ಹಾವೇರಿಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಹಿರಂಗಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸವಾಲು
ಹಾವೇರಿ: ಪೊಲೀಸ್ ಇಲಾಖೆಗೆ, ಶಿಕ್ಷಕರಿಗೆ ಸಂಬಳಕೊಡಲು ಕಾಂಗ್ರೆಸ್ ಸರ್ಕಾರದಲ್ಲಿ ಹಣವಿಲ್ಲ, ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಅತಿ ಹೆಚ್ಚು ಸಾಲಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಪೊಲೀಸ್ರಿಗೆ ಹಾಗೂ ಶಿಕ್ಷಕರಿಗೆ ಸಕಾಲಕ್ಕೆ ಸಂಬಳವನ್ನು ನೀಡದ ಸ್ಥಿತಿಗೆ ತಲುಪಿದೆ. ಹಾವೇರಿಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ೬ಜನ ಕಾಂಗ್ರೆಸ್ ಶಾಸಕರಿದ್ದರೂ ಸಹ ಒಂದೇ ಒಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಒಂದು ವೇಳೆ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೇ ಅವುಗಳನ್ನು ಬಹಿರಂಗ ಪಡಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜಿಲ್ಲೆಯ ಶಾಸಕರಿಗೆ ಸವಾಲು ಹಾಕಿದ್ದಾರೆ.
ಸೋಮವಾರ ಇಲ್ಲಿನ ಮೈಲಾರ ಮಹದೇವಪ್ಪ ವೃತ್ತದಲ್ಲಿ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೇ ಈಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಯಡೆಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ನೀಡಿದ ಅನುದಾನಲ್ಲಿ ನಡೆಯುತ್ತಿವೆ ಎಂದ ಅವರು ರಾಜ್ಯದಲ್ಲಿ ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು. ಅದಕ್ಕೋಸ್ಕರ ನಾವು ಜನಾಕ್ರೋಶ ಯಾತ್ರೆ ಮಾಡುತ್ತಿಲ್ಲ. ಯಾವುದೇ ಚುನಾವಣೆ ಸಲುವಾಗಿ ಯಾತ್ರೆ ಮಾಡ್ತಿಲ್ಲ. ಕಾಂಗ್ರೆಸ್ ಸರ್ಕಾರದ ಜನವಿರೋಧಿ, ಭ್ರಷ್ಟಾಚಾರ ವಿರೋಧಿಸಿ, ಅಲ್ಪಸಂಖ್ಯಾರರನ್ನು ಓಲೈಸುವುದುನ್ನು ವಿರೋಧಿಸಿ ಜನಾಕ್ರೋಶ ಯಾತ್ರೆ ಮಾಡುತ್ತಿರುವುದಾಗಿ ಅವರು ಹೇಳಿದರು.
ರಾಜ್ಯದಲ್ಲಿ ೫೦ ಅಗತ್ಯ ವಸ್ತುಗಳ ಬೆಲೆಯನ್ನು ಸರ್ಕಾರ ಏರಿಕೆ ಮಾಡಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರ ಹೊಲಕ್ಕೆ ಟಿಸಿ ಹಾಕಿಸಲು ೨೫ ಸಾವಿರ ಸಾಕಿತ್ತು. ಈಗ ಎರಡೂವರೆ ಲಕ್ಷ ದಿಂದ ಮೂರು ಲಕ್ಷ ರೂ ಬೇಕಾಗಿದೆ. ಬೆಳೆದಂತ ಬೆಳೆಗೆ ನೀರು ಹಾಯಿಸಲು ರೈತರಿಗೆ ಆಗುತ್ತಿಲ್ಲ. ಬಡವರು ಹಾಲು ಖರೀದಿ ಮಾಡಲು ಆಗ್ತಿಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಬಗ್ಗೆ ಕಾಂಗ್ರೆಸ್ ಶಾಸಕರೇ ಬೇಸರಗೊಂಡಿದ್ದಾರೆ. ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಗಾಳಿಯಲ್ಲಿ ತೂರುವ ಮೂಲಕ ಸಿದ್ದರಾಮಯ್ಯ ಕೇವಲ ಒಂದು ಸಮುದಾಯಕ್ಕೆ ಸಿಎಂ ಆಗಿ, ಹಿಂದೂ ವಿರೋಧಿಗಳಾಗಿದ್ದಾರೆ. ಅಹಿಂದ ಹೆಸರು ಹೇಳಿ ದಲಿತರ ಹಣ ಲೂಟಿ ಮಾಡಿದ್ದಾರೆ. ಕೇವಲ ಅಲ್ಪಸಂಖ್ಯಾತರ ಹಿಂದೆ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಇಡೀ ದೇಶದಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನದಲ್ಲಿದೆ. ಇದನ್ನು ಹೇಳ್ತಿರೋದು ನಾನಲ್ಲ, ಬಸವರಾಜ್ ರಾಯರೆಡ್ಡಿ. ಸಿದ್ದರಾಮಯ್ಯ ಅವರೇ ಒಂದು ತೊಟ್ಟು ವಿಷ ಕೊಡಿ ಎಂದು ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಹೇಳಿದ್ರು, ಅಭಿವೃದ್ಧಿ ಕೆಲಸ ಆಗ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರು ಹೇಳ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಅಂದ್ರೆ ಶೂನ್ಯ ಎಂಬಂತಾಗಿದೆ” ಎಂದು ಅವರು ಸಿದ್ದರಾಮಯ್ಯ ಅವರಿಗೆ ಹಿಂದುಳಿದ ಸಮುದಾಯಕ್ಕೆ ನಾಯ್ಯ ಕೊಡಿಸುವ ಬದ್ಧತೆಯಿಲ್ಲ. ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚಿ, ರಾಜ್ಯಕ್ಕೆ ಕೊಳ್ಳಿ ಇಡುವ ಕೆಲಸ ಮಾಡಲು ಹೊರಟಿದ್ದಾರೆ. ತನ್ನ ಕುರ್ಚಿ ಭದ್ರ ಮಾಡಿಕೊಳ್ಳಲು ಕಂದಕ ಸೃಷ್ಟಿ ಮಾಡಲು ಸಿಎಂ ಮುಂದಾಗಿದ್ದಾರೆ.ಸಿಎಂ ಕುರ್ಚಿ ಖಾಲಿ ಮಾಡುವ ಸ್ಥಿತಿ ಬಂದಿರೋದ್ರಿಂದ ಜಾತಿ ಗಣತಿ ಮುನ್ನೆಲೆಗೆ ತಂದಿದ್ದಾರೆ” ಎಂದು ವಿಜಯೇಂದ್ರ ದೂರಿದರು.
ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಜನರಿಗೆ ಎರಡು ಸಾವಿರಕೊಟ್ಟು ಇಪ್ಪತ್ತು ಸಾವಿರ ಕಿತ್ತುಕೊಳ್ಳುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ದಿನಕ್ಕೊಂದು ಹಗರಣ ನಡೆಯುತ್ತವೆ, ಪರೀಕ್ಷೆ ಬರೆಯಲು ಹೋದವರಿಗೆ ಶಿವದಾರ, ಜನಿವಾರ, ತಾಳಿ ತಗೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಭರತ ಬೊಮ್ಮಾಯಿ ಮಾತನಾಡಿ ಹಾವೇರಿಜಿಲ್ಲೆ ನಾಯಕರಿಲ್ಲದ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಕೊಲೆ, ಸುಲುಗೆ, ಅತ್ಯಾಚಾರ ನಡೆದಿವೆ. ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರು.
ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್ ಸ್ವಾಗತಿಸಿ ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜನಾಕ್ರೋಶಯಾತ್ರೆಯಲ್ಲಿ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ತಿನ ವಿಪಕ್ಷ ನಾಐಕ ಚಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡರುಗಳಾದ ಎನ್.ರವಿಕುಮಾರ, ಮಾಜಿ ಶಾಸಕರುಗಳಾದ ವಿರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ ಹಾಗೂ ಗವಿಸಿದ್ದಪ್ಪ ದ್ಯಾಮಣ್ಣವರ್, ಪರಮೇಶ್ವರಪ್ಪ ಮೇಗಳಮನಿ, ಡಾ. ಸಂತೋಷ್ ಆಲದಕಟ್ಟಿ, ನಂಜುಂಡೇಶ್ ಕಳ್ಳೇರ್, sಸುರೇಶ ಹೊಮನಿ ಮತ್ತಿತರರು ಭಾಗವಹಿಸಿದ್ದರು.
ಬ್ರಹತ್ ಮೆರವಣಿಗೆ: ಇಲ್ಲಿನ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಜನಾಕ್ರೋಶ ಯಾತ್ರೆಯು ಎಂಜಿ ರಸ್ತೆಯ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಮೈಲಾರ ಮಹದೇವಪ್ಪವೃತ್ತಕ್ಕೆ ಆಗಮಿಸಿತು. ಯಾತ್ರೆಯಲ್ಲಿ ೮ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು, ಅಭಿಮಾಣಿಗಳು ಭಾಗವಹಿಸಿದ್ದರು.