

ಹಾವೇರಿ: ಬಿಲ್ ಪಾಸ್ ಮಾಡಲು ಲಂಚ, ಇಬ್ಬರು ಇಂಜನಿಯರುಗಳ ಬಂಧನ
ಹಾವೇರಿ: ಗುತ್ತಿಗೆದಾರರು ಕೈಗೊಂಡ ಕಾಮಗಾರಿಗಳ ಬಿಲ್ ಪಾಸ ಮಾಡಲು ಲಂಚ ಪಡೆಯುತ್ತಿದ್ದ ಶಿಗ್ಗಾವಿ ಏತ ನೀರಾವರಿ ಉಪವಿಭಾಗದ ಧಾರವಾಡ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಬಿ ಹಾಗೂ ಕಿರಿಯ ಇಂಜಿನಿಯರ್ ಪ್ರಕಾಶ ಹೊಸಮನಿ ಅವರನ್ನು ಡಿ.೧೯ರಂದು ಲೋಕಾಯುಕ್ತರು ಲಂಚದ ಹಣದ ಸಮೇತ ಬಂಧಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಎಳ್ಳೆಮಕ್ಕಿಯ ೧ನೇ ದರ್ಜೆಗುತ್ತಿಗೆದಾರ ಬಾಲಕೃಷ್ಣ ಪುಂಡಲೀಕ ನಾಯ್ಕ, ಹಾವೇರಿ ಜಿಲ್ಲೆಯ ಹೊಟ್ಟೂರು-ಬಿಸನಳ್ಳಿ, ಶಡಗರವಳ್ಳಿ-ಸಿದ್ದರಾಮೇಶ್ವರಗುಡ್ಡ ಹಾಗೂ ತೋರೂರು-ಹನಕನಹಳ್ಳಿ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಿದ್ದು, ಸದರಿ ಕಾಮಗಾರಿಗಳ ಬಿಲ್ಗಳನ್ನು ಮೇಲಾಧಿಕಾರಿಗಳಿಗೆ ಕಳಿಸಲು ಶಿಗ್ಗಾವಿ ಏತ ನೀರಾವರಿ ಉಪವಿಭಾಗ ೧ ಮತ್ತು ೨, ಧಾರವಾಡ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಬಿ ಹಾಗೂ ಕಿರಿಯ ಇಂಜಿನಿಯರ್ ಪ್ರಕಾಶ ಹೊಸಮನಿ ಈಗಾಗಲೇ ಫಸ್ಟ & ಪಾರ್ಟಿ ಬಿಲ್ಲನ್ನು ಪಾಸ್ ಮಾಡಲು ಫೋನ್ ಪೇ ಮೂಲಕ ಒಟ್ಟು ೮೩,೦೦೦/- ಗಳ ಲಂಚದ ಹಣ ಪಡೆದುಕೊಂಡಿದ್ದರು.
ಸೆಕೆಂಡ ಹಾಗೂ ಫೈನಲ್ ಬಿಲ್ ಪಾಸ್ ಮಾಡಲು ತಲಾ ರೂ ೫೦,೦೦೦/-ಗಳಿಗೆ ಬೇಡಿಕೆ ಇಟ್ಟು ರೂ ೧,೦೦,೦೦೦/- ಲಂಚದ ಹಣವನ್ನು ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಟ್ರ್ಯಾಪ್ ಮಾಡಿದ್ದಾರೆ. ಸದರಿ ಆರೋಪಿತರನ್ನು ಶಿಗ್ಗಾವಿ ಏತ ನೀರಾವರಿ ಉಪವಿಭಾಗ ೧ ಮತ್ತು ೨, ಧಾರವಾಡ ಕಛೇರಿಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು, ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಪೊಲೀಸ್ ನಿರೀಕ್ಷಕರಾದ ಮಂಜುನಾಥ ಪಂಡಿತ್, ಮುಸ್ತಾಕ್ ಅಹ್ಮದ್ ಶೇಖ, ಆಂಜನೇಯ ಎನ್.ಎಚ್, ಹಾಗೂ ಸಿಬ್ಬಂದಿ ಸಿ.ಎಮ್. ಬಾರ್ಕಿ, ಎಮ್. ಕೆ. ನದಾಫ, ಎಮ್.ಕೆ. ಲಕ್ಷ್ಮೀಶ್ವರ, ಆನಂದ ತಳಕಲ್ಲ, ಎಸ್ಎನ್ ಕಡಕೋಳ, ಬಿ ಎಸ್ ಸಂಕಣ್ಣನವರ, ಎನ್ ಬಿ ಪಾಟೀಲ್, ಎ ಜಿ ಶೆಟ್ಟರ್, ಎಮ್ ಸಿ ಅರಸೀಕೆರೆ ಎಮ್ ಎಸ್ ಕೊಂಬಳಿ, ರಮೇಶ ಗೆಜ್ಜೆಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು..

