
ಹಾವೇರಿ ಗೋಲಿಬಾರ್ಗೆ ೧೯ ವರುಷ-ರೈತರಿಗಿಲ್ಲ ಹರುಷ!
ಮಾಲತೇಶ ಅಂಗೂರ
ಹಾವೇರಿ: ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕಾಗಿ ಜೂನ್ ೧೦-೨೦೦೮ ಹಾವೇರಿಯಲ್ಲಿ ರೈತರು ನಡೆಸಿದ ಪ್ರತಿಭಟನೆ ಹಿಂಸರೂಪಕ್ಕೆ ತಿರುಗೆ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಇಬ್ಬರು ರೈತರು ಮೃತಪಟ್ಟಿದ್ದರು. ಹತ್ತಾರು ಜಬರು ಗಾಯಗೊಂಡಿದ್ದರು. ಗೋಲಿಬಾರ್ ನಡೆದು ಜೂನ್-೧೦-೨೦೨೬ಕ್ಕೆ ಬರೋಬ್ಬರಿ ೧೮ ವರ್ಷಗಳು ಗತಿಸಿ, ೧೯ನೇ ವರ್ಷಕ್ಕೆ ಕಾಲಿರಿಸಿದೆ. ಈ ೧೮ ವರ್ಷಗಳಲ್ಲಿ ಜಿಲ್ಲೆಯ ನದಿಗಳಲ್ಲಿ ಸಾಕುಷ್ಟು ನೀರು ಹರಿದಿದೆ. ಆದರೆ ರೈತರ ಸ್ಥಿತಿ ಮಾತ್ರ ಬದಲಾಗಿಲ್ಲ.
ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮ ಆಆರಂಭವಾಗುವ ವೇಳೆ ರೈಥರು ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಪರದಾಡುವುದು ತಪ್ಪಿಲ್ಲ. ಬೆಂಕಿಯಂತೆ ಕಾದ ಭೂಮಿ ಒಡಲು ಹೊಕ್ಕು ತಂಪಾಗಿಸಲು ಮುಂಗಾರು ಮಳೆ ಬೀಳುವ ತಿಂಗಳು ಜೂನ್. ಈ ಮಳೆಗೆ ಭೂಮಿ ಹದಗೊಂಡಾಗ ರೈತರಲ್ಲಿ ಸಂಭ್ರಮ, ಖಷಿ ಇಮ್ಮಡಿಗೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವರು. ಆಕಾಶದಲ್ಲಿಯ ಮುಂಗಾರು ಮೋಡಗಳೊಂದಿಗೆ ಕಾರ್ಮೋಡವಾಗಿ ಎರಗಿದ ಹಾವೇರಿ ಗೋಲಿಬಾರ್ ಎಂದೂ ಮರೆಯದ ಕಹಿ ನೆನಪಾಗಿ ಉಳಿದಿದೆ.
ಜೂನ್ ೧೦-೨೦೦೮ ರಂದು ಬಿತ್ತನೆ ಬೀಜ, ಗೊಬ್ಬರ ಕೊಳ್ಳಲು ಹಾವೇರಿಗೆ ಬಂದ ರೈತರ ಎದೆಗೆ ಗುಂಎಗಳು ಬಿದ್ದಿದ್ದವು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ವಾರದಲ್ಲೇ ಅಮಾಯಕ ರೈತರ ಜೀವವನ್ನು ಬಲಿ ತೆಗೆದುಕೊಂಡಿತ್ತು. ಗೋಲಿಬಾರ್ನಲ್ಲಿ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೊನ್ನತ್ತಿ ಎಂಬ ರೈತರ ಎದೆಗೆ ಗುಂಡುಗಳು ಹೊಕ್ಕು ಹುತಾತ್ಮರಾಗುವರು.
ಆ ಘಟನೆ ನಡೆದು ಇಂದಿಗೆ ೧೮ ವರ್ಷಗಳು ತುಂಬಿದ್ದು, ೧೯ನೇ ವರ್ಷಕ್ಕೆ ದಾಪುಗಾಲಿಟ್ಟಿದೆ. ಆ ಕರಾಳ ದಿನವನ್ನು ನೆನೆದು ಹಾವೇರಿಯ ವಿವಿಧ ರೈತ ಸಂಘಟನೆಗಳ ಸಮ್ಮುಖದಲ್ಲಿ ಪ್ರತಿವರ್ಷ ಜೂನ್ ೧೦ರಂದು ನಗರದ ಸಿದ್ದಪ್ಪ ಸರ್ಕಲ್ ವೃತ್ತದ ಬಳಿ ಇರುವ ಹುತಾತ್ಮ ರೈತರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ರೈತ ಹುತಾತ್ಮ ದಿನಾಚರಣೆ ಆಚರಿಸಿ, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿವರ್ಷ ಪ್ರತಿಭಟಿಸುತ್ತ ಬಂದಿರುವರು.
ಗೋಲಿಬಾರ್ ದಾಳಿಯಲ್ಲಿ ಎಂಟು ಮಂದಿ ಗಾಯಗೊಂಡು ಶಾಶ್ವತ ಅಂಗವೈಕಲ್ಯದಿಂದ ಬಳಲುವಂತಾಯಿತು. ಕೆಲವರು ನಿಧಾನವಾಗಿ ಚೇತರಿಸಿಕೊಂಡರೂ, ಜೀವನೋಪಾಯಗಳಿಸಲು ಅಸಮರ್ಥರಾಗಿದ್ದು, ಕುಟುಂಬದವರ ಮೇಲೆಯೇ ಅವಲಂಬಿತರಾದರು. ಈ ಗುಂಡಿನ ದಾಳಿಗೆ ಬಲಿಯಾಗಿ, ಇತಿಹಾಸ ಪುಟದಲ್ಲಿ ಕರಾಳ ಅಧ್ಯಾಯವೊಂದು ಕಪ್ಪು ಚುಕ್ಕೆಯಾಗಿ ಅಚ್ಚಳಿಯದೆ ಶಾಶ್ವತವಾಗಿ ಉಳಿದಿದೆ. ಅದುವರೆಗೂ ರೈತ ನಾಯಕನೆಂದು ಬೀಗುತ್ತಿದ್ದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಘಟನೆಯು ಇಂದಿಗೂ ಕಳಂಕದಂತೆ ಮೆತ್ತಿಕೊಂಡಿದೆ.
ಗೋಲಿಬಾರ್ ದಾಳಿಯಲ್ಲಿ ಹುತಾತ್ಮರಾದ ರೈತ ಸಿದ್ದಲಿಂಗಪ್ಪ ಚೂರಿ ಅವರ ಪತ್ನಿ ಕುಸುಮಾ ಅವರಿಗೆ ಸರ್ಕಾರದಿಂದ ನೌಕರಿ ಸಿಕ್ಕಿದೆ. ಇನ್ನೋರ್ವ ರೈತ ಹುತಾತ್ಮ ಪುಟ್ಟಪ್ಪ ಹೊನ್ನತ್ತಿ ಅವರ ಪತ್ನಿ ಕರಿಬಸಮ್ಮ ಅವರಿಗೆ ಸರ್ಕಾರದಿಂದ ಶಾಲೆಯೊಂದರಲ್ಲಿ ಡಿ ದರ್ಜೆಯ ನೌಕರಿ ಸಿಕ್ಕಿದೆ. ಮೂವರು ಮಕ್ಕಳಿಗೆ ಸರ್ಕಾರದ ವತಿಯಿಂದ ಉಚಿತ ಶಿಕ್ಷಣ ದೊರೆತಿದೆ. ಆದರೆ ರೈತರ ಗೋಳಾಟ ಮುಂದುವರೆದಿದೆ. ರೈತರು ನಿರಾಶೆಯಲ್ಲಿ ಮುಳುಗುವವರಲ್ಲ.
ರೈತರು ಮುಂಗಾರು ಮಳೆಯಂತೆ ಪ್ರತಿ ವರ್ಷವೂ ಹೊಸ ಭರವಸೆಯೊಂದಿಗೆ ಬೀಜ ಬಿತ್ತುತ್ತಾರೆ, ಬೆಳೆ ಬೆಳೆಯುತ್ತಾರೆ. ರೈತರ ಉನ್ನತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಹಾವೇರಿ ಗೋಲಿಬಾರ್ ಘಟನೆ ಕೇವಲ ನೆನಪಿನಲ್ಲಿಯೇ ಮುಗಿಯದೆ, ರೈತರ ಕಷ್ಟಗಳಿಗೆ ಸೂಕ್ತ ಪರಿಹಾರ, ನ್ಯಾಯ, ಗೌರವ ದೊರಕಿಸುವಂತೆ ಸಮಾಜ ಮತ್ತು ಸರ್ಕಾರಗಳನ್ನು ಜಾಗೃತಿಗೊಳಿಸುವ ಕಾರ್ಯವಾಗಬೇಕು. ರೈತರ ಸಮಸ್ಯೆಯನ್ನು ಯಾವುದೇ ಸರ್ಕಾರಗಳೂ ಪರಿಹರಿಸುತ್ತಿಲ್ಲ. ಅನ್ನದಾತನ ಬಾಳು ಸದಾ ಗೋಳು ಅನ್ನುವಂತಾಗಿದೆ.

