
ಶಾಸಕ ಬಸವರಾಜ ಶಿವಣ್ಣನವರಗೆ ಸಚಿವ ಸ್ಥಾನ ಕೊಡದಿದ್ದರೆ ಹೋರಾಟ ಅನಿವಾರ್ಯ: ನಾಗರಾಜ ಆನ್ವೇರಿ
ಹಾವೇರಿ: ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ, ಅನುಭವಿ ರಾಜಕಾರಣಿಯಾದ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಲೇ ಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಆನ್ವೇರಿ ಕಾಂಗ್ರೆಸ್ ಹೈಕಮಾಂಡ್ಗೆ ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂಬ ತೋರಿಕೆಗೆ ಮಾತ್ರ ಸೀಮಿತವಾಗಿದೆ. ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್ ಶಾಸಕರು ಇದ್ದರೂ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಚಿವ ಸ್ಥಾನ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಜಿಲ್ಲೆಯ ಪ್ರಭಾವಿ ಶಾಸಕ ಬಸವರಾಜ ಶಿವಣ್ಣನವರ ೧೯೮೫ರಿಂದ ರಾಜಕಾರಣಕ್ಕೆ ಬಂದು, ಎರಡು ಭಾರಿ ಹಾವೇರಿ, ಎರಡು ಬಾರಿ ಬ್ಯಾಡಗಿ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ. ೧೯೯೫ರಲ್ಲಿ ಸಚಿವರಾಗಿಯೂ ಅಧಿಕಾರ ಮಾಡಿದ್ದಾರೆ. ಸುದೀರ್ಘ ೪೦ ವರ್ಷ ರಾಜಕೀಯ ಅನುಭವ ಹೊಂದಿರುವ ಅವರು ಉತ್ತರ ಕರ್ನಾಟಕದ ಭಾಗದಲ್ಲಿ ತಮ್ಮದೇಯಾದ ಪ್ರಾಬಲ್ಯವನ್ನು ಹೊಂದಿ ಚಿರಪರಿಚಿತ ಆಗಿದ್ದಾರೆ ಎಂದರು.
ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡ್ಲಿಲ್ಲ. ಸ್ವತಃ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ನಾನಿರುವಾಗ ಸಚಿವ ಸ್ಥಾನ ಏಕೆ ಬೇಕು, ಮುಂದೆ ನೋಡೋಣ ಎಂದು ಭರವಸೆ ನೀಡಿದ್ದರು. ಆದಾಗ್ಯೂ ಶಾಸಕರಾಗಿ ಮುಂದುವರೆದ ಶಿವಣ್ಣನವರ ಅವರಿಗೆ ಅರಣ್ಯ ಅಭಿವೃದ್ದಿ ನಿಗಮದ ಜವಾಬ್ದಾರಿ ಕೊಟ್ಟಿದ್ದು, ಸಮರ್ಥವಾಗಿ ನಿಭಾಯಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಡಿಕೆಶಿ ನೂತನ ಮುಖ್ಯಮಂತ್ರಿ ಆಗಿದ್ದಾರೆ ಎಂದರು.
ಜನಸಂಖ್ಯಾ ಆಧಾರದಲ್ಲಿ ರಾಜ್ಯದಲ್ಲಿ ಎರಡು ಅಥವಾ ಮೂರನೇ ಸ್ಥಾನದಲ್ಲಿರುವ ಕುರುಬ ಸಮಾಜಕ್ಕೆ ಕನಿಷ್ಠ ೪ ಸಚಿವ ಸ್ಥಾನ ನೀಡಲೇಬೇಕು. ಅದರಲ್ಲೂ ಅನುಭವ ಹೊಂದಿರುವ ಶಾಸಕ ಬಸವರಾಜ ಶಿವಣ್ಣನವರ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಚಿವ ಸ್ಥಾನ ನೀಡಲೇಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿವೃತ್ತ ಎಂಜಿನಿಯರ್ ವಿಜಯಕುಮಾರ ಮುದಕಣ್ಣವರ ಮಾತನಾಡಿ, ಸಚಿವ ಸ್ಥಾನ ಕೊಡಿ ಎಂದು ನಾವು ಭಿಕ್ಷೆ, ಕರುಣೆ ಕೇಳುತ್ತಿಲ್ಲ. ಜನಸಖ್ಯೆಗೆ ಅನುಗುಣವಾಗಿ ನಮ್ಮ ಹಕ್ಕನ್ನು, ನಮ್ಮ ಪಾಲನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ. ಬಸವರಾಜ ಶಿವಣ್ಣನವರ ಆರೋಗ್ಯ ಸರಿಯಿಲ್ಲ ಎಂಬುದು ಎಲ್ಲವೂ ಊಹಾಪೋಹ ಅಷ್ಟೆ. ಅವರು ಹಿರಿಯ ನಾಯಕರು ಇದ್ದು, ಆರೋಗ್ಯವಂತರಾಗಿಯೇ ಇದ್ದಾರೆ. ಹಾಗಾಗಿ ನಮ್ಮ ಭರವಸೆ ಹುಸಿಯಾಗದಂತೆ ಸಚಿವ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ ಬಣಕಾರ, ವಿರೂಪಾಕ್ಷಪ್ಪ ಹುಲ್ಲೂರ, ಹನುಮಂತಗೌಡ ಗಾಜಿಗೌಡ್ರ, ಪರಮೇಶ ಮಣ್ಣಮ್ಮನವರ, ನಿಂಗಪ್ಪ ತುಕ್ಕಪ್ಪನವರ, ಬಸವರಾಜ ಕಂಬಳಿ, ಮಾಲತೇಶ ಶಿಡಗನಾಳ, ರಮೇಶ ಚಾವಡಿ, ಪರಶುರಾಮ ಪಾಟೀಲ ಮತ್ತಿತರರು ಇದ್ದರು.

