ಭಾರತವನ್ನು ಪ್ರತಿನಿಧಿಸಿರುವ ಮೂವರು ಅಂಧ ಯುವತಿಯರಿಗೆ ಸರ್ಕಾರ ೨೫ಲಕ್ಷರೂಗಳ ಆರ್ಥಿಕ ನೆರವು ಘೋಷಿಸಲಿ: ಶ್ರೀಷಡಕ್ಷರಿಮುನಿ
ಹಾವೇರಿ: ಅನೇಕರು ದೈಹಿಕವಾಗಿ ಸದೃಢವಾಗಿದ್ದರೂ ಸಹ ಸಾಧನೆ ಮಾಡಲು ಸಾಧ್ಯವಾಗದೇ ಕೈಚಿಲ್ಲಿರುವಾಗ, ಅಂಧತ್ವವನ್ನು ಸವಾಲಾಗಿ ಸ್ವೀಕರಿಸಿ ರಾಜ್ಯದ ಮೂವರು ಯುವತಿಯರು ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ಇಂಗ್ಲೆಂಡ್ನ ಬರ್ಮಿಂಗ್ ಹ್ಯಾಮ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಜಯಗಳಿಸಿ ಚಿನ್ನದ ಪದಕ ಪಡೆದುಕೊಂಡಿರುವುದು ಸಣ್ಣ ಸಾಧನೆಯಲ್ಲ. ಈ ಸಾಧನೆ ಮಾಡಿರುವ ರಾಜ್ಯದ ಮೂವರು ಯುವತಿಯರಿಗೆ ರಾಜ್ಯ ಹಾಗಾ ಕೇಂದ್ರ ಸರ್ಕಾರಗಳು ನೆರವಿಗೆ ಧಾವಿಸುವ ಮೂಲಕ ತಲಾ ೨೫ಲಕ್ಷರೂಗಳ ಆರ್ಥಿಕ ನೆರವು ಘೋಷಿಸಬೇಕೆಂದು ಹಿರಿಯೂರಿನ ಆದಿ ಜಾಂಬವ ಕೋಡಿಹಳ್ಳಿ ಬ್ರಹನ್ಮಠದ ಷಡಕ್ಷರಿಮುನಿಶ್ರೀ ಆಗ್ರಹಿಸಿದರು.
ಮಂಗಳವಾರ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳಗ್ರಾಮದಲ್ಲಿ ಮಹಿಳಾ ಅಂಧರ ತಂಡವನ್ನು ಪ್ರತಿನಿಧಿಸಿರುವ ಅಂಧ ವಿಕಲಚೇತನ ಗಂಗವ್ವ ನೀಲಪ್ಪ ಹರಿಜನರನ್ನು ಸನ್ಮಾನಿಸಿ ಅವರು ಮಾತನಾಡಿದರು. ಭಾರತ ತಂಡವನ್ನು ಪ್ರತಿನಿಧಿಸಿರುವ ಶಿಶುನಾಳದ ಗಂಗಮ್ಮ, ಹಿರಿಯೂರಿನ ವರ್ಷ, ಶಿರಾದ ದೀಪಿಕಾ ಅವರು ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಇವರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಮುಂದಾಗಬೇಕು. ಈ ಮೂವರಿಗೆ ತಲಾ ೨೫ಲಕ್ಷರೂಗಳ ನೆರವು ನೀಡಬೇಕು, ಬೆಂಗಳೂರಲ್ಲಿ ಇವರವಾಸಕ್ಕೆ ಮನೆ ನೀಡಬೇಕು, ಇವರ ಓದಿಗ ತಕ್ಕ ಸರ್ಕಾರಿ ನೌಕರಿ ನೀಡಬೇಕೆಂದು ಅವರು ಹೇಳಿದರು.
ಈಗಾಗಲೇ ಓಡಿಸ್ಸಾ ಸರ್ಕಾರ ಭಾರತವನ್ನು ಪ್ರತಿನಿಧಿಸಿದ ಆ ರಾಜ್ಯದ ಮಹಿಳೆಯರಿಗೆ ೨೦ಲಕ್ಷ ಆರ್ಥಿಕ ನೆರವು ನೀಡಿದೆ, ರಾಜ್ಯ ಸರ್ಕಾರ ಇವರನ್ನು ಕಡೆಗಣಿಸಿರುವುದು ಸರಿಯಲ್ಲ. ಸರ್ಕಾರ ಹಾಗೂ ಸಂಘ-ಸಂಸ್ಥೆಗಳ ಅಂಧ ಮಹಿಳಾ ಕ್ರೀಡಾಪಟುಗಳ ನೆರವಿಗೆ ಬರಬೇಕು. ಇವರಿಗೆ ತಕ್ಕ ತರಬೇತಿಯನ್ನು ನೀಡುವ ಮೂಲಕ ಅಂಧರ ಕ್ರಿಕಟ್ಗೆ ಪ್ರೋತ್ಸಾಹ ನೀಡಲು ಮುಂದೆ ಬರಬೇಕು, ಇದರಿಂದ ಇನ್ನು ಹೆಚ್ಚಿನ ಸಾಧನೆ ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಂಗಮ್ಮ ಹರಿಜನ ನನ್ನ ತಂದೆ ಮೃತಪಟ್ಟಿದ್ದು, ನನ್ನ ತಾಯಿ ಗಂಗವ್ವ ನನಗೆ ಪ್ರೋತ್ಸಾಹ ನೀಡಿದ ಕಾರಣಕ್ಕೆ ನಾನು ಅಂಧರ ಕ್ರಿಕೆಟ್ ನಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಇಂಗ್ಲೆಂಡ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ನಾನು ಶತಕ ಗಳಿಸಲು ಸಾಧ್ಯವಾಯಿತು. ನಮಗೆ ಸೂಕ್ತ ತರಬೇತಿ ಸಿಕ್ಕರೆ ಇನ್ನು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರ ಹಾಗೂ ಬಿಸಿಸಿಐ ಕ್ರಿಕೆಟ್ಗೆ ನೀಡಿರುವ ಮಾನ್ಯತೆಯನ್ನು ಅಂಧರ ಕ್ರಿಕೆಟ್ಗೂ ನೀಡಬೇಕು, ಅಂದಾಗ ನಮಗೆ ಹೆಚ್ಚಿನ ಆರ್ಥಿಕ ನೆರವು ದೊರೆಯಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಬಸವರಾಜ ಹೆಡಿಗೊಂಡ, ಎಸ್.ಜಿ.ಹೊನ್ನಪ್ಪನವರ, ಡಾ.ಮಲ್ಲೇಶಪ್ಪ ಹರಿಜನ, ಮಾಲತೇಶ ಯಲ್ಲಾಪುರ, ಕರಿಯಪ್ಪ ಕಟ್ಟಿಮನಿ, ಭೀಮಣ್ಣ ಹೊಟ್ಟೂರ, ಶಿವಾನಂದ ಮಾದರ, ಸಂಜಯಗಾಂಧಿ ಸಂಜೀವಣ್ಣನವರ, ಸುರೇಶ ಮಾದರ, ಹನುಮಂತಪ್ಪ ಮಾದರ, ಏಳುಕೋಟೆಪ್ಪ ಪಾಟೀಲ, ಮರಿಯಪ್ಪ ನಡುವಿಮನಿ,ಅಜ್ಜಯ್ಯ ಮರಿಯಣ್ಣನವರ, ಅಜ್ಜಯ್ಯ ಆರಿಕಟ್ಟಿ, ಪುಟ್ಟಪ್ಪ ಕೋಟಿಹಾಳ ಮೊದಲಾದವರು ಇದ್ದರು.