
ಹಾವೇರಿ: ಗಣೇಶೋತ್ಸವ ಸಮಿತಿಯ ನೂರಾರು ಯುವಕರಿಂದ ರಕ್ತದಾನ-ಸಾವಿರ ಯುನಿಟ್ ರಕ್ತ ಸಂಗ್ರಹ
ಹಾವೇರಿ: ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಅದ್ದೂರಿಯ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಿದ್ದು, ಒಂದು ಕಡೆಗೆ ಗಣೇಶನ ವಿಸರ್ಜನೆಗೆ ಡಿಜೆ ಹಚ್ಚಲು ಪರವಾನಿಗೆ ನೀಡಬೇಕು, ಡಿಜೆ ಪರವಾನಿಗೆ ನೀಡದಿದ್ದರೇ ಗಣೇಶನ್ನು ವಿಸರ್ಜನೆ ಮಾಡುವುದಿಲ್ಲ ಎಂದು ಕೆಲವರು ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ದು, ಈ ಮಧ್ಯೆ ಜಿಲ್ಲೆಯ ೧೫ಕ್ಕೂ ಹೆಚ್ಚಿನ ಗಣೇಶೋತ್ಸವ ಸಮಿತಿಯ ನೂರಾರು ಯುವಕರು ಡಿಜೆ ಸಂಸ್ಕ್ರತಿ ನಮ್ಮದಲ್ಲ ಎಂದು ರಕ್ತದಾನ ಶಿಬಿರ, ನೇತೃ ತಪಾಸಣಾ ಶಿಬಿರ, ಆರೋಗ್ಯ ತಪಾಸಣೆಯಂತ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.
ಜಿಲ್ಲೆಯಲ್ಲಿ ೧೫ಕ್ಕೂ ಅಧಿಕ ಗಣೇಶ ಸಮಿತಿಗಳು ಗಣೇಶ ಚತುರ್ಥಿಯ ೧೧ ದಿನಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಗಮನ ಸೆಳೆದಿವೆ. ಈ ರಕ್ತದಾನ ಶಿಬಿರಗಳಲ್ಲಿ ನೂರಾರು ಯುವಕರು ರಕ್ತದಾನ ಮಾಡಿದ್ದಾರೆ. ಸೆ.೬ರಂದು ಹಾವೇರಿಯ ಏಲಕ್ಕಿ ಓಣಿಯ ಗಜಾನನ ಸಮಿತಿಯವರು ರಕ್ತದಾನ ಶಿಬಿರ ಏರ್ಪಡಿಸಿದ್ದರು. ಮುಂಜಾನೆ ಹಲವಾರು ಯುವಕರು ರಕ್ತದಾನ ಮಾಡಿದ್ದು, ಒಂದೇ ಸಮಿತಿಯವರು ನಡೆಸಿಕೊಟ್ಟ ರಕ್ತದಾನ ಶಿಬಿರದಲ್ಲಿ ೬೦ ಯುನಿಟ್ ರಕ್ತ ಸಂಗ್ರವಾಗಿದೆ.
ಹಾವೇರಿ ಏಲಕ್ಕಿ ಓಣಿ ಗಜಾನನ ಸಮಿತಿ ೧೧ ವರ್ಷದಿಂದ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಾ ಬಂದಿದೆ. ಪ್ರತಿವರ್ಷ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡುತ್ತಿತ್ತು. ಆದರೆ ಪ್ರಸ್ತುತ ವರ್ಷ ಪ್ರಥಮ ಬಾರಿಗೆ ರಕ್ತದಾನ ಶಿಬಿರ ಏರ್ಪಡಿಸಿತ್ತು. ಇದೇ ಮಾದರಿಯಲ್ಲಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಗಣೇಶ ಸಮಿತಿಯವರು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ರಕ್ತದಾನ ಮಾಡಿದ್ದು, ೧೦೦೦ಯುನಿಟ್ ರಕ್ತ ಸಂಗ್ರಹವಾಗಿದೆ.
ರಕ್ತದಾನ ಜೀವ ಉಳಿಸುವ ಕೆಲಸವಾಗಿದ್ದು ’ಹೆರಿಗೆ, ಅಪಘಾತ, ಥಲೇಸ್ಮಿಯಾ ಸೇರಿದಂತೆ ವಿವಿಧ ಕಾರಣಗಳಿಗಾಗಿ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನ ಮಾಡಿದ ರಕ್ತ ತಪಾಸಣೆಗೆ ಒಳಪಟ್ಟು ಅವಶ್ಯಕತೆಯಿದ್ದವರಿಗೆ ತಲುಪುತ್ತದೆ. ಗಣೇಶ ಚತುರ್ಥಿ ಅಂದರೆ ಪಟಾಕಿ, ಬಾಜಾ ಭಜಂತ್ರಿ ಗುಲಾಲು ಎರಚಿ ಡಿಜೆ ಸಾಂಗ್ಗೆ ಕುಣಿಯುವುದಲ್ಲ. ಬದಲಿಗೆ ಈ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಹ ಗಣೇಶೋತ್ಸವ ಆಚರಿಸಬಹುದು ಎನ್ನುವುದಕ್ಕೆ ಜಿಲ್ಲೆಯ ಗಣೇಶೋತ್ಸ ಸಮಿತಿಗಳು ಮಾದರಿಯಾಗಿವೆ.
’ಗಣೇಶ ಹಬ್ಬ ಅಂದರೆ ಕೇವಲ ಪೂಜೆ ಮತ್ತು ಡ್ಯಾನ್ಸ್ ಹಾಗೂ ಡಿಜೆಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಕ್ರಮಗಳನ್ನೂ ಯುವಕರು ಮಾಡುತ್ತಿದ್ದಾರೆ. ಈ ವರ್ಷದಿಂದ ತಾವು ಸಹ ಈ ರೀತಿಯ ಸಮಾಜಮುಖಿ ಕಾರ್ಯ ಆರಂಭಿಸಿದ್ದೇವೆ. ಪ್ರಸ್ತುತ ವರ್ಷ ರಕ್ತದಾನ ಶಿಬಿರದ ಜೊತೆಗೆ ನೇತ್ರಾ ಚಿಕಿತ್ಸೆ ಶಿಬಿರ ಏರ್ಪಡಿಸಿದ್ದಲ್ಲದೆ, ರಕ್ತದ ಗುಂಪು ಪತ್ತೆಯ ಕಾರ್ಯವನ್ನೂ ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಸಮಿತಿ ಮಾಡಲಿದೆ. ಹಾವೇರಿಯಲ್ಲಿಯೇ ಮಾದರಿ ಗಜಾನನ ಸಮಿತಿ ಆಗಲಿದೆ’ ಎಂದು ಯಾಲಕ್ಕಿ ಓಣಿಯ ಗಜಾನನೋತ್ಸವ ಸಮಿತಿಯ ಕರಬಸಪ್ಪ ಹಲಗಣ್ಣನವರ ಹೇಳಿದರು.

