ಹಾವೇರಿ ವಿಶ್ವವಿದ್ಯಾಲಯ ವತಿಯಿಂದ ಜುಲೈ ೬ ರಂದು ಸಾಂಸ್ಕೃತಿಕ ನಾಯಕ ಬಸವಣ್ಣ
ರಾಷ್ಟ್ರೀಯ ವಿಚಾರ ಸಂಕಿರಣ -ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ
ಹಾವೇರಿ : ಹಾವೇರಿ ವಿಶ್ವವಿದ್ಯಾಲಯ ವತಿಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಇದೇ ಜುಲೈ ೬ ರಂದು ಹಾವೇರಿ ನಗರದ ಜಿ.ಎಚ್. ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸುರೇಶ ಜಂಗಮಶೆಟ್ಟಿ ತಿಳಿಸಿದರು.
ನಗರದ ಜಿಲ್ಲಾ ವಾರ್ತಾ ಭವನದಲ್ಲಿ ಗುರುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬಸವಣ್ಣನವರು ಒಬ್ಬ ಕ್ರಾಂತಿಯೋಗಿ ಹಾಗೂ ಮಹಾಮಾನವತಾವಾದಿ, ಮಾನವ ಪ್ರೇಮ, ನೀತಿನಿಷ್ಠೆ, ಸಾಮಾಜಿಕ ಸಮಾನತೆ ಸಾಧಿಸಲು ಪ್ರಯತ್ನಿಸಿದ ಮಹಾನ್ ವಿಚಾರವಾದಿ. ಬಸವಣ್ಣನವರ ವಚನ ಸಾಹಿತ್ಯದಲ್ಲಿನ ಜೀವನ ಮೌಲ್ಯ, ಸಾಮಾಜಿಕ ಮೌಲ್ಯಗಳು, ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವಿಚಾರಧಾರೆಗಳನ್ನು ಅವಲೋಕಿಸಲು ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ ಅವರು ಬಸವಣ್ಣನವರು ಮತ್ತು ಶರಣ ಚಳುವಳಿ ಕುರಿತು, ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಅಶೋಕ ಆಲೂರ ಅವರು ಬಸವಾದಿ ಶರಣರ ವವಚನಗಳಲ್ಲಿ ವೈಜ್ಞಾನಿಕ ಚಿಂತನೆಗಳು ಕುರಿತು, ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶ್ರೀನಿವಾಸ ಬಳ್ಳಿ ಅವರು ವಿಶ್ವಶಾಂತಿಗೆ ಬಸವಣ್ಣನವರ ಸಂದೇಶಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ ಕುರಿತು ಹಾಗೂ ಧಾರವಾಡ ಸಾಹಿತಿ ರಂಜಾನ ದರ್ಗಾ ಅವರು ಬಸವ ಧರ್ಮ ವಿಶ್ವ ಸಂದೇಶ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ ಸಂಶೋಧಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪ್ರಬಂಧ ಮಂಡನೆ ಮಾಡಲಿದ್ದಾರೆ. ೩೦ ಜನರಿಗೆ ಅವಕಾಶ ಕಲ್ಪಿಸಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ೩೦೦ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಹಾವೇರಿ ವಿಶ್ವವಿದ್ಯಾಲಯವು ನಗರದಿಂದ ೧೦ ಕಿ.ಮೀ.ದೂರ ಇರುವುದರಿಂದ ಕಾರ್ಯಕ್ರಮಕ್ಕೆ ಬರುವರಿಗೆ ಸಾರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ವಿವಿ ವ್ಯಾಪ್ತಿಗೆ ಬರುವ ಹಾವೇರಿ ನಗರದ ಜಿ.ಎಚ್.ಕಾಲೇಜಿನಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದರು.
ನೂತನವಾಗಿ ಸ್ಥಾಪಿತವಾದ ಹಾವೇರಿ ವಿಶ್ವವಿದ್ಯಾಲಯವು ಒಂದು ವರ್ಷ ಪೂರೈಸಿದ್ದು, ಎರಡನೇ ವರ್ಷಕ್ಕೆ ಪದಾರ್ಪಣೆಮಾಡಿದೆ. ಈ ಅವಧಿಯಲ್ಲಿ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಪ್ರಸರಣ ಕಾರ್ಯದಲ್ಲಿ ಹಲವು ಪ್ರಮುಖ ಹೆಜ್ಜೆಗಳನ್ನು ಇರಿಸಿದೆ. ಆರು ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ೩೫೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂಟರ್ನೆಟ್, ವಿದ್ಯುತ್ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯವಿರುತ್ತದೆ. ಪತ್ರಿಕೋದ್ಯಮ ವಿಭಾಗದಲ್ಲಿ ೪೨ ಕಂಪ್ಯೂಟರ್ಸ್, ಕ್ಯಾಮರಾ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಐದು ಹೊಸ ಸ್ನಾತಕೋತ್ತರ ಪದವಿ: ವಿವಿಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಐದು ಹೊಸ ಸ್ನಾತಕೋತ್ತರ ಪದವಿಗಳನ್ನು ಆರಂಭಿಸಲಾಗಿದೆ. ಎಂ.ಬಿ.ಎ, ಎಂ.ಸಿ.ಎ, ಎಂ.ಎ ಪಬ್ಲಿಕ್ ಅಡ್ಮಿಸ್ಟ್ರೇಷನ್, ಎಂ.ಎಸ್ಸಿ ಎನರ್ಜಿ ಟೆಕ್ನಾಲಜಿ ಹಾಗೂ ಎಂ.ಎಸ್ಸಿ ಕಂಪ್ಯೂಟರ್ ಸಾಯನ್ಸ್ ಪದವಿಗಳನ್ನು ಪ್ರಾರಂಭಿಸಲಾಗಿದೆ. ವಿವಿಯಲ್ಲಿ ಸರ್ಕಾರದ ಆದೇಶದ ಮೇರೆಗೆ ಎರಡು ವರ್ಷ ಧಾರವಾಡ ವಿಶ್ವವಿದ್ಯಾಲಯದ ಮಾದರಿಯಲ್ಲೇ ಶುಲ್ಕ ಪಡೆಯಲಾಗುತ್ತಿದೆ. ಮುಂದಿನ ವರ್ಷ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಶುಲ್ಕದ ಬಗ್ಗೆ ತೀರ್ಮಾನಿಸಲಾಗುವುದು. ವಿ.ವಿ.ಗೆ ಬರಲು ವಿದ್ಯಾರ್ಥಿಗಳಿಗೆ ಮೊದಲಿಗಿಂದ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ರಸ್ತೆ ದುರಸ್ತಿಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಹೆಚ್ಚಿನ ಬಸ್ ಸೌಲಭ್ಯಕ್ಕೆ ಕೆ.ಎಸ್.ಆರ್.ಟಿ.ಸಿ. ಡಿ.ಸಿ. ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಹಾಗೂ ಸಂಚಾಲಕರಾದ ಡಾ.ವಿಜಯಲಕ್ಷ್ಮೀ ಎಂ.ತಿರ್ಲಾಪೂರ ಅವರು ಮಾತನಾಡಿ, ಬಸವಣ್ಣ ಸಮಾಜಿಕ ಸಮಾನತೆಗೆ ಶ್ರಮಿಸಿದವರು, ವರ್ಣ ಬೇಧ, ಜಾತಿಬೇಧ ಹೋಗಲಾಡಿಸಲು ಹೋರಾಡಿದ ಮಹಾನ್ ವ್ಯಕ್ತಿ. ಅವರ ಮಾನವೀಯ ಮೌಲ್ಯಗಳನ್ನು ತಿಳಿಸಲು ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳುವ ಮೂಲಕ ಉಪನ್ಯಾಸಕರಲ್ಲಿ, ಸಂಶೋಧಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಉಪಕ್ರಮಗಳನ್ನು ವೃದ್ಧಿಸಲು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಾವೇರಿ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ವಿಭಾಗದಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ೪೨ ಕಾಲೇಜುಗಳಲ್ಲಿ ಸುವಸ್ಥಿತವಾಗಿ ಪರೀಕ್ಷೆ ನಡೆಸಲಾಗಿದೆ. ಆನ್ಲೈನ್ ಮೌಲ್ಯಮಾಪನ ಆರಂಭಿಸಲಾಗಿದೆ. ಹೊಸದಾಗಿ ಸ್ಥಾಪಿತವಾದ ಏಳು ವಿವಿಗಳ ಪೈಕಿ ಪ್ರಥಮ ಫಲಿತಾಂಶ ನೀಡಿದ ಹೆಗ್ಗಳಿಕೆ ಹಾವೇರಿ ವಿವಿಗೆ ಸಲ್ಲುತ್ತದೆ ಎಂದರು.
ಮಾಧ್ಯಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಚಿದಾನಂದ ಕಮ್ಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಪ್ರ)ಸಹಾಯಕ ನಿರ್ದೇಶಕರಾದ ಶ್ರೀಮತಿ ಭಾರತಿ ಎಚ್. ಉಪಸ್ಥಿತರಿದ್ದರು.
ಜುಲೈ ೬ ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ
ಹಾವೇರಿ : ಹಾವೇರಿ ವಿಶ್ವವಿದ್ಯಾಲಯ ವತಿಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಇದೇ ಜುಲೈ ೬ ರಂದು ಬೆಳಿಗ್ಗೆ ೧೦ ಗಂಟೆಗೆ ಹಾವೇರಿ ನಗರದ ಜಿ.ಎಚ್. ಕಾಲೇಜಿನಲ್ಲಿ ಜರುಗಲಿದೆ.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ ಅವರು ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಅಶೋಕ ಆಲೂರ, ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶ್ರೀನಿವಾಸ ಬಳ್ಳಿ, ಧಾರವಾಡ ಸಾಹಿತಿ ರಂಜಾನ ದರ್ಗಾ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆ ಮ್ಯಾಕ್ ನಿರ್ದೇಶಕ ವಿಜಯಕುಮಾರ ಕಮ್ಮಾರ ಅವರು ಭಾಗವಹಿಸಲಿದ್ದಾರೆ. ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸುರೇಶ ಜಂಗಮಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ ೨-೩೦ಕ್ಕೆ ಶಿಕ್ಷಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ಜರುಗಲಿದ್ದು, ಸಾಹಿತಿ ಸತೀಶ ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರೋಪ: ಮಧ್ಯಾಹ್ನ ೪ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಹಾಗೂ ಸಂಚಾಲಕರಾದ ಡಾ.ವಿಜಯಲಕ್ಷ್ಮೀ ಎಂ.ತಿರ್ಲಾಪೂರ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸುರೇಶ ಜಂಗಮಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಸಚಿವ ಪ್ರೊ.ಎಸ್.ಟಿ.ಬಾಗಲಕೋಟ, ಜಿ.ಎಚ್.ಕಾಲೇಜ ಪ್ರಾಂಶುಪಾಲರಾದ ಡಾ.ಸಂಧ್ಯಾ ಕುಲಕರ್ಣಿ ಅವರು ಉಪಸ್ಥಿತರಿರುವರು.