ದೇಶ ರಕ್ಷಣೆಗೆ ಹೊರಟ ಹಾವೇರಿಯ ಯೋಧ ಸಂಜೀವ ಸಂಗೂರ- ಭಾರತ ಜಯಶಾಲಿಯಾಗಲೆಂದು ಬಿಳ್ಕೊಡುಗೆ
ಹಾವೇರಿ; ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶತ್ರು ರಾಷ್ಟ್ರದ ಕುತಂತ್ರವನ್ನು ಹಿಮ್ಮೆಟ್ಟಿಸುವ ಹಿನ್ನಲೆಯಲ್ಲಿ ಭಾರತೀಯ ಸೇನೆಯಿಂದ ತುರ್ತಾಗಿ “ಅಪರೇಶನ್ ಸಿಂದೂರ” ಕಾರ್ಯಚರಣೆಯ ಕರ್ತವ್ಯಕ್ಕೆ ಹಾಜರಾಗುವಂತೆ ಸಂದೇಶ ಬಂದ ಹಿನ್ನಲೆಯಲ್ಲಿ ಹಾವೇರಿ ನಗರದ ತನ್ನ ಮನೆಗೆ ಆಗಮಿಸಿದ್ದ ಸಿ.ಆರ್.ಪಿ.ಎಫ್.ಯೋಧ ಸಂಜೀವ ಭೀಮರಾವ್ ಸಂಗೂರ ಕರ್ತವ್ಯದ ಕರೆಯ ಹಿನ್ನಲೆಯಲ್ಲಿ ಏ.೧೦ರ ಶನಿವಾರ ಸಂಜೆ ದೇಶ ರಕ್ಷಣೆಗೆ ಯಶವಂತಪುರ-ನಿಜಾಮುದ್ದಿನ ಎಕ್ಸ್ಪ್ರೆಸ್ ರೈಲ್ವೆ ಮೂಲಕ ದೆಹಲಿಗೆ ತೆರಳಿದರು.
ಇಲ್ಲಿನ ಕಲ್ಲುಮಂಟಪ ರಸ್ತೆಗೆ ಹೊಂದಿಕೊಂಡಿರುವ ಬಸ್ತಿ ಓಣಿ ನಿವಾಸಿ, ಪ್ರಗತಿಪರ ಕೃಷಿಕ ಭೀಮಣ್ಣ ಸಂಗೂರ ಅವರ ಪುತ್ರರಾಗಿರುವ ಸಿ.ಆರ್.ಪಿ.ಎಫ್.ಯೋಧ ಸಂಜೀವ ಸಂಗೂರ ಮೇ.೭ಕ್ಕೆ ಪತ್ನಿ-೧೪ತಿಂಗಳ ಪುತ್ರಿ, ವಯೋವೃದ್ದ ತಂದೆ-ತಾಯಿ, ಬಂಧುಗಳನ್ನು ಕಾಣಲೆಂದು ಹಾವೇರಿಗೆ ಆಗಮಿಸಿದ್ದರು. ಭಾರತೀಯ ಸೇನೆಯಿಂದ ತುರ್ತಾಗಿ “ಅಪರೇಶನ್ ಸಿಂದೂರ” ಕಾರ್ಯಚರಣೆಯ ಕರ್ತವ್ಯಕ್ಕೆ ಹಾಜರಾಗುವಂತೆ ಸಂದೇಶ ಬಂದ ಹಿನ್ನಲೆಯಲ್ಲಿ ಮೇ.೧೦ರಂದು ಶನಿವಾರ ಸಂಜೆ ೬ಕ್ಕೆ ರೈಲು ಮೂಲಕ ಜಮ್ಮು-ಕಾಶ್ಮಿರಕ್ಕೆ ತೆರಳಿದರು.
ತಮ್ಮ ಪ್ರಾಣವನ್ನು ಹಾಗೂ ತಮ್ಮ ಕುಟುಂಬವನ್ನು ಲೆಕ್ಕಿಸದೆ ಮತ್ತೆ ಯುದ್ಧದ ರಣರಂಗಕ್ಕೆ ಹೋಗುತ್ತಿರುವ ಸಂಜೀವ ಸಂಗೂರ ಅವರನ್ನು ತಂದೆ ಭೀಮಣ್ಣ, ತಾಯಿ ಸುಮಂಗಲ, ಪತ್ನಿ ಮಂಜುಳ ಸೇರಿದಂತೆ ಅನೇಕ ಬಂಧುಗಳು, ಕಲ್ಲುಮಂಟಪರಸ್ತೆಯ ನಿವಾಸಿಗಳು ಯುದ್ಧದಲ್ಲಿ ಗೆದ್ದು ಬರುವಂತೆ ಶುಭ ಹಾರೈಸಿ, ಭಾರತ್ ಮಾತಾಕಿ ಜೈ ಎನ್ನುವ ಜಯಗೋಷಗಳನ್ನು ಮೊಳಗಿಸಿ ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಜೀವ ಅವರ ತಂದೆ-ತಾಯಿ, ದೇಶ ರಕ್ಷಣೆಯ ಕರೆಯ ಹಿನ್ನಲೆಯಲ್ಲಿ ರಜೆ ಮೊಟಕುಗೊಳಿಸಿ ಸಂಜೀವ ಮರಳಿ ಕರ್ತವ್ಯಕ್ಕೆ ತೆರಳುತ್ತಿರುವುದು ಒಂದು ಕಡೆ ಆತಂಕವಿದೆ. ಆದರೆ ದೇಶ ಮೊದಲು, ಕುಟುಂಬ ನಂತರ. ದೇಶದ ಮೇಲೆ ಯದ್ಧದ ಕಾರ್ಮೋಡ ಕವಿದಿರುವಾಗ ದೇಶ ರಕ್ಷಣೆಗೆ ತಮ್ಮ ಪುತ್ರ ಹೊರಟಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಯುದ್ಧದಲ್ಲಿ ಗೆದ್ದು ಜಯಶಾಲಿಯಾಗಿ ಬರಲೆಂದು ಹಾರೈಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಾತನಾಡಿದ ಸಿ.ಆರ್.ಪಿ.ಎಫ್.ಯೋಧ ಸಂಜೀವ ಸಂಗೂರ, ದೇಶ ಮೊದಲು, ಕುಟುಂಬ ನಂತರ. ಸೇನೆಯಿಂದ ರಜೆ ಮೊಟಕು ಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ಬಂದ ಹಿನ್ನಲೆಯಲ್ಲಿ ದೇಶ ಸೇವೆಗೆ ತೆರಳುತ್ತಿರುವೆ. ನಮ್ಮ ದೇಶದ ರಕ್ಷಣೆಗೆ ಸೇನೆ ವಹಿಸುವ ಕರ್ತವ್ಯವನ್ನು ನಿರ್ವಹಿಸಲು ಉತ್ಸುಕನಾಗಿದ್ದೇನೆ. ಶತ್ರುಗಳ ವಿರುದ್ಧ ಯುದ್ದಕ್ಕೆ ಸನ್ನದ್ದನಾಗಿರುವೆ ಎಂದ ಅವರು ತಮಗೆ ಮರಳಿ ಕರ್ತವ್ಯಕ್ಕೆ ಹಾಜರಾಗಲು ಹಾವೇರಿಯಲ್ಲಿ ಕಾಯ್ದಿರುಸುವಿಕೆ ರೈಲು ಟಿಕೆಟ್ ಲಭ್ಯವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು, ಹುಬ್ಬಳ್ಳಿಗೆ ಹೋಗಿ ತತ್ಕಾಲ್ನಲ್ಲಿ ಟಿಕೆಟ್ ಪಡೆಯಬೇಕಾಯಿತು. ಸೈನಿಕರಿಗೆ ಈ ಪರಿಸ್ಥಿತಿ ಸುಧಾರಿಸಬೇಕೆನ್ನುವ ಆಶಯ ವ್ಯಕ್ತಪಡಿಸಿದರು.
ಸಂಜೀವ ಅವರ ಪತ್ನಿ ಮಂಜುಳ ಮಾತನಾಡಿ ತಮ್ಮ ಪತಿ ದೇಶ ಸೇವೆ ಮರಳಿರುವ ಬಗ್ಗೆ ಹೆಮ್ಮೆಯೂ ಇದೇ, ಅಷ್ಟೆ ಆತಂಕವು ಇದೆ. ಭಾರತ ದೇಶಕ್ಕೆ, ತಮ್ಮ ಪತಿಗೆ ಒಳ್ಳೆಯದಾಗಲಿ, ದೇವರು ಒಳ್ಳೆಯ ಆರೋಗ್ಯ ಕೊಡಲಿ, ಜಯಶಾಲಿಯಾಗಿ ಅವರು ಬರಲಿ ಎಂದು ಅವರು ಪತಿಯನ್ನು ದೆಹಲಿಯವರೆಗೆ ಹೋಗಿ ಬಿಳ್ಕೊಟ್ಟು ಬರುವುದಾಗಿ ತಿಳಿಸಿದರು.