‘ಡಾಬಾ ಬಂತು ಊಟ ಮಾಡ್ತಿಯಾ’ ಎಂದೊಡನೆ ಉಸಿರಾಡಿದನಂತೆ ಮೃತ ವ್ಯಕ್ತಿ!
ಹಾವೇರಿ: ಮೃತಪಟ್ಟಿದ್ದಾನೆಂದು ತಿಳಿದು ವ್ಯಕ್ತಿಯೊಬ್ಬನ ಶವವನ್ನು ಆಸ್ಪತ್ರೆಯಿಂದ ಊರಿಗೆ ತರುತ್ತಿರುವಾಗ ಮತ್ತೆ ಪ್ರಾಣ ಬಂದಿರುವ ಆಶ್ಚರ್ಯಕರ ಘಟನೆ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಭಾನುವಾರ ನಡೆದಿದೆ. ೪೫ ವರ್ಷದ ಬಿಷ್ಟಪ್ಪ ಗುಡಿಮನಿ ಸಾವನ್ನಪ್ಪಿ ಬಳಿಕ ಬದುಕುಳಿದಿರುವ ವ್ಯಕ್ತಿಯಾಗಿದ್ದಾನೆ.
ಬಿಳಿ ಕಾಮಾಲೆ ಜೊತೆಗೆ ಶ್ವಾಸಕೋಶದ ಸಮಸ್ಯೆ,. ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ರೋಗದಿಂದ ಬಳಲುತ್ತಿದ್ದ ಬಿಷ್ಟಪ್ಪ ಗುಡಿಮನಿ ಮೂರು-ನಾಲ್ಕು ದಿನಗಳ ಹಿಂದೆ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ, ಖಾಸಗಿ ಆಸ್ಪತ್ರೆಯ ವೈದ್ಯರು ಸಾವನ್ನಪ್ಪಿದ್ದಾನೆ ಊರಿಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದರು. ದುಃಖದಲ್ಲಿ ಊರಿಗೆ ವಾಪಸು ಬರುತ್ತಿದ್ದ ವೇಳೆ, ಬಿಷ್ಟಪ್ಪ ಊಟ ಮಾಡುತ್ತಿದ್ದ ಇಷ್ಟವಾದ ಡಾಬಾ ಬಂದಿದೆ. ಹೆಂಡತಿ ಗೋಳಾಡಿ “ಡಾಬಾ ಬಂತು ನೋಡು ಊಟ ಮಾಡುತ್ತೀಯಾ ಎಂದು ಗೋಳಾಡಿ ಕಣ್ಣೀರಿಟ್ಟಾಗ ಮೃತಪಟ್ಟ ಎನ್ನಲಾದ ಬಿಷ್ಟಪ್ಪ ಉಸಿರಾಡಿದ್ದಾನೆ. ಇತನ ಬಂಧುಗಳು ಇವನಿಗೆ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಈಗ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಪತ್ನಿ, ಮಕ್ಕಳು, ತಾಯಿ ಹಾಗೂ ಆತನ ಸಂಬಂಧಿಕರು ನಿಟ್ಟಿಸುರು ಬಿಟ್ಟಿದ್ದಾರೆ.
ಈ ಘಟನೆ ಕುರಿತಂತೆ ಬಿಷ್ಟಪ್ಪ ಅವರ ತಾಯಿ ಗಂಗಮ್ಮ ಮಾತನಾಡಿದ್ದು, ”ನಿನ್ನ ಡಾಬಾ ಬಂತು, ನಿನ್ನ ಅಂಗಡಿನೂ ಬಂತು ನೋಡು ಅಂತ ಸಣ್ಣ ಮಗ ಹೇಳಿದಾಗ ಹಾ.. ಅಂತ ಅಂದಾನ”. ಆಗ ತಕ್ಷಣನೇ ಉಸಿರಾಡ್ತಿದಾನೆ, ಕಣ್ಣು ಬಿಟ್ಟಾನ ಅನ್ನೋದು ಗೊತ್ತಾಗಿದೆ. ತಕ್ಷಣ ಅಲ್ಲೇ ಆಂಬ್ಯುಲೆನ್ಸ್ ನಿಲ್ಲಿಸಿ ಶಿಗ್ಗಾಂವಿ ಆಸ್ಪತ್ರೆಗೆ ಕರೆದುಕೊಂಡು ಹೋಗ್ಯಾರ. ಡಾಕ್ಟರು ವೆಂಟಿಲೇಟರ್ ಹಚ್ಚಿದ್ರು ರೀ, ನಂತ್ರ ಎರಡ್ಮೂರು ತಾಸು ಇರ್ತೇತಿ, ಆ ನಂತರ ಹೋಗ್ತೈತಿ ಅಂತಾ ಹೇಳಿ ಕಳಿಸಿದ್ರು ರಿ. ಬಿಷ್ಟಪ್ಪನ ಪತ್ನಿ ಶೀಲಾಳ ಮುಂದೆ ನಿಮ್ಮ ಮನೆಯವ ಸತ್ತೋಗಿದ್ದಾನೆ ಅಂತಾ ಡಾಕ್ಟರ್ ಅವರು ಹೇಳ್ಯಾರ. ಆಂಬ್ಯುಲೆನ್ಸ್ನಲ್ಲಿ ಇವರು ಮನೆಗೆ ಕರೆದುಕೊಂಡ ಬರ್ತಾ ಇದ್ರು, ಆಗಾ ಉಸಿರಾಡ್ಯಾನ ಅಂತಾ ಬಿಷ್ಟಪ್ಪನ ತಾಯಿ ಗಂಗಮ್ಮ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ.
ಬಿಷ್ಟಪ್ಪ ಗುಡಿಮನಿ ನಿಧನದ ಸುದ್ದಿ ಬಂಕಾಪುರ ಪಟ್ಟಣದ ತುಂಬಾ ಹರಡಿತ್ತು. ಬ್ಯಾನರ್, ವಾಟ್ಸಪ್ ಗ್ರೂಪನಲ್ಲಿ ಹರಿದಾಡಿತ್ತು, ಓಂ ಶಾಂತಿ, ಶೃದ್ಧಾಂಜಲಿ ಎಂದು ಸಂಬಂಧಿಕರು ಫೋಸ್ಟ್ ಹಾಕಿದ್ದರು. ಆತನ ಸ್ನೇಹಿತರು ಮತ್ತು ಮನೆಯವರೆಲ್ಲಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಾಟ್ಸಾಪ್ ಸ್ಟೇಟಸ್ ಕೂಡಾ ಹಾಕಿಕೊಂಡಿದ್ದರು. ಆತನ ಪರಿಚಿತರು ಹಾಗೂ ಕೆಲವು ಸ್ನೇಹಿತರು ಕೆಲವು ವಾಟ್ಸ್ ಆಪ್ ಗ್ರುಪ್ ಗಳಲ್ಲಿ ಬಿಷ್ಟಪ್ಪನ ಫೋಟೋ ಹಾಕಿ ಓಂ ಶಾಂತಿ ಎಂದು ಶಾಂತಿ ಕೋರಿದ್ದರು. ಇದೀಗ ಆತನಿಗೆ ಮರುಜೀವ ಬಂದಿದ್ದು ದೇವರ ಪವಾಡ ಎಂದು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಬಿಷ್ಟಪ್ಪ ಮೃತಪಟ್ಟಿದ್ದಾನೆ ಎಂದು ಕುಟುಂಬದ ಸದಸ್ಯರು ಅಂತ್ಯಕ್ರಿಯೆ ನಡೆಸಲು ಸಿದ್ದತೆ ನಡೆಸಿರುವಾಗಲೇ ಬಿಷ್ಟಪ್ಪ ಉಸಿರಾಡಿದ್ದಾನೆ. ಬಿಷ್ಟಪ್ಪ ಆರೋಗ್ಯ ಗಂಭೀರವಾಗಿದ್ದು, ಚೇತರಿಸಿಕೊಳ್ಳಲಿ ಎಂದು ಕುಟುಂಬಸ್ಥರು ದೇವರಿಗೆ ಮೊರೆ ಹೋಗಿದ್ದಾರೆ.
ಬಿಷ್ಟಪ್ಪನ ಆರೋಗ್ಯ ಚಿಂತಾಜನಕ:ಕಿಮ್ಸ್ ನಿರ್ದೇಶಕ ಡಾ.ಕಮ್ಮಾರ್
ಈ ಬಗ್ಗೆ ಮಾತನಾಡಿರುವ ಹುಬ್ಬಳ್ಳಿಯಲ್ಲಿ ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ್ ಬಿಷ್ಣಪ್ಪ ಮತ್ತು ಕುಟುಂಬಸ್ಥರು ಭಾನುವಾರ ಸಂಜೆ ೪.೨೦ರ ಸುಮಾರಿಗೆ ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ.ನಮ್ಮ ಆಸ್ಪತ್ರೆಗೆ ಬಂದಾಗ ಬಿಷ್ಣಪ್ಪ ಜೀವಂತವಾಗಿದ್ದ. ಆದರೆ ಆತನ ಆರೋಗ್ಯ ಸ್ಥಿತಿ ಬಹಳಷ್ಟು ಚಿಂತಾಜನಕವಾಗಿತ್ತು.
ಹೀಗಾಗಿ ನಮ್ಮ ಆಸ್ಪತ್ರೆಯ ಮುಖ್ಯ ವೈದ್ಯ ಸುರೇಶ್ ನೇತೃತ್ವ ತಂಡ ಕೂಡಲೇ ಚಿಕಿತ್ಸೆ ನೀಡಿದ್ದಾರೆ. ಬಿಷ್ಣಪ್ಪ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ ಅವರಿಗೆ ಚಿಕಿತ್ಸೆ ನೀಡುತ್ತೆದ್ದೇವೆ ಎಂದಿದ್ದಾರೆ. ಮೊದಲು ಚಿಕಿತ್ಸೆ ಪಡೆದ ಆಸ್ಪತ್ರೆಯಲ್ಲಿ ವೈದ್ಯರು ನೀಡಿದ ವೈದ್ಯಕೀಯ ಸಲಹೆ ದಿಕ್ಕರಿಸಿ ಕುಟುಂಬಸ್ಥರು ಆತನನ್ನು ಡಿಶ್ಚಾರ್ಜ್ ಮಾಡಿಕೊಂಡು ಬಂದಿರೋದು ಗೊತ್ತಾಗಿದೆ ಎಂದಿದ್ದಾರೆ.