ಹಾವೇರಿ: ಸ್ವಾತಿ ಕೊಲೆಮಾಡಿ ನದಿಗೆ ಎಸೆದಿದ್ದ ಮೂವರು ಹಂತಕರ ಬಂಧನ
ಹಾವೇರಿ: ತುಂಗಭದ್ರಾನದಿಯಲ್ಲಿ ಪತ್ತೆಯಾಗಿದ್ದ ಯುವತಿಯ ಸಾವಿನ ರಹಸ್ಯವನ್ನು ಪೊಲೀಸರು ಬೇಧಿಸಿದ್ದು, ಯುವತಿಯನ್ನು ಕೊಲೆ ಮಾಡಿ ನದಿಗೆ ಎಸೆದಿದ್ದು ಮೂವರು ಹಂತಕರೆಂದು ಪತ್ತೆ ಹಚ್ಚಿದ್ದು, ಈ ಮೂವರನ್ನು ಗುರುವಾರ ಹಾಗೂ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರುಗ್ರಾಮದ ಸ್ವಾತಿ ರಮೇಶ ಬ್ಯಾಡಗಿ(೨೨)ಎನ್ನುವ ಯುವತಿ ಕೊಲೆಯಾಗಿದ್ದು, ಈಕೆಯ ಶವ ಮಾ.೬ರಂದು ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿತ್ತು. ಅಪರಿಚಿತ ಶವ ಎಂದುಕೊಂಡು ಪೊಲೀಸರೇ ಮಾ.೬ರಂದು ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎನ್ನುವುದು ಬಯಲು: ಸಾಮಾನ್ಯವಾಗಿ ಯಾವುದೇ ಅಪರಿಚಿತ ಶವ ಸಿಕ್ಕರೂ ಕನಿಷ್ಠ ಆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಿಸ್ಸಿಂಗ್ ಕಂಪ್ಲೇಂಟ್ಗಳನ್ನು ನೋಡಿ ಅವರಿಗೆ ತಿಳಿಸುವುದು ಪೊಲೀಸ್ ಇಲಾಖೆಯ ವಾಡಿಕೆ.ಆದರೆ, ಹಾವೇರಿಯ ಜಿಲ್ಲೆಯಲ್ಲಿ ೨೨ ವರ್ಷದ ಯುವತಿಯ ಕೊಲೆ ಆಗಿದ್ದು, ಅಪರಿಚಿತ ಶವ ಎಂದುಕೊಂಡು ಪೊಲೀಸರೇ ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಹಾವೇರಿಜಿಲ್ಲಾ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಯುವತಿಯ ಕೊಲೆಯಾಗಿರುವುದು ದೃಢಪಟ್ಟಿದೆ. ಈ ವರದಿಯ ಬೆನ್ನಲ್ಲಿಯೇ ಯಾವುದೇ ಮಾಹಿತಿ ನೀಡದೇ ಅಂತ್ಯಸಂಸ್ಕಾರ ಮಾಡಿದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ.
ಹಿಂದೂ ಯುವತಿ ಹತ್ಯೆ ಜಸ್ಟೀಸ್ ಫಾರ್ ಸ್ವಾತಿ : ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ “ಹಿಂದೂ ಯುವತಿ ಹತ್ಯೆ ಜಸ್ಟೀಸ್ ಫಾರ್ ಸ್ವಾತಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಸ್ವಾತಿ ಹಂತಕರನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕೆಂದು ಆಗ್ರಹ ಪಡಿಸಲಾಗಿದೆ. ಸ್ವಾತಿ ಕೊಲೆ ಆರೋಪಿಗಳಿಗೆ ಕಠೀಣ ಶಿಕ್ಷೆ ಆಗಬೇಕು. ಸ್ವಾತಿ ಹತ್ಯೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದ ಸ್ವಾತಿ ನಿವಾಸ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.
ಈ ಬಗ್ಗೆ ಎಚ್ಚತ್ತುಕೊಂಡು ತನಿಖೆ ಕೈಗೊಂಡ ಜಿಲ್ಲೆಯ ಪೊಲೀಸರಿಗೆ ಯುವತಿಯನ್ನು ಕೊಲೆಮಾಡಿರುವು ಕೊಲೆಗಾರರ ಸುಳಿವು ಲಭಿಸಿದೆ. ಸ್ವಾತಿ ಮಾ. ೩ ರಂದು ನಾಪತ್ತೆಯಾಗಿದ್ದಳು. ಮೂರು ದಿನಗಳ ಕಾಲ ಮನೆಯವರೆಲ್ಲಾ ಹುಡುಕಿ ಮಾ.೭ ರಂದು ಹಿರೇಕೆರೂರು ಪೊಲೀಸ್ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದಾರೆ. ಈಕೆಯ ಶವ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪತ್ತೇಪುರ ಗ್ರಾಮದ ತುಂಗಭದ್ರಾ ನದಿಯಲ್ಲಿ ಮಾ. ೬ ರಂದು ಸಿಕ್ಕಿತ್ತು. ಮೊದಲು ಅಪರಿಚಿತ ಯುವತಿ ಶವ ಎಂದು ಘೋಷಿಸಿದ್ದ ಹಲಗೇರಿ ಪೊಲೀಸರು, ವಾರಸುದಾರರರು ಯಾರೂ ಇಲ್ಲದ ಹಿನ್ನಲೆಯಲ್ಲಿ, ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಸ್ವಾತಿ ಶವ ಹೂತು ಹಾಕಲಾಗಿತ್ತು.
ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ದೃಢವಾಗಿದೆ. ಇದರ ಬೆನ್ನಲ್ಲಿಯೇ ಹಲಗೇರಿ ಪೊಲೀಸರು ತನಿಖೆ ತೀವ್ರ ನಡೆಸಿದ್ದಾರೆ. ರಾಣೆಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ಸ್ವಾತಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಸ್ವಾತಿ ತಂದೆ ತೀರಿಕೊಂಡಿದ್ದು, ತಾಯಿ ಜೊತೆ ವಾಸವಿದ್ದಳು ಎನ್ನಲಾಗಿದೆ. ಸ್ವಾತಿ ಕೊಲೆಯಾಗಿದ್ದಾಗಿ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದು, ಶವದ ಚಿತ್ರವನ್ನು ಪೋಷಕರಿಗೆ ತೋರಿಸಿದ್ದಾರೆ. ಫೋಟೋದಲ್ಲಿಯೇ ಈಕೆ ತನ್ನ ಮಗಳು ಎಂದು ತಾಯಿ ತಿಳಿಸಿದ್ದಾರೆ.
ಯುವತಿಯೊಂದಿಗೆ ಸಲುಗೆಯಿಂದ ಇದ್ದ ಹಿರೆಕೇರೂರು ತಾಲೂಕಿನ ಹಳೆವೀರಾಪುರದ ೨೮ ವರ್ಷ ನಯಾಜ್ ಇಮಾಮ್ಸಾಬ್ ಬೆಣ್ಣಿಗೇರಿಯನ್ನು ಮಾ.೧೩ರಂದು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ನಯಾಜ್ ಮಾ.೦೩ ರಂದು ಸ್ವಾತಿಯನ್ನು ಮುಂಜಾನೆ ರಟ್ಟಿಹಳ್ಳಿಯಿಂದ ಬಾಡಿಗೆ ಕಾರಿನಲ್ಲಿ ರಾಣೆಬೆನ್ನೂರ ಹೊರವಲಯದಲ್ಲಿರುವ ಸುವರ್ಣಪಾರ್ಕಿಗೆ ಕರೆದುಕೊಂಡು ಹೋಗಿದ್ದಾನೆ.
ತನ್ನ ಸ್ನೇಹಿತರಾದ ಮಾಸೂರಿನ ದುರ್ಗಾಚಾರಿ ಬಡಿಗೇರ ಹಾಗೂ ವಿನಾಯಕ ನಾಗಪ್ಪ ಪೂಜಾರ ಇವರನ್ನು ಕರೆಯಿಸಿಕೊಂಡು ಸಂಜೆ ೦೪.೦೦ ಗಂಟೆ ಸುಮಾರಿಗೆ ರಟ್ಟಿಹಳ್ಳಿಯ ಕಬ್ಬಿಣಕಂತಿಮಠದ ಹತ್ತಿರ ಇರುವ ಹಾಳು ಬಿದ್ದ ತರಳುಬಾಳು ಶಾಲೆಯಲ್ಲಿ ಮೂವರು ಸ್ವಾತಿಗೆ ಹೊಡೆದು ಟವಲ್ನಿಂದ ಆಕೆಯ ಕುತ್ತಿಗೆಗೆ ಹಾಕಿ ಜಗ್ಗಿ ಕೊಲೆ ಮಾಡಿ ನಂತರ ಮೂವರು ಸೇರಿ ರಾತ್ರಿ ೧೧.೦೦ ಗಂಟೆಗೆ ವಿನಾಯಕನ ಬಲೆನೊ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಕೂಸಗಟ್ಟಿ- ನಂದಿಗುಡಿ ಗ್ರಾಮದ ಮಧ್ಯ ಇರುವ ತುಂಗಭದ್ರಾ ನದಿಗೆ ಸೇತುವೆಯ ಮೇಲಿಂದ ಎಸೆದಿರುವ ಸಂಗತಿ ಬಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಅರೋಪಿಗಲನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಮಾ.೧೪ರಂದು ತಿಳಿಸಿದ್ದಾರೆ.