ಜಿಲ್ಲೆಯಲ್ಲಿ ಮುಂದುವರೆದ ಮಳೆಯಾರ್ಭಟ, ನದಿಯಂತಾದ ರಸ್ತೆಗಳು-ಬಸ್ ನಿಲ್ದಾಣಗಳಿಗೆ ನುಗ್ಗಿದ ನೀರು
ಹಾವೇರಿ: ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಯಾರ್ಭಟ ಶನಿವಾರವು ಸಹ ಮುಂದುವರೆದಿದ್ದು, ಶನಿವಾರ ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಗೆ ಹಾವೇರಿನಗರದ ರಸ್ತೆಗಳು ಸೇರಿದಂತೆ ಜಿಲ್ಲೆಯ ಅನೇಕರಸ್ತೆಗಳಿಗೆ ಮಳೆಯ ನೀರು ನುಗ್ಗಿ ರಸ್ತೆಗಳು ನದಿಯಂತಾಗಿದ್ದವು. ಕೆಲವುಕಡೆಗಳಲ್ಲಿ ಬಸ್ ನಿಲ್ದಾಣಗಳಿಗೆ ನೀರು ನುಗ್ಗಿದ ಪರಿಣಾಮ ಪ್ರಯಾಣಿಕರು ಸುರಕ್ಷಿತ ಸ್ಥಳಕ್ಕೆ ತೆರಳಲು ಪರದಾಡಿದರು.
ನದಿಯಂತಾದರಸ್ತೆಗಳು; ಧಾರಕಾರಮಳೆಗೆ ಹಾವೇರಿನಗರದ ಶಿವಶಕ್ತಿ ಪ್ಯಾಲೇಸ್ಬಳಿ ಹಳೆ ಪಿಬಿ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಜಿಲ್ಲಾ ಆಸ್ಪತ್ರೆಯವರೆಗೂ ಹರಿಯಿತು. ಮಳೆಯ ನೀರು ರಸ್ತೆಯ ಮೇಲೆ ಒಂದುಗಂಟೆಗೂ ಹೆಚ್ಚುಕಾಲ ಹರಿದ ಪರಿಣಾಮ ರಸ್ತೆ ನದಿಯಂತಾದ ಕಾರಣಕ್ಕೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹಾವೇರಿ-ಸೊರಬ ರಾಜ್ಯಹೆದ್ದಾರಿಯ ಮೇಲೆ ಮೂರು ಅಡಿಗಳಷ್ಟು ನೀರು ಹರಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತೊಂಡಿತ್ತು. ಇತ್ತ ಹಾವೇರಿ-ಗುತ್ತಲ ರಾಜ್ಯಹೆದ್ದಾರಿಯ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಂತಿತ್ತು. ವಾಹನ ಸವಾರರು, ಪಾದಚಾರಿಗಳು ಪರದಾಡಿದರು.
ಮನೆಗಳಿಗೆ ನುಗ್ಗಿದ ನೀರು: ಹಳೆ ಪಿ.ಬಿ.ರಸ್ತೆಯ ಮೇಲೆ ೨ಅಡಿ ಮಳೆ ನೀರು ಹರಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಪ್ರವಾಸಿ ಮಂದಿರ, ಬಸ್ ನಿಲ್ದಾಣ, ಜಿಲ್ಲಾ ಆಸ್ಪತ್ರೆ, ತಹಶೀಲ್ದಾರ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಮನೆ, ಗಾಂಧಿ ಭವನ, ನಾಗೇಂದ್ರನಮಟ್ಟಿ ರೈಲ್ವೆ ಕಳೆ ಸೇತುವೆ, ಗೂಗಿಕಟ್ಟೆ, ಜೆ.ಪಿ.ರಸ್ತೆ, ಶಿವಾಜಿನಗರದಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಜನರು ಮನೆಯವಸ್ತುಗಳನ್ನು ಹಿಡಿದಿಟ್ಟುಕೊಳ್ಳಲು ಪರದಾಡಿದರು.
ಬಸ್ನಿಲ್ದಾಣಗಳು ಜಲಾವೃತ: ಭಾರಿ ಮಳಯ ಹಿನ್ನಲೆಯಲ್ಲಿ ತಾಲೂಕಿನ ಚಿಕ್ಕಲಿಂಗದಹಳ್ಳಿಯ ಬಸ್ನಿಲ್ದಾಣ, ಹಾವೇರಿಯ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯ ಹಲವು ಬಸ್ ನಿಲ್ದಾಣಗಳಿಗೆ ಮಳೆಯ ನೀರು ನುಗ್ಗಿದ ಪರಿಣಾಮ ಪ್ರಯಾಣಿಕರು ಪರದಾಡಿದರು. ಅನೇಕ ರಸ್ತೆಗಳು ಸಂಪರ್ಕ ಕಡಿದುಕೊಂಡಿದ್ದವು. ಮಳೆಯ ಅಬ್ಬರ ಕಡಿಮೆಯಾದ ನಂತರ ನೀರಿನ ಹರಿವು ಇಳಿಮುಖವಾದ ಮೇಲೆ ಜನರು ಓಡಾಟ ಪ್ರಾರಂಭವಾಯಿತು.
ವಿದ್ಯುತ್ ಕಡಿತ: ಭಾರಿ ಪ್ರಮಾಣದ ಗುಡುಗು-ಸಿಡಿಲಾರ್ಭಟದ ನಡುವೆ ಸುರಿಯಲಾರಂಭಿಸಿದ ಮಳೆಗೆ ಹೆಸ್ಕಾಂನವರು ವಿದ್ಯುತ್ ಕಡಿತ ಮಾಡಿದ್ದರು. ಶನಿವಾರ ಸಂಜೆ ೪-೩೦ರ ಸುಮಾರಿಗೆ ಕಡಿತಗೊಳಿಸಲಾಗಿದ್ದ ವಿದ್ಯುತ್ ಸಂಜೆ ೮ರವರೆಗೆ ಸಂಪರ್ಕವಾಗಿರಲಿರಲಿಲ್ಲ. ಅನೇಕ ಕಡೆಗಳಲ್ಲಿ ರೈತರ ಬೆಳೆಗಳು ನಾಶವಾಗಿರುವ ಬಗ್ಗೆ ವರದಿಗಳು ಬಂದಿದ್ದು, ಕಟಾವಿಗೆ ಬಂದಿದ್ದ ಮೆಕ್ಕೆಜೋಳ, ಮೆಣಸಿನಬೆಳೆ, ಶೇಂಗಾ ಸೇರಿದಂತೆ ತರಕಾರಿ ಬೆಳೆಗಳಿಗೆ ಮಳೆ ನೀರು ನುಗ್ಗಿಹಾನಿಯಾಗಿದೆ.ಶಾಂತಿನಗರದಲ್ಲಿ ಅಲೆಮಾರಿಗಳ ಗುಡಿಸಲುಗಳು ಮಳೆಯ ರಭಸಕ್ಕೆ ನೆಲಕ್ಕೆಉರುಳಿವೆ, ಹಲವಾರು ಗುಡಿಸಲುಗಳಿಗೆ ನೀರು ನುಗ್ಗಿ ಅಲೆಮಾರಿ ಸಮುದಾಯದ ಜನರು ಪರದಾಡಿದರು.ಅಧ್ಯಕ್ಷ-ಉಪಾಧ್ಯಕ್ಷರ ಭೇಟಿ: ಮಳೆ ನೀರು ನುಗ್ಗಿದ ಪ್ರದೇಶಗಳಿಗೆ ಶನಿವಾರ ಸಂಜೆ ನಗರಸಭೆ ಅಧ್ಯಕ್ಷೆ ಶೆಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಮತ್ತಿತರರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹೂಳು ತುಂಬಿದ ಚರಂಡಿಗಳನ್ನು ಸ್ವಚ್ಚಗೊಳಿಸಲು ಪೌರಕಾರ್ಮಿಕರಿಗೆ ಸೂಚನೆ ನೀಡಿದರು.