ಫೆ.೧೮ಕ್ಕೆ ಕಾಗಿನೆಲೆಯಲ್ಲಿ ಸಂವಿಧಾನ ಸಾಕ್ಷಿಯ ಮದುವೆ
ಹಾವೇರಿ: ಕಾರ್ಮಿಕ ಸಂಘಟನೆಯ ಹೋರಾಟಗಾರ ಹೊನ್ನಪ್ಪ ಮರೆಮ್ಮನವರ ಪುತ್ರ ಪತ್ರಕರ್ತ ಪ್ರಶಾಂತ-ರೇಖಾ ಅವರು ಫೆ. ೧೮ರಂದು ಕಾಗಿನೆಲೆಯ ಕನಕಸಭಾಭವನದಲ್ಲಿ ಸಂವಿಧಾನ ಸಾಕ್ಷಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ವಿವಾಹವಾಗಲಿದ್ದಾರೆ ಎಂದು ಭಾವ ಸಂಗಮ ವಿವಾಹ ವೇದಿಕೆಯ ಬಸವರಾಜ ಸೂಳೆಬಾವಿ ತಿಳಿಸಿದರು.
ಸೋಮವಾರ ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಸಾವಿತ್ರಿ ಬಾಯಿ ಫುಲೆ, ಜ್ಯೋತಿಬಾ ಫುಲೆ ಅವರು ಜಾತಿ ಚೌಕಟ್ಟನ್ನು ಮೀರಿ ಮದುವೆ ಮಾಡಿಸಿದ್ದರು. ಅವರ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ಮೂಲಕ, ಎಲ್ಲ ಜನರನ್ನು ಸಮಾನವಾಗಿ ಕಾಣುವ ದೇಶದ ಶ್ರೇಷ್ಠ ಗ್ರಂಥ ಸಂವಿಧಾನ ಸಾಕ್ಷಿಯಾಗಿ ಪ್ರಮಾಣವಚನ ಸ್ವೀಕರಿಸಿ, ಪತ್ರಕರ್ತ ಪ್ರಶಾಂತ ಹಾಗೂ ರೇಖಾ ಅವರ ಮದುವೆಯನ್ನು ಸರಳವಾಗಿ ನಡೆಸಲಾಗುವುದು ಎಂದರು.
ಸಂವಿಧಾನ ಸಾಕ್ಷಿ ಮದುವೆಯನ್ನು ಗದಗನ ಭಾವ ಸಂಗಮ ವಿವಾಹ ವೇದಿಕೆ, ಮಾನವ ಬಂಧುತ್ವ ವೇದಿಕೆ, ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿವೆ. ಸಂವಿಧಾನ ಸಾಕ್ಷಿ ಮದುವೆಗೆ ಸಚಿವ ಸತೀಶ ಜಾರಕಿಹೊಳಿ, ಸಾಹಿತಿ ಬಿ.ಶ್ರೀನಿವಾಸ, ಹಿರಿಯ ಪತ್ರಕರ್ತ ಸನತಕುಮಾರ ಬೆಳಗಲಿ, ಡಾ.ಅನಸುಯಾ ಕಾಂಬಳೆ ಸೇರಿದಂತೆ ಅನೇಕ ಪ್ರಗತಿಪರರು, ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಮಾನವ ಬಂಧುತ್ವ ವೇದಿಕೆ ಯ ತಾಲೂಕಾ ಸಂಚಾಲಕ ಮಾಲತೇಶ ಅಂಗೂರ, ನ್ಯಾಯವಾದಿ ವಿನಾಯಕ ಕುರುಬರ ಇದ್ದರು.