ಸಂತ್ರಸ್ತ ಮಹಿಳೆಗೆ ನ್ಯಾಯ ಕೊಡಿಸಲು ಬದ್ಧ, ಯಾವುದೇ ಆರೋಪಿಗಳು ಪಾರಾಗಲು ಅವಕಾಶ ನೀಡುವುದಿಲ್ಲ; ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಜ. ೮ರಂದು ವಸತಿಗೃಹದಲ್ಲಿ ಮಹಿಳೆ ಮೇಲೆ ನಡೆದ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳನ್ನು ಪೊಲೀಸ್ ಅದಿ ಕಾರಿಗಳು ಬಂಧಿಸಿದ್ದಾರೆ. ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ದೂರು ದಾಖಲಾದ ದಿನವೇ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಯಾವುದೇ ಆರೋಪಿಗಳು ಪಾರಾಗಲು ಅವಕಾಶ ನೀಡುವುದಿಲ್ಲ. ಸಂತ್ರಸ್ತ ಮಹಿಳೆಗೆ ನ್ಯಾಯ ಕೊಡಿಸಲು ಬದ್ಧ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಈಬಗ್ಗೆ ಪತ್ರಿಕಾಪ್ರಕಟಣೆ ನೀಡಿರುವ ಅವರು ಈ ಘಟನೆ ಹಾನಗಲ್ ವಸತಿ ಗೃಹದಲ್ಲಿ ನಡೆದಿದ್ದು, ವಸತಿ ಗೃಹದ ಮಾಲೀಕರು ಘಟನೆ ಸಂಭವಿಸಿದ ದಿನವೇ ದೂರು ದಾಖಲು ಮಾಡಿದ್ದರೆ, ಆರೋಪಿಗಳನ್ನು ಇನ್ನೂ ಬೇಗ ಬಂಧಿಸಲು ಸಾಧ್ಯವಿತ್ತು. ಕೆಲವರು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿದ್ದು, ಸೂಕ್ತ ತನಿಖೆಗೆ ನಿರ್ದೇಶನ ನೀಡಿದ್ದೇನೆ.
ಜ. ೧೧ರಂದು ಹಾನಗಲ್ ತಾಲೂಕು ಅಕ್ಕಿ ಆಲೂರಿನ ಗ್ಯಾರೇಜ್ ಉದ್ಯೋಗಿ ಅಪ್ತಾಬ್ ತಂದೆ ಮಣ್ಣೂಲ್ ಅಹ್ಮದ್ (೨೪) ವ್ಯಾಪಾರಿ ಮದರಸಾಬ್ ತಂದೆ ಮಹಮ್ಮದ್ ಇಸಾಕ್ (೨೩) ಮತ್ತು ಹಾನಗಲ್ ತಾಲೂಕು ಹೀರೂರು ಗ್ರಾಮದ ಆಟೋ ಚಾಲಕ ಅಬ್ದುಲ್ ಖಾದರ್ ತಂದೆ ಜಾಫರ್ಸಾಬ್ ಹಂಚಿನಮನಿ (೨೮) ಅವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅಕ್ಕಿಆಲೂರಿನ ಮಹ್ಮದ್ ಸೈಫ್ ತಂದೆ ಅಬ್ದುಲ್ ಸತ್ತಾರ್ ಸಾವಿಕೇರಿ ಜ. ೯ರಂದು ಸ್ವಯಂ ಅಪಘಾತದಲ್ಲಿ ಗಾಯಗೊಂಡಿದ್ದು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಚಿಕಿತ್ಸೆ ಮುಗಿದ ನಂತರ ಬಂಧಿಸಲಾಗುವುದು. ಜ. ೧೪ರಂದು ಭಾನುವಾರ ರಹೀನ್ ತಂದೆ ಮಹಮದ್ ಹುಸೇನ್ ವಾಲಿ ಕಾರ್ (೧೯), ಇಮ್ರಾನ್ ತಂದೆ ಬಷೀರ್ ಜಕ್ಕಿನಕಟ್ಟಿ (೨೩) ಎಂಬ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಹಾನಗಲ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದಾಖಲು ಮಾಡಿರುವ ದೂರು ಹಾಗೂ ಜ. ೧೧ರಂದು ನ್ಯಾಯಾಧೀಶರ ಎದುರು ನೀಡಿರುವ ಹೇಳಿಕೆ ಬಗ್ಗೆ ನಿಷ್ಪಕ್ಷಪಾತ ಹಾಗೂ ಕೂಲಂಕುಶ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಘಟನೆ ಬಗ್ಗೆ ಕೆಲವು ಮುಖಂಡರು ಟೀಕೆ-ಟಿಪ್ಪಣಿ ಮಾಡುತ್ತಿದ್ದಾರೆ. ವಿಷಯ ಸೂಕ್ಷ್ಮವಾಗಿರುವುದರಿಂದ ಹಾಗೂ ಮಾನವೀಯತೆ ದೃಷ್ಟಿಯಿಂದ ಈ ಪ್ರಕರಣದಲ್ಲಿ ರಾಜಕೀಯ ಬೆರಸಬಾರದು. ಸಂತ್ರಸ್ತ ಮಹಿಳೆಗೆ ನ್ಯಾಯ ಕೊಡಿಸಲು ಬದ್ಧವಾಗಿದ್ದು, ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ,ಮನವಿ ಮಾಡಿದ್ದಾರೆ.