ಹಾವೇರಿ : ಕೊಲೆ ಆರೋಪಿತಳಿಗೆ ಜೀವಾವಧಿ ಶಿಕ್ಷೆ-ದಂಡ
ಹಾವೇರಿ : ತನ್ನ ಜೊತೆಗೆ ಅನೈತಿಕ ಸಂಬಂಧ ಹೊಂದಿದ ವ್ಯಕ್ತಿ ಮದುವೆಯಾಗುವ ವಿಷಯ ತಿಳಿದು ಆ ವ್ಯಕ್ತಿಯನ್ನು ಕೊಲೆಮಾಡಿದ ಆರೋಪಿತಳಾದ ಶ್ರೀಮತಿ ಎಲ್ಲವ್ವ ಹೊಸಳ್ಳಿ ಎಂಬ ಮಹಿಳೆಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಹಾವೇರಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಗುರುವಾರ ತೀರ್ಪು ನೀಡಿದ್ದಾರೆ.
ಆರೋಪಿತಳಾದ ಎಲ್ಲವ್ವ ಹೊಸಳ್ಳಿ ಇವಳು ಮೃತ ನಾಗರಾಜ ಮಣ್ಣಿಕೇರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಮೃತ ನಾಗರಾಜನ ಮದುವೆಗೆ ಮನೆಯವರು ಹುಡುಗಿ ನೋಡುತ್ತಿರುವ ವಿಷಯ ತಿಳಿದ ಎಲ್ಲವ್ವ ಹೊಸಳ್ಳಿ ಇವಳು ದಿನಾಂಕ ೨-೮-೨೦೨೧ ರಂದು ಮೃತ ನಾಗರಾಜನನ್ನು ಕರೆದುಕೊಂಡು ಹೋಗಿ ಹಲವು ಕಡೆ ತಿರುಗಾಡಿ ದಿನಾಂಕ ೭-೦೮-೨೦೨೧ ರಂದು ಹುಬ್ಬಳ್ಳಿಯಿಂದ ಲಾರಿಯಲ್ಲಿ ಬರುವಾಗ ಲಾರಿ ಚಾಲಕನು ಊಟಕ್ಕೆ ಹೋದ ಸಮಯದಲ್ಲಿ ತನ್ನ ವೆಲ್ನಿಂದ ಕುತ್ತಿಗೆಗೆ ಬಿಗಿದು ಸಾಯಿಸಿ, ಮೊಟೇಬೆನ್ನೂರ ಬಳಿ ಮೃತ ನಾಗರಾಜ ಶವವನ್ನು ಹೈವೆ ಮೇಲೆ ಬಿಟ್ಟು ಪರಾರಿಯಾದ ಕುರಿತು ದೂರು ದಾಖಲಾಗಿತ್ತು.
ಈ ಪ್ರಕರಣದ ಕುರಿತು ಹಾವೇರಿ ಡಿಎಸ್ಪಿ ಶಂಕರ ವಾರಿಹಾಳ ಅವರು ತನಿಖೆಕೈಗೊಂಡು, ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿತಳಾದ ಶ್ರೀಮತಿ ಎಲ್ಲವ್ವ ಹೊಸಳ್ಳಿ ಮೇಲೆ ವಿವಿಧ ಕಲಂಗಳಡಿ ಆಪಾದನೆಗಳು ಜುರುವಾತಾದ ಹಿನ್ನಲೆಯಲ್ಲಿ ಆರೋಪಿತಳಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.೩೫ ಸಾವಿರ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಅಭಿಯೋಜನೆ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸರೋಜಾ ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.