
ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ ಜೈಲು ಶಿಕ್ಷೆ ಹಾಗೂ ರೂ.೧೮ ಸಾವಿರ ದಂಡ
ಹಾವೇರಿ : ರಟ್ಟಿಹಳ್ಳಿ ತಹಶೀಲ್ದಾರ ಕಚೇರಿಯ ಎಸ್.ಡಿ.ಎ ಲಿಂಗರಾಜ ಶಂಕರನಾಯ್ಕ ಲಮಾಣಿ ಅವರಿಗೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಜಾತಿ ನಿಂದನೆ ಮಾಡಿದ ಆರೋಪಿತರಾದ ರಟ್ಟಿಹಳ್ಳಿಯ ಶಂಕರಗೌಡ ಮಹೇಶಗೌಡ ಚನ್ನಗೌಡ್ರ, ಪ್ರಕಾಶ ಶಿವಪ್ಪ ಹರಳಹಳ್ಳಿ ಹಾಗೂ ಹಿರೇಮಾದಾಪುರದ ಬಸವರಾಜ ಮಹೇಶಪ್ಪ ಗಬ್ಬೂರ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ರೂ.೧೮ ಸಾವಿರ ದಂಡ ವಿಧಿಸಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ಎಂ.ರಮೇಶ ಅವರು ಬುಧವಾರ ತೀರ್ಪು ನೀಡಿದ್ದಾರೆ.
ಶಂಕರಗೌಡ ಮಹೇಶಗೌಡ ಚನ್ನಗೌಡ್ರ ಇತನು ರಟ್ಟಿಹಳ್ಳಿ ತಹಶೀಲ್ದಾರ ಕಚೇರಿಯಲ್ಲಿ ೧೫-೦೪-೨೦೨೫ ರಂದು ವಂಶವೃಕ್ಷಕ್ಕೆ ಅರ್ಜಿ ಸಲ್ಲಿಸಿ ಅಂದೇ ಅನುಮೋದನೆ ನೀಡಲು ಕೋರಿದಾಗ, ಅಲ್ಲಿನ ನೌಕರ ಎಸ್.ಡಿ.ಎ ಲಿಂಗರಾಜ ಶಂಕರನಾಯ್ಕ ಲಮಾಣಿ ಅವರನ್ನು ಕೇಳುತಿದ್ದಾಗ, ಶಂಕರಗೌಡ ಮಹೇಶಗೌಡ ಚನ್ನಗೌಡ್ರ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿ ಜಾತಿ ನಿಂದನೆ ಮಾಡಿದ್ದಲ್ಲದೆ ಪ್ರಕಾಶ ಶಿವಪ್ಪ ಹರಳಹಳ್ಳಿ ಹಾಗೂ ಹಿರೇಮಾದಾಪುರದ ಬಸವರಾಜ ಮಹೇಶಪ್ಪ ಗಬ್ಬೂರ ಅವರು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಹಲ್ಲೆಮಾಡಿದ ಹಿನ್ನಲೆಯಲ್ಲಿ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣದ ಕುರಿತು ಡಿಎಸ್ಪಿ ಲೋಕೇಶ ಜೆ ಮತ್ತು ಗಿರೀಶ ಭೋಜನ್ನವರ ಅವರು ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆಯಲ್ಲಿ ಆರೋಪಿಗಳ ಮೇಲೆ ವಿವಿಧ ಕಾಯ್ದೆಗಳ ಆಪಾದನೆಗಳನ್ನು ಅಭಿಯೋಜನೆಯು ರುಜುವಾತು ಪಡಿಸಿದ ಹಿನ್ನಲೆಯಲ್ಲಿ ನ್ಯಾಯಾಧೀಶರು ಮೇಲಿನಂತೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಒಂದನೇ ಅಧಿಕ ಸರ್ಕಾರಿ ಅಭಿಯೋಜಕರಾದ ಸರೋಜಾ ಕೂಡಲಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

