ಸುಕ್ಷೇತ್ರ ಮಂತ್ರಾಲಯದಲ್ಲಿ ಡಿ.೨೫ಕ್ಕೆ ಕಚುಸಾಪ ಅಖಿಲ ಭಾರತ ಮಟ್ಟದ ನಾಲ್ಕನೇ ಸಮ್ಮೇಳನ
ಹಾವೇರಿ: ಆಂಧ್ರಪ್ರದೇಶದ ಸುಕ್ಷೇತ್ರ ಮಂತ್ರಾಲಯದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹಾಗೂ ಶ್ರೀಮಠದ ಸಂಯುಕ್ತ ಆಶ್ರಯದಲ್ಲಿ ಕಚುಸಾಪ ಅಖಿಲ ಭಾರತ ಮಟ್ಟದ ನಾಲ್ಕನೇ ಸಮ್ಮೇಳನ ಹಾಗೂ ದಶಮಾನೋತ್ಸವ ಸಂಭ್ರಮ ಡಿ.೨೫ ರಂದು ಜರುಗಲಿದೆ. ಈ ಸಮ್ಮೇಳನದಲ್ಲಿ ಹಾವೇರಿ ಜಿಲ್ಲೆಯಿಂದ ೧೫ ಕ್ಕೂ ಅಧಿಕ ಚುಟುಕು ಕವಿಗಳು ಕವಿಗೋಷ್ಠಿಯ ಕವನ ವಾಚನಕ್ಕೆ ಆಯ್ಕೆಯಾಗಿದ್ದಾರೆ.
ಕಚುಸಾಪಕ್ಕೆ ಸರಕಾರದಿಂದ ಯಾವುದೇ ಅನುಧಾನ ಇಲ್ಲದಿದ್ದರೂ ಹತ್ತು ರಾಜ್ಯಮಟ್ಟದ ಸಮ್ಮೇಳನಗಳನ್ನ ಪೂರೈಸಿ ದಶಮಾನೋತ್ಸವ ಸಂಭ್ರಮದಲ್ಲಿರುವ ಕಚುಸಾಪ ಹೊರ ರಾಜ್ಯಗಳಲ್ಲೂ ರಾಷ್ಟ ಮಟ್ಟದ ಸಮ್ಮೇಳನಗಳನ್ನು ಮಾಡುವುದರ ಮೂಲಕ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಕನ್ನಡದ ಮೇರಗನ್ನು ಹೆಚ್ಚಿಸಿದ ಕೀರ್ತಿ ಕಚುಸಾಪಕ್ಕೆ ಸಲ್ಲುತ್ತದೆ ಎಂದು ಕಚು ಸಾಪ ಹಾವೇರಿ ಜಿಲ್ಲಾಧ್ಯಕ್ಷ ವಿರುಪಾಕ್ಷ ಲಮಾಣಿ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ. ಗಂಗಯ್ಯ ಎಸ್ ಕುಲಕರ್ಣಿ ತಿಳಿಸಿದ್ದಾರೆ.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಕೇಂದ್ರಸಮಿತಿ,ಹುಬ್ಬಳ್ಳಿ. ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಾಲಯ,ಇವರ ಸಂಯುಕ್ತ ಆಶ್ರಯದಲ್ಲಿ ಅಖಿಲ ಭಾರತ ಮಟ್ಟದ ನಾಲ್ಕನೇ ಸಮ್ಮೇಳನ ಹಾಗೂ ದಶಮಾನೋತ್ಸವ ಸಂಭ್ರಮ ಡಿ.೨೫ ರಂದು ಶ್ರೀ ಸುಷಮೀಂದ್ರ ವೇದಿಕೆ, ಯಜ್ಞಶಾಲೆ, ರಾಯರಮಠ, ಮಂತ್ರಾಲಯದಲ್ಲಿ ಜರುಗಲಿದೆ. ದಿವ್ಯ ಸಾನಿಧ್ಯವನ್ನು ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳು, ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ ಇವರು ವಹಿಸುವರು, ಸಮ್ಮೇಳನದ ಸರ್ವಾಧ್ಯಕ್ಷರು ಪಂ. ಡಾ. ರಾಜಾ ಎಸ್.ಗಿರಿ ಆಚಾರ್ಯ, ಮಂತ್ರಾಲಯ, ನಿಕಟಪೂರ್ವ ಸರ್ವಾಧ್ಯಕ್ಷರು. ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರು, ಶ್ರೀ ಕೋರಿಸಿದ್ಧೇಶ್ವರ ಸಂಸ್ಥಾನಮಠ ನಾಲವಾರ, ಕಲ್ಬುರ್ಗಿ ಇವರು ಆಗಮಿಸುವರು.
ಬೆಳಿಗ್ಗೆಃ ೮-೩೦ ಧ್ವಜಾರೋಹಣ, ಸಮ್ಮೇಳನ ಉದ್ಘಾಟನಾ ಸಮಾರಂಭ ಜರುಗುವುದು, ಮುಖ್ಯ ಅತಿಥಿಗಳಾಗಿ ಶ್ರೀ ಎಸ್.ಕೆ.ಶ್ರೀನಿವಾಸ್ ರಾವ್, ವ್ಯವಸ್ಥಾಪಕರು, ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಾಲಯ, ಗೌರವ ಉಪಸ್ಥಿತಿ ಎನ್. ವಾದಿರಾಜ ಆಚಾರ್ಯ, ವಿಶ್ರಾಂತ ಪ್ರಾಚಾರ್ಯರು, ಸಂಸ್ಕೃತ ವಿದ್ಯಾಲಯ,ಮಂತ್ರಾಲಯ, ಕೃಷ್ಣಮೂರ್ತಿ ಕುಲಕರ್ಣಿ ಸಂಚಾಲಕರು, ಕಚುಸಾಪ, ಹುಬ್ಬಳ್ಳಿ, ಚನ್ನಬಸಪ್ಪ ಧಾರವಾಡಶೆಟ್ರು ಪ್ರಸಾರಾಂಗ ನಿರ್ದೇಶಕ, ಕಚುಸಾಪ ಹುಬ್ಬಳ್ಳಿ ಇರುವರು.
ಉದ್ಘಾಟನೆಯ ನಂತರ ನಡೆಯು ಆಧ್ಯಾತ್ಮಿಕ ಚಿಂತನ ಗೋಷ್ಠಿಯ ಅಧ್ಯಕ್ಷತೆ ಪ್ರೊ.ಡಿ.ಡಿ.ಎಂ.ದೇಸಾಯಿ, ಅಧ್ಯಕ್ಷರು, ಕಚುಸಾಪ ಹುಬ್ಬಳ್ಳಿ ವಹಿಸುವರು, ರಾಯರ ಗ್ರಂಥ ವೈಭವ ಕುರಿತು ಪಂ.ಡಾ.ನಾರಾಯಣಾಚಾರ್ಯ ಧೂಳಖೇಡ, ಹಿರಿಯ ಚಿಂತಕರು, ಹುಬ್ಬಳ್ಳಿ ವಿಷಯ ಮಂಡನೆ ಮಾಡುರು, ಪರಮ ಸಂತೋಷದ ಮೂಲ – ಆಧ್ಯಾತ್ಮದ ಚಿಂತನ ವಿಷಯದ ಕುರಿತು ಡಾ.ಜಿ.ಎ. ಹೆಗಡೆ, ಸೋಂದಾ ಹಿರಿಯ ಚಿಂತಕರು, ಶಿರಸಿ.ಉ.ಕ. ಇವರು ವಿಷಯ ಮಂಡನೆ ಮಾಡುವರು. ಶಬ್ದಾರ್ಥ ಸಂತೋಷ- ವೇದಾಂತ ಹಿನ್ನಲೆ ಕುರಿತು ಗಣಪತಿ ಭಟ್ಟರು ವರ್ಗಾಸರ ಹಿರಿಯ ವಾಗ್ಮೀಗಳು, ಉ.ಕ. ಇವರು ಮಾತನಾಡುವರು.
ಮಧ್ಯಾಹ್ನ ೨-ಘಂಟೆಯಿಂದ ಪರಿಸರ ಕವಿಗೋಷ್ಠಿ ಹಾನಗಲ್ನ ಹಿರಿಯ ಕವಿ ರವಿರಾಜ ತಿರುಮಲೆ ಅವರ ಅಧ್ಯಕ್ಷತೆಯಲ್ಲಿ ಜರುಗುವುದು. ಚುಸಾಪ ಹಾವೇರಿ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷ ಲಮಾಣಿ ಆಶಯ ನುಡಿಗಳನ್ನಾಡುವರು, ಮುಖ್ಯ ಅತಿಥಿಯಾಗಿ ಸಾಹಿತಿ, ಹಿರಿಯ ಪತ್ರಕರ್ತ ಮಾಲತೇಶ ಅಂಗೂರ ಆಗಮಿಸುವರು.
ಶಶಿಕುಮಾರ್ ಎಂ.ಎ, ಶೇಖರಗೌಡ ಪಾಟೀಲ, ಸತೀಶ ವಾಲಿ, ಶಾಮಸುಂದರ ಪಟವಾರಿ, ಡಾ.ದುರ್ಗೇಶ ಎಂ, ಪ್ರೀತಿ ಭರತ್, ಉಮೇಶ ಬಾರ್ಕಿ,ಎಸ್.ಎಸ್.ಪಾಟೀಲ, ಭಾಗ್ಯಲಕ್ಷೀ, ಮಲ್ಲಿಕಾರ್ಜುನ ಪಾಟೀಲ, ದೀಪಶ್ರೀ, ಕು.ಅಕ್ಷತಾ ಕುಲಕರ್ಣಿ, ಹನುಮಂತರಾವ್ ಘಂಟೇಕರ್, ಕ್ರಾಂತಿ ಸಿಂಹ, ಸಂಗಮೇಶ ಜವಾದಿ, ವೆಂಕಟೇಶ ಬಡಿಗೇರ, ಗಣಪತಿ ಆಡಿಗುಂಡಿ, ಶಾಂತಮೂರ್ತಿ ಮಂತಾದ ಕವಿಗಳು ಕಾವ್ಯವಾಚನ ಮಾಡುವರು.
ಸಂಜೆ ೪ ಸಮಾರೋಪ..ಪ್ರಶಸ್ತಿ ಪ್ರದಾನ ಸಮಾರಂಭವು ಡಾ.ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳು, ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ ಇವರ ಸಾನಿಧ್ಯದಲ್ಲಿ ಜರುಗುವುದು, ಪಂ.ಎನ್.ವಾದಿರಾಜ ಆಚಾರ್ಯ,ನಿಕಟಪೂರ್ವ ಪ್ರಾಚಾರ್ಯರು. ಸಂಸ್ಕೃತ ವಿದ್ಯಾಲಯ, ಮಂತ್ರಾಲಯ ಉಪಸ್ಥಿತರಿರುವರು, ಗದಗನ ವೀರನಗೌಡ ಮರೀಗೌಡ್ರ ಅಭಿನಂದನಾ ನುಡಿಗಳನ್ನಾಡುವರು ಎಂದು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ. ಗಂಗಯ್ಯ ಕುಲಕರ್ಣಿ ತಿಳಿಸಿದ್ದಾರೆ.