
ಅಂತು-ಇಂತು ಹಾವೇರಿ ಹೆಗ್ಗೇರೆಕೆರೆಗೆ ಯುಟಿಪಿ ನೀರು ಬಂತು
ಹಾವೇರಿ : ಪ್ರಸ್ತುತ ವರ್ಷ ಮುಂಗಾರು
ಮಳೆ ಸಮರ್ಪಕವಾಗಿಲ್ಲ. ಹೀಗಾಗಿ ಹಾವೇರಿ ನಗರದ ಐತಿಹಾಸಿಕ ಹೆಗ್ಗೇರೆ ಕೆರೆ ನೀರಿಲ್ಲದೇ ಬಹುತೇಕ ಒಣಗುವ ಹಂತಕ್ಕೆ ಬಂದಿತ್ತು. ಇದೀಗ ಯುಟಿಪಿ ಕಾಲುವೆಯ ಮೂಲಕ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಗಿದೆ.
ಕಳೆದ ವರ್ಷ ಬರ ಇದ್ದ ಕಾರಣಕ್ಕಾಗಿ ಹೇಗೋ ಏನೋ ತುಂಬಿದ್ದ ಕೆರೆಯ ನೀರನ್ನು ಬೇಸಿಗೆಯಲ್ಲಿ ಹಾವೇರಿ ನಗರಕ್ಕೆ ಪೂರೈಕೆ ಮಾಡಲಾಗಿತ್ತು.
೬೫೦ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದ ಹೆಗ್ಗೇರೆ ಕೆರೆ ತುಂಬಿದರೆ ಒಂದು ಕಡೆಗೆ ಅಂತರ್ಜಲ ಮಟ್ಟ ಸುಧಾರಿಸುವುದು, ಜೊತೆಗೆ ಕೇವಲ ೩ ಕಿ.ಮೀ.ಅಂತರದಲ್ಲಿ ಇರುವ ಹಾವೇರಿ ನಗರಕ್ಕೆ
ಹೆಗ್ಗೇರೆ ಕೆರೆಯಿಂದ ಸುಲಭವಾಗಿ ನೀರು ಸರಬರಾಜು ಮಾಡಬಹುದಾಗಿದೆ.
ಕೆರೆ ತುಂಬಿದರೆ ಸುತ್ತಮುತ್ತಲಿನ ಗ್ರಾಮಗಳ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಆದರೆ, ಪ್ರಸ್ತುತ ವರ್ಷದ ಅಸಮರ್ಪಕ ಮಳೆಯಿಂದಾಗಿ ಹೆಗ್ಗೇರಿ ಕೆರೆ ಒಡಲು ಬರಿದಾಗಲಾರಂಭಿಸಿತ್ತು.
ಇದರಿಂದ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ರುದ್ರಪ್ಪ ಲಮಾಣಿ ಮತ್ತಿತರರು ಯುಟಿಪಿ ಅಧಿಕಾರಿಗಳಿಗೆ ತುಂಗಾ ಮೇಲ್ದಂಡೆ ಕಾಲುವೆಗೆ ಹರಿಸುತ್ತಿರುವ ತುಂಗಭದ್ರಾ ನೀರನ್ನು ಕೆರೆಗೆ ಹರಿಸಲು ನೀಡಿದ
ಕಟ್ಟು ನಿಟ್ಟಿನ ಸೂಚನೆಯ ಮೇರೆಗೆ ಬುಧವಾರ ದಿಂದ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಯುಟಿಪಿ ಅಧಿಕಾರಿಗಳು ಚಾಲನೆ ನೀಡಿದ್ದಾರೆ.
ಇದೀಗ ಕೆರೆಗೆ ತುಂಗಭದ್ರಾ ಕಾಲುವೆಯಿಂದ ನೀರು ಹರಿಯರಂಭಿಸಿದೆ. ಹೀಗಾಗಿ, ಹೆಗ್ಗೇರಿ ದಿನದಿಂದ ದಿನಕ್ಕೆ ಮೈದುಂಬಿಕೊಳ್ಳಲಾರಂಭಿಸಿದೆ. ನೇರವಾಗಿ ಯುಟಿಪಿ ಕಾಲುವೆಯಿಂದ ನೀರನ್ನು ಭೂಕೊಡಿಹಳ್ಳಿಯ ಬಳಿ ಕೆರೆಯ ಕೊಡಿ ಹತ್ತಿರದಿಂದ ನೀರು ಹರಿಯುತ್ತಿದೆ.
ಮಳೆರಾಯ ಕೈ ಕೊಟ್ಟು ಸಂದರ್ಭದಲ್ಲಿ ಕೊನೆಯ ಪಕ್ಷ ಕೆರೆಯಾದರೂ ತುಂಬಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಕೊಳವೆ ಬಾವಿಯಿಂದ ನೀರು ಹರಿಸಿ ಬೆಳೆ ಬೆಳೆಯಬಹುದು ಎನ್ನುತ್ತಿದ್ದಾರೆ ರೈತರು.
ಕೆರೆಯನ್ನು ನಂಬಿ ತರಕಾರಿ, ಮೆಕ್ಕೆಜೋಳ, ಹತ್ತಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ಈ ಮಧ್ಯೆ ಕೆರೆಯ ನೀರನ್ನು ಹಾವೇರಿ ನಗರದ 24 x7 ಕುಡಿಯುವ ನೀರಿನ ಯೋಜನೆಗೆ ಸಹ ಬಳಸುವ ಯೋಚನೆ ಇದೆ. ಕೆರೆಗೆ ನಗರಸಭೆ ತಡೆ ಬೇಲಿ ಹಾಕಿದ್ದು, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ನಗರಸಭೆ ಅಧಿಕಾರಿಗಳು ಕೇವಲ ಕೆರೆಯ ಒಂದು ದಡದ ಮೇಲೆ ತಂತಿಬೇಲಿ ಹಾಕಿದ್ದಾರೆ, ಕೆರೆಯ ಸುತ್ತ ತಂತಿ ಬೇಲಿ ಹಾಕಿದರೆ ಒತ್ತುವರಿ ತಡೆಗಟ್ಟಬಹುದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.