ಭಾರೀ ಬಿರುಗಾಳಿಗೆ ಹಾರಿ ಹೋದ ಗುಡಿಸಲಗಳು-ಶಾಶ್ವತ ಸೂರು ಕಲ್ಪಿಸಲು ಅಲೆಮಾರಿಗಳ ಬೇಡಿಕೆ
ಹಾವೇರಿ; ಮಂಗಳವಾರ ಬೀಸಿದ ಭಾರೀ ಬಿರುಗಾಳಿಗೆ ಇಲ್ಲಿನ ನಾಗೇಂದ್ರಮನಮಟ್ಟಿಯ ಶಾಂತಿನಗರ ಪ್ರದೇಶದಲ್ಲಿರುವ ೨೫ಕ್ಕೂ ಅಧಿಕ ಅಲೆಮಾರಿಗಳ ಗುಡಿಸಲುಗಳು ಹಾರಿಹೋಗಿದ್ದು, ತಮಗೆ ಶಾಶ್ವತ ಸೂರನ್ನು ಕಲ್ಪಿಸಿಕೊಡುವಂತೆ ಅಲೆಮಾರಿ ಸಮುದಾಯದ ಜನರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಹಾವೇರಿ ಸೇರಿದಂತೆ ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯದ ಹತ್ತು ಸಾವಿರಕ್ಕೂ ಅಧಿಕ ಜನರು ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಬಹುತೇಕರು ಸ್ಥಳೀಯವಾಗಿ ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ಆದರೆ ಈಗಲೂ ಶಾಶ್ವತ ಸೂರು(ಮನೆ) ಇಲ್ಲದೆ ಗುಡಿಸಲುಗಳಲ್ಲೇ ವಾಸಿಸುವ ಪರಿಸ್ಥಿತಿ ಇದೆ.
ಮಂಗಳವಾರ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಅಲೆಮಾರಿ ಸಮುದಾಯದ ಜನರ ಬಹುತೇಕ ಗುಡಿಸಲುಗಳು ಹಾರಿ ಹೋಗಿವೆ. ಗುಡಿಸಲಲ್ಲಿ ವಾಸಿಸುತ್ತಿದ್ದ ಜನರು ಮಳೆ, ಗಾಳಿಯ ಆರ್ಭಟದಿಂದ ಬಯಲಲ್ಲೇ ಜೀವನ ನಡೆಸುವ ಪರಿಸ್ಥಿತಿ ಎದುರಾಗಿತ್ತು. ಗುಡಿಸಲುಗಳಲ್ಲಿದ್ದ ತಿನ್ನುವ ಪದಾರ್ಥಗಳು ಸಂಪೂರ್ಣ ನೀರು ಪಾಲಾಗಿವೆ. ಹಾಸಿಗೆಗಳು ಸಹ ಗಾಳಿಗೆ ಹಾರಿ ಹೋಗಿ ಹಾಸಿಗೆ, ಹೊದಿಕೆಗಳಿಲ್ಲದೆ ಬಯಲಲ್ಲೆ ಬದುಕು ಸಾಗಿಸುವಂತಾಗಿದೆ.
ಜಿಲ್ಲೆಯ ರಟ್ಟಿಹಳ್ಳಿ ಸಿಂಧೋಳಿ ಸಮುದಾಯ, ಹಾವೇರಿಯ ಶಾಂತಿನಗರದ ಸುಡುಗಾಡು ಸಿದ್ದರು. ಹಾವನೂರಿನಲ್ಲಿ ಕೊರಮ- ಕೊರಚರು, ಹಾವೇರಿಯ ಇಜಾರಿಲಕಮಾಪುರದಲ್ಲಿ ಬುಡ್ಗ ಜಂಗಮರು, ಹಾನಗಲ್ ಸುಡುಗಾಡು ಸಿದ್ದರು, ಡೊಂಬರು, ರಾಣೇಬೆನ್ನೂರಿನ ಅಡವಿಆಂಜನೇಯ ಬಡಾವಣೆಯಲ್ಲಿ ಕಿಳ್ಳೆಕ್ಯಾತರು ಮತ್ತು ಸುಡುಗಾಡುಸಿದ್ದರು. ಗುತ್ತಲ ಪಟ್ಟಣದಲ್ಲಿನ ಬಗರಿಕಾರ ಸಮುದಾಯ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ವಾಸವಾಗಿರುವ ಅಲೆಮಾರಿ ಸಮುದಾಯದ ಜನರಿಗೆ ಬಯಲೇ ಆಲಯವಾಗಿದೆ.
ಮಳೆ ಬಂದಾಗೊಮ್ಮೆ ಅಲೆಮಾರಿ ಸಮುದಾಯದ ಜನರು ಈ ಪರಿಸ್ಥಿತಿ ಎದುರಿಸುವಂತಾಗಿದೆ. ಈ ಕುರಿತು ಹಲವಾರು ಬಾರಿ ತಾಲೂಕಿನ ತಹಶೀಲ್ದಾರರು ಸೇರಿದಂತೆ ಎಲ್ಲ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಅಲೆಮಾರಿ ಸಮುದಾಯದ ಜನರಿಗೆ ಶಾಶ್ವತ ಸೂರು ಇನ್ನೂ ಸಿಗುತ್ತಿಲ್ಲ. ಹೀಗಾಗಿ ಜನರು ಮಳೆ, ಗಾಳಿ ಬಂದಾಗೊಮ್ಮೆ ಜೀವ ಕೈಯಲ್ಲಿ ಹಿಡಿದುಕೊಂಡು ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅವಲೋಕಿಸಿ ಆಲೆಮಾರಿ ಸಮುದಾಯದ ಜನರಿಗೆ ಶಾಶ್ವತ ಸೂರು(ಮನೆ) ಕಲ್ಪಿಸಿಕೊಡುವುದರ ಜೊತೆಗೆ ಮಳೆ, ಗಾಳಿಯಿಂದ ಆಗಿರುವ ಹಾನಿಗೆ ಪರಿಹಾರ ದೊರಕಿಸಿಕೊಡಬೇಕು ಜಿಲ್ಲಾ ಅಲೆಮಾರಿ ಸಂಘದ ಅಧ್ಯಕ್ಷ ಶೆಟ್ಟಿ ವಿಭೂತಿ ಅಲೆಮಾರಿಗಲೊಂದಿಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.