ಕೇಂದ್ರ ಸರ್ಕಾರದ ಜನ ಗಣತಿ ವೇಳೆ ಎಸ್ಸಿ ಒಳ ಮೀಸಲಾತಿ ವರ್ಗೀಕರಣವಾಗಲಿ; ರಾಜಾನಾಯ್ಕ
ಹಾವೇರಿ: ಕೇಂದ್ರ ಸರ್ಕಾರವು ಜನಗಣತಿ ಹಾಗೂ ಜಾತಿ ಗಣತಿ ಮಾಡುವುದಾಗಿ ಘೋಷಣೆ ಮಾಡಿದೆ. ಕೇಂದ್ರವು ಅತ್ಯಂತ ನಿಕರ ಹಾಗೂ ಸ್ಪಷ್ಟಮಾಹಿತಿ ಸಂಗ್ರಹಿಸುವುದರಿಂದ ಕೇಂದ್ರ ಸರ್ಕಾರ ನಡೆಯುವ ಜಾತಿ ಗಣತಿಯ ವೇಳೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣಕ್ಕ ದತ್ತಾಂಶ ಸಂಗ್ರಹಮಾಡುವಂತೆ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಎಸ್.ಆರ್ ರಾಜಾನಾಯ್ಕ ಒತ್ತಾಯಿಸಿದ್ದಾರೆ.
ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರ ಪರಿಶಿಷ್ಟ ಜಾತಿಗಳ ಉಪವರ್ಗೀಕರಣಕ್ಕಾಗಿ ಕೈಗೊಳ್ಳುತ್ತಿರುವ ಸಮೀಕ್ಷೆಯು ತರಾತುರಿಯಲ್ಲಿ ನಡೆಸುವಂತಾಗಿದ್ದು, ಈ ಸಮೀಕ್ಷೆಯಿಂದ ಸಮಂಜಸವಾದ ವರದಿ ನಿರೀಕ್ಷೆ ಹುಸಿಯಾಗಿ ಬಂಜಾರ ಸಮಾಜಕ್ಕೆ ಅನ್ಯಾಯವಾಗಲಿದೆ ಎಂದರು.
ಒಳಮೀಸಲಾತಿ ವಿಚಾರದಲ್ಲಿ ನ್ಯಾ.ನಾಗಮೋಹನದಾಸ ಅವರು ಸರಕಾರಕ್ಕೆ ನೀಡಿರುವ ಮಧ್ಯಂತರ ವರದಿಯಲ್ಲಿ ಸುಪ್ರೀಂ ಕೋರ್ಟಿನ ಆದೇಶದಂತೆ ಪ್ರಾಯೋಗಿಕ ದತ್ತಾಂಶ ಸಂಗ್ರಹಣೆ ಮಾಡದೇ ಒಳಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಸರಕಾರ ಪರಿಶಿಷ್ಟ ಜಾತಿಗಳಲ್ಲಿ ಬರುವ ಪ್ರತಿಯೊಂದು ಜಾತಿಯ ಸ್ಥಿತಿಗತಿ ಕುರಿತು ಅಧ್ಯಯನ ಮಾಡಲು ಆದೇಶಿಸಿದೆ. ಮೇ.೫ರಿಂದ ೧೭ರ ವರೆಗೆ ಸಮೀಕ್ಷೆ ಕಾರ್ಯ ನಡೆಸಲು ಮುಂದಾಗಿದೆ. ಇಷ್ಟು ಕಡಿಮೆ ಅವಯಲ್ಲಿ ಬಂಜಾರ ಸಮಾಜದ ಸಮೀಕ್ಷೆ ನಡೆಸುವುದು ಅಸಾಧ್ಯವಿದೆ ಎಂದರು.
ಬಂಜಾರ ಕುಟುಂಬಗಳ ಜೀವನ ಸ್ಥಿತಿಗತಿ ಶೋಚನೀಯವಾಗಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಔದ್ಯೋಗಿಕವಾಗಿ ತೀರಾ ಹಿಂದುಳಿದಿದ್ದಾರೆ. ಲಂಬಾಣಿಗರು ವಾಸಿಸುವ ಗ್ರಾಮಗಳು ಕಂದಾಯ ಗ್ರಾಮಗಳಲ್ಲ. ಯಾವುದೇ ಹಕ್ಕುಪತ್ರ ಹೊಂದಿಲ್ಲ. ಜೀವನೋಪಾಯಕ್ಕಾಗಿ ಆಂಧ್ರ, ಗೋವಾ, ಮಹಾರಾಷ್ಟ್ರ, ಚಿಕ್ಕಮಗಳೂರು, ಬೆಂಗಳೂರ ಹೀಗೆ ವಿವಿಧಡೆ ಕೆಲಸಕ್ಕಾಗಿ ವಲಸೆ ಹೋಗಿದ್ದಾರೆ. ಕಡಿಮೆ ಅವಧಿಯಲ್ಲಿ ಸಮೀಕ್ಷೆಗೆ ಹಾಜರಾಗಲು ಸಾಧ್ಯವಿಲ್ಲ. ಹಾಗಾಗಿ ದೀಪಾವಳಿ ಸಮಯದಲ್ಲಿ ಲಂಬಾಣಿಗರ ಹಿರಿಯರಿಗೆ (ಮೃತಪಟ್ಟವರಿಗೆ)ದೂಪ ಹಾಕುವ ವೇಳೆ ವಾಪಾಸ್ಸಾಗುವುದರಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಇಲ್ಲವೇ ಸಮೀಕ್ಷೆಗಾರರೇ ಬಂಜಾರರು ದುಡಿಯಲು ಹೋಗಿರುವ ಸ್ಥಳಕ್ಕೆ ತೆರಳಿ ಸಮೀಕ್ಷೆ ನಡೆಸಬೇಕು. ಈಗಾಗಲೇ ಕೇಂದ್ರ ಸರಕಾರ ಘೋಷಿಸಿದಂತೆ ಜಾತಿಜನಗಣತಿ ವೇಳೆ ಸಮೀಕ್ಷೆ ಮಾಡಿದಾಗ ನಿಜವಾದ ಅಂಕಿಅಂಶಗಳು ಸಿಗಲಿವೆ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಮಾತನಾಡಿ, ೨೦೧೧ರ ಗಣತಿ ಸಮಯದಲ್ಲಿ ರಾಜ್ಯದಲ್ಲಿ ಕೇವಲ ೧೨ಲಕ್ಷ ಜನಸಂಖ್ಯೆ ಇದೆ ಎಂದು ಅಂಕಿ ಅಂಶಗಳನ್ನು ತಿಳಿಸಿದ್ದಾರೆ. ಇದು ಸತ್ಯಕ್ಕೆ ದೂರವಾಗಿದ್ದು, ರಾಜ್ಯದಲ್ಲಿ ಸುಮಾರು ೩೩೦೦ಕ್ಕೂ ಹೆಚ್ಚು ತಾಂಡಾಗಳಿದ್ದು, ಒಂದೊಂದು ತಾಂಡಾದಲ್ಲಿ ಸಾವಿರ, ೨ ಸಾವಿರ, ೫೦೦೦ವರೆಗೆ ಜನರು ವಾಸ ಮಾಡಿಕೊಂಡಿದ್ದಾರೆ. ಎವರೇಜ್ ೧ ಸಾವಿರದಂತೆ ನೋಡಿದಾಗ ೩೩ಲಕ್ಷ ಜನಸಂಖ್ಯೆ ಇದೆ. ಹಾಗಾಗಿ ಸರಕಾರ ಸಮಾಜಕ್ಕೆ ಅನ್ಯಾಯವಾಗದ ರೀತಿಯಲ್ಲಿ ಬಂಜಾರರ ಪರವಾಗಿ ವೈಜ್ಞಾನಿಕ ಸಮೀಕ್ಷೆ ಮಾಡಬೇಕು. ಮೂಲಭೂತ ಸೌಕರ್ಯಗಳ ಜತೆಗೆ ಸರಕಾರಿ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಆಗ್ರಹಿಸಿದರು.
ಸಮಾಜದ ಮುಖಂಡ ಈರಪ್ಪ ಲಮಾಣ ಮಾತನಾಡಿ, ಲಂಬಾಣಿಗರು ವಾಸಿಸುವ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು. ಲಂಬಾಣಿ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಗಪ್ಪ ಚೌಹಾಣ, ಜಯರಾಮ ಮಾಳಾಪುರ, ಐ.ಡಿ ಲಮಾಣಿ, ರಮಾನಾಯಕ ಗಂಗಾ ನಾಯಕ ಗೊಂದಿ, ರೂಪಾ ನಾಯಕ, ನಂಜ್ಯಾ ನಾಯಕ, ಪಾಂಡು ಚವ್ಹಾಣ, ರಾಮಣ್ಣ ಲಮಾಣಿ, ಜಯರಾಮ ಮಾಳಾಪುರ, ರಮೇಶ ಲಮಾಣಿ, ಈಶ್ವರ ಲಮಾಣಿ, ಸೋಮಣ್ಣ ಲಮಾಣಿ, ಸೇರಿದಂತೆ ಬಂಜಾರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.