ವಿಧಾನಸಭಾ ಚುನಾವಣೆಯಲ್ಲಿ ೪೦ ಕೋಟಿ ರೂ ಹಣ ಖರ್ಚು ಹೇಳಿಕೆ- ಮಾಜಿ ಶಾಸಕ ಪೂಜಾರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ
ರಾಣಿಬೆನ್ನೂರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ೪೦ ಕೋಟಿ ರೂ ಹಣ ಖರ್ಚು ಮಾಡಿದರೂ ಸೋಲಬೇಕಾಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಪಕ್ಷದ ಸಭೆಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಈ ಬಗ್ಗೆ ಚುನಾವಣಾ ಆಯೋಗ, ಅಧಿಕಾರಿಗಳು ತನಿಖೆ ಮಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತ ಮುಖಂಡರುಗಳು ಒತ್ತಾಯಿಸಿದರು.
ಮಂಗಳವಾರದಂದು ರೈತ ಸಂಘದ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಮುಖಂಡರು ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ರವಿಂದ್ರಗೌಡ ಪಾಟೀಲ ಮಾತನಾಡಿ ಪೂಜಾರರು ಶಾಸಕರಾಗಿದ್ದಾಗ ಸಾಕಷ್ಟು ಹಣ, ಆಸ್ತಿ ಸಂಪಾದಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ೪೦ ಕೋಟಿ ಹಣ ಖರ್ಚು ಮಾಡಿರುವೆನೆಂದು ತಾವೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಎಂದು ಆಪಾದಿಸಿದರು.
ಕಳೆದ ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಸರಿಯಾದ ಲೆಕ್ಕ ತೋರಿಸದೇ , ಸುಳ್ಳು ಮಾಹಿತಿ ನೀಡಿದ್ದು, ಚುನಾವಣೆಗೆ ಖರ್ಚು ಮಾಡಲು ಇಷ್ಟೊಂದು ಹಣ ಎಲ್ಲಿಂದ ಬಂತು? ಅವರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸಬೇಕೆಂದು ಪಾಟೀಲ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸುರೇಶ ಜಡಮಲಿ, ಹರಿಹರಗೌಡ ಪಾಟೀಲ, ರಾಜು ಮಾದಮ್ಮನವರ, ತಿಪ್ಪೇಶ ನಾಯಕ, ಇಕ್ಬಾಲ್ಸಾಬ್ ರಾಣೆಬೆನ್ನೂರ, ಸಂಜೀವರಡ್ಡಿ ಮುದಗಣಗಿ, ವಿರುಪಾಕ್ಷಗೌಡ ಪಾಟೀಲ, ಮಂಜುನಾಥ ಹಲವಾಗಲ, ಯಲ್ಲಪ್ಪ ಛತ್ರದ, ಹಾಲೇಶ ಕೆಂಚನಾಯಕರ, ನಿಂಗಪ್ಪ ಅಂತರವಳ್ಳಿ, ನಾಗನಗೌಡ ಸಂಕನಗೌಡ್ರ, ತಿರುಕಪ್ಪ ವಡ್ಲವರ ಸೇರಿದಂತೆ ಮತ್ತಿತರರು ಇದ್ದರು.