌಳಿಯ ‘ಬಾಹುಬಲಿ’ ಸಿನಿಮಾನ ನೆನಪಿಸದೆ ಇರದು. ‘ನಮ್ಮ ಊರಿನಿಂದ ಕಾಡಿಗೆ ನಡೆದು ಹೋದರೆ ಒಂದು ದಿನ ಬೇಕು’ ಎಂದು ಆರಂಭದಲ್ಲಿ ಡೈಲಾಗ್ ಒಂದು ಬರುತ್ತದೆ. ಆದರೆ, ಕ್ಲೈಮ್ಯಾಕ್ಸ್ ವೇಳೆಗೆ ಕಥಾ ನಾಯಕ ಕ್ಷಣಮಾತ್ರದಲ್ಲಿ, ನಾಡಿನಿಂದ ಕಾಡಿಗೆ ತೆರಳುತ್ತಾನೆ. ಈ ರೀತಿ ಕೆಲವು ದೃಶ್ಯಗಳು ಲಾಜಿಕ್ ಕೇಳುತ್ತವೆ. ‘ಕಾಂತಾರ’ದ ಸಕ್ಸಸ್ ಸೂತ್ರವನ್ನೇ ‘ಕಾಂತಾರ: ಚಾಪ್ಟರ್ ೧’ ಚಿತ್ರಕ್ಕೂ ಬಳಸಿದ್ದಾರೆ ರಿಷಬ್. ಬೇಡ ಬೇಡವೆಂದರೂ ‘ಕಾಂತಾರ’ ಹಾಗೂ ‘ಕಾಂತಾರ: ಚಾಪ್ಟರ್ ೧’ ನಡುವಿನ ಹೋಲಿಕೆ ನಡೆಯುತ್ತಲೇ ಇರುತ್ತದೆ. ‘ಕಾಂತಾರ: ಚಾಪ್ಟರ್ ೨’ ಬರುವ ಸೂಚನೆಯನ್ನೂ ಕ್ಲೈಮ್ಯಾಕ್ಸ್?ನಲ್ಲಿ ನೀಡಲಾಗಿದೆ. ಕೊಟ್ಟ ದುಡ್ಡಿಗೆ “ಕಾಂತಾರ ಚಾಪ್ಟರ್೧” ಮೋಸಮಾಡದು.
ಕೃಪೆ: ಜಾಲತಾಣ

