
—
ಹಾವೇರಿಯ ಜೆ.ಎಚ್.ಪಟೇಲ್ ವೃತ್ತದಿಂದ ಡಿಸಿ ಕಚೇರಿಗೆ ದ್ವಿಪಥ ರಸ್ತೆ
ಹಾವೇರಿ: ಹಾವೇರಿಜಿಲ್ಲೆ ಅಸ್ತಿತ್ವಕ್ಕೆ ಬಂದು ೨೭ ವರ್ಷಗಳು ಸಂದಿವೆ, ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದೆ. ಡಿಸಿ ಕಚೇರಿಗೆ ಹೋಗುವ ಮಾರ್ಗಕ್ಕೆ ಹೊಂದಿಕೊಂಡಂತೆ ವೈದ್ಯಕೀಯ ಕಾಲೇಜು ಸಹ ನಿರ್ಮಾಣವಾಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ನಗರದ ಜೆ.ಎಚ್.ಪಟೇಲ ವೃತ್ತದಿಂದ ಡಿಸಿ ಕಚೇರಿ ಮಾರ್ಗವನ್ನು ದೇವಗಿರಿಯವರೆಗೂ ದ್ವಿಪಥರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ನಗರಸಭಾ ಸದಸ್ಯ ಸಂಜೀವಕುಮಾರ ನೀರಲಗಿ ತಿಳಿಸಿದರು.
ಸೋಮವಾರ ಮಾತನಾಡಿದ ಅವರು ವಿಶೇಷವಾಗಿ ಶಾಸಕರು, ಉಪಸಭಾಪತಿ ರುದ್ರಪ್ಪ ಲಮಾಣಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಆಸಕ್ತಿ ವಹಿಸಿ ಜೆ.ಎಚ್.ಪಟೇಲ್ ವೃತ್ತದಿಂದ ಡಿಸಿ ಕಚೇರಿಗೆ ದ್ವಿಪಥ ರಸ್ತೆ ಮಂಜೂರಾತಿಗೆ ಶ್ರಮಿಸುತ್ತಿದ್ದಾರೆ. ೫೧ ಕೋಟಿರೂ ವೆಚ್ಚದಲ್ಲಿ ನಿರ್ಮಿಸಲಾಗುವ ದ್ವಿಪಥ ರಸ್ತೆ ನಿರ್ಮಾಣ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಜುರಾತಿ ನೀಡಲಿದ್ದಾರೆ ಎಂದರು.
ಈಗಾಗಲೇ ಈ ಬಗ್ಗೆ ಯೋಜನೆ ರೂಪಿಸಲಾಗಿದೆ. ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರಿದ ಅಧಿಕಾರಿಗಳು ಚರ್ಚಿಸಿದ್ದು, ಜೆ.ಎಚ್.ಪಟೇಲ್ ವೃತ್ತದಿಂದ ಡಿಸಿ ಕಚೇರಿಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂತಿಮ ಸ್ವರೂಪ ನೀಡಿದ್ದಾರೆ. ೧೮ ಮೀಟರ್ ದ್ವಿಪಥ ರಸ್ತೆ ಇದಾಗಿದ್ದು, ಶೀರ್ಘದಲ್ಲಿ ಈ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
೭.೮ಕಿ.ಮೀ.ದ್ವಿಪಥ ರಸ್ತೆ: ಈ ಬಗ್ಗೆ ಲೋಕೋಪಯೋಗಿ ಇಲಾಖೆ ಎಇಇ ಶ್ರೀಮಂತ ಹದಗಲ್ಲ ಮಾಹಿತಿ ನೀಡಿ ಹಾವೇರಿಯ ಹಳೆ ಪಿ.ಬಿರಸ್ತೆಯಿಂದ ವಾಯಾ ಜೆ.ಎಚ್.ಪಟೇಲ ವೃತ್ತವನ್ನು ಬಳಸಿ ಡಿಸಿ ಕಚೇರಿ ಮಾರ್ಗವಾಗಿ ದೇವಗಿರಿಯ ಬಸ್ಸ್ಟಾಂಡ್ ಸರ್ಕಲ್ವರೆಗೆ ೭.೮ಕಿ.ಮೀ.ರಸ್ತೆಯನ್ನು ದ್ವಿಪಥಮಾರ್ಗವನ್ನಾಗಿ ನಿರ್ಮಿಸಲಾಗುವುದು. ಈ ಬಗ್ಗೆ ಅಂದಾಜು ೫೧ಕೋಟಿರೂಗಳ ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ. ಸರ್ವೆಕಾರ್ಯವನ್ನು ಕೈಗೊಳ್ಳಲಾಗಿದೆ. ಸರ್ಕಾರದಿಂದ ಅನುಮೋಧನೆ ದೊರೆತ ನಂತರ ಈ ಬಗ್ಗೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ನನಸಾಗುತ್ತಿರುವ ಬಹುದಿನದ ಕನಸು: ಹಾವೇರಿಜಿಲ್ಲೆ ಆ.೨೪-೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ನೂತನವಾಗಿ ಜಿಲ್ಲಾಡಳಿತ ಭವನ ನಿರ್ಮಿಸಿದ ಸಂದರ್ಭದಲ್ಲಿಯೇ ಹಾವೇರಿನಗರದಿಂದ ಜಿಲ್ಲಾಡಳಿತ ಭವನಕ್ಕೆ ದ್ವಿಪಥ ರಸ್ತೆ ನಿರ್ಮಿಸಬೇಕೆನ್ನುವ ಆಗ್ರಹಗಳು ಕೇಳಿ ಬಂದಿದ್ದವು, ಆದರೆ ಆಗಿರಲಿಲ್ಲ. ಡಿಸಿ ಕಚೇರಿ ಮಾರ್ಗಕ್ಕೆ ಹೊಂದಿಕೊಂಡಂತೆ ಹಾವೇರಿ ವೈದ್ಯಕೀಯ ಮಹಾ ವಿದ್ಯಾಲಯವನ್ನು ಸರ್ಕಾರ ನಿರ್ಮಿಸಿದ್ದು, ಈಗಾಗಲೇ ವೈದ್ಯಕೀಯ ಮಹಾವಿದ್ಯಾಲಯವು ಆರಂಭಗೊಂಡಿದ್ದು, ಇನ್ನೇನು ಅದರ ಉದ್ಘಾಟನೆ ಆಗಬೇಕಿದೆ. ವೈದ್ಯಕೀಯ ಮಹಾ ವಿದ್ಯಾಲಯ ಆರಂಭವಾದರೆ ಈ ಮಾರ್ಗದಲ್ಲಿ ಸಂಚಾರ ದಟ್ಟನೆ ಹೆಚ್ಚುವುದರಿಂದ ಜೆ.ಎಚ್.ಪಟೇಲ್ ವೃತ್ತದಿಂದ ಡಿಸಿ ಕಚೇರಿಗೆ ದ್ವಿಪಥ ರಸ್ತೆ ನಿರ್ಮಾಣ ಅನಿವಾರ್ಯವಾಗಿದ್ದು, ಈ ಬಗ್ಗೆ ಆಸಕ್ತಿ ವಹಿಸಿ ದ್ವಿಪಥ ರಸ್ತೆ ನಿರ್ಮಾಣಕ್ಕೆ ಜಿಲ್ಲಾಡಳಿತ, ಉಸ್ತುವಾರಿ, ಸಚಿವರು, ಶಾಸಕರು ಮುಂದಾಗಿರುವುದು ಶ್ಲಾಘನಿಯ ಕಾರ್ಯವಾಗಿದೆ ಎಂಬುದು ಜನತೆ ಅಭಿಪ್ರಾಯವಾಗಿದೆ.

