

ಹಾವೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಡಬಲ್ ಇಂಜನ್ ಸರಕಾರದ ಅಭಿವೃದ್ಧಿ ಯೋಜನೆಗಳ ಜಪ, ಕಾಂಗ್ರೆಸ್ ವಿರುದ್ಧ ಟೀಕೆ
ಹಾವೇರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಸಂಜೆ ಇಳಿಹೊತಿನಲ್ಲಿ ಆಗಮಿಸಿ ಅವಸರ ಭಾಷಣಮಾಡಿದರು. ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಟೀಕಿಸಿದ ಅವರು ಸಮಾಯಾವಕಾಶದ ಕೊರತೆಯ ಕಾರಣಕ್ಕೋ? ಏನು? ತಮ್ಮ ಭಾಷಣವನ್ನು ಕೇವಲ ೨೦ ರಿಂದ ೨೫ನಿಮೀಷಕ್ಕೆ ಸೀಮಿತಗೊಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಹಾವೇರಿಜಿಲ್ಲೆಯ ಹಾವೇರಿ ಹಳೆ ಪಿ.ಬಿ.ರಸ್ತೆಗೆ ಹೊಂದಿಕೊಂಡಿರುವ ಅಜ್ಜಯ್ಯನ ಗದ್ದುಗೆಯ ಮುಂಭಾಗದ ನಿವೇಶನದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಸೇರಿದ್ದ ಸಹಸ್ರಾರು ಸಂಖ್ಯೆಯಲ್ಲಿನ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಭಾಷಣಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಡಬಲ್ ಇಂಜನ್ ಸಕಾರದ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡುವುದರ ಜೊತೆಗೆ ಕಾಂಗ್ರೆಸ್ ವಿರುದ್ಧ ಟೀಕಿಸಿದರು.
ಸುಳ್ಳು ಹೇಳುವುದು ಕಾಂಗ್ರೆಸ್ಗೆ ರೂಢಿಯಾಗಿದೆ. ಇದೇ ರೀತಿ, ಹಿಮಾಚಲ ಪ್ರದೇಶದಲ್ಲಿ ಸುಳ್ಳು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹಿಮಾಚಲದಲ್ಲಿ ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿಯೇ ರಾಜ್ಯದ ಜನರಿಗೆ ೧ ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ಬಳಿಕ ಪತ್ರಕರ್ತರ ಪ್ರಶ್ನೆಗೆ ಸರ್ಕಾರವು ಈ ಕುರಿತು ಸಮಿತಿ ರಚಿಸಲಾಗಿದೆ ಎಂದು ಹೇಳಿತು. ಆ ಮೂಲಕ ತಾನು ನೀಡಿದ್ದು ಸುಳ್ಳು ಭರವಸೆ ಎಂಬುದನ್ನು ಸಾಬೀತುಪಡಿಸಿತು ಎಂದರು.
ಸ್ವಾತಂತ್ರ್ಯ ಬಂದು ದಶಕಗಳವರೆಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕರ್ನಾಟಕದ ಅಭಿವೃದ್ಧಿ ಮಾಡಲಿಲ್ಲ. ಆದರೆ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರವು ಡಬಲ್ ಎಂಜಿನ್ ಸರ್ಕಾರವು ರಾಜ್ಯದ ಜನರ ಕೊರತೆಯನ್ನು ನೀಗಿಸಿದೆ. ಡಬಲ್ ಎಂಜಿನ್ ಸರ್ಕಾರವು ಹಾವೇರಿಯಲ್ಲಿ ಮೆಡಿಕಲ್ ಕಾಲೇಜು, ಇಂಜನಿಯರಿಂಗ್ ಕಾಲೇಜು ಸ್ಥಾಪಿಸಿದೆ, ಕೆ.ಎಂ.ಎಫ್ ಹಾಲು ಒಕ್ಕೂಟ ಸ್ಥಾಪಿಸಿದೆ. ಹಾವೇರಿ ವಿವಿಗೆ ಕೋಟ್ಯಂತರ ರೂ. ಅನುದಾನ ಬಂದಿದೆ.
ಡಬಲ್ ಎಂಜಿನ್ ಸರ್ಕಾರದಿಂದಲೇ ಆರು ಪಥದ ರಸ್ತೆ, ರೈಲು ಮೂಲ ಸೌಕರ್ಯದ ಅಭಿವೃದ್ಧಿಯಾಗಿದೆ. ಇದರಿಂದ ಹಾವೇರಿ, ಕರ್ನಾಟಕ ಸೇರಿ ದೇಶಕ್ಕೇ ಮೂಲ ಸೌಕರ್ಯ ಸಿಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿಯು ಸುಳ್ಳಿನ ಭರವಸೆಯಾಗಿದೆ. ಹಾಗಾಗಿ, ಕಾಂಗ್ರೆಸ್ನ ಸುಳ್ಳಿನ ಭರವಸೆಯನ್ನು ನಂಬದಿರಿ ಎಂದು ನೆರೆದಿದ್ದ ಜನರಿಗೆ ಅವರು ಕರೆ ನೀಡಿದರು.
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಕಾಂಗ್ರೆಸ್ ಎಂದರೆ ಕಮಿಷನ್, ರೈತರ ಹಣದಲ್ಲೂ ಕಾಂಗ್ರೆಸ್ ಶೇ.೮೫ರಷ್ಟು ಕಮಿಷನ್ ಹೊಡೆದಿದೆ. ಆದರೆ, ಬಿಜೆಪಿ ಸರ್ಕಾರವು ರೈತರ ಏಳಿಗೆಗೆ ದುಡಿದಿದೆ. ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರದ ಬೆಲೆ ಕೆ.ಜಿ.ಗೆ ೫೦ ರೂ. ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಿಜೆಪಿ ಸರ್ಕಾರವು ೫೦ ರೂ.ಗೆ ಒಂದು ಕೆ.ಜಿ ಗೊಬ್ಬರ ಖರೀದಿಸಿ, ರೈತರಿಗೆ ಕೇವಲ ೫ ರೂ.ಗೆ ನೀಡುತ್ತಿದೆ. ರೈತರಿಗೆ ತೊಂದರೆಯಾಗಬಾರದು ಎಂದು ೨ ಲಕ್ಷ ಕೋಟಿ ರೂ. ವ್ಯಯಿಸಿ ಯೂರಿಯಾ ಗೊಬ್ಬರ ಖರೀದಿಸಿ ರೈತರಿಗೆ ನೀಡುತ್ತಿದೆ ಎಂದು ಹೇಳಿದರು.
ದೇಶದ ಆರ್ಥಿಕತೆಯು ಜಗತ್ತಿನಲ್ಲಿಯೇ ಒಂಬತ್ತನೇ ಸ್ಥಾನದಲ್ಲಿತ್ತು. ಆದರೆ, ಬಿಜೆಪಿ ಆಡಳಿತದಲ್ಲಿ ನಾವು ಜಗತ್ತಿನ ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶವಾಗಿದ್ದೇವೆ. ಒಂಬತ್ತನೇ ಸ್ಥಾನದಿಂದ ಭಾರತ ಈಗ ಐದನೇ ಸ್ಥಾನಕ್ಕೆ ಏರಿದೆ. ಬ್ರಿಟನ್ ಆರ್ಥಿಕತೆಯನ್ನೂ ನಾವು ಹಿಂದಿಕ್ಕಿದ್ದೇವೆ. ನಮ್ಮನ್ನು ನೂರಾರು ವರ್ಷಗಳನ್ನು ಆಳಿದ ಬ್ರಿಟನ್ಅನ್ನೇ ನಾವು ಮೀರಿಸಿದ್ದೇವೆ. ಹಾಗಂತ, ನಾವು ವಿರಮಿಸುವಂತಿಲ್ಲ ನಾವು ಜಗತ್ತಿನ ಬಲಿಷ್ಠ ಆರ್ಥಿಕತೆ ಹೊಂದಿರುವ ಅಗ್ರ ಮೂರು ರಾಷ್ಟ್ರಗಳಲ್ಲಿ ಭಾರತವೂ ಸೇರಬೇಕಿದೆ. ಇದಕ್ಕಾಗಿ ನೀವು ಬಿಜೆಪಿಗೆ ಮತ ನೀಡಬೇಕು. ನೀವು ಬಿಜೆಪಿಗೆ ಮತ ಕೊಟ್ಟು ನೋಡಿ ದೇಶದಲ್ಲಿ ಕರ್ನಾಟಕ ನಂಬರ್ ಒನ್ ಆಗಲಿದೆ. ಜಗತ್ತಿನಲ್ಲಿಯೇ ದೇಶವು ಮೂರನೇ ಸ್ಥಾನಕ್ಕೆ ಏರಿಕೆಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಕನಕದಾಸ ಪದ್ಯವನ್ನು ಉಲ್ಲೇಖಿಸಿದರು. ರಾಗಿಯ ಬಗ್ಗೆ ಮಾತನಾಡಿದರು.
ಪ್ರಧಾನಿ ಮೋದಿ ಅವರ ತಲೆಗೇರಿದ ಯಾಲಕ್ಕಿ ಪೇm, ಕೊರಳಿಗೆ ಏಲಕ್ಕಿ, ರುದ್ರಾಕ್ಷಿ, ಹೆಗಲಿಗೆ ಕಂಬಳಿ
ಹಾವೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ನಾಯಕರು ಏಲಕ್ಕಿ ಮಾಲೆ, ಏಲಕ್ಕಿ ಪೇಟ ತೊಡಿಸಿ ಸನ್ಮಾನ ಮಾಡಿದರು. ಹಾಗೆಯೇ, ಹನುಮಾನ್ ಚಾಲೀಸಾ, ರುದ್ರಾಕ್ಷಿ ಮಾಲೆ ನೀಡಿ, ಕಂಬಳಿ ಹೊದಿಸಿ ಸನ್ಮಾನ ಮಾಡಿದರು.
ಪ್ರಧಾನಿ ಅವರ ಭಾಷಣಕ್ಕೂ ಮನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮೇ ೧೦ರವರೆಗೆ ಕಾಂಗ್ರೆಸ್ ಗ್ಯಾರಂಟಿ, ಅದರ ನಂತರ ಗಳಗಂಟಿ” ಎಂದು ಟೀಕಿಸಿದರು. ನರೇಂದ್ರ ಮೋದಿ ಅವರು ಹಾವೇರಿ ಮಣ್ಣನ್ನು ಮೆಟ್ಟಿದ ಕ್ಷಣದಿಂದ ಜಿಲ್ಲೆಯಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ರಾಜ್ಯದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ಆದ್ಯತೆ ನೀಡಿದೆ. ಹಾಗಾಗಿ, ಮೇ ೧೦ರಂದು ಮತ್ತೊಮ್ಮೆ ಬಿಜೆಪಿಗೆ ಮತ ನೀಡಬೇಕು. ಮತ್ತೆ ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು’ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಸಂಸದ ಶಿವಕುಮಾರ ಉದಾಸಿ, ಬಿಜೆಪಿ ಅಭ್ಯರ್ಥಿಗಳಾದ ಬಿ.ಸಿ.ಪಾಟೀಲ, ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣವರ, ವಿರುಪಾಕ್ಷಪ್ಪ ಬಳ್ಳಾರಿ, ಮೆಣಶಿನಕಾಯಿ, ಹಾಗೂ ಮಂಜುನಾಥ ಓಲೇಕಾರ, ಭೋಜರಾಜ ಕರೂದಿ, ಸಿದ್ದರಾಜ ಕಲಕೋಟಿ ಮತ್ತಿತರರು ಇದ್ದರು.

