
ರಾಜ್ಯದ ಎಲ್ಲಾ ಜಿಲ್ಲೆ-ತಾಲ್ಲೂಕುಗಳಲ್ಲಿ ಪ್ರವಾಸ ನಂತರ ಹೊಸ ಪಕ್ಷ ಕಟ್ಟಲು ತೀರ್ಮಾನ: ನಟ ಚೇತನ್
ಹಾವೇರಿ: ಬಡವರ ಧ್ವನಿಯಾಗಿ ಕೆಲಸ ಮಾಡುವ ವ್ಯಕ್ತಿತ್ವದ ನಟ ಚೇತನ್ ಅಹಿಂಸಾ ಅವರು ಗುರುವಾರ ನಗರದ ಪ್ರವಾಸ ಮಂದಿರಕ್ಕೆ ಆಗಮಿಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಅವರ ನೇತೃತ್ವದಲ್ಲಿ ಸ್ವಾಗತಿಸಿ, ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ಚೇತನ್ ಅಹಿಂಸಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಮೂಲಕ ಸಂವಿಧಾನ ಆಶಯಗಳನ್ನು ತಿಳಿಸುವ ಕೆಲಸ ಮಾಡಬೇಕಾಗಿದೆ. ನಮ್ಮನ್ನು ಆಳುವ ಸರ್ಕಾರಗಳು ಬಡವರ ಹಾಗೂ ಹಿಂದುಳಿದವರ ಪರವಾಗಿ ಕೆಲಸ ಮಾಡದೇ ಬಂಡವಾಳಶಾಹಿ ತ್ವದಡಿ ಆಡಳಿತ ಮಾಡುವಂತಾಗಿದೆ. ಸಾಮಾಜಿಕ ನ್ಯಾಯದ ಪರವಾಗಿ ಇದ್ದೇವೆ ಎಂದು ಮಾತಿನಲ್ಲಿ ಮಾತ್ರ ಹೇಳುವಂತಾಗಿದೆ.
ಧ್ವನಿ ಇಲ್ಲದವರ ಪರವಾಗಿ ಸರ್ವ ಜನಾಂಗದ ಶಾಂತಿಯ ತೋಟವಾದ ಈ ನಾಡಿನಲ್ಲಿ ಜನಪರ ಸರ್ಕಾರ ರಚನೆ ಮಾಡಲು ನಾಡಿನಲ್ಲಿ ಜಾಗೃತಿ ಮಾಡುತ್ತಿದ್ದೇನೆ. ಮುಂದಿನ ದಿನಮಾನಗಳಲ್ಲಿ ಹೊಸ ಪಕ್ಷ ಕಟ್ಟಲು ರಾಜ್ಯದ ಎಲ್ಲಾ ಜಿಲ್ಲೆ-ತಾಲ್ಲೂಕುಗಳಿಗೂ ಪ್ರವಾಸ ಮಾಡಿ ಜನರ ನಾಡಿಮಿಡಿತ ಅರ್ಥಮಾಡಿಕೊಂಡು ಸಲಹೆ ಸೂಚನೆಯ ಮೂಲಕ ಮುಂದಿನ ತೀರ್ಮಾನ ಮಾಡಲಾಗುವುದು. ಹಾವೇರಿಯ ಜನತೆ ನನಗೆ ತುಂಬಾ ಪ್ರೀತಿ ನೀಡುತ್ತಾರೆ.ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ ನಟ ಚೇತನ್ ಅಹಿಂಸಾ ಅವರು ಬಡವರ, ಶೋಷಿತರ ಹಾಗೂ ಧ್ವನಿ ಇಲ್ಲದವರ ಪರವಾಗಿ ಸಾಮಾಜಿಕ ಕಾಳಜಿ ಹೋರಾಟ ಮಾಡುತ್ತಾ ಬರುತ್ತಿದ್ದು, ಅವರ ಉತ್ತಮ ಸಾಮಾಜಿಕ ಕೆಲಸಗಳಿಗೆ ಸಹಕಾರ ನೀಡೋಣ ಎಂದರು.
ಈ ಸಂದರ್ಭದಲ್ಲಿ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ ಮುಖಂಡರಾದ ಸುಭಾಷ ಚವ್ಹಾಣ, ಶೆಟ್ಟಿ ವಿಭೂತಿ, ಹೊನ್ನಪ್ಪ ಮಾಳಗಿ, ಗುಡ್ಡಪ್ಪ ಮಾಳಗಿ, ಮಲ್ಲೇಶಪ್ಪ ಹಂಚಿನಮನಿ, ಶಾರದಾ ದೊಡ್ಡಮನಿ, ಜಗದೀಶ ಹರಿಜನ, ಮಂಜುಳಾ ಅಕ್ಕಿ, ಗುಡ್ಡಪ್ಪ ಬಣಕಾರ, ಸುರೇಶ ಅಳ್ಳಳ್ಳಿ, ಅಜ್ಜಪ್ಪ ಹರಿಜನ, ದುರಗಪ್ಪ ಮಾದರ, ಸುನೀಲ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು.

