ಹಾವೇರಿಯಲ್ಲಿ ೨೪+೭ ನೀರು ಸರಬರಾಜು ಯೋಜನೆ ಸಂಪೂರ್ಣ ವಿಫಲ, ಆರೋಪ: ಪ್ರತಿಭಟನೆ
ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಕೆಯುಐಡಿಎಫ್ಸಿ ಆಯುಕ್ತೆ ದೀಪಾ ಚೋಳನ್ರಿಗೆ ಸದಸ್ಯರ ಪಟ್ಟು
ಹಾವೇರಿ: ನಗರಕ್ಕೆ ಮಂಗಳವಾರ ಆಗಮಿಸಿದ್ದ ಕೆಯುಐಡಿಎಫ್ಸಿ ಆಯುಕ್ತೆ ದೀಪಾ ಚೋಳನ್ರು ನಗರಸಭೆ ಆಡಳಿತ ಮಂಡಳಿಯನ್ನು ನಿರ್ಲಕ್ಷಿಸಿದ್ದಾರೆಂದು, ೨೪+೭ ನೀರು ಸರಬರಾಜು ಯೋಜನೆ ಸಂಪೂರ್ಣ ವಿಫಲವಾಗಿದ್ದು, ಆಡಳಿತ ಮಂಡಳಿಯ ಜೊತೆಗೆ ಸಭೆ ನಡೆಸುವ ಬದಲು ಆಯುಕ್ತರು ಅಧಿಕಾರಿಗಳ ಜೊತೆಗೆ ಸಭೆ ನಡೆಸುತ್ತಿದ್ದಾರೆಂದು ಆರೋಪಿಸಿ ನಗರಸಭೆಯ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಪ್ರತಿಭಟನೆ ನಡೆಸಿದರು.
ಕೆಯುಐಡಿಎಫ್ಸಿ-ಎನ್ಕೆಯುಎಸ್ಐಪಿ ಆಯುಕ್ತರು ಪ್ರತಿಭಟನಾ ಸ್ಥಳಕ್ಕೆ ಆಗ್ರಹಿಸಿ ಸಮಸ್ಯೆಯನ್ನು ಆಲಿಸುವವರೆಗೂ ಪ್ರತಿಭಟನೆ ಇಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದು ನಗರಸಭಾ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಾಗೂ ಅನೇಕ ಸದಸ್ಯರು. ಪ್ರತಿಭಟನೆಯನ್ನು ಮುಂದುವರೆಸಿದರು.
ಕೆಯುಐಡಿಎಫ್ಸಿ-ಎನ್ಕೆಯುಎಸ್ಐಪಿ ಆಯುಕ್ತೆ ದೀಪಾ ಚೋಳನ್ ಅವರು, ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಕ್ಕೆ ನಗರಕ್ಕೆ ಆಗಮಿಸಿ ಕೆಯುಐಡಿಎಫ್ಸಿ-ಎನ್ಕೆಯುಎಸ್ಐಪಿ ಕಚೇರಿ ಇರುವ ಪ್ರವಾಸಿ ಮಂದಿರದಲ್ಲಿನೇ ಸಭೆಯನ್ನು ನಡೆಸಿದರು.
ಆಯುಕ್ತೆ ದೀಪಾ ಚೋಳನ್ ಅವರು ಆಗಮಿಸುವ ಸುದ್ದಿ ತಿಳಿದ ನಗರಸಭಾಧ್ಯಕ್ಷರು ಹಾಗೂ ಸದಸ್ಯರು ಪ್ರವಾಸಿ ಮಂದಿರ ಆವರಣದಲ್ಲಿರುವ ಕೆಯುಐಡಿಎಫ್ಸಿ-ಎನ್ಕೆಯುಎಸ್ಐಪಿ ಕಚೇರಿ ಎದಿರುವ ಪ್ರತಿಭಟನೆ ನಡೆಸಲಾರಂಭಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಯುಐಡಿಎಫ್ಸಿ-ಎನ್ಕೆಯುಎಸ್ಐಪಿ ಅಧಿಕಾರಿ ಗೀತಾ.ಸಿ.ಡಿ ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿ ಪ್ರತಿಭಟನೆಯನ್ನು ಬಿಟ್ಟು ಆಯುಕ್ತರೊಂದಿಗೆ ಚರ್ಚಿಸುವುದಕ್ಕೆ ಪ್ರವಾಸಿಮಂದಿರಕ್ಕೆ ಆಗಮಿಸುವಂತೆ ಕೇಳಿಕೊಂಡರು. ಆದರೆ, ಪ್ರತಿಭಟನಾಕಾರರು ಇದಕ್ಕೆ ಒಪ್ಪದೆ ಆಯುಕ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳನ್ನು ಕೇಳಬೇಕು ಹಾಗೂ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಬೇಕಾದ ಕ್ರಮಗಳ ಕುರಿತು ಚರ್ಚೆ ಮಾಡಬೇಕೆಂದು ಪಟ್ಟು ಹಿಡಿದರು.
ಆಗ ಅನಿವಾರ್ಯವಾಗಿ ಆಯುಕ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಆಗಮಿಸುತ್ತಲೇ “ಏನ್ರಪಾ ನನ್ನನ್ನು ನಿಮ್ಮ ಜಿಲ್ಲಾಧಿಕಾರಿಗಳಂತೆ ಕಾಣುತ್ತಿದ್ದೀರಲ್ಲ” ಎನ್ನುತ್ತಲೇ ಸ್ಥಳಕ್ಕೆ ಆಗಮಿಸಿ ಈ ಯೋಜನೆ ಕುರಿತು ನಾನು ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿರುವೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಈ ಸಮಸ್ಯೆ ಪರಿಹಾರಕ್ಕೆ ನೀವೂ ಸಹ ನನಗೆ ಸಹಕಾರವನ್ನು ನೀಡಬೇಕು ಎಂದರು.
ಆಗ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ನಗರದಲ್ಲಿ ಕೈಗೊಳ್ಳಲಾಗಿರುವ ನಿರಂತರ ನೀರು ಸರಬರಾಜು ಯೋಜನೆ ಸಂಪೂರ್ಣ ವಿಫಲವಾಗಿದೆ. ಇದನ್ನು ಸರಿ ಪಡಿಸಿ ಹಾವೇರಿ ನಗರದ ಜನತೆಗೆ ನಿರಂತರ ನೀರು ಸರಬರಾಜಾಗುವಂತೆ ಕ್ರಮ ಕೈಗೊಳ್ಳುವಂತೆ ಅನೇಕ ಬಾರಿ ಆಗ್ರಹಿಸಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅನೇಕ ಅಧಿಕಾರಿಗಳು ಆಗಮಿಸಿ ನಮ್ಮೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡಿ ಹೋಗುತ್ತಾರೆ. ಆದರೆ ಸಮಸ್ಯೆಗೆ ಇಂದಿನವರೆಗೂ ಪರಿಹಾರ ದೊರೆತಿಲ್ಲ. ನಗರದ ಜನತೆಗೆ ನೀರನ್ನು ಒದಗಿಸುವುದಕ್ಕೆ ಸಾಧ್ಯವಾಗಿಲ್ಲ ಎನ್ನುವುದನ್ನು ತಿಳಿಸಿದರು.
ಈ ಯೋಜನೆಗೆ ಇಗಾಗಲೇ ೩೫-೩೬ ಕೋಟಿ ರೂಗಳ ವೆಚ್ಚ ಮಾಡಲಾಗಿದೆ. ಆದರೆ ನಗರದ ಎಲ್ಲ ಬಡಾವಣೆಗಳಲ್ಲಿ ಪರಿಪೂರ್ಣವಾಗಿ ಕೆಲಸವಾಗಿಲ್ಲ. ಇನ್ನು ಅನೇಕ ಕಡೆಗಳಲ್ಲಿ ಕೆಲಸಗಳು ಬಾಕಿ ಉಳಿದುಕೊಂಡಿವೆ. ಈ ಯೋಜನೆಯನ್ನು ನಂಬಿಕೊಂಡು ಹಳೆಯ ಪೈಪ್ಲೈನ್ನಲ್ಲಿ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಹಿಗಾಗಿ ನಗರದ ಜನತೆಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಆಯುಕ್ತರ ಗಮನಕ್ಕೆ ತಂದರು.
ಆಯುಕ್ತರು ನಗರಕ್ಕೆ ಆಗಮಿಸುತ್ತಿದ್ದಾರೆ ಎನ್ನುವುದೇ ನಗರಸಭೆ ಅಧ್ಯಕ್ಷರಿಗಾಗಲಿ, ಅಧಿಕಾರಿಗಳಿಗಾಗಲಿ ಗೊತ್ತೇ ಆಗುವುದಿಲ್ಲ. ಬೇರೆ ಮೂಲಗಳಿಂದ ಮಾಹಿತಿ ಗೊತ್ತಾಗಿ ನಾವು ಕಚೇರಿಗೆ ಆಗಮಿಸಿದರೆ ನಮ್ಮನ್ನು ಸಂಪರ್ಕಿಸುವುದಕ್ಕೂ ಮುಂದಾಗುವುದಿಲ್ಲ. ಈ ಯೋಜನೆಯಲ್ಲಿ ಆಗಿರುವ ಸಮಸ್ಯೆಯನ್ನು ಆಲಿಸುವುದಕ್ಕೂ ಮುಂದಾಗುವುದಿಲ್ಲ. ಇಲ್ಲಿನ ಕೆಯುಐಡಿಎಫ್ಸಿ-ಎನ್ಕೆಯುಎಸ್ಐಪಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಮಗಾಗಲಿ ನಮ್ಮ ಸಿಬ್ಬಂದಿಗಳಿಗಾಗಲಿ ಸರಿಯಾದ ಮಾ”ತಿಯನ್ನು ನೀಡುವುದಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದರು.
ಇಲಾಖೆ ಹಾಗೂ ನಗರಸಭೆಯವರು ಕುಳಿತು ಚರ್ಚಿಸಿ ಈ ಯೋಜನೆಯಲ್ಲಿ ಆಗಿರುವ ಲೋಪಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸೋಣ ಎಂದು ಆಯುಕ್ತರು ಹೇಳಿದ ಮಾತಿಗೆ ಸಮ್ಮತಿಸಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂದೆ ಪಡೆದುಕೊಂಡರು.
ಪ್ರತಿಭಟನೆಯಲ್ಲಿ ನಗರಸಭೆಯ ಸದಸ್ಯರಾದ ಮಲ್ಲಿಕಾರ್ಜುನ ಸಾತೇನಹಳ್ಳಿ, ಪ್ರಸನ್ ಧಾರವಾಡ, ವೆಂಕಟೇಶ ಬಿಜಾಪುರ, ಗಣೇಶ ಬಿಷ್ಟಣ್ಣನವರ, ನಿರಂಜನ ಹೇರೂರು, ಸತೀಶ ಆನವಟ್ಟಿ, ಸತೀಶ ಹಾವೇರಿ, ರ” ಪುತ್ರನ್ ಅನೇಕ ಸದಸ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಇಲಾಖೆಯ ಅನೇಕ ಅಧಿಕಾರಿಗಳಿದ್ದರು.