
ರಾಜ್ಯಾದ್ಯಂತ ೧೪೭ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಪ್ರೌಢಶಾಲೆಗಳಾಗಿ ಉನ್ನತೀಕರಣ
“ಹಾವೇರಿಯ ಎರಡು ದಶಕಗಳ ಬೇಡಿಕೆಗೆ ಸರ್ಕಾರದ ಎಳ್ಳು, ನೀರು-ಸ್ಥಳೀಯರ ಆಕ್ರೋಶ”
ಮಾಲತೇಶ ಅಂಗೂರ
ಹಾವೇರಿ: ರಾಜ್ಯ ಸರ್ಕಾರ ರಾಜ್ಯಾದ್ಯಂತ ೧೪೭ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲು ಆ.೭ರಂದು ಆದೇಶ ಹೊರಡಿಸಿದೆ. ಆದರೆ ಕಳೆದ ಎರಡು ದಶಕಗಳಿಂದ ಹಾವೇರಿಯ ನಾಗೇಂದ್ರಮನಮಟ್ಟಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ನಂ-೮ನ್ನು ಉನ್ನತೀಕರಿಸಿದ ಪ್ರೌಢಶಾಲೆಯನ್ನಾಗಿ ಘೋಷಿಸುವಂತೆ ಸ್ಥಳೀಯರ ಹೋರಾಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ಸರ್ಕಾರದ ಆದೇಶದಲ್ಲಿ ಈ ಶಾಲೆಯ ಹೆಸರಿಲ್ಲ. ಈ ಭಾಗದಲ್ಲಿ ಹೈಸ್ಕೂಲ್ ಇಲ್ಲದ ಕಾರಣಕ್ಕೆ ಹೈಸ್ಕೂಲ್ ಶಿಕ್ಷಣದಿಂದ ವಿದ್ಯಾರ್ಥಿಗಳು, ಅದರಲ್ಲೂ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಿರುವುದು, “ಹೆಣ್ಣೊಂದು ಕಲಿತರೇ ಶಾಲೆಯೊಂದನ್ನು ತೆರೆದಂತೆ ಎನ್ನುವ ಸರ್ಕಾರ ಘೋಷಣೆಯನ್ನು ಅಣಕಿಸುತ್ತಿದೆ ಸರ್ಕಾರದ ಈ ನಡೆ”.
ಹಾವೇರಿಯ ಹೊರವಲಯದಲ್ಲಿರುವ ಅತ್ಯಂತ ಹಿಂದುಳಿದ ಹಾಗೂ ರಾಜ್ಯ ಸರ್ಕಾರದಿಂದ ಕೊಳೆಚೆ ಪ್ರದೇಶವೆಂದು ಘೋಷಿಸಲಾಗಿರುವ ನಾಗೇಂದ್ರನಮಟ್ಟಿಗ್ರಾಮ ಪ್ರದೇಶದಲ್ಲಿ ಅತ್ಯಂತ ಕಡುಬಡವರು ಹಾಗೂ ಮಧ್ಯಮ ವರ್ಗದ ೨೫ ಸಾವಿರಕ್ಕೂ ಹೆಚ್ಚಿನ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಈ ಬಡಕುಟುಂಬದ ಮಕ್ಕಳ ಶಿಕ್ಷಣಕ್ಕಾಗಿ ೧೯೪೩ ರಲ್ಲಿ ಆರಂಭಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಭಾಗದ ೩೦೦ಕ್ಕೂ ಅಧಿಕ ಮಕ್ಕಳು ಪ್ರಾಥಮಿಕ ಶಿಕ್ಷಣ ಅಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ಅರ್ಧದಷ್ಟು ಬಾಲಕಿಯರಿದ್ದಾರೆ.
ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ಹೈಸ್ಕೂಲ್ ಶಿಕ್ಷಣಕ್ಕಾಗಿ ನಗರ ಪ್ರದೇಶಕ್ಕೆ ಬರುವ ಅನಿವಾರ್ಯತೆ ಇದೆ. ಬಹುತೇಕ ಪೋಷಕರ ಗಂಡು ಮಕ್ಕಳನ್ನು ನಗರ ಪ್ರದೇಶದ ಹೈಸ್ಕೂಲ್ ಸೇರಿಸುತ್ತಾರೆ. ಆದರೆ ಶಿಕ್ಷಣ ವಂಚಿತ ಸಮುದಾಯದ ಪಾಲಕರು ಬಾಲಕಿಯರನ್ನು ನಗರ ಪ್ರದೇಶದ ಹೈಸ್ಕೂಲ್ಗಳಿಗೆ ಸೇರಿಸಲು ಹಿಂದೇಟು ಹಾಕುತ್ತಾರೆ. ಕಾರಣ ಬಹುತೇಕರು ಕೂಲಿ-ನಾಲಿಮಾಡಿ ಜೀವನ ನಡೆಸುವವರು, ಇವರು ವಾಸಿಸುವ ಪ್ರದೇಶದಿಂದ ಹೈಸ್ಕೂಲ್ಗಳು ಇರುವ ಸ್ಥಳ ದೂರವಾಗುತ್ತದೆ. ಮೇಲಾಗಿ ಅಭದ್ರತೆ, ಮಳೆ ಬಂದರೆ ಗ್ರಾಮ ಸಂಪರ್ಕಿಸುವ ಮೇಲೇತುವೆ ಬಳಿ ನೀರು ನಿಲ್ಲುತ್ತದೆ. ಖಾಸಗಿ ಹೈಸ್ಕೂಲ್ಗಳು ವಿಧಿಸುವ ದುಬಾರಿ ಶುಲ್ಕವನ್ನು ಭರಿಸುವ ಶಕ್ತಿ ಇವರಲ್ಲಿ ಇಲ್ಲದಿರುವುದು, ಜೊತೆಗೆ ನಿತ್ಯ ಬಾಲಕಿಯರನ್ನು ಶಾಲೆಗಳಿಗೆ ಕಳಿಸುವುದು, ಕರೆದುಕೊಂಡು ಬರುವುದು ಇವರಿಗೆ ಹೆಚ್ಚಿನ ಹೊರೆಯಾಗಿರುವುದು, ಮೇಲಾಗಿ ಕೆಲವರಲ್ಲಿರುವ ಅಂಧಶೃದ್ಧೆಯಿಂದಾಗಿ ಬಾಲಕಿಯರು ಹೈಸ್ಕೂಲ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಬಾಲಕ-ಬಾಲಕಿಯರು ಹೈಸ್ಕೂಲ್ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸ್ಥಳೀಯ ಕೆಲ ಪ್ರಜ್ಞಾವಂತರು ಈ ಭಾಗದಲ್ಲಿ ಪ್ರೌಢಶಾಲೆಯ ಆಗತ್ಯತೆಯನ್ನು ಮನ ಗಂಡು ಇರುವ ಪ್ರಾಥಮಿಕ ಸರ್ಕಾರಿ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಉನ್ನತೀಕರಿಸಿ ಇಲ್ಲಿನ ಮಕ್ಕಳಿಗೆ ಹೈಸ್ಕೂಲ್ ಶಿಕ್ಷಣ ಈ ಶಾಲೆಯಲ್ಲಿಯೇ ನೀಡಬೇಕೆಂದು ಕಳೆದ ೨೦ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಕಡೆಗೂ ಇವರ ಬೇಡಿಕೆಗೆ ಮನ್ನಣೆ ನೀಡಿದ ಸರ್ಕಾರ ಪ್ರಾಥಮಿಕಶಾಲೆಯನ್ನು ಉನ್ನತೀಕರಿಸಿದ ಪ್ರೌಢಶಾಲೆಯನ್ನಾಗಿ ದಿನಾಂಕ:೨೫-೦೫-೨೦೧೧ರಂದು ಮಂಜೂರು ಮಾಡಿತ್ತು!. ಪ್ರೌಢಶಾಲೆಯನ್ನು ನಾಗೇಂದ್ರನಮಟ್ಟಿ ಪ್ರದೇಶಕ್ಕೆ ಮಂಜೂರು ಮಾಡಿ, ಎರಡುವರ್ಷಗಳವರೆಗೆ ನಡೆಸಿ, ಯಾವುದೋ ದುರುದ್ದೇಶ ಇಟ್ಟು ಕೊಂಡು ಪ್ರೌಢಶಾಲೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ದಿನಾಂಕ:೨-೧೧-೨೦೧೨ರಂದು ರದ್ದು ಪಡಿಸಿದ್ದರು. ನಾಗೇಂದ್ರನಮಟ್ಟಿ ಪ್ರದೇಶಕ್ಕೆ ಪ್ರೌಢಶಾಲೆ ಮರು ಮಂಜೂರಾತಿ ಮಾಡುವಂತೆ ಆಗ್ರಹಿಸಿ ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ೨೦೨೨ರ ಸ.೩೦ರಂದು ತರಗತಿಗಳನ್ನು ಬಹಿಷ್ಕರಿಸಿ, ಪಾಲಕರು ಹಾಗೂ ಜಯಕರ್ನಾಟಕ ಸಂಘಟನೆಯ ಮುಖಂಡರೊಂದಿಗೆ ಬೀದಿಗಳಿದು ನಾಲ್ಕು ಗಂಟೆಯವರೆಗೆ ನಾಗೇಂದ್ರನಮಟ್ಟಿಯ ಮುಖ್ಯರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.
ಆಗಿನ ಡಿಡಿಪಿಐ ಜಗದೀಶ ಹಾಗೂ ಬಿಇಓ ಬಡಿಗೇರ ಅವರು ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡಿಸಿ , ಹೈಸ್ಕೂಲ್ನ್ನು ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಖಾಸಗಿ ಹೈಸ್ಕೂಲ್ಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ಇಲ್ಲಿ ಹೈಸ್ಕೂಲ್ ಮಂಜೂರಿಗೆ ಸಹಕರಿಸಲಿಲ್ಲ. ಮುಂದೆ ಸ್ಥಳೀಯ ಶಾಸಕರು ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಮತಯಾಚನೆಯವೇಳೆ ಇಲ್ಲಿನ ನಾಗರಿಕರು ನಾಗೇಂದ್ರನಮಟ್ಟಿಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಬೇಕೆಂದು ಬೇಡಿಕೆಯನ್ನಿಟ್ಟ ಸಂದರ್ಭದಲ್ಲಿ, ಹಾಲಿ ಶಾಸಕ, ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಇದೇ ಶಾಲೆಯಲ್ಲಿ ೯ ಮತ್ತು ೧೦ನೇ ತರಗತಿ ಆರಂಭಿಸುವು ಬಗ್ಗೆ ಸರ್ಕಾರದಿಂದ ಅನುಮತಿ ಕೊಡಸುವುದಾಗಿ ಭರವಸೆ ನೀಡಿದ್ದರು.
ಇದಿಗ ಆ.೭ರಂದು ಸರ್ಕಾರ ರಾಜ್ಯಾದ್ಯಂತ ೧೪೭ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಪ್ರೌಢಶಾಲೆಗಳಾಗಿ ಉನ್ನತೀಕರಣಗೊಳಿಸಿ ಆದೇಶ ಹೊರಡಿಸಿದ್ದು, ಇದರಲ್ಲಿ ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿನ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸದೇ ಜನರ ಬೇಡಿಕೆಗೆ ಎಳ್ಳು-ನೀರು ಬಿಟ್ಟಿರುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯನ್ನು ಬಂದ್ ಮಾಡಿ ಹೋರಾಟ ನಡೆಸಲು ಸ್ಥಳೀಯರು ಮುಂದಾಗಿದ್ದಾರೆ.
ಯಾವ ಕಾರಣಕ್ಕೆ ಹೈಸ್ಕೂಲ್ ನೀಡುತ್ತಿಲ್ಲ!
ನಾಗೇಂದ್ರನಮಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸದ್ಯ ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ೧ರಿಂದ ೮ನೇ ತರಗತಿವರೆಗೆ ಓದುತ್ತಿದ್ದಾರೆ. ಇದೇ ಶಾಲೆಯಲ್ಲಿ ೯ ಮತ್ತು ೧೦ನೇ ತರಗತಿ ಆರಂಭಿಸುವಂತೆ ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಈ ಹಿಂದೆ ಗ್ರಾಮದಲ್ಲಿ ಪ್ರೌಢಶಾಲೆ ಆರಂಭಿಸಿದ್ದ ಶಿಕ್ಷಣ ಇಲಾಖೆ ದಿಢೀರನೇ ಹೈಸ್ಕೂಲ್ ಬಂದ್ ಮಾಡಿದೆ ಎನ್ನುವುದು ತಿಳಿಯುತ್ತಿಲ್ಲ. ಸರ್ಕಾರದ ಆದೇಶ ನೋಡಿ ನಿರಾಶೆಯಾಗಿದೆ. ಸರ್ಕಾರದ ಈ ನೀತಿಯಿಂದ ಅನೇಕ ಮಕ್ಕಳು ಹೈಸ್ಕೂಲ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದಿರುವ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣ ಇಲ್ಲಿಗೆ ಹೈಸ್ಕೂಲ್ ಮಂಜೂರಿಮಾಡಿಸಬೇಕು. ಒಲ್ಲದೇ ಹೋದರೆ ಶಾಲೆಯನ್ನು ಬಂದ್ ಮಾಡಿ ಹೋರಾಟ ನಡೆಸಲಾಗುವುದು. ಮಲ್ಲೇಶಪ್ಪ ಪಟ್ಟಣಶೆಟ್ಟಿ, ಸ್ಥಳೀಯ ಮುಖಂಡ.

