ಹಾವೇರಿ ನಗರಸಭೆಯಲ್ಲಿ “ಕೈ”ಗೆ ಆಪರೇಷನ್! ಬಹುಮತ ಇದ್ದರೂ ಅಧಿಕಾರ ಕಳೆದುಕೊಂಡ ಕಾಂಗ್ರೆಸ್! ಬಹುಮತ ಇಲ್ಲದಿದ್ದರೂ ಅಧಿಕಾರ ಹಿಡಿದ ಬಿಜೆಪಿ
ನೂತನ ಅಧ್ಯಕ್ಷೆಯಾಗಿ ಶಶಿಕಲಾ ಮಾಳಗಿ-ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಸಾತೇನಹಳ್ಳಿ ಆಯ್ಕೆ
ಹಾವೇರಿ: ಕಳೆದ ೧೮ ತಿಂಗಳಿಂದ ನೆನೆ ಗುದಿಗೆ ಬಿದ್ದಿದ್ದ ಹಾವೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶಶಿಕಲಾ ರಾಮು ಮಾಳಗಿ ಅಧ್ಯಕ್ಷೆಯಾಗಿ, ಮಲ್ಲಿಕಾರ್ಜುನ ಸಾತೇನಹಳ್ಳಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಹುಮತ ಇದ್ದರೂ ಕಾಂಗ್ರೆಸ್ ನಗರಸಭೆಯ ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ಕಾಂಗ್ರೆಸ್ನ ಆರು ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅಧ್ಯಕ್ಷ ,ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಶಶಿಕಲಾ ರಾಮು ಮಾಳಗಿ ಅವರಿಗೆ ೧೭. ಸದಸ್ಯರು ಬೆಂಬಲ ಸೂಚಿಸಿದರು, ಕಾಂಗ್ರೆಸ್ ನ ರೇಣುಕಾ ರವಿ ಪುತ್ರನ್ ಅವರಿಗೆ ೧೧ಸದಸ್ಯರು ಬೆಂಬಲ ಸೂಚಿಸಿದರು. ನಗರಸಭೆಯ ನೂತನ ಅಧ್ಯಕ್ಷರಾಗಿ ಶಶಿಕಲಾ ಮಾಳಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಉಪಾಧ್ಯಕ್ಷ ಸ್ಥಾನ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಮೀಸಲು ನಿಗದಿಪಡಿಸಲಾಗಿತ್ತು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಮಲ್ಲಿಕಾರ್ಜುನ ಸಾತೇನಹಳ್ಳಿ ಅವರಿಗೆ ೧೭ ಸದಸ್ಯರು ಬೆಂಬಲ ಸೂಚಿಸಿದ್ದರಿಂದ ಅವರು ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಪೂಜಾ ಹಿರೇಮಠ ಅವರಿಗೆ ೧೧ಸದಸ್ಯರು ಮಾತ್ರ ಬೆಂಬಲ ಸೂಚಿಸಿದರು.
ನಗರಸಭೆಯಲ್ಲಿ ೩೧ ಸದಸ್ಯರ ಸ್ಥಾನಗಳ ಪೈಕಿ ಕಾಂಗ್ರೆಸ್ ೧೫ ಸ್ಥಾನಗಳನ್ನು ಹೊಂದಿತ್ತು. ಇದರಲ್ಲಿ ೬ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಸಭೆಗೆ ಗೈರಾಗಿದ್ದರಿಂದ ಕಾಂಗ್ರೆಸ್ನ ಸದಸ್ಯರ ಬಲ ೯ಕ್ಕೆ ಕುಸಿದಿತ್ತು. ಇನ್ನು ಕಾಂಗ್ರೆಸ್ನ ಸ್ಥಳೀಯ ಶಾಸಕರು ಹಾಗೂ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ ಅವರು ಹಾವೇರಿಯಲ್ಲಿ ಮತದಾನ ಹೊಂದಿರು ಕಾರಣಕ್ಕಾಗಿ ಅವರು ಬುಧವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹಾಜರಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತದಾನ ಮಾಡಿದರೂ ಸಹ ಅದು ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಪಡೆಯಲು ನೆರವಿಗೆ ಬರಲಿಲ್ಲ. ಇನ್ನೂ ಸಂಸದ , ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬುಧವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಸಭೆಯಲ್ಲಿ ಭಾಗವಹಿಸಿಸಿ ಬಿಜೆಪಿ ಬೆಂಬಲಿತರ ಪರವಾಗಿ ಮತಚಲಾಯಿಸುವ ಮೂಲಕ ಬಿಜೆಪಿ ಬೆಂಬಲಿಗರು ನಗರಸಭೆಯ ಅಧಿಕಾರ ವಶಕ್ಕೆ ಪಡೆಯುವಲ್ಲಿ ನೆರವಾದರು.
ನಗರಸಭೆಯಲ್ಲಿ ೯ ಸದಸ್ಯರನ್ನು ಹೊಂದಿದ್ದ ಬಿಜೆಪಿ ೭ ಜನ ಪಕ್ಷೇತರ ಸದಸ್ಯರ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ಮತವು ಸೇರಿ ಒಟ್ಟು ೧೭ಸದಸ್ಯ ಬಲದಿಂದ ನಗರಸಭೆಯನ್ನು ಬಿಜೆಪಿ ವಶಕ್ಕೆ ಪಡೆದುಕೊಂಡಿತು.
ವಿಜಯೋತ್ಸವ: ಹಾವೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರು ಬಿಜೆಪಿ ಬೆಂಬಲಿತರು ಆಯ್ಕೆಯಾಗುತ್ತಿದ್ದಂತೆ ನಗರಸಭೆಯ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ವಿಜಯೋತ್ಸವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಅರುಣಕುಮಾರ ಪೂಜಾರ, ರಾಮು ಮಾಳಗಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾರ್ತಕರ್ತರು ಭಾಗವಹಿಸಿದ್ದರು.
ಸೈಲೆಂಟಾಗಿ ಕೈಗೆ ಆಪರೇಷನ್? ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿದ್ದ ಆಪರೇಷನ್ ಕಮಲದ ವಾಸನೆ ಬುಧವಾರ ಹಾವೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕೇಳಿಬಂದಿತು. ಪರಿಶಿಷ್ಟಜಾತಿಗೆ ಸೇರಿರುವ ಶಶಿಕಲಾ ಮಾಳಗಿ ಅವರ ಪತಿ ರಾಮು ಮಾಳಗಿ ಬಿಜೆಪಿಯ ಕೆಲವು ಮುಖಂಡರ ಬೆಂಬಲದಿಂದ ಕಾಂಗ್ರೆಸ್ನ ೬ ಸದಸ್ಯರ ಮೇಲೆ ಪ್ರಭಾವ ಬೀರಿ ಅವರು ಬುಧವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಿಂದ ದೂರ ಇರುವಂತೆ ನೋಡಿಕೊಂಡರೆಂದು, ಇದರಿಂದಾಗಿ ಕಾಂಗ್ರೆಸ್ ೬ ಸದಸ್ಯರು ಕೈಗೆ ಕೈಕೊಟ್ಟು ಸಭೆಯಿಂದ ದೂರ ಉಳಿದರೆಂದು, ಆರು ಸದಸ್ಯರಿಗೆ ದೊಡ್ಡ ಪ್ರಮಾಣದಲ್ಲಿ ಕೈ ಬೆಚ್ಚಗೆ ಮಾಡಲಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.