ಹಾವೇರಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿ : ದೇಶದಲ್ಲೇ ಮೊದಲ ರಾಜ್ಯ ಕರ್ನಾಟಕ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್
ಹಾವೇರಿ : ಮನೆ ನಡೆಸುವ ಮಹಿಳೆಯರಿಗೆ ಶಕ್ತಿ ತುಂಬಲು ದೇಶದಲ್ಲಿ ಯಾವುದೇ ರಾಜ್ಯಗಳು ಮಹಿಳೆಯರ ಪರ ಚಿಂತನೆಮಾಡದ ಯೋಜನೆಗನ್ನು ರೂಪಿಸಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ನಮ್ಮ ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ ಎಂದು ರಾಜ್ಯ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್ ಎಂದು ಹೇಳಿದರು.
ಕರ್ನಾಟಕ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಗ್ಯಾರಂಟಿ ಯೋಜನೆಗೆ ಭಾನುವಾರ ಹಾವೇರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಮಹಿಳೆಯರಿಗೆ ಶಕ್ತಿ ತುಂಬಲು ದೇಶದಲ್ಲೇ ಮೊದಲಬಾರಿಗೆ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಗೊಂಡಿದೆ. ಆಗಸ್ಟ್ ೦೫ ರೊಳಗೆ ಸರ್ಕಾರ ನೀಡಿರುವ ಭರವಸೆಯಂತೆ ಉಳಿದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು.
ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ದೂರ ದೃಷ್ಟಿಯ ಯೋಜನೆಯಾಗಿದೆ. ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆ ಜೊತೆಗೆ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಯನ್ನು ಅವಲಂಬಿತ ಕಾರ್ಮಿಕರಿಗೆ, ಹಮಾಲರಿಗೆ, ಸಿಬ್ಬಂದಿಗಳಿಗೆ, ಚಾಲಕರಿಗೆ, ನಿರ್ವಾಹಕರಿಗೆ ಶಕ್ತಿ ತುಂಬುವ ಆ ಸಂಸ್ಥೆಯನ್ನು ಬಲಪಡಿಸುವ ದೃಷ್ಟಿಕೋನ ಹೊಂದಿದೆ ಎಂದರು.
ಯಾವುದೇ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಪರ-ವಿರೋಧಗಳ ಚರ್ಚೆ ನಡೆಯುವುದು ಸ್ವಾಭಾವಿಕ. ವಿರೋಧ ಪಕ್ಷಗಳು ಟೀಕಿಸುವುದು ಸ್ವಾಭಾವಿಕ. ನಮ್ಮ ಧೀಮಂತ ನಾಯಕ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪರ-ವಿರೋಧಗಳನ್ನು ಸಂಯದಿಂದ ಸ್ವೀಕರಿಸಿದ್ದಾರೆ. ಎಷ್ಟೇ ಆರ್ಥಿಕ ಹೊರೆ ಆದರೂ ಚಿಂತಿಸದೇ ಆ ಆರ್ಥಿಕ ಹೊರೆ ನಿಭಾಯಿಸುವ ಶಕ್ತಿ ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಕಟಿಬದ್ಧರಾಗಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ. ಇಂದು ಐದು ಗ್ಯಾರಂಟಿ ಯೋಜನೆಗಳ ಮೊದಲ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೇವೆ ಎಂದರು.
ಶಿರಸಾಷ್ಟಾಂಗ ನಮಸ್ಕಾರ: ರಾಜ್ಯದೊಳಗೆ ಯಾವುದೇ ಜಿಲ್ಲೆಗೆ ಯಾವುದೇ ಸ್ಥಳಕ್ಕೆ ಪ್ರಯಾಣ ಮಾಡಬಹುದು. ಉಚಿತ ಬಸ್ ಪ್ರಯಾಣ ಯೋಜನೆ ದುಡ್ಡಿದವರಿಗಲ್ಲ. ದುಡ್ಡುಕೊಟ್ಟು ಪ್ರಯಾಣಮಾಡಲು ಇಚ್ಛಿಸುವ ಮಹಿಳೆಯರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡುವೆ. ಉಚಿತ ಪ್ರಯಾಣವೆಂದು ದುರುಪಯೋಗಬೇಡ, ಅವಶ್ಯಕ್ಕೆ ಅನುಗುಣವಾಗಿ ಪ್ರಯಾಣಮಾಡಿ. ಸುಮ್ಮಸುಮ್ಮನೆ ಪ್ರಯಾಣ ಮಾಡಿ ಸಮಾಜಕ್ಕೆ ಹೊರೆ ಮಾಡುವುದು ಬೇಡ ಎಂದು ಹೇಳಿದರು.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಹೆಣ್ಣು ಮಕ್ಕಳಿಗೆ ನಮ್ಮ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಉಚಿತ ಬಸ್ ಪ್ರಯಾಣವನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಬಸ್ ಚಾಲಕರು, ನಿರ್ವಾಹಕರು ಈ ಯೋಜನೆಯ ಯಶಸ್ವಿಗೆ ತಾಳ್ಮೆಯಿಂದ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಉಚಿತ ಬಸ್ ಪ್ರಯಾಣ ಕ್ರಾಂತಿಕಾರ ಯೋಜನೆಯಾಗಿದೆ. ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ವಿಶೇಷ ಕಾಳಜಿ ವಹಿಸಿ ಹಲವು ಯೋಜನೆಗಳನ್ನು ರೂಪಿಸಿದೆ. ಸಮಾಜದ ಅಭಿವೃದ್ಧಿ ಮಹಿಳೆಯರಿಂದ ಸಾಧ್ಯ ಎಂದು ಅರಿತಿದೆ. ನಾವು ಘೋಷಿಸಿದ ಎಲ್ಲ ಗ್ಯಾರಂಟಿಗಳನ್ನು ಖಂಡಿತವಾಗಿಯೂ ಅನುಷ್ಠಾನಗೊಳಿಸುತ್ತೇವೆ. ನುಡಿದಂತೆ ನಡೆಯುತ್ತೇವೆ. ಅನಾವಶ್ಯಕ ಟೀಕೆ ಮಾಡದೆ ತಾಳ್ಮೆಯಿಂದ ಇರಬೇಕು ಎಂದು ಹೇಳಿದರು.
ಶಾಸಕ ರುದ್ರಪ್ಪ ಲಮಾಣಿ ಅವರು ಮಾತನಾಡಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇಂದು ಆರಂಭಿಸಿದ್ದೇವೆ. ನಾವು ನೀಡಿದ ಐದು ಗ್ಯಾರಂಟಿಗಳನ್ನು ಇಡೇರಿಸುತ್ತೇವೆ. ಇದರಿಂದ ಬಹಳ ಕುಟುಂಬಗಳಿಗೆ ನೆರವಾಗಲಿದೆ. ನೀಡಿದ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಕಾಲಮಿತಿಬೇಕು. ಗ್ಯಾರಂಟಿ ಯೋಜನೆಗಳ ಬಗ್ಗೆ ಗೇಲಿಮಾಡುವವರು, ಬಸ್ಲ್ಲಿ ಟಿಕೇಟ್ ತಗೋಬೇಡಿ, ಕರೆಂಟ್ ಬಿಲ್ ಕಟ್ಟಡಬೇಡಿ ಎನ್ನುವವರಿಗೆ ಕಾಮನ್ಸೆನ್ಸ್ ಇಲ್ಲ ಎಂದು ಟೀಕಿಸಿದರು.
ಟಿಕೇಟ್ ನೀಡಿದ ಸಚಿವರು: ಶಕ್ತಿ ಯೋಜನೆಗೆ ಹಸಿರು ನಿಶಾನೆ ತೋರಿದ ಜಿಲ್ಲಾ ಉಸ್ತುವಾರಿ ಶಿವಾನಂದ ಪಾಟೀಲ್ ಅವರು ಹುಬ್ಬಳ್ಳಿಗೆ ಹೋಗುವ ಬಸ್ನ್ನು ಏರಿ ಮಹಿಳೆಯರಿಗೆ ಉಚಿತ ಪ್ರಯಾಣದ ಟಿಕೇಟ್ ವಿತರಿಸಿ ಪ್ರಯಾಣಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ್, ವಾಕರಸಾ ಸಂಸ್ಥೆ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ವಿ.ಎಂ., ಮಾಜಿ ಸಂಸದ ಮಂಜುನಾಥ ಕುನ್ನೂರ, ಸೋಮಣ್ಣ ಬೇವಿನಮರದ ಹಾಗೂ ವಿವಿಧ ಸಾರಿಗೆ ಅಧಿಕಾರಿಗಳು ಉಪಸ್ಥಿತರಿದ್ದರು.