ಬರದ ನಡುವೆ ಅಲ್ಪ ನೀರಿನಲ್ಲಿ ಭರ್ಜರಿ ನುಗ್ಗಿಕಾಯಿ ಬೆಳೆ ಬೆಳೆದಿರುವ ಛಲಗಾರ ರೈತ ಸುರೇಶ ಚಲವಾದಿ
ಹಾವೇರಿ: ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ನಲುಗಿಹೋಗಿರುವ ಅನ್ನದಾತರು ಕೃಷಿಯಿಂದ ವಿಮುಖರಾಗುತ್ತಿರವುದ ಒಂದು ಕಡೆಯಾದರೇ, ಕೃಷಿ ಬಿಟ್ಟರೇ ನಮಗೆ ಬೇರೆ ಬದುಕಿಲ್ಲ, ಕಳೆದುಕೊಂಡ ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕೆನ್ನುವ ಛಲದಲ್ಲಿ ಕೃಷಿಯಲ್ಲಿ ವಿನೂತನ ಪ್ರಯೋಗಗಳನ್ನು ಮಾಡುತ್ತಾ ತಮ್ಮ ಬದುಕು ಕಟ್ಟಿಕೊಂಡಿರುವ ಅನೇಕ ಸಾಧಕ ರೈತರು ನಮ್ಮಲ್ಲಿದ್ದಾರೆ. ಇಂತ ರೈತರ ಸಾಲಿಗೆ ಸೇರುತ್ತಾರೆ ಹಾವೇರಿಯ ಪ್ರಗತಿಪರ ರೈತ ಸುರೇಶ ಚಲವಾದಿ.
ಸುರೇಶ ಚಲವಾದಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಮೂರು ಸಾವಿರ ನುಗ್ಗೆ ಗಿಡಗಳನ್ನು ಬೆಳೆದಿದ್ದಾರೆ. ಬೇಸಿಗೆಯ ಈದಿನಗಳಲ್ಲಿ ಕೈತುಂಬ ಆದಾಯ ಪಡೆಯುತ್ತಿದ್ದಾರೆ. ಹಾವೇರಿಯ ಸಮೀಪದ ಗಣಜೂರಿನ ಬಳಿಯ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಸುರೇಶ್ ಚಲವಾದಿ ಅವರು ಕೊವೆಬಾವಿಯ ನೀರಿನಲ್ಲಿ ಮೂರು ಸಾವಿರ ನುಗ್ಗೆ ಗಿಡಗಳನ್ನು ಬೆಳೆದು ಏಳು ತಿಂಗಳಿಗೆ ಫಸಲು ಪಡೆಯಲಾರಂಭಿಸಿದ್ದು, ನಿತ್ಯ ಒಂದು ಕ್ವಿಂಟಾಲ್ವರೆಗೆ ನುಗ್ಗೆಕಾಯಿ ಕೊಯ್ದು ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ.
ಸುರೇಶ್ ಚಲವಾದಿ ಅವರು ಸುಮಾರು ೨ ಲಕ್ಷ ರೂಪಾಯಿ ವೆಚ್ಚದಲ್ಲಿ ಭಾಗ್ಯ ನುಗ್ಗೆಗಿಡಗಳನ್ನು ಬೆಳೆದಿದ್ದಾರೆ. ನುಗ್ಗೆಗಿಡದ ನಡುವೆ ಹಾಕಿದ್ದ ಅಲಸಂದೆಯಿAದಲೇ ೭೦ ಸಾವಿರ ರೂಪಾಯಿ ಆದಾಯ ಪಡೆದಿದ್ದಾರೆ. ಸದ್ಯ ನುಗ್ಗೆಗಿಡದ ಮಧ್ಯದಲ್ಲಿ ಬದನೆಕಾಯಿ ಬೆಳೆದಿದ್ದು, ಇದರಿಂದ ನುಗ್ಗೆಗಿಡಕ್ಕೆ ಮಾಡಿರುವ ಖರ್ಚು ತಗೆಯುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ. ಇನ್ನು ನುಗ್ಗೆಕಾಯಿ ಮಾರಿ ಬಂದ ಹಣದಲ್ಲಿ ಕೂಲಿ ಕಾರ್ಮಿಕರ ಖರ್ಚು ನಿರ್ವಹಣೆ ವೆಚ್ಚ ತೆಗೆದರೆ, ಉಳಿದಿದ್ದೆಲ್ಲ ಲಾಭವೆ ಎನ್ನತ್ತಾರೆ.
“ಜಮೀನಿನಲ್ಲಿನ ಗಿಡಗಳಲ್ಲಿ ಕೊಂಬೆಗಳು ನೆಲಕ್ಕೆ ಬಾಗುವಷ್ಟು ಕಾಯಿಗಳು ಬಿಟ್ಟಿವೆ. ಆದರೆ ಅಧಿಕ ಇಳುವರಿಯ ಸಮಯದಲ್ಲಿ ದರ ಕಡಿಮೆ ಇರುತ್ತದೆ. ಕಡಿಮೆ ಇಳುವರಿ ಇರುವ ವೇಳೆ ದರ ಅಧಿಕವಾಗಿರುತ್ತೆ. ಗಿಡ ಬೆಳೆದು ಏಳು ತಿಂಗಳಿಗೆ ಫಸಲು ಬಿಡುವ ನುಗ್ಗೆಕಾಯಿ ನಿರಂತರವಾಗಿ ಮೂರು ತಿಂಗಳು ಕಾಯಿ ಬಿಡುತ್ತದೆ. ಗಿಡದಿಂದ ಗಿಡಕ್ಕೆ ಆರು ಅಡಿ ಮತ್ತು ಸಾಲಿನಿಂದ ಸಾಲಿಗೆ ೧೦ ಅಡಿ ಅಂತರಲ್ಲಿ ನುಗ್ಗೆಗಿಡಗಳನ್ನು ನೆಡಲಾಗಿದೆ. ಬಾಗಲಕೋಟೆಯ ತೋಟಗಾರಿಕಾ ಇಲಾಖೆಯಿಂದ ಸಸಿ ತಂದು ಇಲ್ಲಿ ನಾಟಿ ಮಾಡಲಾಗಿದೆ. ಇನ್ನು ನುಗ್ಗೆಕಾಯಿ ಅಷ್ಟೇ ಅಲ್ಲದೆ ನುಗ್ಗೆಸೊಪ್ಪು ಸಹ ಮಾರಾಟವಾಗುತ್ತದೆ. ಆದರೆ, ಸದ್ಯ ಗಿಡದಲ್ಲಿ ಬಿಟ್ಟಿರುವ ನುಗ್ಗೆಕಾಯಿ ಮಾರಿದರೇ ಸಾಕು” ಎನ್ನುತ್ತಾರೆ ಸುರೇಶ ಚಲವಾದಿ.
ಸುರೇಶ್ ಅವರ ಜೊತೆಗೆ ಯುವ ರೈತ ಮಂಜುನಾಥ್ ಎನ್ನುವವರು ತೋಟ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಗೋವಾದಲ್ಲಿರುವ ಅಂಗಡಿಯನ್ನು ಬಿಟ್ಟು ಬಂದಿರುವ ಮಂಜುನಾಥ್ ಅವರು ಸುರೇಶ್? ಅವರ ಜೊತೆಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೇಸಿಗೆಯ ಈದಿನಗಳಲ್ಲಿ ಕೊಳವೆಬಾವಿಯಲ್ಲಿ ಸಹಜವಾಗಿ ನೀರು ಕಡಿಮೆಯಾಗಿದೆ. ಇರವ ನೀರಿನಲ್ಲಿಯೇ ಪ್ರಥಮಬಾರಿಗೆ “ಸುರೇಶ್ ಅವರು ನುಗ್ಗೆಕಾಯಿ ಬೆಳೆದಿದ್ದು . ಸದ್ಯ ಸುರೇಶ್ ಅವರು ಹಾವೇರಿ ಮಾರುಕಟ್ಟೆಗೆ ನುಗ್ಗೆಕಾಯಿ ಮಾರಾಟ ಮಾಡುತ್ತಿದ್ದಾರೆ. ಅಧಿಕ ಇಳುವರಿ ಬಂದರೆ ಬೆಳಗಾವಿ ಮಾರುಕಟ್ಟೆಗೆ ಕೂಡ ನುಗ್ಗೆಕಾಯಿ ಮಾರಾಟ ಮಾಡಲಾಗುತ್ತದೆ. ಸದ್ಯ ಕ್ಷಿಂಟಾಲ್ ನುಗ್ಗೆಕಾಯಿಗೆ ೨,೨೦೦ ಇದ್ದು, ಮುಂದಿನ ದಿನಗಳಲ್ಲಿ ದರ ಏರುವ ವಿಶ್ವಾಸವಿದೆ. ಈಗ ಇರುವ ೨,೨೦೦ ರೂಪಾಯಿಗೆ ಮಾರಾಟ ಮಾಡಿದರೂ ನಷ್ಟವಿಲ್ಲ. ಆದರೆ, ದರ ಏರಿಕೆಯಾದರೆ ಲಾಭದ ಪ್ರಮಾಣ ಹೆಚ್ಚಾಗುತ್ತದೆ” ಎಂದು ಸುರೇಶ ಹೇಳುತ್ತಾರೆ.
ನುಗ್ಗೆಗಿಡಗಳಿಂದ ಪ್ರಯೋಜನ ಹಲವು: ನುಗ್ಗೆಗಿಡಗಳಿಂದ ಹಲವಾರು ಪ್ರಯೋಜನಗಳಿವೆ. ಈ ನುಗ್ಗೆ ಗಿಡವನ್ನು ಒಮ್ಮೆ ನೆಟ್ಟರೆ ಮೂರು ವರ್ಷಗಳ ಕಾಲ ಫಸಲು ನೀಡುತ್ತದೆ. ಆರಂಭದಲ್ಲಿ ಗಿಡವೊಂದು ಐದು ಕೆಜಿವರೆಗೆ ಫಸಲು ನೀಡುತ್ತದೆ. ಎರಡನೇಯ ವರ್ಷದಲ್ಲಿ ೧೫ ಕೇಜಿ ಹಾಗೂ ಮೂರನೇಯ ವರ್ಷದಲ್ಲಿ ೨೦ ಕೇಜಿವರೆಗೆ ಫಸಲು ನೀಡುತ್ತದೆ. ನುಗ್ಗೆಕಾಯಿ ತಪ್ಪಲು ಒಣಗಿದ ನಂತರ ಜಮೀನಿಗೆ ಗೊಬ್ಬರವಾಗುತ್ತದೆ. ಹತ್ತಿ, ಗೋವಿನಜೋಳದಂತೆ ಪ್ರತಿ ವರ್ಷ ಬಿತ್ತನೆ ಮಾಡಬೇಕು, ಮಾರಾಟ ಮಾಡಬೇಕು, ಗೊಬ್ಬರ ಹಾಕಬೇಕು, ಕ್ರಿಮಿನಾಶಕ ಸಿಂಪಡನೆ ಮಾಡಬೇಕು ಎನ್ನುವ ಜಂಜಾಟವಿಲ್ಲ. ಸದ್ಯ ಕ್ವಿಂಟಾಲ್ಗೆ ಮಾರುಕಟ್ಟೆಯಲ್ಲಿ ೨,೨೦೦ ರೂಪಾಯಿ ದರವಿದ್ದು, ಸೀಸನ್ ಸಮಯದಲ್ಲಿ ಏಳು ಸಾವಿರ ರೂ ದಾಟುತ್ತದೆ ಎನ್ನುತ್ತಾರೆ ಸುರೇಶ್ ಚಲವಾದಿ.