
ಗಟ್ಟಿತನದ ದಿಟ್ಟಕವಿತೆ ರಚನೆಕಾರ ಸತೀಶ ಕುಲಕರ್ಣಿ: ಮಾರ್ತಾಂಡಪ್ಪ ಕತ್ತಿ
ಹಾವೇರಿ ವಿಶ್ವವಿದ್ಯಾಲಯವು ಹಾವೇರಿ ಕವಿ, ಕಟ್ಟುತ್ತೇವ ಎಂಬ ಕ್ರಾಂತಿ ಗೀತೆ ರಚನೆಗಾರ, ಸಾಹಿತ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಸತೀಶ ಕುಲಕರ್ಣಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಹಿನ್ನೆಲೆಯಲ್ಲಿ ಹಾವೇರಿಯ ಕಲಾ ಸ್ಪಂದನದ ಪದಾಧಿಕಾರಿಗಳು ಅವರ ಮನೆಯಲ್ಲಿ ಸನ್ಮಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾರ್ತಾಂಡಪ್ಪ ಕತ್ತಿ ಸತೀಶ ಕುಲರ್ಣಿ ಅಔಋ ಜೀವನ ಮತ್ತು ಸಾಹಿತ್ಯದ ಚರ್ಚೆ ಮಾಡಿದರು. ಕಟ್ಟುತ್ತೇವ ಎಂಬ ಕ್ರಾಂತಿ ಗೀತೆ ಎಂದರೆ ಸತೀಶ ಕುಲಕರ್ಣಿ ನೆನಪಾಗುತ್ತಾರೆ. ಅಷ್ಟು ಗಟ್ಟಿತನದ ದಿಟ್ಟಕವಿತೆ ರಚನೆಕಾರರು ಇವರು. ವಿದ್ಯಾರ್ಥಿ ದೆಸೆಯಲ್ಲೇ ಸಾಹಿತ್ಯ ರಚನೆ ಶುರುಮಾಡಿದರು. ಬೆಂಕಿ ಬೀರು, ನೆಲದ ನೆರಳು, ವಿಕ್ಷಿಪ್ತ, ಗಾಂಧಿ ಗಿಡ, ಒಡಲಾಳ ಕಿಚ್ಚು, ಕಂಪನಿ ಸವಾಲ್, ಸಮಯಾಂತರ ಸೇರಿದಂತೆ ಹಲವು ಕವನ ಸಂಕಲನಗಳು, ಬಂಡಾಯದ ಗಟ್ಟಿದನಿ ಬರಗೂರು ರಾಮಚಂದ್ರಪ್ಪ, ಓದೊಳಗಿನ ಓದು ವಿಮರ್ಶಾ ಕೃತಿ ಹೀಗೆ ಹಲವು ಸಾಹಿತ್ಯ ಬರೆದಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ, ಮ್ಯಾಕ್ಸ್ ಅವಾರ್ಡ್ ಅಂಬಿಕಾತನಯದತ್ತ ಪ್ರಶಸ್ತಿ ಹೀಗೆ ಹಲವು ಪ್ರಮುಖ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಪ್ರಸ್ತುತ ವಿಕೃ ಗೋಕಾಕ ಟ್ರಸ್ಟ್ ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದಾರೆ. ೧೦ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಇಂಗಳೆ ಮಾರ್ಗ, ಸಾವಿತ್ರಿ ಬಾಯಿ ಮುಂತಾದ ಸಿನಿಮಾಗಳಿಗೆ ಇವರು ಸಾಹಿತ್ಯ ಬರೆದಿದ್ದಾರೆ. ಬೀದಿ ನಾಟಕ ಸೇರಿದಂತೆ ಸದಾ ಕ್ರಿಯಾಶೀಲರಾಗಿದ್ದು, ಯುವ ಬರಹಗಾರರನ್ನು ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡುತ್ತ ಬರುತ್ತಿದ್ದಾರೆ ಎಂಬ ಹಲವಾರು ಸಾಧನೆಗಳ ಮೇಲುಕು ಹಾಕಿದ ಕಲಾ ಸ್ಪಂದನದ ಪ್ರಕಾಶ ಅಳಗವಾಡಿ, ಮಹೇದಸ ಬೆಂಡಿಗೇರಿ, ಸಿದ್ದೇಶ್ವರ ಹುಂಡಿಕಟ್ಟಿಮಠ ಮತ್ತು ಜಗದೀಶ ಕತ್ತಿ ವಿಚಾರ ವಿನಿಮಯ ಮಾಡಿದರು.

