ಚಿರತೆ ಸೆರೆಗೆ ಅಳವಡಿಸಿರುವ ಬೋನು.
ಚಿರತೆಯ ಸಾಂದರ್ಭಿಕ ಚಿತ್ರ.
*ಹೆಗ್ಗರೆಕೆರೆ ಪ್ರದೇಶ *ಕುರುಬಗೊಂಡ -ಬನ್ನಿಹಳ್ಳಿ
ಹಾವೇರಿ: ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಇತ್ತೀಚೆಗೆ ಹಾವೇರಿ ಸಮೀಪದ ಕುಳೇನೂರು ಗ್ರಾಮದ ಬಳಿ ಜೋಡಿ ಚಿರತೆ ಮರಿಗಳು ಪತ್ತೆಯಾದ ಬೆನ್ನಲ್ಲಿಯೇ ಹಾವೇರಿ ತಾಲೂಕಿನ ಕುರಬಗೊಂಡ- ಬನ್ನಿಹಳ್ಳಿ ಗ್ರಾಮ ಹಾಗೂ ಹಾವೇರಿ ಸಮೀಪದ ಹೆಗ್ಗೆರೆಕೆರೆ ಪ್ರದೇಶದಲ್ಲಿ ಚಿರತೆಗಳ ಓಡಾಟ ಕಂಡು ಬಂದಿದ್ದು, ಕೃಷಿಕರು ಹಾಗೂ ಜನತೆ ಆತಂಕಗೊಂಡಿದ್ದಾರೆ.
ಆಹಾರ ಹುಡುಕಿಕೊಂಡು, ಇನ್ಯಾವುದೋ ಕಾರಣಗಳಿಗೆ ಚಿರತೆಗಳು ಕಾಡಿನಿಂದ ನಾಡಿಗೆ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಹಾವೇರಿ ನಗರದ ಹೊರವಲಯದಲ್ಲಿ ಇರುವ ಕುರಚಲು ಕಾಡು ಹಾಗೂ ಈ ಬಾರಿ ಮಳೆ ಹೆಚ್ಚಾದ ಕಾರಣಕ್ಕೆ ಇದ್ದದರಲ್ಲಿ ಕಬ್ಬಿನ ಬೆಳೆ ಉತ್ತಮವಾಗಿದ್ದು, ಈ ಕಾರಣಕ್ಕೆ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ನಗರದ ವಸತಿ ಪ್ರದೇಶಗಳಲ್ಲಿ ಪದೇ ಪದೆ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿರತೆ ಓಡಾಡುತ್ತಿರುವ ಪ್ರದೇಶಗಳಲ್ಲಿ ಬೋನಗಳನ್ನಿಟ್ಟು ಚಿರತೆಗಳನ್ನು ಕೂಡಲೇ ಸೆರೆ ಹಿಡಿದು ಕಾಡಿಗೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚಿರತೆಗಳ ಸೆರೆಗೆ ಬೋನಗಳು
ಹಾವೇರಿ ತಾಲೂಕಿನ ಕುಳೇನೂರುಗ್ರಾಮದ ಬಳಿ ಚಿರತೆಮರಿಗಳು ಪತ್ತೆಯಾದ ಹಿನ್ನಲೆಯಲ್ಲಿ ಚಿರತೆಗಳ ಸೆರೆಗೆ ಎರಡು ಬೋನಗಳನ್ನು ಇಡಲಾಗಿದೆ. ಆದರೆ ಚಿರತೆಗಳು ಸೆರೆಯಾಗಿಲ್ಲ. ಇದೀಗ ಚಿರತೆಗಳು ಕಂಡು ಬಂದಿರುವ ಪ್ರದೇಶಗಳಲ್ಲಿಯೂ ಸಹ ಚಿರತೆಗಳ ಸೆರೆಗೆ ಬೋನಗಳನ್ನು ಇಡಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ಗಂಜೇಂದ್ರ ಅವರು ತಿಳಿಸಿದ್ದಾರೆ.