“ಮಕ್ಕಳಿಗೆ ಅನ್ಯಾಯ ಮಾಡುತ್ತೀರಲ್ಲ, ನಾಚಿಕೆ ಆಗಬೇಕು ನಿಮಗೆ “
ಅಂಗನವಾಡಿಗಳಿಗೆ ಹಾಲಿನ ಪುಡಿ ಪೂರೈಸದ ಅಧಿಕಾರಿಗಳ ವಿರುದ್ಧ ಶಾಸಕ ಮಾನೆ ಕಿಡಿ
ಹಾನಗಲ್: ತಾಲೂಕಿನಲ್ಲಿ ಅಂಗನವಾಡಿಗಳಿಗೆ ಹಾಲಿನ ಪುಡಿ ಪೂರೈಕೆ ಆಗದೇ ಇದ್ದರೂ ಗಮನಕ್ಕೆ ತರದ ಸಿಡಿಪಿಒ ನಂದಕುಮಾರ ಅವರ ವಿರುದ್ಧ ಗುರುವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಕಿಡಿಕಾರಿದ ಘಟನೆ ನಡೆಯಿತು.
ಮಕ್ಕಳು ದೇವರಿಗೆ ಸಮ. ಅವರಿಗೂ ಅನ್ಯಾಯ ಮಾಡುತ್ತೀರಲ್ಲ. ನಾಚಿಕೆ ಆಗಬೇಕು ನಿಮಗೆ ಎಂದು ಹರಿಹಾಯ್ದರು. ಯಾವುದೇ ಸಮಸ್ಯೆ, ಏನೇ ಮಾಹಿತಿ ಕೇಳಿದರೂ ಸಮರ್ಪಕ ಮಾಹಿತಿ ನೀಡದೇ ಕೆಲ ತಿಂಗಳ ಹಿಂದೆಯಷ್ಟೆ ಬಂದಿದ್ದೇನೆ ಎಂದು ಸಿಡಿಪಿಒ ಹಾರಿಕೆ ಉತ್ತರ ನೀಡಿದಾಗ ಮತ್ತೆ ಆಕ್ರೋಶಗೊಂಡ ಶಾಸಕ ಮಾನೆ, ಅಲ್ಲರೀ ನೀವು ತಾಲೂಕಿಗೆ ಹೊಸಬರು ಇರಬಹುದು. ಇಲಾಖೆಗೆ ಹೊಸಬರಾ? ಎಲ್ಲದಕ್ಕೂ ಹಾರಿಕೆ ಉತ್ತರ ಕೊಡುತ್ತೀರಿ. ಇದುವರೆಗೆ ಎಷ್ಟು ಕೇಂದ್ರಗಳಿಗೆ ಭೇಟಿ ನೀಡಿದ್ದೀರಿ? ಕರ್ತವ್ಯಲೋಪ ತೋರಿದ ಎಷ್ಟು ಸಿಬ್ಬಂದಿಗೆ ನೋಟಿಸ್ ನೀಡಿದ್ದೀರಿ? ನೀವೇ ಸುಪ್ರೀಂ ಎಂದು ಭಾವಿಸಿದ್ದೀರಾ? ಹಾಲಿನ ಪುಡಿ ಪೂರೈಕೆ ಆಗದೇ ಇರುವುದಕ್ಕೆ ನಿಮ್ಮನ್ನೇ ಹೊಣೆ ಮಾಡುವೆ ಎಂದು ಎಚ್ಚರಿಸಿದಾಗ, ತಪ್ಪಾಗಿದೆ. ಸರಿಯಾಗಿ ಕೆಲಸ ಮಾಡಿಕೊಂಡು ಹೋಗುವುದಾಗಿ ಸಿಡಿಪಿಒ ಮನವಿ ಮಾಡಿಕೊಂಡರು.
ಆರೋಗ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಅಸಮರ್ಪಕ ಉತ್ತರ ನೀಡಲು ಮುಂದಾದ ಟಿ.ಹೆಚ್.ಒ ಡಾ.ಲಿಂಗರಾಜ ಅವರೂ ಸಹ ಶ್ರೀನಿವಾಸ ಮಾನೆ ಅವರ ಕೆಂಗಣ್ಣಿಗೆ ಗುರಿಯಾದರು. ನೇರವಾಗಿ ಉತ್ತರ ಕೊಡಿ. ಸುತ್ತಿ ಬಳಸಿ ಏಕೆ ಮಾತನಾಡುತ್ತೀರಿ. ನಿಮಗೆ ಸ್ವಲ್ಪೂತಾಳ್ಮೆ ಇಲ್ಲ, ಸೇವಾಭಾವನೆಯೂ ಇಲ್ಲ, ಮಾನವೀಯತೆ ಮರೆತಿದ್ದೀರಿ. ರೋಗಿಗಳು ಬಳಿಗೆ ಬಂದಾಗ ಅರ್ಧ ರೋಗವನ್ನು ಬರೀ ಮಾತನಾಡಿಸಿ ವಾಸಿ ಮಾಡಬೇಕು. ಇದನ್ನು ನಿಮಗೆ ವೈದ್ಯಕೀಯ ಪದವಿ ಓದುತ್ತಿದ್ದಾಗ ಹೇಳಿಕೊಟ್ಟಿಲ್ಲವಾ? ಎಂದು ಪ್ರಶ್ನಿಸಿ ಫೆಬ್ರವರಿ ತಿಂಗಳಿನಲ್ಲಿ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದೀರಿ ಎನ್ನುವ ವರದಿ ಕೊಡಿ. ಇಲಾಖೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಜವಾಬ್ದಾರಿಯ ಬಗ್ಗೆಯೂ ನಿಮಗೆ ಅರಿವಿಲ್ಲ. ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ ಕೆಲಸ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿ ಟಿ.ಹೆಚ್.ಒ ಕರ್ತವ್ಯಲೋಪ ಎಸಗುತ್ತಿದ್ದಾರೆ ಎಂದು ಈದಿನದ ಸಭೆಯ ನಡಾವಳಿಯಲ್ಲಿ ಉಲ್ಲೇಖಿಸಿ ಮೇಲಾಧಿಕಾರಿಗಳಿಗೆ ಕಳಿಸಿ ಎಂದು ಇಒ ಪರಶುರಾಮ ಪೂಜಾರ ಅವರಿಗೆ ಸೂಚಿಸಿದರು.
ಪ್ರತಿಯೊಂದು ವಿದ್ಯಾರ್ಥಿ ನಿಲಯಕ್ಕೂ ನಿಯಮಿತವಾಗಿ ಭೇಟಿ ನೀಡಿ, ವಿದ್ಯಾರ್ಥಿಗಳ ಚಲನವಲನದ ಮೇಲೆ ನಿಗಾ ಇಡಬೇಕು. ಕೆಲ ವಿದ್ಯಾರ್ಥಿಗಳು ನಿಲಯದಲ್ಲಿ ಇರುವುದೇ ಇಲ್ಲ ಎನ್ನುವ ದೂರುಗಳಿವೆ. ನಾಳೆ ಏನಾದರೂ ಸಮಸ್ಯೆ ಆದರೆ ನಿಮಗೇ ಸಮಸ್ಯೆ. ಹಾಗಾಗಿ ಕಾಳಜಿ ವಹಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆನಂದ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ ಅವರಿಗೆ ಸೂಚಿಸಿದರು.
ನಿಟಗಿನಕೊಪ್ಪದಲ್ಲಿ ಮುಖ್ಯರಸ್ತೆ, ಗಟಾರ ಒತ್ತುವರಿ ಮಾಡಲಾಗಿದೆ. ಒಮ್ಮೆ ಒತ್ತುವರಿ ತೆರವುಗೊಳಿಸಿದರೂ ಮತ್ತೆ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಿ ಎಂದು ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜ ಅವರಿಗೆ ಸೂಚಿಸಿದರು. ತಾಲೂಕಿನಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗಿದ್ದು ಒಂದು ವಾರದಲ್ಲಿ ರದ್ದು ಪಡಿಸಿರುವ ಕಾರ್ಡ್ ಪುನಃ ಚಾಲ್ತಿ ಮಾಡಿಕೊಡಿ. ನಮ್ಮ ತಾಲೂಕಿನ ಮೇಲ್ವಿಚಾರಕರಿಗೆ ಮಾತ್ರ ಅನ್ಯಾಯವಾಗುತ್ತಿದೆ ಎಂದು ಆಹಾರ ಇಲಾಖೆಯ ಶಿರಸ್ತೆದಾರ್ ಎಚ್.ಸಿ.ಮಾಳಾಪೂರ ಅವರಿಗೆ ಸೂಚಿಸಿದರು.
ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಬೇಕು. ಸರ್ಕಾರಿ ಕಚೇರಿ, ಶಾಲೆಗಳು, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡುತ್ತಿದ್ದೇನೆ. ದಾಖಲೆ, ರೆಜಿಸ್ಟರ್ ಗಳನ್ನು ಸರಿಯಾಗಿ ನಿರ್ವಹಿಸಿ. ಕೆಳ ಹಂತದ ಅಧಿಕಾರಿ, ಸಿಬ್ಬಂದಿಗೆ ಕರ್ತವ್ಯದ ಪಾಠ ಮಾಡಿ. ಜನಪ್ರತಿನಿಧಿಗಳಿಗೆ ಗೌರವ ಕೊಡಿ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಿ. ಲೋಪ ಕಂಡು ಬಂದರೆ ಸಹಿಸುವುದಿಲ್ಲ ಎಂದು ಶ್ರೀನಿವಾಸ ಮಾನೆ ಎಚ್ಚರಿಸಿದರು.
ತಹಶೀಲ್ದಾರ್ ರೇಣುಕಾ ಎಸ್., ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಡಿಪಿ ಸದಸ್ಯರಾದ ರಾಜಕುಮಾರ ಜೋಗಪ್ಪನವರ, ಅನಿತಾ ಡಿಸೋಜ, ಹನೀಫ್ ಬಂಕಾಪೂರ, ಮಾತಾಂಡಪ್ಪ ಮಣ್ಣಮ್ಮನವರ, ಪ್ರಕಾಶ ಈಳಿಗೇರ, ರಾಜೇಶ ಚವ್ಹಾಣ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಮಹೇಶ ಬಣಕಾರ ಇದ್ದರು.
ಫೆ. ೨೭ ರಂದು ಮುಂದುವರೆದ ಕೆಡಿಪಿ ಸಭೆ
ಕಂದಾಯ, ಅಬಕಾರಿ, ಹೆಸ್ಕಾಂ, ಸಾರಿಗೆ, ಕಾರ್ಮಿಕ, ಶಿಕ್ಷಣ ಸೇರಿದಂತೆ ಪ್ರಮುಖ ೧೦ ಇಲಾಖೆಗಳಿಗೆ ಸೀಮಿತವಾದ ಚರ್ಚೆ ಕೈಗೊಳ್ಳಲು ಫೆ. ೨೭ ರಂದು ಮಧ್ಯಾಹ್ನ ೧೩ ಗಂಟೆಗೆ ಮುಂದುವರೆದ ಕೆಡಿಪಿ ಸಭೆ ನಡೆಸಲು ನಿರ್ಧರಿಸಲಾಯಿತು.