“ಹಾವೇರಿಯ ಹಳೆ ಪಿ.ಬಿ.ರಸ್ತೆ ಹಾಳು ಮಾಡಿರುವ ಎಜಿಪಿ ಗ್ಯಾಸ್ ಕಂಪನಿ”
ಕಣ್ಣುಮುಚ್ಚಿರುವ ಪಿಡಬ್ಲುಡಿ ಇಲಾಖೆ ಅಧಿಕಾರಿಗಳು!


ಹಾವೇರಿ: ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿ ನಗರದಲ್ಲಿ ಹಳೆ ಪಿ.ಬಿ.ರಸ್ತೆ ಒಂದೇ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆಯನ್ನು ಸ್ಥಳೀಯ ಲೋಕೋಪ ಯೋಗಿ ಇಲಾಖೆ ದ್ವಿಪಥ ರಸ್ತೆಯ ನ್ನಾಗಿ ಪರಿವರ್ತಿಸಿ ಕೋಟ್ಯಾಂತರ ರೂ. ಗಳಲ್ಲಿ ಅಭಿವೃದ್ಧಿ ಪಡಿಸಿದೆ. ಈ ರಸ್ತೆಯು ಉತ್ತಮ ಸ್ಥಿತಿಯಲ್ಲಿತ್ತು. ಈ ರಸ್ತೆಯ ಮೇಲೆ ಎಜಿಪಿ ಗ್ಯಾಸ್ ಕಂಪನಿಯ ಕಣ್ಣು ಬಿದ್ದಿದ್ದು, ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆ ಯಲ್ಲಿ 9 ಆಡಿ ಗುಂಡಿ ತೋಡುವ
ಮೂಲಕ ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನು ಹಾಳು ಮಾಡಿದ್ದಾರೆ. ಮುಂಬೈ ಮೂಲದ ಎಜೆಪಿ ಗ್ಯಾಸ್ ಕಂಪನಿಯು ಗ್ಯಾಸ್ ಪೂರೈಕೆಗಾಗಿ ಹೆದ್ದಾರಿಗುಂಟ ಪೈಪ್ ಲೈನ್ ಅಳವಡಿಸುತ್ತಿದ್ದು, ಹಾವೇರಿ ನಗರದ ಹಳೆ ಪಿ.ಬಿ.ರಸ್ತೆಯಲ್ಲಿ ಹುಬ್ಬಳ್ಳಿ ಮಾರ್ಗದಿಂದ ಹಾವೇರಿನಗರದ ಮಾರ್ಗವಾಗಿ ಪೈಪ್ ಲೈನ್ ಅಳವಡಿಸುವ ಕಾಮಾಗಾರಿಯನ್ನು ಕೈಗೊಂಡಿದೆ.
ಹಾವೇರಿಯ ಇಚಾರಿ ಲಕಮಾಪುರದಿಂದ ರಾಣೇಬೆನ್ನೂರು – ರಸ್ತೆಯಲ್ಲಿರುವ ವೀರಸೌಧದವರೆಗೆ ಇರುವ ದ್ವಿಪಥರಸ್ತೆಯಲ್ಲಿನ ಒಂದು ಬದಿಯಲ್ಲಿ ಡಾಂಬರ್ ರಸ್ತೆಯನ್ನು ಅಗೆದು ಪೈಪ್ ಲೈನ್ ಆಳವಡಿಸಿ ಗುಂಡಿಯನ್ನು ವೈಜ್ಞಾನಿಕವಾಗಿ ಮುಚ್ಚದೇ ಹಾಳು-ಮಣ್ಣು,ಕಲ್ಲುಗಳಿಂದ ಹಾಕಿ ತೆಪೆ ಸಾರಿಸಿದ ಕಾರಣ ಜುಲೈ.8 ರಂದು ಎಜಿಪಿ ಗ್ಯಾಸ್ ಕಂಪನಿಯವರು ತೋಡಿದ ಗುಂಡಿಗೆ ಮೂರು ಕಾರು, ಹತ್ತಾರು ಬೈಕುಗಳು ಸಿಲುಕಿಕೊಂಡು ಕಾರಿನಲ್ಲಿದ್ದ ಪ್ರಯಾಣಿಕರು, ದ್ವಿಚಕ್ರವಾಹನ ಸವಾರರು ಪರದಾಡ ಬೇಕಾಯಿತು.
ಕೊನೆಗೆ ಜೆಸಿಬಿ ಯಂತ್ರಗಳನ್ನು ತರಿಸಿ ಗುಂಡಿಯಲ್ಲಿ ಸಿಲುಕಿದ್ದ ವಾಹನಗಳನ್ನು ಹೊರತರಲಾಯಿತು.
ಈ ಬಗ್ಗೆ ಸ್ಥಳದಲ್ಲಿದ್ದ ಗ್ಯಾಸ್ ಕಂಪನಿಯ ಅಧಿಕಾರಿಗಳನ್ನು ಜನರು ತರಾಟೆಗೆ ತೆಗೆದುಕೊಂಡ ವೇಳೆಯಲ್ಲಿ ಜನರ ಜೊತೆಗೆ ಗುಂಡಾವರ್ತನೆ ತೋರಿಸುವ ಮೂಲಕ ದೌರ್ಜನ್ಯ ವರ್ತನೆ ತೋರಿದರು.
ತಮ್ಮ ಕಂಪನಿಯ ಲಾಭಕ್ಕೋಸ್ಕರ ಗ್ಯಾಸ್ ಪೈಪ್ ಲೈನ್ ಅಳವಡಿಕೆಗಾಗಿ ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನು ಗುಂಡಿ ತೋಡುವ ಮೂಲಕ ಹಾಳು ಮಾಡಿದ್ದಲ್ಲದೇ, ಜನರ ಜೀವಕ್ಕೆ ಕಂಟಕವಾಗುವ ಹಾಗೆ ರಸ್ತೆಯನ್ನು ಹಾಳು ಮಾಡುವ ಮೂಲಕ “ಹಾವೇರಿಯಲ್ಲಿ ಹಾಯಬಾರದು” ಎನ್ನುವ ಎನ್ನುವ ಗಾದೆಮಾತನ್ನು ಗ್ಯಾಸ್ ಕಂಪನಿಯವರು ನಿಜ ಮಾಡಲು ಹೊರಟಿದ್ದಾರೆ. ಸುಮಾರು ಮೂರು ಕಿ.ಮೀ.ರಸ್ತೆಯನ್ನು ಆಗೆದು ಹಾಳುಮಾಡಿರುವ ಎಜೆಪಿ ಗ್ಯಾಸ್ ಕಂಪನಿಯವರು ಹಗಲು-ರಾತ್ರಿಯನ್ನದೇ ರಸ್ತೆ ಹಾಳುಮಾಡುತ್ತಿದ್ದರೆ, ಈ ರಸ್ತೆಗೆ ಹೊಂದಿಕೊಂಡಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅದಕ್ಕು ನಮಗು ಸಂಬಂಧ ಇಲ್ಲ ಎನ್ನುವಂತೆ ಕಣ್ಣು ಮುಚ್ಚಿ ಕುಳಿತಿರುವುದು ಆಶ್ಚರ್ಯಕರ ಸಂಗತಿಯಾಗಿದೆ.
ಪಿಡಬ್ಲುಡಿ ಕಚೇರಿಯ ಮುಂಭಾಗದಲ್ಲಿ ಎಸ್ಪಿ ಕಚೇರಿ, ಶಹರ ಪೊಲೀಸ್ ಠಾಣೆ ಇದ್ದು, ತಮ್ಮ ಕಚೇರಿಯ ಮುಂಭಾಗದಲ್ಲಿ ಹಳೆ ಪಿ.ಬಿ.ರಸ್ತೆಯನ್ನು ಹಾಳುಮಾಡಿದ್ದರೂ ಸಹ ಯಾವಬ್ಬ ಅಧಿಕಾರಿ ಇದನ್ನು
ಗಮನಿಸಿಲ್ಲವೇ?’ ಮಳೆಗಾಲದಲ್ಲಿ ರಸ್ತೆಯಲ್ಲಿ ಪೈಪ್ ಲೈನ್ ಅಳವಡಿಸಲು ಪರವಾನಿಗೆ ನೀಡಿದವರು ಯಾರು ?. ಹಾಗಾದರೇ ಹಳೆ ಪಿ.ಬಿ.ರಸ್ತೆಯನ್ನು ಸಾರ್ವಜನಿಕರು ಹಾಳುಮಾಡಿದ್ದರೆ ಅಧಿಕಾರಿಗಳು ಸುಮ್ಮನಿರುತ್ತಿದ್ದರೇ? ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ರಸ್ತೆ ಅಗೆದು ಹಾಳು ಮಾಡಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜನಿಯರ ಮಾಹಾಬಲೇಶಪ್ಪ ಕೆ. ಅವರನ್ನು ಸಂಪರ್ಕಿಸಿದರೇ, ಅವರು ಈ ಬಗ್ಗೆ ಮಾತನಾಡಲು ಹಿಂಜೆರೆದು ನಾನು ಕಚೇರಿಯಲ್ಲಿಲ್ಲ ಎನ್ನುವ ಉತ್ತರವನ್ನು ತಮ್ಮ ಸಹಾಯಕರ ಮೂಲಕ ನೀಡಿದರು.
ಈ ಬಗ್ಗೆ ಇಲಾಖೆಯ ಇನ್ನೊಬ್ಬ ಅಧಿಕಾರಿ ಮೆಡ್ಲೆರಿಯವರನ್ನು ಸಂಪರ್ಕಿಸಿದಾಗಿ , ಅವರು ಸ್ಥಳಕ್ಕಾಗಮಿಸಿ ರಸ್ತೆಯಲ್ಲಿ ಗುಂಡಿತೋಡದಂತೆ ಗ್ಯಾಸ್ ಕಂಪನಿಯವರಿಗೆ ತಾಕೀತು ಮಾಡಿದರು. ಮಳೆಗಾಲದಲ್ಲಿ ಕಾಮಗಾರಿ ನಡೆಸದಂತೆ ಆದೇಶ ಮಾಡಲಾಗಿದೆ , ಎಜಿಪಿ ಗ್ಯಾಸ್ ಕಂಪನಿಯವರು ನಮ್ಮನ್ನು ಕದ್ದು ಮುಚ್ಚಿ ರಾತ್ರಿಯವೇಳೆ ಕೆಲಸಮಾಡು ತ್ತಿದ್ದಾರೆ. ರಸ್ತೆಯನ್ನು ದುರಸ್ತಿ ಪಡಿಸಿಕೊಡುವ ಕರಾರಿನ ಮೇರೆಗೆ ಮಳೆಗಾಲ ಹೊರತು ಪಡಿಸಿ ಕಾಮಗಾರಿ ಕೈಗೊಳ್ಳುವಂತೆ ಅನುಮತಿ ನೀಡಲಾಗಿದೆ. ಈ ಬಗ್ಗೆ ಕ್ರಮ ವಹಿಸಲು ಶಹರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಎಜಿಪಿ ಗ್ಯಾಸ್ ಕಂಪನಿಯವರು ಹಳೆ ಪಿ.ಬಿ.ರಸ್ತೆಯನ್ನು ಆದ್ವಾನ
ಎಬ್ಬಿಸಿದ್ದು, . ಸರಿ ಪಡಿಸಲಾರದಷ್ಟು ಹಾಳುಮಾಡಿದ್ದಾರೆ. ಈಗಾಗಲೇ ಇವರು ಹಾಳು ಮಾಡಿರುವ ರಸ್ತೆಯಲ್ಲಿ ಸಿಲುಕಿ ಅನೇಕ ವಾಹನಗಳು ಜಕಂಗೊಂಡಿವೆ. ಕೆಲವು ವಾಹನ ಸವಾರರು ಗಾಯಗೊಂಡಿದ್ದಾರೆ. ತೋರಿಕೆಗೆ ಮಾತ್ರ ಲೋಕೋಪಯೋಗಿ ಇಲಾಖೆಯು ರಸ್ತೆ, ಸೇತುವೆ ಮತ್ತು ಸರ್ಕಾರಿ ಕಟ್ಟಡಗಳ ಸಂಬಂಧಿಸಿದಂತೆ ನಿರ್ಮಾಣ ಮತ್ತು ನಿರ್ವಹಣೆಗೆ ಹೋಣೆಯಾಗಿರದೇ ಕಂಪನಿಯವರಿಗೆ ರಸ್ತೆಯಲ್ಲಿ ಗುಂಡಿ ತೋಡಲು ಅನುಮತಿ ನೀಡಿದ ಪಿಡಬ್ಬುಡಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಹಾಳಾಗಿರುವ ರಸ್ತೆಯನ್ನು ಗ್ಯಾಸ್ ಕಂಪನಿಯವರಿಂದ ಸರಿಪಡಿಸಬೇಕೆನ್ನುವುದು ಹಾವೇರಿಗರ ಆಗ್ರಹವಾಗಿದೆ.