“ಸತೀಶ ಜಾರಕಿಹೊಳಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸಲಿ”ಹಾವೇರಿ: ಇತ್ತೀಚೆಗೆ ಜರುಗಿದ ಕರ್ನಾಟಕದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿಗೆ ಕಾರಣರಾಗಿರುವ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ಹಾದಿಯಲ್ಲಿ ನಡೆಯುವ ರಾಜ್ಯದ ಅಹಿಂದ ನಾಯಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಇರುವ ಯಮನಕನಮರಡಿ ಶಾಸಕರಾಗಿರುವ ಸತೀಶ ಜಾರಕಿಹೊಳಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಪಕ್ಷ ಘೋಷಿಸಲಿ ಎಂದು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಆನವಟ್ಟಿ ಆಗ್ರಹಿದರು.ಮಂಗಳವಾರ ನಗರದಲ್ಲಿಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಮೂರನೇ ದೊಡ್ಡ ಶಾಸಕರ ಸಂಖ್ಯೆಯನ್ನು ಹೊಂದಿರುವ ನಾಯಕ ಸಮಾಜ 18 ಜನ ಶಾಸಕರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳಿಸಿಕೊಡಲಾಗಿದೆ.ಎಸ್ಟಿ ಮೀಸಲಾತಿ ಅಡಿಯಲ್ಲಿ ಗೆದ್ದ 14 ಜನ ಶಾಸಕರು ಮತ್ತು ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದ ಒಬ್ಬ ಶಾಸಕರು ಒಟ್ಟು ಕಾಂಗ್ರೆಸ್ ಪಕ್ಷಕ್ಕೆ 15 ಜನ ಶಾಸಕರನ್ನು ಗೆಲ್ಲಿಸಿ ಕಳಿಸಿಕೊಡಲಾಗಿದೆ. ಅಲ್ಲದೇ ಸತೀಶ್ ಜಾರಕಿಹೊಳಿಯವರು ರಾಜ್ಯದಲ್ಲಿ ಪ್ರಭಾವಿ ರಾಜಕಾರಣಿಯಾಗಿದ್ದು ಎಸ್ಟಿ ಮೀಸಲು ಕ್ಷೇತ್ರಗಳ ಜೊತೆಗೆ ಬೆಳಗಾವಿ, ಬಾಗಲಕೋಟೆ, ವಿಜಯಪುರ,ಹಾವೇರಿ, ಗದಗ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಪ್ರವಾಸ ಮಾಡಿ ಅಹಿಂದ ಮತಗಳನ್ನ ಕ್ರೂಡಿಕರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ.ವಾಲ್ಮೀಕಿ ನಾಯಕ ಸಮಾಜ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ ಇಲ್ಲಿಯವರೆಗೆ ಈ ಜನಾಂಗಕ್ಕೆ ಮುಖ್ಯಮಂತ್ರಿಯನ್ನಾಗಿ ಅಥವಾ ಉಪಮುಖ್ಯಮಂತ್ರಿಯಂತ ಹುದ್ದೆ ನೀಡಿರುವುದಿಲ್ಲ. ರಾಜ್ಯದ 165 ಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಈ ನಾಯಕ ಸಮಾಜದ ಜನಸಂಖ್ಯೆ ನಿರ್ಣಾಯಕ ಮತದಾರರಾಗಿರುತ್ತಾರೆ. ಈ ಎಲ್ಲವನ್ನು ಕಾಂಗ್ರೆಸ್ ಪಕ್ಷ ಗಮನದಲ್ಲಿಟ್ಟುಕೊಂಡು ನಾಯಕ ಸಮಾಜಕ್ಕೆ ಹೆಚ್ಚಿನ ಮಂತ್ರಿ ಸ್ಥಾನಗಳು ನೀಡುವ ಮುಖಾಂತರ ಸಾಮಾಜಿಕ ನ್ಯಾಯವನ್ನು ನೀಡಬೇಕು. ಕಳೆದ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ತಪ್ಪನ್ನು ಪುನಃ ಕಾಂಗ್ರೆಸ್ ಪಕ್ಷ ಮಾಡಬಾರದು. ಈ ಹಿಂದಿನ ಬಿಜೆಪಿ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವುದಾಗಿ ಘೋಷಣೆಮಾಡಿದ್ದರು. ಆದರೆ ಶ್ರೀರಾಮುಲು ಅವರನ್ನು ಅವಮಾನಿಸಿತು. ಆರೀತಿಯ ತಪ್ಪನ್ನು ಕಾಂಗ್ರೆಸ್ ಪಕ್ಷ ಮಾಡಬಾರದು. ಸಾಮಾಜಿಕ ನ್ಯಾಯದ ಗುಣಗಳನ್ನು ಹೊಂದಿರುವ ನಾಯಕ ಸಮಾಜದ ಬಹುದೊಡ್ಡ ನಾಯಕ ಮತ್ತು ರಾಜ್ಯದ ಅಹಿಂದ ನಾಯಕರಾದ ಸತೀಶ ಜಾರಕಿಹೊಳೆಯವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡುವಂತೆ ಕೇಂದ್ರದ ನಾಯಕರಿಗೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸಮಸ್ತ ವಾಲ್ಮೀಕಿ ನಾಯಕ ಸಮಾಜವು ವಿನಂತಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಅಶೋಕ ಹರನಗಿರಿ, ಲವೇಶ ಸೋಮನಕಟ್ಟಿ, ಮಲ್ಲಿಕಾರ್ಜುನ ಬೂದಗಟ್ಟಿ, ಮಾಲತೇಶ ರಿತ್ತಿ ಮತ್ತಿತರರು ಇದ್ದರು.