
ಜೆಡಿಎಸ್ ಅಭ್ಯರ್ಥಿ ಘೋಷಣೆ: ತುಕಾರಾಮಪ್ಪ ಮಾಳಗಿ ಸಂತಸ
ಹಾವೇರಿ: ಜೆಡಿಎಸ್ ವರಿಷ್ಠರು ಸೋಮವಾರ ಬಿಡುಗಡೆ ಮಾಡಿರುವ ೯೦ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ತಮ್ಮ ಹೆಸರನ್ನು ಜೆಡಿಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಕಟಿಸುವ ಮೂಲಕ ಪಕ್ಷದ ಸ್ಥಳೀಯ ಕಾರ್ಯಕರ್ತರ, ಮುಖಂಡರುಗಳ ಭಾವನೆ ಸ್ಪಂದಿಸಿದ್ದಾರೆ. ತಮ್ಮ ಹೆಸರನ್ನು ಹಾವೇರಿ ಮೀಸಲು ಕ್ಷೇತ್ರಕ್ಕೆ ಪ್ರಕಟಸಿರುದು ಸಂತಸತಂದಿದೆ ಎಂದು ಹಾವೇರಿ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತುಕಾರಾಮಪ್ಪ ಮಾಳಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾವೇರಿ ಮೀಸಲು ಕ್ಷೇತ್ರಕ್ಕೆ ತುಕಾರಾಮಪ್ಪ ಮಾಳಗಿ ಅವರ ಹೆಸರನ್ನು ಜೆಡಿಎಸ್ ವರಿಷ್ಠರು ಪ್ರಕಟಿಸಿದ ಹಿನ್ನಲೆಯಲ್ಲಿ ತುಕಾರಾಮಪ್ಪ ಅವರುನ್ನು ಅಭಿನಂದಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲೂ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ ಸಮೀಪಿಸಿದಾಗ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪರಿಪಾಠ ರಾಜಕಿಯ ಪಕ್ಷಗಳಲ್ಲಿದೆ. ಇದು ಪಕ್ಷದೊಳಗೆ ಆಂತರಿಕ ಭಿನ್ನಮತ ಸೃಷ್ಟಿಗೆ ಕಾರಣವಾಗುವ ಜೊತೆಗೆ, ಅಭ್ಯರ್ಥಿಗಳು ಮತದಾರರ ಬಳಿ ತಲುಪಲು ಸಮಯಾವಕಾಶದ ಕೊರತೆಯೂ ಎದುರಾಗುತ್ತದೆ. ಇದು ಚುನಾವಣಾ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ. ಈ ಗೊಂದಲಗಳಿಗೆ ಅವಕಾಶ ನೀಡದಂತೆ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಪ್ರಚಾರ ತಂತ್ರಗಳನ್ನು ರೂಪಿಸಬೇಕಾದ ಕುರಿತು ಆಲೋಚಿಸಿ ಜೆಡಿಎಸ್ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರು ಅಭ್ಯರ್ಥಿಯ ಹೆಸರು ಘೋಷಿಸುವ ಜೊತೆಗೆ, ಪ್ರತಿ ಮತದಾರನನ್ನು ತಲುಪಲು ಸಾಧ್ಯವಾಗುವಂತೆ ಪ್ರಚಾರ ಕಾರ್ಯತಂತ್ರ ರೂಪಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹಾವೇರಿ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತುಕಾರಾಮಪ್ಪ ಮಾಳಗಿ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷವು ಅವಕಾಶ ವಂಚಿತರ ಪರವಾಗಿದೆ ಎನ್ನುವುದಕ್ಕೆ ಇತರೆ ರಾಜಕೀಯ ಪಕ್ಷಗಳು ನಿರ್ಲಕ್ಷಿಸುತ್ತಾ ಬಂದಿರುವ ಎಡಗೈ ಸಮಾಜಕ್ಕೆ ಆದ್ಯತೆ ನೀಡಿ ಎಡಗೈ ಸಮಾಜದವರಾದ ತುಕಾರಾಮಪ್ಪ ಮಾಳಗಿ ಅವರನ್ನು ಹಾವೇರಿ ಮೀಸಲು ವಿಧಾನಸಭಾದ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ನಿರ್ಲಕ್ಷಿತ ಸಮಾಜಕ್ಕೆ ಪ್ರಮುಖ ಆದ್ಯತೆ ನೀಡಿದ್ದಾರೆ ಎಂದು ಸುನಿಲ್ ದಂಡೆಮ್ಮನವರ ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾ ಅಧ್ಯಕ್ಷ ಕೆ.ಎಂ.ಸುಂಕದ, ಸುನಿಲ್ ದಂಡೆಮ್ಮನವರ, ಅಮೀರ್ಜಾನ್ ಬೇಪಾರಿ, ಇಮ್ರಾನ್ ಹುಬ್ಬಳ್ಳಿ, ಎಸ್.ಎಸ್.ಹಣಗಿ, ಕೆ.ಹುಲಗೂರ, ಮಾಹಾಂತೇಶ ಬೇವಿನಹಿಂಡಿ, ಸಂದೀಪ ಮಾಳಗಿ, ಹೇಮರಡ್ಡಿ ಆನ್ವೇರಿ, ಸೈಯದ್ ಜಮಾದಾರ, ಪಿ.ಬೆಳಗಾಂವಕರ್, ಹಾಜಿಅಲಿ ಪಟೇಲ್ ಮತ್ತಿತರರು ಹಾಜರಿದ್ದರು.

