ಮಣಿಪುರದಲ್ಲಿ ಆದಿವಾಸಿಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ-ಹಿಂಸಾಚಾರ ಖಂಡಿಸಿ ಹಾವೇರಿಯಲ್ಲಿ ಪ್ರತಿಭಟನೆ
ಹಾವೇರಿ: ಕಳೆದ ಎರಡೂವರೆ ತಿಂಗಳಿನಿಂದ ಮಣಿಪುರದಲ್ಲಿ ಆದಿವಾಸಿಗಳ ಮೇಲೆ, ಆದಿವಾಸಿ ಮಹಿಳೆಯರ ಮೇಲೆ ಅಮಾನವೀಯ ಅತ್ಯಾಚಾರ- ಹಿಂಸಾಚಾರ ನಡೆಸಿ, ಮಹಿಳೆಯರನ್ನು, ಮಕ್ಕಳನ್ನು, ಆದಿವಾಸಿಗಳನ್ನು ಬರ್ಬರವಾಗಿ ಹತ್ಯೆಮಾಡಲಾಗಿದೆ. ಈ ದೌರ್ಜನ್ಯ ಈಗಲೂ ಮುಂದುವರೆದಿದೆ. ಮಣಿಪುರದಲ್ಲಿ ಹಿಂಸಾಚಾರ ನಿಯಂತ್ರಿಸಲು ವಿಫಲರಾದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಎನ್.ಬಿರೇನ್ಸಿಂಗ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಗುರುವಾರ ಇಲ್ಲಿನ ಹೊಸಮನಿ ಸಿದ್ದಪ್ಪವೃತ್ತದಲ್ಲಿ ಹೆದ್ದಾರಿ ತಡೆನಡೆಸಿ ಹಾವೇರಿಜಿಲ್ಲಾ ಅಲೆಮಾರಿ ಬುಡಕಟ್ಟು ಮಹಾಸಭಾದ ಪದಾಧಿಕಾರಿಗಳು ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಮಣಿಪುರದಲ್ಲಿ ಆದಿವಾಸಿಮಹಿಳೆಯರ ಬೆತ್ತಲೆಮೆರವಣಿಗೆ ನಡೆಸಿ, ಅತ್ಯಾಚಾರ ನಡೆಸಿ ಕೊಲೆಮಾಡಿರುವುದು ಇಡಿ ಮಹಿಳಾ ಕುಲಕ್ಕೆ, ತಾಯಿಹೃದಯಕ್ಕೆ ಮಾಡಿದ ಬಹುದೊಡ್ಡ ದೊಡ್ಡ ಅಪಮಾನವಾಗಿದೆ. ಹೆಣ್ಣನ್ನು ಪೂಜಿಸುವ ನಾಡಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾಚಾರಕ್ಕೆ ಮಣಿಪುರ ರಾಜ್ಯ ಹಾಗೂ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ. ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆದಿವಾಸಿಗಳಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.
ಮಣಿಪುರದಲ್ಲಿ ಕಳೆದ ಹಲವಾರು ದಿನಗಳಿಂದ ಆದಿವಾಸಿಗಳ ಮೇಲೆ ನಡೆಯುತ್ತಿರುವ ಅಮಾನವೀಯ ಅತ್ಯಾಚಾರ- ಹಿಂಸಾಚಾರ ಘಟನೆಗಳ ಬಗ್ಗೆ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಗೊತ್ತಿದ್ದರೂ ಸಹ ಜವಾಬ್ದಾರಿ ಸ್ಥಾನದಲ್ಲಿರುವ ದೇಶದ ಪ್ರಧಾನ ಮಂತ್ರಿಗಳು, ಸಂಬಂಧಪಟ್ಟ ಕೇಂದ್ರದ ಮಂತ್ರಿಗಳು, ಮಣಿಪುರದ ಮುಖ್ಯಮಂತ್ರಿಗಳು ಬೇಜವಾಬ್ದಾರಿಯಿಂದ, ನಿರ್ಲಕ್ಷದಿಂದ ನಡೆದುಕೊಂಡ ಕಾರಣಕ್ಕೆ ಮಣಿಪುರದಲ್ಲಿ ಜಗತ್ತೇ ಕಳವಳಪಟ್ಟಿರುವ ಘಟನೆಗಳು ನಡೆಯುತ್ತಿವೆ.
ಬೇಟಿ ಪಡಾವೋ ಬೇಟಿ ಬಚಾವ ಎಂದು ಕರೆ ನೀಡುವ ದೇಶದ ಪ್ರಧಾನಿಗಳು ಮಣಿಪುರದಲ್ಲಿ ಆದಿವಾಸಿ ಮಹಿಳೆಯರ ಮಾನ-ಪ್ರಾಣ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಸಂವಿಧಾನ ಉಳಿಸಿ ಹೆಣ್ಣಮಕ್ಕಳನ್ನು ರಕ್ಷಿಸಬೇಕಾದ ಆಳುವವರು ಅಳಿಸುತ್ತಿದ್ದಾರೆ. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಆದಿವಾಸಿಗಳ ಮಾನ, ಪ್ರಾಣ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾ ಕಾರರು ತಾಲೂಕಾ ಆಡಳತದ ಮೂಲಕ ರಾಷ್ಟ್ರಪತಿಗಳಿಗ ಮನವಿ ಅರ್ಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಆಧ್ಯಕ್ಷ ಶೆಟ್ಟಿ ವಿಭೂತಿ, ದಲಿತಸಂಘಟನೆಗಳ ಮುಖಂಡರಾದ ಎನ್.ಎನ್.ಗಾಳೆಮ್ಮನವರ, ಉಡಚಪ್ಪ ಮಾಳಗಿ, ರಮೇಶ ಜಾಳಿಹಾಳ, ಚನ್ನದಾಸರ ಸಮುದಾಯದ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಹಾಗೂ ಹಾವೇರಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಹಂಸಬಾವಿಯ ಸಾವಿತ್ರಿ ಎಂ ರತ್ನಾಕರ, ಶಿವರಾಜ ಹರಿಜನ, ಜಗದೀಶ ಹರಿಜನ, ಹನುಮಂತ ಸಿ.ಡಿ, ಮಲ್ಲೇಶ ಕಡಕೋಳ, ಸೋಮಣ್ಣ ಕೂಡ್ಲೀಗಿ, ಕಸ್ತೂರಮ್ಮ ಕೊರವರ, ಜಯಶೀಲಾ ಕೊರವರ, ಲತಾ ಪಾಟೀಲ, ಪಾರ್ವತಮ್ಮ, ಕಿರಣ ನಾಯಕ್, ನಾಗಪ್ಪ ಮುಳಗುಂದ, ತಿಪ್ಪೇಸ್ವಾಮಿ ನಾಯಕ, ನಾಗರಾಜ ಬಡಮ್ಮನವರ, ಮಾಲತೇಶ ಭಜಂತ್ರಿ, ಯಲ್ಲಪ್ಪ ಕೋಮಾರಿ, ಲಕ್ಷ್ಮಣ ಸಿರಿಶಾಲ, ಆನಂದ ಕೋಮಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.