ಚಿರತೆ ನೀ ಏಕೆ ಮನೆಯೊಳಗೆ ಅವಿತೆ….;
ಅಂತೂ ಇಂತೂ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ರಾಣೆಬೆನ್ನೂರ ಜನತೆ!!
ಬುಧವಾರ ಬೆಳ್ಳಂ ಬೆಳಿಗ್ಗೆ ರಾಣೆಬೆನ್ನೂರು ನಗರದ ಜನತೆಯು ಆತಂಕದ ಜೊತೆ ಭಯದ ವಾತಾವರಣದಲ್ಲಿ ಮುಳುಗಿದ್ದರು. ಗ್ರಾಮೀಣ ಪೊಲೀಸ್ ಠಾಣೆಯ ಎದುರಿಗಿನ ನಾಡಿಗ್ಗೇರ ಓಣಿಯ ಜನರಂತೂ ಕೈಯಲ್ಲಿ ಜೀವ ಹಿಡಿದುಕೊಂಡು ತಮ್ಮ ಮನೆಯ ಬಾಗಿಲು ಕಿಟಕಿ ಗಳನ್ನು ಬಂದ್ ಮಾಡಿ ಮನೆಯಲ್ಲಿಯೇ ಕುಳಿತು ಭಯಭೀತಗೊಂಡಿದ್ದರು.
ಮಧ್ಯಾಹ್ನ 1 ಘಂಟೆ ಸುಮಾರಿಗೆ ರಾಣೆಬೆನ್ನೂರಿನ ಸಮಸ್ತ ಜನತೆ ನಿಟ್ಟಿಸಿರು ಬಿಟ್ಟು ಆತಂಕ ಮತ್ತು ಭಯದಿಂದ ದೂರವಾಗಿದ್ದರು. ಕಾಡಿನೊಳಗಿಂದ ಚಿರತೆಯೊಂದು ನಗರದೊಳಗೆ ಬಂದಿದ್ದೆ ಇಷ್ಟೆಲ್ಲಾ ಭಯದ ವಾತಾವರಣಕ್ಕೆ ಕಾರಣವಾಯಿತು.ಅಂತೂ ಇಂತೂ ಸತತ ಏಳು ಗಂಟೆಯ ಕಾಲ ಯಶಸ್ವಿ ಕಾರ್ಯಾಚರಣೆಯ ಮೂಲಕ ಸುಮಾರು ಒಂದೂವರೆಯಿಂದ ಎರಡು ವರ್ಷದೊಳಗಿನ ಕರಿ ಚಿರತೆಯನ್ನು ಸೆರೆಹಿಡಿದು ಅನಂತರ ಚಿಕಿತ್ಸೆಗಾಗಿ ಕೃಷ್ಣಮೃಗ ಅಭಯಾರಣ್ಯದಲ್ಲಿಟ್ಟು ಹೆಚ್ಚಿನ ನಿಗಾ ಇಡಲಾಗಿದೆ.
ಆದರೆ ಈ ಚಿರತೆ ಎಲ್ಲಿಂದ ಬಂದಿತು? ಹೇಗೆ ಬಂದಿತು? ಎನ್ನುವುದೇ ಇನ್ನೂ ನಿಗೂಢವಾಗಿಯೇ ಉಳಿದಿದೆ. ಬೆಳಗಿನ 4ಘಂಟೆಯ ಸುಮಾರಿಗೆ ನಾಡಿಗ್ಗೇರ ಓಣಿಯ ಪರಶುರಾಮ ಕಾಕಿ ಅವರು ಬಾಗಿಲು ತೆರೆದು ಹೊರಗೆ ಬಂದಾಗ ಮನೆಯ ಮೊದಲ ಮಹಡಿಯ ಸ್ಟೇರ ಕೇಸ್ ಕೆಳಗೆ ಮಲಗಿದ್ದನ್ನು ನೋಡಿ ಗಾಬರಿಗೊಂಡು ಭಯಭೀತರಾಗಿ ಆನಂತರ ಸಾವಳಿಸಿಕೊಂಡು ಮನೆಯ ಬಾಗಿಲು ಕಿಡಕಿ ಎಲ್ಲವುಗಳನ್ನು ಮುಚ್ಚಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು.
ಚಿರತೆ ಬಂದ ಸುದ್ದಿ ಅಕ್ಕಪಕ್ಕದ ಮನೆಯವರಿಗೆ ಹಾಗೂ ಓಣಿಯ ಜನರಿಗೆ ಗೊತ್ತಾಗಿ ಐದು ಗಂಟೆಯಿಂದ 7 ರವರೆಗೆ ಮನೆಯಿಂದ ಹೊರಬರದೆ ಮನೆಯಲ್ಲಿಯೇ ಕುಳಿತು ಚಿರತೆ ಇದೆಯಾ? ಹೋಗಿದೆಯಾ? ಸೆರೆ ಹಿಡಿದರಾ? ಎಂದು ಫೋನ್ ಮೂಲಕವೇ ಅವರಿವರೆಗೆ ಕರೆ ಮಾಡಿ ಜನರು ಮಾಹಿತಿ ಪಡೆದರು.
ಮುಂಜಾನೆ ಎಂಟು ಗಂಟೆಯ
ಸುಮಾರಿಗೆ ಇಡೀ ರಾಣೆಬೆನ್ನೂರು ಜನ ಭಯ ಭೀತಗೊಂಡಿತ್ತು. ಒಂದೆಡೆ ಆತಂಕದ ಛಾಯೆ ಎಲ್ಲರಲ್ಲೂ ಮೂಡಿತು. ಅಷ್ಟೊತ್ತಿಗಾಗಲೇ ಪೊಲೀಸ್, ಅರಣ್ಯ, ಅಗ್ನಿಶಾಮಕ, ಸಿಬ್ಬಂದಿ ಸೇರಿದಂತೆ ನಾಯಿ, ಹಂದಿ ಹಿಡಿಯುವವರು ಬಲೆಗಳ ಸಮೇತ ಜಮಾವನೆಗೊಂಡಿದ್ದರಿಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿದ್ದರಿಂದ ಜನರಲ್ಲಿ ಧೈರ್ಯ ಮೂಡಿ ಚಿರತೆ ವೀಕ್ಷಿಸಲು ಜಮಾಯಿಸುತ್ತಿದ್ದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.
ಜನನಿಭೀಡ ಪ್ರದೇಶವಾಗಿರುವ ಸಂದಿ, ಗೊಂದಿ ಇರುವ ಈ ಓಣಿಯಲ್ಲಿ ಅನೇಕರು ಮನೆಯ ಮೇಲ್ಬಾಗದಲ್ಲಿ ಹತ್ತಿ ಚಿರತೆ ವೀಕ್ಷಿಸಲು ಮುಂದಾದರು.
ಒಂದೆಡೆ ಚಿರತೆ ಹಿಡಿಯುವುದು ಆತಂಕ ಮೂಡಿಸಿದರೆ. ಇನ್ನೊಂದೆಡೆ ಹೆಚ್ಚುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಏನು ಮಾಡಬೇಕೆಂದು ತೋಚದೆ ಕೈಯಲ್ಲಿ ಲಾಟಿ ಹಿಡಿದು ಜನರನ್ನು ಚದುರಿಸುತ್ತಿದ್ದುದು ಕಂಡು ಬಂದಿತು.
ಇದಕ್ಕೂ ಮೊದಲು ಚಿರತೆ ಬಂದಿದೆ, ಮನೆಯಿಂದ ಯಾರೂ ಹೊರಗೆ ಬರಬಾರದು , ಸುರಕ್ಷಿತವಾಗಿರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಓಣಿಯ ನಾಗರಿಕರಲ್ಲಿ ಪೊಲೀಸರು, ನಾಗರೀಕರು ಜಾಗೃತಿ ಮೂಡಿಸಿದರು.
ಮುಂಜಾನೆ 10 ಗಂಟೆಯ ನಂತರ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಚಿರತೆ ಶೋಧಿಸುವುದು ಸಿಬ್ಬಂದಿಗಳಿಗೆ ಬಹು ದೊಡ್ಡ ಸಮಸ್ಯೆಯಾಯಿತು. ಜೊತೆಗೆ ಚಿರತೆ ಸೇರದೆ ಅಗತ್ಯ ಸೌಲಭ್ಯಗಳಿಲ್ಲದೆ ಸಿಬ್ಬಂದಿಗಳು ಪರದಾಡುವಂತಾಯಿತು
ಒಂದನೇ ಮಹಡಿಯಲ್ಲಿದ್ದ ಚಿರತೆಯು ಜನರ ಗದ್ದಲ ಗಲಾಟೆಯಿಂದಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರಿ ಜೀವ ಭಯದಿಂದ ಕೆಳಗಿನ ಮಹಡಿಗೆ ಜಿಗಿದುಮನೆಯ ಒಂದೆಡೆ ಮೂಲೆಯಲ್ಲಿ ಬಚ್ಚಿಕೊಂಡಿದ್ದು ತಡವಾಗಿ ಪತ್ತೆಯಾಯಿತು.
ಈ ಚಿರತೆ ಎಲ್ಲಿ ಇದೆ ಎಂಬುದನ್ನು ಪೊಲೀಸರಿಗೆ ಪತ್ತೆಹಚ್ಚಲು ಮುಂಜಾನೆ 9ರ ಸುಮಾರಿಗೆ ಗೊತ್ತಾಯಿತು. ಅಂತಿಮವಾಗಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಚಿರತೆಗೆ ಶೂಟ್ ಔಟ್ ಮಾಡಿ ಅರವಳಿಕೆ ಔಷಧಿ ನೀಡಲಾಯಿತು.
ಇದಾದ ನಂತರ ಅರ್ಧ ಗಂಟೆಯ ಮೇಲೆ ಪ್ರಜ್ಞಾಹೀನವಾಗಿದ್ದ ಚಿರತೆಯನ್ನು ಪೋಲಿಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಎತ್ತಿ ಬೋನಿನೊಳಗೆ ಬಿಟ್ಟಾಗ ಎಲ್ಲರಿಗೂ ಮತ್ತೆ ಉಸಿರು ಬಂದಂತಾಯಿತು.
ಸುಮಾರು 12 ಸಾವಿರ ಚದರಡಿ ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ರಾಣೆಬೆನ್ನೂರ್ ಅರಣ್ಯ ಪ್ರದೇಶದಲ್ಲಿ ಇಂತಹ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಲು ಅರಣ್ಯ ಇಲಾಖೆಗಳಲ್ಲಿ ಬಲೆ ಮತ್ತು ಇತರ ಸೌಲಭ್ಯಗಳು ಇಲ್ಲದಿರುವುದು ನಾಗರಿಕರ ಕಂಗಣ್ಣಿಗೆ ಗುರಿಯಾಗಬೇಕಾಯಿತು. ಅರವಳಿಕೆ ತಜ್ಞರು ಇಲ್ಲಿ ಯಾರೂ ಇಲ್ಲದ ಕಾರಣ ಗದಗನಿಂದ ಬರುವವರೆಗೂ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ತಡವಾಗಿದ್ದು ನಾಗರೀಕರ ಆಕ್ರೋಶಕ್ಕೆ ಕಾರಣವಾಯಿತು.
ಹಂದಿ ಹಿಡಿಯುವ ಹಾಗೂ ಸಾಕುವ ಕಾಯಕ ಹೊಂದಿರುವ ಕೊರಚರ ಯುವಕರ ಗುಂಪೊಂದು ಮುಂಜಾನೆಯಿಂದಲೇ ಚಿರತೆ ಸೆರೆಯಾಗುವವರೆಗೂ ಚಿರತೆ ಅಡಗಿದ್ದ ಸ್ಥಳದ ಸುತ್ತ ಮುತ್ತ ಅಲ್ಲಲ್ಲಿ ತಮ್ನದೇ ಬಲೆಗಳನ್ನು ಕಟ್ಟಿ ಚಿರತೆ ಎಲ್ಲಿಯೂ ಹೊರಗೆ ಹೋಗದಂತೆ ಸುರಕ್ಷಿತವಾಗಿಡುವಲ್ಲಿ ಮಾಡಿದ ಅವರುಗಳ ಪ್ರಯತ್ನವನ್ನು ನಾಗರಿಕರು ಶ್ಲಾಘಿಸಿ ಕೊಂಡಾಡಿದರು.
ಪಿಬಿ ರಸ್ತೆಗೆ ಹೊಂದಿಕೊಂಡಿರುವ, ಗ್ರಾಮೀಣ ಪೊಲೀಸ್ ಠಾಣೆ ಎದುರಿಗಿರುವ ಜನನಿಭೀಡ ಪ್ರದೇಶವಾಗಿರುವ ಎಲ್ಲಿಯೂ ಖಾಲಿ ನಿವೇಶನ ಇರದ ಎಲ್ಲೆಡೆ ಮನೆಗಳಿರುವ ಇಂತಹ ಸ್ಥಳಗಳಲ್ಲಿ ಈ ಚಿರತೆ ಎಲ್ಲಿಂದ ಬಂದಿತು? ಹೇಗೆ ಬಂದಿತು? ಎನ್ನುವುದೇ ಇನ್ನೂ ಕುತೂಹಲ ಮೂಡಿಸಿದೆ ಜೊತೆಗೆ ಯಕ್ಷಪ್ರಶ್ನೆಯಾಗಿದೆ. ಜೊತೆಗೆ ಚಿರತೆ ವೀಕ್ಷಣೆಗಾಗಿ ಸಹಸ್ರಾರು ಜನರು ಆಗಮಿಸಿದ್ದರಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕಂಡು ಬಂದಿತು.
ಒಂದು ಮೂಲಗಳ ಪ್ರಕಾರ ಬೆಳಗಿನ ಜಾವ ನಾಯಿಯನ್ನು ಭೇಟಿಯಾಡಿ ತಿಂದು ವಿಶ್ರಾಂತಿ ಗೋಸ್ಕರ ಶಾಂತವಾದ ಸ್ಥಳಕ್ಕೆ ಬಂದಾಗ ಗದ್ದಲ ಗಲಾಟೆ ಉಂಟಾಗಿ ಈ ಪ್ರದೇಶದೊಳಗೆ ಬಂದಿದೆ ಎಂದು ಹೇಳಲಾಗಿದೆ. ಚಿರತೆ ನಾಯಿಯನ್ನು ಬೇಟೆಯಾಡಿದ್ದರಿಂದ ಯಾರಿಗೂ ಸಹ ಅನಾಹುತ ಮಾಡದಿರುವುದು ಜನತೆ ನಿಟ್ಟಿಸಿರು ಬಿಟ್ಟಂತಾಗಿದೆ.
ಊಟ ಮಾಡಿ ರಾತ್ರಿ 11 ಗಂಟೆಯ ನಂತರ ನಿದ್ದೆಗೆ ಜಾರಿದೆವು. ಬೆಳಗಿನ ಜಾವ 4 ಘಂಟೆಯ ಸುಮಾರಿಗೆ ಒಂದನೇ ಮಹಡಿಯಲ್ಲಿನ ಮನೆಯ ಬಾಗಿಲು ತೆರೆದಾಗ ಪಕ್ಕದ ಸ್ಟೇರ ಕೇಸ ಬಳಿ ಚಿರತೆ ಕಂಡು ಗಾಬರಿಗೊಂಡೆ, ಸಾವರಿಸಿಕೊಂಡು ಇಲಾಖೆಯವರಿಗೆ ಕರೆ ಮಾಡಿದಾಗ ಚಿರತೆ ಅಲ್ಲಿರಲಿಲ್ಲ. ಮನೆಯವರೆಲ್ಲ ಗಾಬರಿಗೊಂಡು ಕಿಡಿಕಿ, ಬಾಗಿಲು ಮುಚ್ಚಿದೆವು ಎಂದು ಮನೆ ಮಾಲೀಕ ಪರಶುರಾಮ, ತಿಲಕಪ್ಪ ತಮಗಾದ ಅನುಭವಗಳನ್ನು ಹಂಚಿಕೊಂಡರು
ಈ ಚಿರತೆ ಎಲ್ಲಿಂದ ಬಂದಿತು ಹೇಗೆ ಬಂದಿತು ಎಂಬುದು ಯಕ್ಷಪ್ರಶ್ನೆಯಾಗಿದ್ದು, ಈ ಬಗ್ಗೆ ತನಿಖೆ ಮಾಡುವುದಾಗಿ ಸ್ಥಳಕ್ಕೆ ಭೇಟಿ ನೀಡಿದ ಎಸ್ ಪಿ ಯಶೋಧಾ ಮಂಟಗುಡಿಯವರು ತಿಳಿಸಿದರು.
ಸದ್ಯ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಚಿರತೆಗೆ ಅರವಳಿಕೆ ಔಷಧಿ ನೀಡಿದ್ದರಿಂದ ಅದಿನ್ನೂ ಚೇತರಿಸಿಕೊಂಡಿಲ್ಲ. ಜೊತೆಗೆ ಜನರ ಗದ್ದಲ ಗಲಾಟೆಯಿಂದಾಗಿ ಚಿರತೆ ಭಯಗೊಂಡು ಸುಸ್ತಾಗಿದೆ. ಈ ಕಾರಣದಿಂದಾಗಿ ಚಿರತೆಯನ್ನು ಸದ್ಯ ಕೃಷ್ಣಮೃಗ ಅಭಯಾರಣ್ಯದಲ್ಲಿ ಇರಿಸಲಾಗಿದ್ದು, ವೈದ್ಯರುಗಳಿಂದ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಕೃಷ್ಣ ಮೃಗ ಅಭಿಯಾರಣ್ಯದ ಎಸಿಎಫ್ ಸತೀಶಕುಮಾರ್ ಪೂಜಾರ ಹೇಳಿದರು.
ಶಾಸಕ ಪ್ರಕಾಶ ಕೋಳಿವಾಡ ಕಾರ್ಯಾಚರಣೆ ಸಿಬ್ಬಂದಿ ಜೊತೆಗಿದ್ದು ನಿರಂತರವಾಗಿ ಮಾಹಿತಿ ಪಡೆದು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಜೊತೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಸಹ ಘಟನಾ ಸ್ಥಳದಲ್ಲಿದ್ದು ಸಿಬ್ಬಂದಿಗಳಿ್ಎ ಮಾರ್ಗದರ್ಶನ ಸಲಹೆ ನೀಡಿ ಪ್ರೋತ್ಸಾಹಿಸಿದರು.
ಮಾಜಿ ಶಾಸಕ ಅರುಣಕುಮಾರ, ಡಿವೈಎಸ್ಪಿ ಜೆ. ಲೋಕೇಶ್, ತಹಸೀಲ್ದಾರ ಆರ್ ಎಚ್ ಭಾಗವಾನ, ಪೌರಾಯುಕ್ತ ಎಫ್ ಐ ಇಂಗಳಗಿ, ಪಿಎಸ್ಐ ಗಡ್ಡೆಪ್ಪ ಗುಂಜುಟಗಿ, ಡಿಸಿಎಫ್ ಅಬ್ದುಲ್ ಅಜೀಜ್, ಎಸಿಎಫ್ ಮಂಜುನಾಥ, ಅರವಳಿಕೆ ತಜ್ಞೆ ಡಾ. ಪವಿತ್ರಾ, ಡಾ. ನಿಖಿಲ್, ಆರ್ ಎಫ್ ಓ ಮಹೇಶ್ ನಾಯಕ, ಲಿಂಗ ರೆಡ್ಡಿ ಮಂಕಣಿ ಸೇರಿದಂತೆ ಅರಣ್ಯ, ಅಗ್ನಿಶಾಮಕ, ಪೊಲೀಸ್, ಕಂದಾಯ, ಗೃಹರಕ್ಷಕ ದಳ, ನಗರಸಭೆ ಸಿಬ್ಬಂದಿಗಳು ಮತ್ತಿತರರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಚಿರತೆ ಸೆರೆ ಹಿಡಿಯುವಲ್ಲಿ ಪ್ರತ್ಯಕ್ಷ ಅಪ್ರತ್ಯಕ್ಷವಾಗಿ ಸಹಕರಿಸಲು ಕಾರಣರಾದರು.