ದತ್ತಾಂಶಗಳ ಸಮೀಕ್ಷೆಯಲ್ಲಿ ಭೋವಿ, ವಡ್ಡರ ಎಂದು ನಮೂದಿಸಿ: ಜ.ಇಮ್ಮಡಿ ಸಿದ್ದರಾಮೇಶ್ವರಶ್ರೀ
ಹಾವೇರಿ : ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ ಅವರ ಏಕ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ-೨೦೨೫ಕ್ಕೆ ಸಂಬಂಧಿಸಿದಂತೆ, ಹಾವೇರಿ ಜಿಲ್ಲೆಯಲ್ಲಿ ಮೇ ೫ ರಿಂದ ಪರಿಶಿಷ್ಟ ಜಾತಿ ಸಮುದಾಯ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಸಮೀಕ್ಷೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ದತ್ತಾಂಶ ಸ್ವೀಕರಿಸುವ ವೇಳೆ ಗಣತಿದಾರರ ಬಳಿ ಭೋವಿ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ಭೋವಿ, ವಡ್ಡರ್ ಎಂದು ನಮೂದಿಸುವಂತೆ ಭೋವಿ ಸಮಾಜದ ಕುಲ ಗುರುಗುರು ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಮೇ.೧ಂದು ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಅಖಿಲ ಕರ್ನಾಟಕ ಭೋವಿ (ವಡ್ಡರ) ಸಂಘದ ಹಾವೇರಿ ಜಿಲ್ಲಾ ಘಟಕದ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕರ್ನಾಟಕ ಸರ್ಕಾರ ಒಳ ಮೀಸಲಾತಿ ಕುರಿತು ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿ ಮೂರು ತಿಂಗಳ ಅವಧಿಯಲ್ಲಿ ವರದಿ ಸಲ್ಲಿಸಲು ಸರ್ಕಾರ ಸೂಚಿಸಿದ ಹಿನ್ನೆಲೆಯಲ್ಲಿ ಆಯೋಗವು ಸಾರ್ವಜನಿಕರ ಆಕ್ಷೇಪಣೆ ಸಲ್ಲಿಸಲು ತಿಳಿಸಿತ್ತು. ಎಲ್ಲಾ ಅಭಿಪ್ರಾಯ, ಅಕ್ಷೇಪಣೆ ಪಡೆದು ಈಗಾಗಲೇ ಮಧ್ಯಾಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
ಈ ವರದಿಯಲ್ಲಿ ಹೊಸದಾಗಿ ಜಾತಿ ಸಮೀಕ್ಷೆ ಗಣತಿ, ಸಾಮಾಜಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಕಾಲಾವಕಾಶ, ಸಿಬ್ಬಂದಿ ಮತ್ತು ಸಂಪನ್ಮೂಲ ಕೋರಿದ್ದರಿಂದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಸಾಮಾಜಿಕ ಸ್ಥಿತಿಗತಿ, ಜನಸಂಖ್ಯೆ ಗಣತಿ ಮಾಡಲು ಆದೇಶ ಮಾಡಿದೆ. ಸಮಾಜದ ಜನರಿಗೆ ಈ ಗಣತಿ ಕುರಿತು ಅರಿವು ಮೂಡಿಸಲು ಸಮಾಜದ ಬಂಧುಗಳು ಪ್ರತಿಯೊಬ್ಬ ಭೋವಿ, ವಡ್ಡರ ಸಮಾಜದ ಬಂಧುಗಳ ಮನೆಗೆ ಭೇಟಿ ನೀಡಿ ಸಮೀಕ್ಷೆ ವೇಳೆ ಆಗಮಿಸುವ ಅಧಿಕಾರಿಗಳಿಗೆ ಜಾತಿ ಕಾಲಂನಲ್ಲಿ ಭೋವಿ, ವಡ್ಡರ ಎಂದು ನಮೂದಿಸಬೇಕು, ಕುಲಕಸುಬು ಕಲ್ಲು ಒಡೆಯುವುದು, ಕಟ್ಟಡ ನಿರ್ಮಾಣ, ಕೆರೆಕಟ್ಟೆ ನಿರ್ಮಾಣ ಮಾಡುವುದು ಎಂದು ದಾಖಲಿಸಲು ತಿಳಿಸಬೇಕೆಂದರು.
ಸಂಘದ ಜಿಲ್ಲಾ ಅಧ್ಯಕ್ಷ ರವಿ ಪೂಜಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದ ಬಂಧುಗಳು ಹೊಟ್ಟೆಪಾಡಿಗಾಗಿ ಕೆಲಸ ಅರಸಿ ದೂರದ ಊರುಗಳಿಗೆ ಹೋದ ಸಮಾಜದ ಬಂಧುಗಳನ್ನು ಕರೆತಂದು ಮಾಹಿತಿ ನೀಡಲು ಮುನ್ನೆಚ್ಚರಿಕೆ ವಹಿಸಬೇಕು. ಈ ಸಮೀಕ್ಷೆಯಿಂದ ಸಮಾಜದ ಯಾರು ಕೂಡ ಹೊರಗುಳಿಯದಂತೆ ಸಮಾಜದ ಬಂಧುಗಳು ನೋಡಿಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ, ತಾಲೂಕ ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಸಮಾಜದ ಪದಾಧಿಕಾರಿಗಳು, ಮುಖಂಡರು, ಸಮುದಾಯದ ಪ್ರತಿನಿಧಿಗಳು ಸಭೆಗಳನ್ನು ಮಾಡುವುದರ ಮೂಲಕ ಸಮೀಕ್ಷೆ ಬಗ್ಗೆ ಜನಜಾಗೃತಿ ಮೂಡಿಸಬೇಕೆಂದು ಹೇಳಿದರು.
ಸಭೆಯಲ್ಲಿ ಸಮಾಜದ ಮುಖಂಡರಾದ ದಾಸಪ್ಪ ಕರ್ಜಗಿ, ನಿಂಗಣ್ಣ ಹೊಸೂರ, ಬಸವರಾಜ ಹೆಸರೂರ, ಭೀಮಣ್ಣ ಬತ್ತಿಕೊಪ್ಪ, ಜಗದೀಶ್ ಸವಣೂರು, ರಮೇಶ್ ಸುತ್ತುಕೋಟಿ, ಮಹೇಶ ಕುರಂದವಾಡ, ಮಂಜುನಾಥ್ ಗುಡಗೇರಿ, ವೆಂಕಟೇಶ ಅಂಕಸಾಪುರ, ಹನುಮಂತ ತುಮ್ಮಿನಕಟ್ಟಿ, ಹನುಮಮಂತಪಪ ಬಂಡಿವಡ್ಡರ, ವೆಂಕಟೇಶ, ಈರಣ್ಣ ಸವಣೂರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.